/newsfirstlive-kannada/media/post_attachments/wp-content/uploads/2025/03/VIGNESH-1.jpg)
ಮುಂಬೈ ಇಂಡಿಯನ್ಸ್.. ಐಪಿಎಲ್ ಇತಿಹಾಸದ ಗ್ರೇಟೆಸ್ಟ್ ಟೀಮ್. ಬರೋಬ್ಬರಿ 5 ಐಪಿಎಲ್ ಟ್ರೋಫಿ ಗೆದ್ದಿರೋ ಮುಂಬೈ ಐಪಿಎಲ್ನ ಅಧಿಪತಿ. ಅಷ್ಟೇ ಅಲ್ಲ, ಟೀಮ್ ಇಂಡಿಯಾಗೆ ಅಸಂಖ್ಯಾತ ಪ್ರತಿಭೆಗಳನ್ನು ನೀಡಿದ ತಂಡವೂ ಇದೇ. ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬೂಮ್ರಾ ಇದಕ್ಕೆ ಬೆಸ್ಟ್ ಎಕ್ಸಾಂಪಲ್.
ಟ್ಯಾಲೆಂಟ್ ಹಂಟ್ ಮಾಡೋದ್ರಲ್ಲಿ ಮುಂಬೈ ಎಂದಿಗೂ ಮುಂದಿರುತ್ತೆ. ಬೂಮ್ರಾ, ಹಾರ್ದಿಕ್ ಪಾಂಡ್ಯರಂತಹ ಆಟಗಾರರನ್ನ ಗ್ರೌಂಡ್ ಲೆವೆಲ್ನಿಂದಲೇ ತಯಾರಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುವಂತೆ ಮಾಡಿದ ಕೀರ್ತಿ ಮುಂಬೈ ಇಂಡಿಯನ್ಸ್ಗೆ ಸಲ್ಲುತ್ತೆ. ತಿಲಕ್ ವರ್ಮಾ, ನಮನ್ಧಿರ್ರಂತ ನೆಕ್ಸ್ಟ್ ಲೈನ್ನ ಸೂಪರ್ ಸ್ಟಾರ್ಗಳೂ ಇದೇ ಫ್ರಾಂಚೈಸಿಯಿಂದ ಬಂದವರು. ಇದೀಗ ಸೀಸನ್ 18ರ ಮೊದಲ ಪಂದ್ಯದಲ್ಲೇ ಮತ್ತೊಬ್ಬ ಪ್ರಾಮಿಸಿಂಗ್ ಆಟಗಾರ, ಮಿಸ್ಟ್ರಿ ಮ್ಯಾಚ್ ವಿನ್ನರ್ನ ಮುಂಬೈ ರೆಡಿ ಮಾಡಿದೆ. ಆತನ ಹೆಸರು ವಿಘ್ನೇಶ್ ಪುತ್ತೂರು.
ಪುತ್ತೂರು ಸೂಪರ್ ಸ್ಪೆಲ್
ಚೆನ್ನೈನ ಚೆಪಾಕ್ನಲ್ಲಿ ಮುಂಬೈ ಇಂಡಿಯನ್ಸ್ ಸೋಲಿನ ಮುಖಭಂಗ ಅನುಭವಿಸಿತು. ಮುಂಬೈ ಸೋಲುಂಡರೂ, ಮುಂಬೈನ ಯಂಗ್ ಸ್ಪಿನ್ನರ್ ಇಡೀ ಕ್ರಿಕೆಟ್ ಜಗತ್ತಿನ ಗಮನ ಸೆಳೆದೆ. ಸೋಲಿನ ನಡುವೆಯೂ ಹೊಸ ಭರವಸೆಯ ಬೆಳಕಾಗಿ ಕಂಡ. ಇಂಪ್ಯಾಕ್ಟ್ ಪ್ಲೇಯರ್ ಆಗಿ ಡೆಬ್ಯು ಮಾಡಿದ 24 ವರ್ಷದ ಮಿಸ್ಟರಿ ಸ್ಪಿನ್ನರ್ ವಿಘ್ನೇಶ್ ಪುತ್ತೂರ್ ಹೊಸ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾನೆ.
ಇದನ್ನೂ ಓದಿ: ಚೊಚ್ಚಲ ಪಂದ್ಯದಲ್ಲೇ ಮಿಂಚಿನ ಆಟ.. 15 ಎಸೆತದಲ್ಲಿ 39 ರನ್ ಚಚ್ಚಿದ ವಿಪ್ರಜ್ ನಿಗಮ್ ಯಾರು?
ಬೌಲಿಂಗ್ ವೇಳೆ ರೋಹಿತ್ ಶರ್ಮಾ ಬದಲಿಗೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಅಂಗಳಕ್ಕಿಳಿದ ವಿಘ್ನೇಷ್, ಚೆನ್ನೈ ಬ್ಯಾಟರ್ಗಳನ್ನ ಇನ್ನಿಲ್ಲದೆ ಕಾಡಿದ್ರು. ನಾಯಕ ಋತುರಾಜ್ ಗಾಯಕ್ವಾಡ್, ಶಿವಂ ದುಬೆ, ದೀಪಕ್ ಹೂಡಾರಂಥ ಪ್ರಮುಖ ಆಟಗಾರರ ವಿಕೆಟ್ ಬೇಟೆಯಾಡಿದ್ರು. 4 ಓವರ್ಗಳ ಕೋಟಾದಲ್ಲಿ ವೀಘ್ನೇಶ್, 32 ರನ್ ನೀಡಿ 3 ವಿಕೆಟ್ ಉರುಳಿಸಿ ಗಮನ ಸೆಳೆದರು.
ಮಾಹಿ ಮನ ಗೆದ್ದ ವಿಘ್ನೇಶ್
ವೀಘ್ನೇಶ್ ಅದ್ಭುತ ದಾಳಿ ಸಂಘಟಿಸಿದ್ರೂ ಮುಂಬೈಗೆ ಗೆಲುವು ಮಾತ್ರ ಧಕ್ಕಲಿಲ್ಲ. ಮ್ಯಾಚ್ ಗೆಲ್ಲದಿದ್ದರೂ, ವಿಘ್ನೇಶ್ ಆಟದಿಂದಲೇ ಎಲ್ಲರ ಮನ ಗೆದ್ದ. ಲೆಜೆಂಡ್ ಮಹೇಂದ್ರ ಸಿಂಗ್ ಧೋನಿಯೇ ವಿಘ್ನೇಶ್ ಬೌಲಿಂಗ್ಗೆ ಫಿದಾ ಆದ್ರು. ಗೆಲುವಿನ ಬಳಿಕ ವಿಘ್ನೇಶ್ ಜೊತೆ ಆತ್ಮೀಯವಾಗಿ ಮಾತನಾಡಿದ ಧೋನಿ ಬೆನ್ನು ತಟ್ಟಿ ಅಭಿನಂದಿಸಿದರು.
ಡೆಬ್ಯು ಹಿಂದಿತ್ತು ಪ್ರಮುಖ ಕಾರಣ
ಇಂಪ್ಯಾಕ್ಟ್ ಪ್ಲೇಯರ್ ಆಗಿ ವೀಘ್ನೇಶ್ ಎಂಟ್ರಿ ನೀಡಿದಾಗ ಎಲ್ಲರಲ್ಲಿದ್ದ ಪ್ರಶ್ನೆ ಯಾರು ಈ ಹುಡುಗ ಅನ್ನೋದಾಗಿತ್ತು. ಇಂತಾ ಬಿಗ್ ಗೇಮ್ನಲ್ಲಿ ಯಂಗ್ ಬಾಯ್ ಅಗತ್ಯ ಇತ್ತಾ ಅನ್ನೋ ಪ್ರಶ್ನೆಗಳೂ ಹಲವರಲ್ಲಿದ್ವು. ಈತನನ್ನ ಕಣಕ್ಕಿಳಿಸಿದ್ರ ಹಿಂದೆ ಒಂದು ಪ್ರಮುಖ ಕಾರಣವಿತ್ತು. ಅದೇ, ಪಂದ್ಯಕ್ಕೂ ಮುನ್ನ ನಡೆದ ನೆಟ್ ಸೆಷನ್.
ಮುಂಬೈನ ನೆಟ್ ಸೆಷನ್ನಲ್ಲಿ ವಿಘ್ನೇಶ್ ಮ್ಯಾಜಿಕ್ ಮುಂದೆ ಮುಂಬೈನ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ ಪರದಾಡಿದ್ರು. ಟಿ20 ಕ್ರಿಕೆಟ್ನ ಡೇಂಜರಸ್ ಬ್ಯಾಟರ್ಗಳು 24 ವರ್ಷದ ವೀಘ್ನೇಶ್ ಎಸೆತಗಳನ್ನ ಜಡ್ಜ್ ಮಾಡೋಕೆ ತಿಣುಕಾಡಿದ್ರು. ಯಂಗ್ ಮೆಜಿಶಿಯನ್, ಮ್ಯಾಜಿಕ್ ಮಾಡಿ ಟಿ20 ಲೋಕದ ಸೂಪರ್ ಸ್ಟಾರ್ಗಳನ್ನೇ ಸೈಲೆಂಟ್ ಮಾಡಿದ್ದೇ ಪ್ಲೇಯಿಂಗ್ ಇಲೆವೆನ್ನ ಡೋರ್ ಓಪನ್ ಮಾಡಿತು.
ಯಾರು ಈ ‘ಜಾದೂಗಾರ’?
ವಿಘ್ನೇಶ್ ಪುತ್ತೂರು.. ಬಲಗೈ ಬ್ಯಾಟರ್, ಎಡಗೈ ಸ್ಪಿನ್ ಬೌಲರ್... ಕೇರಳದ ಮಲಪ್ಪುರಂ ಜಿಲ್ಲೆಯ ಪೆರಿಂಥಲ್ಮನ್ ನಿವಾಸಿ. ತಂದೆ ಸುನಿಲ್ ಕುಮಾರ್ ಆಟೋರಿಕ್ಷಾ ಚಾಲಕ. ತಾಯಿ ಕೆ.ಪಿ.ಬಿಂದು ಗೃಹಿಣಿ. ಆರ್ಥಿಕ ಸಂಕಷ್ಟದ ನಡುವೆಯೂ ಮಗನ ಕ್ರಿಕೆಟ್ ಭವಿಷ್ಯಕ್ಕಾಗಿ ಮಲಪ್ಪುರಂನಿಂದ ತ್ರಿಶೂರ್ಗೆ ಸ್ಥಳಾಂತರಗೊಂಡರು. ಕಾಲೇಜು ಮಟ್ಟದಲ್ಲಿ ಮೀಡಿಯಮ್ ಪೇಸರ್ ಆಗಿದ್ದ ವಿಘ್ನೇಶ್ ನಂತರ ಸ್ಪಿನ್ನರ್ ಆಗಿ ರೂಪುಗೊಂಡರು.
ಇದನ್ನೂ ಓದಿ: ‘ಕೊಹ್ಲಿ ಮತ್ತು ನಾನು..’ ವಿರಾಟ್ ಜೊತೆಗಿನ ಸ್ನೇಹದ ಬಗ್ಗೆ ತಲಾ ಒಳ್ಳೊಳ್ಳೆ ಮಾತು..!
ತ್ರಿಶೂರ್ನ ಸೇಂಟ್ ಥಾಮಸ್ ಕಾಲೇಜಿನಲ್ಲಿ ಪರ್ಫಾಮ್ ಮಾಡಿ ಗಮನ ಸೆಳೆದಿದ್ದ ವೀಘ್ನೇಶ್, ಕೇರಳ ಪರ ಅಂಡರ್ -14, ಅಂಡರ್ -19 ಅಂಡರ್ -23 ತಂಡಗಳಲ್ಲಿ ಆಡಿದ್ದರು. ಇಲ್ಲಿ ಅದ್ಬುತ ಪ್ರದರ್ಶನ ನೀಡಿದ್ದ ವೀಘ್ನೇಶ್, ಕೇರಳ ಕ್ರಿಕೆಟ್ ಲೀಗ್ನಲ್ಲಿ ಅಲೆಪ್ಪಿ ರಿಪಲ್ಸ್ ಆಡಿದರು.
ಬದುಕು ಬದಲಿಸಿದ ಕೇರಳ ಕ್ರಿಕೆಟ್ ಲೀಗ್
ವೀಘ್ನೇಶ್ ಕ್ರಿಕೆಟ್ ಕರಿಯರ್ಗೆ ತಿರುವು ನೀಡಿದ್ದೇ ಕೇರಳ ಕ್ರಿಕೆಟ್ ಲೀಗ್. ಈ ಟೂರ್ನಿಯನ್ನು ನೋಡಲು ಮುಂಬೈ ಇಂಡಿಯನ್ಸ್ ಸ್ಕೌಟಿಂಗ್ ಟೀಮ್ ತೆರಳಿತ್ತು. ಈತನ ಆಟ ನೋಡಿದ್ದ ಮುಂಬೈ ಸ್ಕೌಟಿಂಗ್ ಟೀಮ್, ಟ್ರಯಲ್ಸ್ಗೆ ಬರುವಂತೆ ಹೇಳಿತ್ತು. ಬಳಿಕ ಟ್ರಯಲ್ಸ್ಗೆ ಬಂದಿದ್ದ ವೀಘ್ನೇಶ್ ಬೌಲಿಂಗ್ ನೋಡಿ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಇಂಪ್ರೆಸ್ ಆಗಿದ್ದರು. ಅಂತಿಮವಾಗಿ ಮುಂಬೈ ಹರಾಜಿನಲ್ಲಿ 30 ಲಕ್ಷಕ್ಕೆ ಖರೀದಿಯನ್ನೂ ಮಾಡ್ತು.
ಡಿಸೆಂಬರ್ನಲ್ಲಿ ನಡೆದಿದ್ದ ಹರಾಜಿನಲ್ಲಿ ವಿಘ್ನೇಶ್ನ ಖರೀದಿಸಿದ್ದ ಮುಂಬೈ, 2025 ಜನವರಿಯಲ್ಲಿ ಸೌತ್ ಆಫ್ರಿಕಾಗೆ ಕಳುಹಿಸಿತ್ತು. ಸೌತ್ ಆಫ್ರಿಕಾ ಟಿ20 ಲೀಗ್ನ MI ಕೇಪ್ ಟೌನ್ ತಂಡದ ನೆಟ್ ಬೌಲರ್ ಆಗಿ ಸೇರಿದ ವೀಘ್ನೇಶ್ ಪುತ್ತೂರು, ಅಫ್ಘಾನ್ ಸ್ಪಿನ್ನರ್ ರಶೀದ್ ಖಾನ್ ಗರಡಿಯಲ್ಲಿ ಮತ್ತಷ್ಟು ಪಳಗಿದರು. ಇದೇ ಅನುಭವ ಐಪಿಎಲ್ನಲ್ಲಿ ಕೈ ಹಿಡಿಯಿತು. ಸಿಕ್ಕ ಅವಕಾಶ ಸದ್ಭಳಕೆ ಮಾಡಿಕೊಂಡಿರುವ ವೀಘ್ನೇಶ್, ಮೊದಲ ಮ್ಯಾಚ್ನಲ್ಲೇ ಸೆನ್ಸೇಷನ್ ಸೃಷ್ಟಿಸಿದ್ದಾರೆ. ಭಾರತೀಯ ಕ್ರಿಕೆಟ್ನ ಹೊಸ ಭರವಸೆಯಾಗಿ ಕಾಣಿಸಿಕೊಳ್ತಿರುವ ವೀಘ್ನೇಶ್, ಇದೇ ಆಟ ಮುಂದುವರೆಸಿದ್ರೆ ಮುಂದೊಂದು ದಿನ ಟೀಮ್ ಇಂಡಿಯಾ ಸೇರೋದು ಪಕ್ಕಾ.
ಇದನ್ನೂ ಓದಿ: ರಿಷಬ್ ಪಂತ್ಗೂ ಗೊಯೆಂಕಾ ಎಚ್ಚರಿಕೆ; KL ರಾಹುಲ್ ಘಟನೆ ನೆನಪಿಸಿದ ಫ್ಯಾನ್ಸ್..! Video
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್