/newsfirstlive-kannada/media/post_attachments/wp-content/uploads/2025/06/VIRAT-KOHLI-3.jpg)
ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಕಾಲ್ತುಳಿತದ ದುರಂತವನ್ನ ಇಡೀ ದೇಶವೇ ಖಂಡಿಸುತ್ತಿದೆ. ಆರ್ಸಿಬಿ ವಿಜಯೋತ್ಸವ ಆಚರಣೆ ವೇಳೆ ನಡೆದ ದುರ್ಘಟನೆಯಲ್ಲಿ 11 ಮಂದಿ ಅಮಾಯಕರು ಪ್ರಾಣಬಿಟ್ಟಿದ್ದಾರೆ. ಈಗಾಗಲೇ ಆರ್ಸಿಬಿ ಮ್ಯಾನೇಜ್ಮೆಂಟ್, ಡಿಎನ್ಎ ಇವೆಂಟ್ ಆರ್ಗನೈಸರ್ಸ್ನ್ನ ವಶಕ್ಕೆ ಪಡೆದ ಬೆನ್ನಲೇ, ಅರೆಸ್ಟ್ ಕೊಹ್ಲಿ ಅಂತ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗ್ತಿದೆ. ಅಷ್ಟಕ್ಕೂ #ARRESTKOHLI ಕ್ಯಾಂಪೇನ್ ಆಗ್ತಿರೋದು ಯಾಕೆ..?
ಜೂನ್ 4, ಕ್ರಿಕೆಟ್ನ ಕರಾಳ ದಿನ. 18 ವರ್ಷಗಳ ಬಳಿಕ ಐಪಿಎಲ್ ಟ್ರೋಫಿ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅದ್ದೂರಿ ವಿಜಯೋತ್ಸವದ ಸಂಭ್ರಮಾಚರಣೆಯನ್ನ ಆಚರಿಸಬೇಕಿತ್ತು. ಸಂಭ್ರಮ ಪಡುವ ಮುನ್ನವೇ ಅಲ್ಲಿ ಸೂತಕದ ಕರೀ ಛಾಯೆ ಆವರಿಸಿತ್ತು.
ಇದನ್ನೂ ಓದಿ: RCB ಆಟಗಾರರ ಕುಟುಂಬಕ್ಕೂ ಅಚ್ಚುಮೆಚ್ಚು ಈ ಮಾರ್ಕೆಟಿಂಗ್ ಹೆಡ್.. ಯಾರು ನಿಖಿಲ್ ಸೋಸಲೆ..?
ಆರ್ಸಿಬಿ ತಂಡದ ವಿಜಯೋತ್ಸವ ನೋಡಲು, ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಮಂದಿ ಅಭಿಮಾನಿಗಳು, ಚಿನ್ನಸ್ವಾಮಿ ಕ್ರೀಡಾಂಗಣದತ್ತ ಆಗಮಿಸಿದ್ರು. ತಮ್ಮ ನೆಚ್ಚಿನ ಚಾಂಪಿಯನ್ ತಂಡ ಮತ್ತು ತಮ್ಮ ನೆಚ್ಚಿನ ಸೂಪರ್ಸ್ಟಾರ್ ಆಟಗಾರ ವಿರಾಟ್ ಕೊಹ್ಲಿಯನ್ನ ಹತ್ತಿರದಿಂದ ಕಣ್ತುಂಬಿಸಿಕೊಳ್ಳಲು ಅದೆಷ್ಟೋ ಮಂದಿ ಕಾತರದಿಂದ ಕಾತ್ತಿದ್ದರು. ಆದ್ರೆ ಅಂದು ಅಂದುಕೊಂಡಿದ್ದೇ ಒಂದು, ಆಗಿದ್ದೇ ಮತ್ತೊಂದು.
ಸಾವು ಸಂಭವಿಸಿದರೂ, ಸಂಭ್ರಮಾಚರಣೆ ನಿಲ್ಲಲಿಲ್ಲ
ನೋಡ ನೋಡುತ್ತಿದಂತೆ ಸಾವಿರಾರು ಅಭಿಮಾನಿಗಳು, ಏಕಾಏಕಿ ಕ್ರೀಡಾಂಗಣದ ಒಳ ನುಗ್ಗಲು ಆರಂಭಿಸಿದ್ರು. ಪರಿಣಾಮ 11 ಮಂದಿ ಆರ್ಸಿಬಿ ಅಭಿಮಾನಿಗಳ ಸಾವನ್ನಪ್ಪಿದ್ರೆ. 40ಕ್ಕಿಂತ ಹೆಚ್ಚು ಮಂದಿ ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ್ದರು. ಇದೆಲ್ಲಾ ಗೊತ್ತಿದ್ರೂ ಆರ್ಸಿಬಿ ಆಟಗಾರರು ಕ್ರೀಡಾಂಗಣದ ಒಳಗೆ ಸಂಭ್ರಮಾಚರಣೆಯಲ್ಲಿ ಮುಳುಗಿದ್ದರು. ದುರಂತದ ಅರಿವು ತಿಳಿದ ಆರ್ಸಿಬಿ, ತರಾತುರಿಯಲ್ಲಿ ಕಾರ್ಯಕ್ರಮವನ್ನ ವೈಂಡ್ ಅಪ್ ಮಾಡಿತ್ತು. ದುರ್ಘಟನೆಯ ಬಗ್ಗೆ ಒಂದು ಟ್ವೀಟ್ ಮಾಡಿ, ಕೈತೊಳೆದುಕೊಳ್ಳಲು ಪ್ರಯತ್ನಿಸಿತು. ಅಷ್ಟೆರಲ್ಲಾಗಲೇ ಘಟನೆ ಕೈಮೀರಿ ಹೋಗಿತ್ತು.
#ARREST KOHLI ಕ್ಯಾಂಪೇನ್ ಟ್ರೆಂಡಿಂಗ್
11 ಮಂದಿ ಸಾವಿಗೆ ಕಾರಣರಾದ ಆರ್ಸಿಬಿ ಮ್ಯಾನೇಜ್ಮೆಂಟ್, ಡಿಎನ್ಎ ಇವೆಂಟ್ ಆರ್ಗನೈಸರ್ಸ್ ಮತ್ತು ಕೆಎಸ್ಸಿಎ ಪದಾಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಘಟನೆಗೆ ಕಾರಣರಾದ ಕೆಲವರನ್ನ ಅರೆಸ್ಟ್ ಮಾಡಲಾಗಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ, ಇದೀಗ ಹೊಸ ಕ್ಯಾಂಪೇನ್ ಶುರುವಾಗಿದೆ. ಅದೇ #ARREST KOHLI
ಇದನ್ನೂ ಓದಿ: ಚಿನ್ನಸ್ವಾಮಿ ಕಾಲ್ತುಳಿತ ಕೇಸ್.. ಸಿಐಡಿ ತನಿಖೆ ಬೆನ್ನಲ್ಲೇ ಕೆಎಸ್ಸಿಎ ಕಾರ್ಯದರ್ಶಿ, ಖಜಾಂಚಿ ದಿಢೀರ್ ರಾಜೀನಾಮೆ
ಕೊಹ್ಲಿ ವಿರುದ್ಧ ಅಭಿಮಾನಿಗಳು ಸಿಡಿದೆದ್ದಿದ್ದೇಕೆ?
ಘಟನೆಯ ನಂತರ ಕೊಹ್ಲಿ ತಮ್ಮ X ಖಾತೆಯಲ್ಲಿ ನೋವನ್ನ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ರು. ನಂತರ ಕೊಹ್ಲಿ ಬೆಂಗಳೂರಿನಿಂದ ಮುಂಬೈಗೆ ಫ್ಲೈಟ್ ಏರಿದ್ರು. ಇಷ್ಟಾಗಿದ್ರೆ ಓಕೆ.. ಆದ್ರೆ ಕೊಹ್ಲಿ ಯಾವಾಗ ಲಂಡನ್ಗೆ ಹೋಗಲು ಮುಂದಾದ್ರೋ ಅಭಿಮಾನಿಗಳು ವಿರಾಟ್ ಕೊಹ್ಲಿ ವಿರುದ್ಧ ಕೆರಳಿ ಕೆಂಡವಾಗಿದ್ದಾರೆ. ಚಿನ್ನಸ್ವಾಮಿ ಸ್ಟೇಡಿಯಮ್ ಕಾಲ್ತುಳಿತದ ದುರಂತ ನಡೆದು ಎರಡು ದಿನವಾಗಿಲ್ಲ. ಆಗಲೇ ಲಂಡನ್ಗೆ ಹೋಗೋಕೆ ಅರ್ಜೆಂಟ್ ಯಾಕೆ ಅಂತ ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.
11 ಮಂದಿ ಸಾವಿಗೆ ವಿರಾಟ್ ಕೊಹ್ಲಿ ಕಾರಣಾನಾ?
ಅಷ್ಟಕ್ಕೂ ಆರ್ಸಿಬಿ ವಿಜಯೋತ್ಸವ ತರಾತುರಿಯಲ್ಲಿ ನಡೆಯೋಕೆ ವಿರಾಟ್ ಕೊಹ್ಲಿನೇ ಕಾರಣ ಎನ್ನಲಾಗ್ತಿದೆ. ಬೆಂಗಳೂರು ಸಿಟಿ ಪೊಲೀಸರು ವಿಜಯೋತ್ಸವದ ಸಂಭ್ರಮವನ್ನ ಸದ್ಯಕ್ಕೆ ಮುಂದೂಡಿ ಅಂತ ಮನವಿ ಮಾಡಿದ್ರೂ ಆರ್ಸಿಬಿ ಮ್ಯಾನೇಜ್ಮೆಂಟ್ ಕೇಳಲಿಲ್ಲ. ಕೊಹ್ಲಿ, ಲಂಡನ್ಗೆ ಹೋಗಬೇಕಿದ್ದ ಕಾರಣ ಹಠದಿಂದಲೇ ವಿಜಯೋತ್ಸವದ ಕಾರ್ಯಕ್ರಮ ಆಯೋಜಿಸಿತ್ತು. ಇದೇ ದುರಂತಕ್ಕೆ ಎಡೆ ಮಾಡಿಕೊಡ್ತು ಎಂಬ ಮಾತುಗಳು ಕೇಳಿಬಂದಿವೆ.
ಒಂದು ಸಾವಿಗೆ ಅಲ್ಲು ಅರ್ಜುನ್ ಅರೆಸ್ಟ್
ಡಿಸೆಂಬರ್ 4, 2024ರಲ್ಲಿ ಟಾಲಿವುಡ್ ಸಿನಿಮಾ ಪುಷ್ಪಾ-2 ರಿಲೀಸ್ ಆದಾಗ ಓರ್ವ ಮಹಿಳೆ ಸವಾನ್ನಪ್ಪಿದ್ದರು. ಹಾಗೆ ಓರ್ವ ಬಾಲಕ ಗಂಭೀರವಾಗಿ ಗಾಯಗೊಂಡಿದ್ದ. ಈ ಘಟನೆಗೆ ಅಲ್ಲು ಅರ್ಜುನ್ ಕಾರಣ ಅಂತ, ಅಂದು ನಟನನ್ನ ಬಂಧಿಸಲಾಗಿತ್ತು. ಆದ್ರೀಗ ವಿರಾಟ್ ಕೊಹ್ಲಿಯನ್ನ ನೋಡಲು ಬಂದ 11 ಮಂದಿ ಆರ್ಸಿಬಿ ಅಭಿಮಾನಿಗಳು, ಸಾವನ್ನಪ್ಪಿದ್ದಾರೆ. ಈ ಸಾವು, ನೋವಿಗೆಲ್ಲಾ ಕೊಹ್ಲಿಯೇ ಕಾರಣ. ಹಾಗಾಗಿ ವಿರಾಟ್ ಕೊಹ್ಲಿಯನ್ನ ಮೊದಲು ಅರೆಸ್ಟ್ ಮಾಡಬೇಕು ಅಂತ, ಸೋಶಿಯಲ್ ಮೀಡಿಯಾದಲ್ಲಿ #ARREST KOHLI ಟ್ರೆಂಡ್ ಆಗ್ತಿದೆ. ಕಪ್ ಗೆದ್ದಗ ಕಣ್ಣೀರಾಕಿದ್ದ ಕೊಹ್ಲಿ, ಸಾವು ಸಂಭವಿಸಿದ ಒಂದೆರಡು ದಿನಗಳಲ್ಲಿ ದೇಶವನ್ನೇ ಬಿಟ್ಟು ಹೋಗ್ತಿರೋದು ಎಷ್ಟು ಸರಿ ಅಂತ ಪ್ರಶ್ನಿಸಿದ್ದಾರೆ.
ಈ ಘಟನೆಗೆ ಸರ್ಕಾರ, ಆರ್ಸಿಬಿ, ಡಿಎನ್ಎ ಇವೆಂಟ್ ಆರ್ಗನೈಸರ್ಸ್ ಮತ್ತು ಕೆಎಸ್ಸಿಎ ಎಲ್ಲರೂ ಕಾರಣರೇ. ಆದ್ರೆ ಮಹಾ ನಿರ್ಲಕ್ಷ್ಯದಿಂದ ದುರ್ಘಟನೆಗೆ ಕಾರಣರಾದ ತಪ್ಪಿತಸ್ಥರು. ತಾವು ಸೇಫ್ ಆಗಲು ಬ್ಲೇಮ್ ಗೇಮ್ ಆಡಿ ತನಿಖೆಯ ಹಾದಿ ತಪ್ಪಿಸಲು ಯತ್ನಿಸ್ತಿದ್ದಾರೆ. ಮತ್ತೊಂದೆಡೆ ಸುಖಾಸುಮ್ಮನೆ ವಿರಾಟ್ ಕೊಹ್ಲಿಯ ಹೆಸರನ್ನ ಈ ಪ್ರಕರಣದಲ್ಲಿ ಎಳೆದು, ಬೇರೆಯದ್ದೇ ಸಂಬಂಧ ಕಲ್ಪಿಸೋ ಪ್ರಯತ್ನ ನಡೆಸ್ತಿದ್ದಾರೆ.
ಇದನ್ನೂ ಓದಿ: RCB ಖರೀದಿಸಿದ್ದು ಕ್ರೀಡಾ ಸ್ಫೂರ್ತಿಯಿಂದಲ್ಲ, ಹಿಂದಿನ ಉದ್ದೇಶವೇ ಬೇರೆ ಆಗಿತ್ತು.. 18 ವರ್ಷದ ನಂತರ ಸತ್ಯ ಹೇಳಿದ ಮಲ್ಯ
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ