/newsfirstlive-kannada/media/post_attachments/wp-content/uploads/2025/06/Prof-B.K-Ravi-1.jpg)
ಮೊರಕ್ಕೋ: ಸುಸ್ಥಿರ ಅಭಿವೃದ್ಧಿ ಹಾಗೂ ಜಾಗತಿಕ ಸಮಸ್ಯೆಗಳ ನಿವಾರಣೆಗೆ ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಬದಲಾವಣೆಗಳನ್ನು ತರುವ ಅಗತ್ಯವಿದೆ ಎಂದು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಕೆ ರವಿ ಅವರು ಅಭಿಪ್ರಾಯಪಟ್ಟಿದ್ದಾರೆ.
ಕಾಸಾಬ್ಲಾಂಕಾದ ಹಸನ್-II ವಿಶ್ವವಿದ್ಯಾಲಯ ಆಯೋಜಿಸಿದ್ದ ಸುಸ್ಥಿರ ಭವಿಷ್ಯಕ್ಕಾಗಿ ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿ ಕುರಿತ 16ನೇ ಅಂತರರಾಷ್ಟ್ರಿಯ ಶೈಕ್ಷಣಿಕ ಸಮ್ಮೇಳನದಲ್ಲಿ ಪ್ರೊ. ಬಿ.ಕೆ ರವಿಯವರು ಪ್ರಧಾನ ಭಾಷಣ ಮಾಡಿದರು. ಜಾಗತಿಕವಾಗಿ 251 ಮಿಲಿಯನ್ ಮಕ್ಕಳು ಶಾಲೆಗಳಿಂದ ಹೊರಗುಳಿಯುತ್ತಿದ್ದಾರೆ. 400 ಮಿಲಿಯನ್ ಜಾಗತಿಕ ತಾಪಮಾನದಿಂದ, ಪರಿಸರ ಬದಲಾವಣೆಯಿಂದ ತೊಂದರೆಗೆ ತುತ್ತಾಗುತ್ತಿದ್ದಾರೆ. ಶೇಕಡಾ 57.2ರಷ್ಟು ಮಕ್ಕಳು ಸೌಲಭ್ಯಗಳು ಹಾಗೂ ತಂತ್ರಜ್ಞಾನದ ಲಭ್ಯತೆಯಿಂದ ವಂಚಿತರಾಗುತ್ತಿದ್ದಾರೆ. ಹಾಗೂ ತೃತೀಯ ಜಗತ್ತಿನ ರಾಷ್ಟ್ರಗಳು ಹಣಕಾಸಿನ ಅಲಭ್ಯತೆಯಿಂದ ಬಳಲುತ್ತಿರುವುದು ಆತಂಕಕಾರಿ ಎಂದರು.
ವಿದ್ಯಾರ್ಥಿಗಳನ್ನು ಕೇವಲ ತರಗತಿಗಳಿಗೆ ಸೀಮಿತಗೊಳಿಸದೆ ಜೀವನದ ನಿಜ ಆಯಾಮವನ್ನು, ಮಾನವೀಯ ಮೌಲ್ಯಗಳನ್ನು ಅವರಲ್ಲಿ ಕರಗತಗೊಳಿಸುವ ಅಗತ್ಯವಿದೆ. ತಂತ್ರಜ್ಞಾನದ ಬಳಕೆ ಬಗ್ಗೆ ಕೂಡ ಅವರಲ್ಲಿ ಅರಿವು ಮೂಡಿಸಬೇಕು. ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆಗೆ ಹೆಚ್ಚು ಒತ್ತು ಕೊಟ್ಟು, ಸಂಶೋಧನೆಗಳ ಫಲಿತಾಂಶಗಳನ್ನು ಸಮಾಜದ ಒಳಿತಿಗಾಗಿ ಬಳಸಬೇಕು ಎಂದು ಪ್ರೊ. ಬಿ.ಕೆ ರವಿ ಅವರು ಹೇಳಿದರು.
ಇದನ್ನೂ ಓದಿ: ಇಂದು ನಭಕ್ಕೆ ಶುಭಾಂಶು ಶುಕ್ಲಾ.. ಇದಕ್ಕಾಗಿ ಭಾರತ ಎಷ್ಟು ಕೋಟಿ ಖರ್ಚು ಮಾಡಿದೆ ಗೊತ್ತಾ..?
ನಂತರ ಉನ್ನತ ಶಿಕ್ಷಣದಲ್ಲಿ ಮಾನವೀಯ ಮೌಲ್ಯಗಳ ಕುರಿತ ವಿಶೇಷ ಉಪನ್ಯಾಸ ನೀಡಿದರು. ಈ ಅಂತಾರಾಷ್ಟ್ರಿಯ ಸಮ್ಮೇಳನದಲ್ಲಿ 254ಕ್ಕೂ ಹೆಚ್ಚು ಸಂಶೋಧಕರು ತಮ್ಮ ಪ್ರಬಂಧಗಳನ್ನು ಮಂಡಿಸಿದರು. ಹಸನ್-II ವಿಶ್ವವಿದ್ಯಾಲಯದ ಕುಲಪತಿ ಡಾ.ಹೌಸಿನೇ ಅಸೆಡಾಗ್, ಡೀನ್ ಡಾ.ಅಬ್ದೆಲ್ಲಾ ಬ್ರಾಕ್ಟಾ, ಸಮ್ಮೇಳನದ ಸಂಯೋಜಕಿ ಡಾ.ಇಮಾನೇ ಎಲ್ ಇಮಾಡಿ, ಮುಂತಾದವರು ಉಪಸ್ಥಿತರಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ