/newsfirstlive-kannada/media/post_attachments/wp-content/uploads/2024/08/VINESH-PHOGAT-WELCOME-3.jpg)
ನವದೆಹಲಿ: ಕೇವಲ ನೂರೇ ನೂರು ಗ್ರಾಂ ತೂಕ ಹೆಚ್ಚಿದ್ದರಿಂದ ಫೈನಲ್​ನಿಂದ ಅನರ್ಹಗೊಂಡು. ಹಲವು ಹೋರಾಟಗಳನ್ನು ಎದುರಿಸಿ ಕೊನೆಗೂ ಈ ನೆಲದ ಕುಸ್ತಿ ಕುವರಿ ತವರಿಗೆ ಆಗಮಿಸಿದ್ದಾಳೆ. ವಿನೇಶ್ ಪೋಗಟ್ ಅವರು ಇಂದು ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಏರ್​ಪೋರ್ಟ್​​ಗೆ ಬಂದಿಳಿದ ವಿನೇಶ್ ಪೋಗಟ್​ಗೆ ಅದ್ದೂರಿ ಸ್ವಾಗತ ದೊರಕಿತು. ಕುಸ್ತಿಪಟು ಭಜರಂಗ ಪುನಿಯಾ, ಸಾಕ್ಷಿ ಮಲ್ಲಿಕ್ ಸೇರಿದಂತೆ ಸಾವಿರಾರು ಸಂಖ್ಯೆಯ ಜನರು ವಿನೇಶ್​ ಪೋಗಟ್​​ರನ್ನ ಮನದುಂಬಿ ಸ್ವಾಗತಿಸಿದ್ದಾರೆ.
ಅದ್ದೂರಿ ಸ್ವಾಗತ, ಜನರ ಪ್ರೀತಿ, ಅವರ ಪರವಾದ ಘೋಷಣೆ ಇವೆಲ್ಲವನ್ನು ಕಂಡು ವಿನೇಶ್ ಪೋಗಟ್​ ಒಂದು ಕ್ಷಣ ಭಾವುಕರಾದ್ರು. ಬೆಳ್ಳಿ ಬಂಗಾರದ ಪದಕ ತಂದಿದ್ದಕ್ಕಿಂತಲೂ ಹೆಚ್ಚು ಪ್ರೀತಿ ಅವರಿಗೆ ಕಂಡಿತೇನೋ.. ಅಕ್ಷರಶಃ ಮಗುವಿನಂತೆ ಅತ್ತು ಬಿಟ್ಟರು ವಿನೇಶ್ ಪೋಗಟ್.
ಮಗಳಿಗೆ ದೊರಕಿದ ಈ ಮಹಾ ಸ್ವಾಗತವನ್ನು ಕಂಡ ವಿನೇಶ್ ಪೋಗಟ್ ತಾಯಿ, ನಮ್ಮ ಊರಿನ ಪ್ರತಿಯೊಂದು ಮನೆಯವರು ಇಲ್ಲಿ ನೆರೆದಿದ್ದಾರೆ, ಅಕ್ಕಪಕ್ಕದ ಊರಿನವರು ಅವಳನ್ನು ಸ್ವಾಗತಿಸಲು ಬಂದಿದ್ದಾರೆ. ಅವಳು ನನಗೆ ಎಂದಿಗೂ ಚಾಂಪಿಯನ್, ಈ ದೇಶ ಅವಳಿಗೆ ಚಿನ್ನದ ಪದಕಕ್ಕಿಂತಲೂ ದೊಡ್ಡ ಗೌರವ ನೀಡಿದೆ ಎಂದಿದ್ದಾರೆ.
50 ಕೆಜಿ ಕುಸ್ತಿ ವಿಭಾಗದಲ್ಲಿ 100 ಗ್ರಾಂ ಹೆಚ್ಚಿಗೆ ತೂಕ ಬಂದಿದ್ದ ಕಾರಣದಿಂದ ವಿನೇಶ್ ಪೋಗಟ್​ ಫೈನಲ್ ಸುತ್ತಿಗೆ ಅನರ್ಹರಾಗಿದ್ದರು. ಅದನ್ನು ಪ್ರಶ್ನಿಸಿ ಕೋರ್ಟ್ ಆಫ್ ಆರ್ಬಿಟ್ರೇಷನ್ ಫಾರ್ ಸ್ಫೋರ್ಟ್ಸ್​ಗೆ ಮನವಿಯನ್ನು ಸಲ್ಲಿಸಿದ್ದರು. ಅದರ ತೀರ್ಪಿಗಾಗಿ ಕಾದಿದ್ದ ವಿನೇಶ್ ಪೋಗಟ್ ಪ್ಯಾರಿಸ್​ನಲ್ಲಿಯೇ ಉಳಿದಿದ್ದರು. ಸಿಎಎಸ್ ಅವರ ಅರ್ಜಿಯನ್ನು ತಿರಸ್ಕರಿಸಿದ ಬಳಿಕ ಪೋಗಟ್​ ಮರಳಿ ಭಾರತಕ್ಕೆ ಬಂದಿದ್ದಾರೆ. ಈ ದೇಶದ ಜನರ ಪ್ರೀತಿ ಮತ್ತು ಅವರ ಮೇಲಿನ ಅಭಿಮಾನ ಕಂಡು ಕಣ್ಣೀರಾಗಿ, ಕಣ್ಣೀರಿನಲ್ಲಿಯೇ ಒಂದು ಧನ್ಯವಾದ ಹೇಳಿ ವಿನೇಶ್ ಪೋಗಟ್ ತೆರಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ