/newsfirstlive-kannada/media/post_attachments/wp-content/uploads/2025/06/RCB_FANS_VIRAT.jpg)
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟ್ರೋಫಿ ಗೆದ್ದ ಖುಷಿಯಲ್ಲಿ ಸಂಭ್ರಮದ ನಡುವೆ ಆಘಾತ, ಆಕ್ರಂದನ. ಹುಚ್ಚೆದ್ದು ಕುಣಿಯುತ್ತಿದ್ದ ಅಭಿಮಾನಿಗಳ ಹೃದಯ ಕ್ಷಣದಲ್ಲೇ ಸ್ತಬ್ಧವಾಗಿದೆ. ಸಂಭ್ರಮಾಚರಣೆ ವೇಳೆ ಕೊನೆಯುಸಿರು. ಇದಕ್ಕೆ ಸಾಕ್ಷಿ ಆಗಿದ್ದು ಸಿಲಿಕಾನ್ ಸಿಟಿಯ ಚಿನ್ನಸ್ವಾಮಿ ಸ್ಟೇಡಿಯಂ.
ಆರ್ಸಿಬಿ ತಂಡದ ವಿಜಯೋತ್ಸವದ ನಡುವೆ ಭೀಕರ ಕಾಲ್ತುಳಿತ
ರಾಯಲ್ ಚಾಲೆಂಜರ್ಸ್ ಬೆಂಗಳೂರು 17 ವರ್ಷಗಳ ಬಳಿಕ 18ನೇ ವರ್ಷಕ್ಕೆ ಐಪಿಎಲ್ ಕಪ್ ಗೆದ್ದಿದೆ. ಈ ಸಂಭ್ರಮಾಚರಣೆ ಎಲ್ಲೆಡೆ ಮನೆ ಮಾಡಿರುವಾಗಲೇ ಭಾರೀ ದುರಂತ ಸಂಭವಿಸಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವಕ್ಕೆ ಸಾಗರೋಪಾದಿಯಲ್ಲಿ ಅಭಿಮಾನಿಗಳು ಕ್ರೀಡಾಂಗಣದ ಬಳಿ ಸೇರಿದ್ದರು. ಕಾಲಿಡಲು ಸ್ಥಳವಿಲ್ಲದಷ್ಟು ಜಾಗ ಬಿಡದ ಕಾಲ್ತುಳಿತ ಸಂಭವಿಸಿ ಅಭಿಮಾನಿಗಳು ಮೃತಪಟ್ಟಿದ್ದಾರೆ.
ಕಪ್ ನಮ್ದಾಯ್ತು ಅನ್ನೋ ಎಕ್ಸೈಟ್ಮೆಂಟ್ ಅದಾಗಲೇ ಹಲವು ಅಭಿಮಾನಿಗಳು ಸ್ಟೇಡಿಯಂ ಸುತ್ತ ಜಮಾಯಿಸಿದ್ದರು. ಮಧ್ಯಾಹ್ನದ ವೇಳೆ ಆರ್ಸಿಬಿ ಮ್ಯಾನೇಜ್ಮೆಂಟ್ ಉಚಿತ ಪ್ರವೇಶ ಎಂದು ಪೋಸ್ಟ್ ಕೂಡ ಹಾಕಿತು. ಇದರಿಂದಾಗಿ ಇನ್ನೂ ಹಲವು ಅಭಿಮಾನಿಗಳು ಸ್ಟೇಡಿಯಂ ನತ್ತ ದೌಡಾಯಿಸಿದರು. ಸ್ಟೇಡಿಯಂ ಪ್ರವೇಶಕ್ಕೆ ಪೊಲೀಸರು ಗೇಟ್ ಓಪನ್ ಮಾಡಿ ಬೆನ್ನಲ್ಲೇ ಏಕಾಏಕಿ ಅಭಿಮಾನಿಗಳು ನುಗ್ಗಿದ್ದಾರೆ. ಪ್ರವೇಶ ಉಚಿತ ಎಂದಿದ್ದಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ನುಗ್ಗಿದ್ದರಿಂದ ದುರಂತ ಸಂಭವಿಸಿದೆ. ಈ ವೇಳೆ ನೂಕಾಟ, ತಳ್ಳಾಟ ಉಂಟಾಗಿ ದುರ್ಘಟನೆ ಸಂಭವಿಸಿದೆ. ಕಾಲ್ತುಳಿತ ನಡೆದು ಮಕ್ಕಳು ಸೇರಿದಂತೆ 11 ಮಂದಿ ಸಾವನ್ನಪ್ಪಿದ್ದಾರೆ.
ಮಾತೇ ಬರ್ತಿಲ್ಲ, ಕರುಳು ಹಿಂಡುತ್ತಿದೆ ಅಂತ ಪೋಸ್ಟ್
ಕಾಲ್ತುಳಿತ ದುರಂತದ ಬಗ್ಗೆ ವಿರಾಟ್ ಕೊಹ್ಲಿ ಸಂತಾಪ ಸೂಚಿಸಿದ್ದು, ಮಾತೇ ಬರ್ತಿಲ್ಲ, ಕರುಳು ಹಿಂಡುತ್ತಿದೆ ಅಂತ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ.
ಅತ್ತ ಆರ್ಸಿಬಿ ಮಾಜಿ ಆಟಗಾರ ಎಬಿ ಡಿವಿಲಿರ್ಸ್ ಕೂಡ ದುರಂತದಲ್ಲಿ ಸಾವನ್ನಪ್ಪಿದ ಕುಟುಂಬದವರಿಗಾಗಿ ಪ್ರಾರ್ಥಿಸುತ್ತೇನೆ ಅಂತಾ ಮರುಗಿದ್ದಾರೆ. ಇತ್ತ ನಟಿ ಅನುಷ್ಕಾ ಶರ್ಮಾ ಕೂಡ ಬ್ರೋಕನ್ ಹಾರ್ಟ್ ಎಮೋಜಿ ಹಾಕಿ ಕಾಲ್ತುಳಿದ ಘಟನೆಗೆ ಮರುಕ ವ್ಯಕ್ತಪಡಿಸಿದ್ದಾರೆ.
ಮೃತರ ಕುಟುಂಬಸ್ಥರಿಗೆ 10 ಲಕ್ಷ ಪರಿಹಾರ ಘೋಷಣೆ
ಇನ್ನೂ ಮೃತರ ಕುಟುಂಬಸ್ಥರಿಗೆ ರಾಜ್ಯ ಸರ್ಕಾರದಿಂದ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಲಾಗಿದೆ. ಈ ಬಗ್ಗೆ ಖುದ್ದು ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ. ಗಾಯಾಳುಗಳಿಗೆ ಉಚಿತ ಚಿಕಿತ್ಸೆ ವ್ಯವಸ್ಥೆ ಮಾಡಲಾಗಿದೆ ಅಂತಲೂ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:RCB ವಿಜಯೋತ್ಸವದಲ್ಲಿ ಕಾಲ್ತುಳಿತ ಪ್ರಕರಣ.. ಕಣ್ಮುಚ್ಚಿದ ಇಂಜಿನಿಯರ್ ಯುವತಿ
ಈ ನಡುವೆ ಗಾಯಾಳುಗಳ ಆರೋಗ್ಯವನ್ನ ಖುದ್ದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ವಿಚಾರಿಸಿದ್ದಾರೆ. ಆದ್ರೆ, ಪ್ರಯೋಜನ ಏನು? ದುರಂತ ನಡೆದು ಹೋಗಿದೆ. 11 ಜೀವ ಬಲಿಯಾಗಿದೆ. ಇನ್ನು, ಕೆಲವರು ನೋವಿನಿಂದ ನರಳಾಡ್ತಾ ಶಿವಾಜಿನಗರದ ಬೌರಿಂಗ್ ಹಾಗೂ ಸ್ಟೇಡಿಯಂ ಪಕ್ಕದ ವೈದೇಹಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಿದ್ದಾರೆ.
ಸಂಭ್ರಮದಲ್ಲಿ ಮೃತರು ಅವರ ವಯಸ್ಸು
- ಭೂಮಿಕ- 20 ವರ್ಷ
- ಸಹನಾ-19 ವರ್ಷ
- ಪೂರ್ಣಚಂದ್ರ- 32 ವರ್ಷ
- ಚಿನ್ಮಯಿ- 19 ವರ್ಷ
- ದಿವಾನ್ಷಿ- 13 ವರ್ಷ
- ಶ್ರವಣ್- 20 ವರ್ಷ
- ದೇವಿ- 29 ವರ್ಷ
- ಶಿವಲಿಂಗ್- 17 ವರ್ಷ
- ಮನೋಜ್- 33 ವರ್ಷ
- ಅಕ್ಷತಾ-
- ಪ್ರಜ್ವಲ್- 21 ವರ್ಷ
ಕಾಲ್ತುಳಿತದಲ್ಲಿ ಸಾವನ್ನಪ್ಪಿದವರ ಮನೆ ಮಂದಿಯ ಆಕ್ರಂದನ ಮುಗಿಲು ಮುಟ್ಟಿದೆ. 18 ವರ್ಷಗಳ ಬಳಿಕ ಆರ್ಸಿಬಿ ಕಪ್ ಗೆದ್ದ ಕಾಲ್ತುಳಿತದಿಂದ ಸಂಭವಿಸಿದ ಸಾವಿನ ಸೂತಕದಲ್ಲಿ ಮರೆಯಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ