/newsfirstlive-kannada/media/post_attachments/wp-content/uploads/2025/03/FALGUNI-PANDYA.jpg)
ನಾಸಾದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಹಾಗೂ ಬಚ್ ವಿಲ್ಮೋರ್ ಸದ್ಯ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಆಚೆ ಬಂದಿದ್ದಾರೆ. ಸುಮಾರು ಒಂಬತ್ತು ತಿಂಗಳ ಕಾಲ ಬಾಹ್ಯಾಕಾಶದಲ್ಲಿ ಕಳೆದ ಉಭಯ ಗಗನಯಾತ್ರಿಗಳಿಗೆ ಕೊನೆಗೂ ಅಲ್ಲಿಂದ ಬಿಡುಗಡೆ ಸಿಕ್ಕಿದೆ. ಅವರ ವಾಪಸ್ಸಾತಿ ಪ್ರಕ್ರಿಯೆ ಮಾರ್ಚ್ 18 ರಿಂದಲೇ ಆರಂಭವಾಗಿತ್ತು. ಸ್ಪೇಸ್ ಎಕ್ಸ್ನ ಡ್ರ್ಯಾಗನ್ ಬಾಹ್ಯಾಕಾಶ ನೌಕೆ ಅವರನ್ನು ಕರೆತರೆಲು ಹೊರಟಿತ್ತು. ಕೊನೆಯ ಕ್ಷಣದಲ್ಲಿ ಅವರನ್ನು ಕರೆತರಲು ಬಂದ ಗಗನಯಾತ್ರಿಗಳನ್ನು ಅಪ್ಪಿಕೊಂಡ ವಿಡಿಯೋ ಕೂಡ ಕಾಣಸಿಗುತ್ತಿದೆ.
ಈಗ ರಾಷ್ಟ್ರೀಯ ಸುದ್ದಿ ವಾಹಿನಿಯ ಜೊತೆಗೆ ಸುನೀತಾ ವಿಲಿಯಮ್ಸ್ ಸಹೋದರ ಸಂಬಂಧಿ ಫಲ್ಗುಣಿ ಪಾಂಡೆ ಸುನೀತಾ ವಿಲಿಯಮ್ಸ್ ವಿಚಾರವಾಗಿ ಹಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಇದೇ ಅವಳಿಗೆ ಮೊದಲ ಗಗನಯಾನವಲ್ಲ. ಅವಳೊಂದಿಗೆ ಸದಾ ಗಣೇಶನಿದ್ದಾನೆ. ಅಗಲಿದ ತಂದೆಯ ಆಶೀರ್ವಾದ ಅವಳೊಂದಿಗಿದೆ. ಅವಳು ಸುರಕ್ಷಿತವಾಗಿ ವಾಪಸ್ಸಾಗುತ್ತಾಳೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಭೂಮಿಗೆ ವಾಪಸ್ ಬಂದ ಬಳಿಕ ಸುನೀತಾ ವಿಲಿಯಮ್ಸ್ ಭವಿಷ್ಯದಲ್ಲಿ ಏನು ಮಾಡಲಿದ್ದಾರೆ? ಇಲ್ಲಿದೆ ಸಂಪೂರ್ಣ ಮಾಹಿತಿ
ಸುನೀತಾ ವಿಲಿಯಮ್ಸ್ ಗಟ್ಟಿತನದ ಬಗ್ಗೆ ಮಾತನಾಡಿದ ಫಲ್ಗುಣಿ, ಅವಳಲ್ಲಿ ಸದಾ ಒಂದು ಗಟ್ಟಿತನವನ್ನು ನಾವು ಕಂಡಿದ್ದೇವೆ. ಸದಾಕಾಲ ಸುನೀತಾ ತನ್ನ ಟೀಮ್ ಮೇಲೆ ದೊಡ್ಡ ಭರವಸೆಯನ್ನಿಟ್ಟುಕೊಂಡೇ ಗಗನಯಾನಕ್ಕೆ ಹೊರಡುತ್ತಾರೆ. ಅಷ್ಟೇ ಧನಾತ್ಮಕವಾದ ಮನಸ್ಥಿತಿಯಲ್ಲಿ ಇರುತ್ತಾರೆ. ಅವರು ಎಂದಿಗೂ ಕೂಡ ಬೇರೆಯದ್ದನ್ನು ವಿಚಾರ ಮಾಡಿದ್ದನ್ನು ನಾವು ನೋಡಿಯೇ ಇಲ್ಲ ಎಂದು ಸುನೀತಾ ಅವರ ಗಟ್ಟಿ ಮನಸ್ಥಿತಿಯ ಬಗ್ಗೆ ಮಾತನಾಡಿದ್ದಾರೆ.
ಇನ್ನು ಬಾಹ್ಯಾಕಾಶ ನಿಲ್ದಾಣದಲ್ಲಿ 9 ತಿಂಗಳು ಇದ್ದಾಗ ನಡೆದ ಹಲವು ಘಟನೆಗಳ ಬಗ್ಗೆ ಅವರು ಹೇಳಿದ್ದಾರೆ. ಅವರ ಗಗನಯಾನ ಅಂದುಕೊಂಡಿದ್ದಕ್ಕಿಂತ ಹೆಚ್ಚು ಸಮಯ ಬಂದಾಗ ಎಲ್ಲರೂ ಭಾವುಕರಾಗುವುದು ಸಹಜ, ಆತಂಕಗೊಳ್ಳುವುದು ಸಹಜ. ಆದ್ರೆ ಸುನೀತಾ ನಮ್ಮೊಂದಿಗೆ ಅಲ್ಲಿಂದಲೇ ಪ್ರತಿನಿತ್ಯ ಸಂಪರ್ಕದಲ್ಲಿರುತ್ತಿದ್ದರು. ಹೀಗಾಗಿ ನಾವು ತುಂಬಾ ನಿರಾಳರಾಗಿದ್ದೇವು. ಇದರ ಸಂಪೂರ್ಣ ಗೌರವ ನಾಸಾದವರಿಗೆ ಸಲ್ಲಬೇಕು ಎಂದು ಹೇಳಿದ್ದಾರೆ. ನಾವು ಇಲ್ಲಿ ಹಬ್ಬ ಹಾಗೂ ರಜೆಗಳನ್ನು ಆಚರಿಸುತ್ತಿದ್ದೇವು.ಇಂತಹ ಸಮಯದಲ್ಲಿ ಸುನೀತಾ ಅವರ ತಾಯಿಯೊಂದಿಗೆ ನಿತ್ಯ ಮಾತನಾಡುತ್ತಿದ್ದರು ಎಂದು ಫಲ್ಗುಣಿ ಹೇಳಿದ್ದಾರೆ.
ಇದನ್ನೂ ಓದಿ:ಭಗವದ್ಗೀತೆ, ಗಣೇಶನ ಮೂರ್ತಿ.. ಬಾಹ್ಯಾಕಾಶಕ್ಕೆ ಹೋಗುವಾಗ ಸುನೀತಾ ಏನೆಲ್ಲಾ ತೆಗೆದುಕೊಂಡು ಹೋಗಿದ್ರು?
ಇನ್ನು ಅವರು ವಾಪಸ್ ಆಗುವ ಸಮಯ ವಿಸ್ತರಣೆಗೊಂಡಾಗ ತಮ್ಮ ಮನಸ್ಥಿತಿ ಹೇಗಿತ್ತು ಎಂಬುದರ ಬಗ್ಗೆಯೂ ಹೇಳಿರುವ ಫಲ್ಗುಣಿ. ನಮಗೆ ತುಂಬಾ ಆತಂಕವಾಗಿತ್ತು. ನಾವು ಕಲ್ಪನಾ ಚಾವ್ಲಾ ಅವರ ಕುಟುಂಬದೊಂದಿಗೆ ಸಂಪರ್ಕ ಹೊಂದಿದವರು. ಹೀಗಾಗಿ ಸಹಜವಾಗಿ ಚಿಂತೆಗಳು ಇದ್ದವು. ಆದ್ರೆ ನಮಗೆ ನಾಸಾದ ಮೇಲೆ ಸಂಪೂರ್ಣ ಭರವಸೆಯಿತ್ತು ಅದು ಅಲ್ಲದೇ ಸುನೀತಾ ನಿತ್ಯ ತಮ್ಮ ಅನುಭವದ ಬಗ್ಗೆ ಐಎಸ್ಎಸ್ನಿಂದಲೇ ಇಮೇಲ್ ಮೂಲಕ ಮಾಹಿತಿ ನೀಡುತ್ತಿದ್ದರು. ಇದು ನಮ್ಮನ್ನು ಮತ್ತಷ್ಟು ನಿರಾಳವಾಗಿರುವಂತೆ ಮಾಡಿತ್ತು ಎಂದಿದ್ದಾರೆ.
ಇನ್ನು ಈ ಹಿಂದೆ ಸುನೀತಾ ವಿಲಿಯಮ್ಸ್ ಭಾರತಕ್ಕೆ ಬಂದಾಗ ನಾನು ಅವರ ಮಾತುಗಳನ್ನು ಅನುವಾದ ಮಾಡಿ ಜನರಿಗೆ ಹೇಳಿದ್ದೆ. ಆಗ ಅವರು ಬಾಹ್ಯಾಕಾಶದಲ್ಲಿ ಗಡಿಯೆಂಬುದು ಇಲ್ಲ. ಕೇವಲ ಗ್ರಹಗಳು ಇವೆ. ನನಗೆ ವಸುದೈವಕ ಕುಟುಂಬಕಂ ಎಂಬುದರ ಮೇಲೆ ದೊಡ್ಡದಾದ ನಂಬಿಕೆಯಿದೆ ಮತ್ತು ಅದೇ ನನ್ನ ಮಾರ್ಗದರ್ಶಕ ಮಂತ್ರ ಎಂದು ಹೇಳಿದ್ದರು ಎಂದು ಹಿಂದಿನ ಘಟನೆಯನ್ನು ನೆನೆಪಿಸಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ