/newsfirstlive-kannada/media/post_attachments/wp-content/uploads/2024/12/JODIDARAN-MARRIEGE.jpg)
ತಾಯಿಗೆ ಮಾತನ್ನು ತೆಗೆದು ಹಾಕಬಾರದು ಎಂಬ ಒಂದೇ ಒಂದು ಕಾರಣಕ್ಕೆ ಮಹಾಭಾರತದಲ್ಲಿ ಪಾಂಡವರು ದ್ರೌಪದಿಯನ್ನು ಐವರು ಸೇರಿ ಮದುವೆಯಾಗುತ್ತಾರೆ. ತಮ್ಮ ವೈವಾಹಿಕ ಬದುಕನ್ನು ಒಂದು ವೃತದಂತೆ ಪಾಲಿಸುತ್ತಾ ಸ್ವರ್ಗಾರೋಹಣದವರೆಗೂ ಅದನ್ನು ಕಾಪಾಡಿಕೊಂಡು ಬರುತ್ತಾರೆ. ಇದು ಕೇವಲ ಆ ಮಹಾಕಾವ್ಯಕ್ಕೆ ಸರಿ, ನಿಜ ಜೀವನದಲ್ಲಿ ಇದು ಸಾಧ್ಯವಿಲ್ಲ ಎಂದೇ ಎಲ್ಲರೂ ಭಾವಿಸುತ್ತಾರೆ. ಆದ್ರೆ ಹಿಮಾಚಲ ಪ್ರದೇಶದ ಸಿರ್ಮೌರ್ ಜಿಲ್ಲೆಯ ಒಂದು ಸಮುದಾಯದ ಪದ್ಧತಿಯಲ್ಲಿ ಇಂದಿಗೂ ಕೂಡ ಬಹುಪತಿತ್ವದ ಜಾರಿಯಲ್ಲಿದೆ. ಆಸ್ತಿಯಲ್ಲಿ, ಮನೆಯಲ್ಲಿ ಹಾಗೂ ಅಣ್ಣ ತಮ್ಮಂದಿರಲ್ಲಿ ಯಾವುದೇ ಬಿರುಕು ಮೂಡಬಾರದು ಎಂದು ಇಲ್ಲಿ ಹಿರಿಯ ಮಗನನ್ನು ಮದುವೆಯಾಗಿ ಬರುವ ಮಹಿಳೆ, ಆಕೆಯ ಗಂಡನ ಸಹೋದರರನ್ನೂ ಕೂಡ ಪತಿಯಾಗಿ ಒಪ್ಪಿಕೊಳ್ಳಬೇಕಾಗುತ್ತದೆ.
ಈ ಒಂದು ಪದ್ಧತಿಯನ್ನು ಇಲ್ಲಿ ಜೋಡಿದಾರಣ ಎಂದು ಕರೆಯುತ್ತಾರೆ. ಪ್ರಮುಖವಾಗಿ ಆಸ್ತಿ ಮತ್ತು ಕುಟುಂಬದಲ್ಲಿ ಒಡಕು ಮೂಡಬಾರದು ಎಂಬ ಉದ್ದೇಶದಿಂದಲೇ ಇಂತಹದೊಂದು ಪದ್ಧತಿಯನ್ನು ಶತಮಾನಗಳಿಂದ ಅಸ್ತಿತ್ವದಲ್ಲಿಕೊಟ್ಟು ಬಂದಿದೆ ಈ ಸಮುದಾಯ. ಹತಿ ಎಂಬ ಬುಡಕಟ್ಟು ಸಮುದಾಯದಲ್ಲಿ ಬಹುಪತಿತ್ವ ವ್ಯವಸ್ಥೆ ಇಂದಿಗೂ ಕೂಡ ಜಾರಿಯಲ್ಲಿದೆ. ಹಣಕಾಸು ವ್ಯವಸ್ಥೆ ಹಾಗೂ ಪರಂಪರೆಯ ಬೇರು ಇವೆರಡು ಈ ಪದ್ಧತಿಯನ್ನು ಈ ಸಮುದಾಯದ ನಡುವೆ ಇಂದಿಗೂ ಕೂಡ ಜೀವಂತವಾಗಿಟ್ಟಿವೆ.
ಹತಿ ಸಮುದಾಯದವು ಸಿರ್ಮೌರ್ ಜಿಲ್ಲೆಯ ಟ್ರಾನ್ಸ್ಗಿರಿ ಎಂಬ ಪ್ರದೇಶದಲ್ಲಿ ವಾಸಿಸುತ್ತಾರೆ. ಅತ್ಯಂತ ಕಿರಿದಾದ ಬೆಟ್ಟಗುಡ್ಡ ಪ್ರದೇಶಗಳಲ್ಲಿ ವಾಸಿಸುತ್ತದೆ ಈ ಸಮುದಾಯ. ಶತಮಾನಗಳಿಂದಲೂ ಕುಟುಂಬದಲ್ಲಿ ಒಡಕು ಮೂಡದಂತೆ, ಕುಟುಂಬಗಳು ಬೇರ್ಪಡುವಿಕೆಯಿಂದ ದೂರವಾಗುದನ್ನು ತಡೆಯಲು ಇಂತಹದೊಂದು ವ್ಯವಸ್ಥೆಯನ್ನು ತಮ್ಮದಾಗಿಸಿಕೊಂಡಿದೆ ಈ ಸಮುದಾಯ. ಇಂದಿಗೂ ಕೂಡ ಮನೆಗೆ ಮದುವೆಯಾಗಿ ಬರುವ ಹೆಣ್ಣು ಮಗಳ ಗಂಡನ ತಮ್ಮಂದಿರೊಂದಿಗೂ ತನ್ನ ಬದುಕಿನ ಪಾಲುದಾರಿಕೆಯನ್ನು ಹೊಂದಿರುತ್ತಾಳೆ.
ಇದನ್ನೂ ಓದಿ:ಮಧ್ಯರಾತ್ರಿಯಲ್ಲಿ ಖ್ಯಾತ ನಟಿ ಊರ್ಮಿಳಾ ಕಾರು ಭೀಕರ ಅಪಘಾತ; ಕಾರಣವೇನು?
ಜಮ್ನಾ ಗ್ರಾಮದ ಸುನೀಲಾದೇವಿ ಎಂಬುವವರು ಈ ತಮ್ಮ ಬದುಕಿನ ಅನುಭವನ್ನು ತೆರೆದಿಟ್ಟಿದ್ದಾರೆ. ಅವರು 25 ವರ್ಷದ ಹಿಂದೆ ಇದೇ ಜೋಡಿದಾರಣ ವ್ಯವಸ್ಥೆಯಲ್ಲಿ ಮದುವೆಯಾಗಿ ಬಂದವರು. ಅವರು ಮನೆಯ ಹಿರಿಯ ಮಗನನ್ನು ಮದುವೆಯಾಗಿ ಬಂದಾಗ ಇವರ ಪತಿ ತಮ್ಮ ಇನ್ನೂ ಶಾಲಾ ವಿದ್ಯಾರ್ಥಿಯಾಗಿದ್ದ . ಕೆಲವು ವರ್ಷಗಳ ಬಳಿಕ ನನ್ನನ್ನು ನನ್ನ ಪತಿಯ ತಮ್ಮನನ್ನೂ ಪತಿಯೆಂದು ಸ್ವೀಕರಿಸಿ ಕುಟುಂಬದ ಒಗ್ಗಟ್ಟನ್ನು ಕಾಪಾಡು ಎಂದು ಹೇಳಿದಾಗ ನನಗೆ ವಿಚಿತ್ರ ಎನಿಸಿತ್ತು. ಆದರೆ ನನ್ನ ಬಳಿ ಬೇರೆ ಆಯ್ಕೆಯೇ ಇರಲಿಲ್ಲ. ಆದರೆ ನಾನು ನನ್ನ ಪತಿಯ ತಮ್ಮ ನನ್ನನ್ನು ಬಿಟ್ಟು ಬೇರೆಯವರನ್ನು ಮದುವೆಯಾದರೆ ಏನು ಗತಿ ಎಂದು ಹೆದರಿದ್ದೆ. ಆದ್ರೆ ಅದ್ಯಾವುದು ಆಗಲಿಲ್ಲ. ಹಿರಿಯರು ಹೇಳಿದಂತೆ ಮನೆಯ ಒಗ್ಗಟ್ಟು ಎಂದಿನಂತೆ ಗಟ್ಟಿಯಾಗಿಯೇ ಉಳಿಯಿತು ಎಂದು ಸುನೀಲಾದೇವಿ ಹೇಳುತ್ತಾರೆ.
ಸದ್ಯ ಸುನೀಲಾ ದೇವಿಯ ಬದುಕು ಇಬ್ಬರು ಗಂಡಂದಿರ ನಡುವೆ ಹಂಚಿ ಹೋಗಿದೆ. ಅವಳು ಗಂಡಂದಿರಿಗೆ ಕೊಡುವ ಸಮಯವೂ ಕೂಡ ಹಂಚಿಕೆಯಾಗಿದೆ. ಮತ್ತು ಮಕ್ಕಳಲ್ಲಿಯೂ ಕೂಡ ಹಂಚಿಕೆಯಾಗಿದೆ. ಇರುವ ನಾಲ್ಕು ಮಕ್ಕಳಲ್ಲಿ ಒಂದು ಮಗು ಚಿಕ್ಕಪತಿಯದ್ದೂ ಹಾಗೂ ಉಳಿದ ಮೂರು ಮಕ್ಕಳು ದೊಡ್ಡ ಪತಿಯದ್ದು ಎಂದು ಗುರುತಿಸಲಾಗುತ್ತದೆ.
ಇದನ್ನೂ ಓದಿ:ಸ್ವಿಗ್ಗಿಯಲ್ಲಿ ಕಾಂಡೋಮ್ಗಾಗಿ ಇಷ್ಟು ಕೋಟಿ ಆರ್ಡರ್..! ವಾರ್ಷಿಕ ವರದಿಯಲ್ಲಿ ಅಚ್ಚರಿ ಮಾಹಿತಿ
ಸದ್ಯ ಆಧುನಿಕತೆ ತಂತ್ರಜ್ಞಾನದ ಬದಲಾಣೆಯ ಕಾಲಘಟ್ಟದಲ್ಲಿ ಇಂದಿಗೂ ಕೂಡ ಹಳೆಯ ಪದ್ಧತಿಗಳ ನೆರಳನಲ್ಲಿಯೇ ಬದುಕುತ್ತಿದೆ. ಹಳೆಯ ಕಟ್ಟುಪಾಡುಗಳು ಇಲ್ಲಿಯ ಮಹಿಳೆಯರನ್ನು ಕಟ್ಟಿ ಹಾಕಿವೆ. ಹಲವಾರು ಸುನೀಲಾ ದೇವಿಯರ ಬದುಕು ಹರಿದು ಹಂಚಿ ಹೋಗುತ್ತಿದೆ. ಇದೇ ವಿಚಾರದ ಬಗ್ಗೆ ಮಾತನಾಡಿದ ಸುನೀಲಾ ದೇವಿ. ಕುಟುಂಬವನ್ನು ಒಗ್ಗಟ್ಟಾಗಿ ಇಡಲು ನನ್ನ ಬದುಕನ್ನ ಎರಡು ಹೋಳು ಮಾಡಿಕೊಂಡೆ ಎನ್ನುತ್ತಾರೆ. ಅದು ಅಕ್ಷರಶಃ ನಿಜ. ಕುಟುಂಬವನ್ನು ಗಟ್ಟಿಯಾಗಿ, ಭದ್ರವಾಗಿ ಇಡಲು ಹೊರಡುವ ಮಹಿಳೆ ತನ್ನನ್ನು ತಾನು ಹಲವು ಭಾಗಗಳನ್ನಾಗಿ ಮಾಡಿಕೊಂಡು ಹರಿದು ಹಂಚಿಕೊಂಡು ಬಿಟ್ಟಿರುತ್ತಾಳೆ.
ಇದನ್ನೂ ಓದಿ:ಹಿಮಾಚಲ ಪ್ರದೇಶದಲ್ಲಿ ಅಪಾಯಕ್ಕೆ ಸಿಲುಕಿದ ಸಾವಿರಾರು ಕಾರು; ಒಂದೊಂದು ದೃಶ್ಯವೂ ಎದೆ ಝಲ್ ಎನಿಸುತ್ತೆ!
ಆದರೆ ಈ ಸಮುದಾಯ ಈ ಒಂದು ಜೋಡಿಧಾರಣೆ ಪದ್ಧತಿಯನ್ನ ತ್ಯಾಗ, ಸಂಸ್ಕೃತಿ ಹಾಗೂ ಹೋರಾಟದ ಒಂದು ಅಪ್ರತಿಮ ಗುರುತು ಎಂದು ಪರಿಗಣಿಸುತ್ತದೆ. ಬದಲಾದ ಯೋಚನೆ, ಬದಲಾದ ಜಗತ್ತು, ಬದಲಾದ ತಲೆಮಾರಿನ ನಡೆವೆಯೂ ಹಳೆಯ ಪರಂಪರೆಗಳನ್ನು ಅಪ್ಪಿಕೊಂಡೇ ಇಂದಿಗೂ ಸಾಗುತ್ತಿದೆ ಈ ಸಮುದಾಯ.ಭಾರತದ ವೈಶಿಷ್ಟವೇ ಅದಲ್ಲವೇ ವಿವಿಧತೆಯಲ್ಲಿಯೂ, ಭಿನ್ನತೆಯಲ್ಲಿಯೂ ಏಕತೆಯನ್ನು ಕಾಣುವುದು. ಆದ್ರೆ ಪದ್ಧತಿ, ಸಂಪ್ರದಾಯ ಪರಂಪರೆಯ ಹೆಸರಿನಲ್ಲಿ ಹೆಣ್ಣಿನ ಶೋಷಣೆಯಂತೂ ನಡೆಯಬಾರದು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ