/newsfirstlive-kannada/media/post_attachments/wp-content/uploads/2025/02/SHIVAJI-AND-AURANG-DAUGHTER.jpg)
ಛಾವ ಸಿನಿಮಾ ಬಂದ ಮೇಲೆ ಮರಾಠ ಹಾಗೂ ಮೊಘಲರ ನಡುವಿನ ಹಲವು ಸಂಘರ್ಷಗಳು ಈಗ ಬೆಳಕಿಗೆ ಬರುತ್ತಿವೆ. ಎಂದೂ ತಿಳಿಯದ ಹಾಗೂ ಇತಿಹಾಸದಲ್ಲಿ ಹುದುಗಿ ಹೋಗಿರುವ ವಿಷಯಗಳ ಬಗ್ಗೆ ಚರ್ಚೆಗಳು ಪರ ವಿರೋಧವಾಗಿ ನಡೆಯುತ್ತಿವೆ. ಛಾವದಲ್ಲಿ ಸಿನಿಮಾ ಆರಂಭಗೊಂಡಾಗ ಛತ್ರಪತಿ ಶಿವಾಜಿಯ ಬಗ್ಗೆ ಔರಂಗಜೇಬ್ನ ಆ ಒಂದು ಸ್ವಗತದ ಬಗ್ಗೆಯೂ ಕೂಡ ಈಗ ಸಂಶೋಧನೆಗಳು ಆರಂಭಗೊಂಡಿವೆ. ಶಿವಾಜಿ ಮೃತಪಟ್ಟ ಸುದ್ದಿ ಕೇಳಿ ಔರಂಗಜೇಬ್ ತನ್ನಲ್ಲಿ ತಾನೇ ಹೇಳಿಕೊಳ್ಳುತ್ತಾನೆ. ಶಿವನಂತಹ ವೈರಿ ನನಗೆ ಮುಂದೆ ಎಲ್ಲಿ ಸಿಗಬೇಕು? ಹೇ ಅಲ್ಲಾ ಸ್ವರ್ಗದ ಬಾಗಿಲು ತೆರೆದಿಡು, ಸಿಂಹ ಬರುತ್ತಿದೆ ಎನ್ನುತ್ತಾನೆ. ಈ ಒಂದು ಮಾತು ಔರಂಗಜೇಬ್ ಶಿವಾಜಿ ಮೃತಪಟ್ಟಾಗ ಆಡಿದ್ದನೇ? ಎನ್ನುವುದರ ಬಗ್ಗೆ ಸಂಶೋಧನೆಗಳು ಈಗಾಗಲೇ ಶುರುವಾಗಿವೆ. ಸಿನಿಮಾದಲ್ಲಿ ರಂಜಕತೆಗಾಗಿ ಈ ಒಂದು ಸಂಭಾಷಣೆ ಸೇರಿಸಿದ್ದರು ಕೂಡ ಔರಂಗ್ ಆ ರೀತಿ ಹೇಳಿಕೊಂಡಿರುವ ಸಾಧ್ಯತೆಯ ಮಟ್ಟಿಗೆ ಶಿವಾಜಿ ಅವನ ಸೇನೆಯನ್ನು ಕಾಡಿದ್ದ. ಈಗ ಮತ್ತೊಂದು ಇತಿಹಾಸದಲ್ಲಿ ಹರಿದು ಹೋದ ಒಂದು ವಿಷಯದ ಬಗ್ಗೆ ಚರ್ಚೆಗಳು ನಡೆದಿವೆ. ಅದು ಔರಂಗಜೇಬ್ನ ಪುತ್ರಿ ಜೈಬುನ್ನಿಸ್ಸಾ ಬಗ್ಗೆ.
ಅದು 12ನೇ ಮೇ, 1966 ಆಗ್ರಾದ ಕೋಟೆಗೆ ಬರಲು ಶಿವಾಜಿಗೆ ಔರಂಗಜೇಬನಿಂದ ಸಂದೇಶ ಹೋಗಿತ್ತು. ಎರಡು ಸಿಂಹಗಳು ಮೊದಲ ಬಾರಿ ಮುಖಾಮುಖಿಯಾಗುವ ಸಂದರ್ಭದವದು. ಆಗ್ರಾ ಕೋಟೆಯ ಇಡೀ ದರ್ಬಾರ್ ಅಧಿಕಾರಿಗಳಿಂದ ತುಂಬಿ ಹೋಗಿತ್ತು. ಮರಾಠ ರಣದುರಂಧರನ ಆಗಮನಕ್ಕೆ ಕಾದಿತ್ತು. ಆಗಲೇ ಜಯಸಿಂಹನ ಪುತ್ರ ರಾಮಸಿಂಹ ಶಿವಾಜಿಯೊಂದಿಗೆ ದರ್ಬಾರಕ್ಕೆ ಆಗಮಿಸುತ್ತಾನೆ. ಶಿವಾಜಿ ಆಗಮನದಿಂದಾಗಿ ಇಡೀ ದರ್ಬಾರವೇ ಮೂಕವಿಸ್ಮಿತಗೊಂಡಿತ್ತು. ದಂಗುಬಡಿದಂತೆ ನಿಂತಿತ್ತು. ಔರಂಗಜೇಬನ ಪ್ರತಿ ಹೆಜ್ಜೆ ಹೆಜ್ಜೆಗೂ ಮುಳ್ಳಾಗಿ ಕಾಡುತ್ತಿರುವ ಶಿವಾಜಿ ಇವನೇನಾ ಎಂದು ತದೇಕಚಿತ್ತದಿಂದ ಶಿವಾಜಿಯತ್ತ ನೋಡುತ್ತ ನಿಂತಿತ್ತು.
ಈ ವಿಚಾರವನ್ನು ಲೇಖಕ ಬಾಬಾ ಸಾಹೇಬ್ ದೇಶಪಾಂಡೆಯವರು ತಮ್ಮ ಕೃತಿಯಾದ ‘The Deliverance or Escape of Shivaji the Great from Agra’ಯಲ್ಲಿ ಉಲ್ಲೇಖಿಸಿದ್ದಾರೆ. ದರ್ಬಾರದಲ್ಲಿ ಮೊದಲ ಬಾರಿ ಔರಂಗಜೇಬ್ನನ್ನು ಭೇಟಿಯಾದ ಶಿವಾಜಿ ಮಹಾರಾಜ್ 30 ಸಾವಿರ ರೂಪಾಯಿ ಕಪ್ಪು ಕಾಣಿಕೆ ನೀಡಿ ಸಲಾಂ ಮಾಡಿದ್ದ. ಇದೇ ಮೊದಲ ಬಾರಿಗೆ ಶಿವಾಜಿ ಒಬ್ಬ ಅನ್ಯಧರ್ಮೀಯ ರಾಜನಿಗೆ ಸಲಾಂ ಮಾಡಿದ್ದು ಎಂದು ಕೃತಿಯಲ್ಲಿ ಉಲ್ಲೇಖಗೊಂಡಿದೆ.
ಈ ದರ್ಬಾರ್ನ ಎಲ್ಲ ವ್ಯವಹಾರಗಳನ್ನು ಪರದೆಯ ಹಿಂದೆ ಕುಳಿತು ಒಬ್ಬಳು ನೋಡುತ್ತಿದ್ದಳು. ಅವಳೇ ಔರಂಗಜೇಬನ ಪುತ್ರಿ ಜೈಬುನ್ನಿಸ್ಸಾ . ಶಿವಾಜಿ ಬರುತ್ತಿದ್ದಾನೆ ಎಂಬ ಸುದ್ದಿ ಜೈಬುನ್ನಿಸ್ಸಾಳಿಗೆ ಮೊದಲೇ ತಲುಪಿತ್ತು. ಅವಳು ಶಿವಾಜಿಯ ವೀರಾವೇಷದ ಹೋರಾಟ ಹಾಗೂ ಕೇವಲ ಕೆಲವೇ ಸಾವಿರ ಸೈನಿಕರನ್ನಿಟ್ಟುಕೊಂಡು ಲಕ್ಷಾಂತರ ಸೇನಾಪಡೆಯನ್ನು ಹೊಂದಿದ್ದ ಔರಂಗಜೇಬನ ಸೇನೆಗೆ ಹೇಗೆ ಚಳ್ಳೆ ಹಣ್ಣು ತಿನ್ನಿಸುತ್ತಿದ್ದ ಎಂಬ ಬಗ್ಗೆಯೂ ಕೇಳಿದ್ದಳು. ಇದೇ ಕಾರಣದಿಂದ ಶಿವಾಜಿಯನ್ನು ನೋಡುವ ಉತ್ಸಾಹದೊಂದಿಗೆ ದರ್ಬಾರ್ಗೆ ಬಂದಿದ್ದಳು. ಪರದೆಯ ಹಿಂದೆ ಕುಳಿತು ಶಿವಾಜಿಯನ್ನು ನೋಡುತ್ತಿದ್ದಳು. ಆಗ ಶಿವಾಜಿಗೆ 39 ವರ್ಷ ಜೈಬುನ್ನಿಸ್ಸಾಳಿಗೆ 27 ವರ್ಷ.
ಇದನ್ನೂ ಓದಿ: ವಿಡಿಯೋದಲ್ಲಿ ಅಶ್ಲೀಲ ಪದ ಬಳಸಿದ ಶಿಕ್ಷಕಿ ಸಸ್ಪೆಂಡ್… ಅಷ್ಟಕ್ಕೂ ಆಕೆ ಹೇಳಿದ್ದಾದ್ರೂ ಏನು?
ಜೈಬುನ್ನಿಸ್ಸಾ ಔರಂಗಜೇಬ್ನ ಮಗಳಾದರೂ ಕೂಡ ಅವಳಿಗೆ ಅವರ ಚಿಕ್ಕಪ್ಪ ಧಾರಾಶಿಖೋಹ್ನ ಮೇಲೆ ಆಪ್ತತೆ ಹೆಚ್ಚಿತ್ತು. ಅವನು ಅತ್ಯಂತ ಸುಶಿಕ್ಷಿತ, ಸುಸಂಸ್ಕೃತ ಹಾಗೂ ಉದಾರವಾಗಿ ಬದುಕುತ್ತಿದ್ದ ವ್ಯಕ್ತಿ. ಔರಂಗಜೇಬ್ನಿಗೆ ಸಂಗೀತದ ಮೇಲೆ ದೊಡ್ಡ ದ್ವೇಷವಿತ್ತು. ಆದ್ರೆ ಜೈಬುನ್ನಿಸ್ಸಾಳಿಗೆ ಸಂಗೀತವೆಂದರೇ ಪ್ರಾಣ. ಇದೇ ಕಾರಣದಿಂದ ಅವಳು ಛದ್ಮ ಎಂಬ ಹೆಸರಿನಲ್ಲಿ ಕವಿತೆಗಳನ್ನು ಬರೆಯುತ್ತಿದ್ದಳು.
ಸೋಮಾ ಮುಖರ್ಜಿಯವರು ತಮ್ಮ ಕೃತಿಯಾದ Learned Mughal Women of Aurangzeb's Time ನಲ್ಲಿ ಉಲ್ಲೇಖಗೊಂಡಂತೆ ಜೈಬುನ್ನಿಸ್ಸಾ ಕುರಾನದ ನೀತಿ ಹಾಗೂ ಸಿದ್ಧಾಂತಗಳ ಬಗ್ಗೆ ಅತಿಜ್ಞಾನವಿತ್ತು ಆದ್ರೆ ಆಕೆಯ ತಂದೆಯಲ್ಲಿದ್ದ ಕಠೋರತೆ ಅವಳಲ್ಲಿ ಇರಲಿಲ್ಲ. ಅಂದು ದರ್ಬಾರದಲ್ಲಿ ಶಿವಾಜಿ ಬಂದಾಗ ದೂರದಿಂದಲೇ ಆತನನ್ನು ನೋಡಿ ಪ್ರಭಾವಿತಗೊಂಡಿದ್ದಳು ಎಂದು ಸೋಮಾ ಮುಖರ್ಜಿಯವರು ಬರೆದಿದ್ದಾರೆ. ಅದು ಮಾತ್ರವಲ್ಲ ಜೈಬುನ್ನಿಸ್ಸಾ ತನ್ನ ತಂದೆ ಔರಂಗಜೇಬ್ನ ಬಳಿ ಶಿವಾಜಿಯನ್ನ ಮತ್ತೊಮ್ಮೆ ಆಗ್ರಾಗೆ ಆಮಂತ್ರಿಸುವಂತೆ ಮನವಿಯನ್ನು ಕೂಡ ಮಾಡಿಕೊಂಡಿದ್ದಳಂತೆ. ಆದ್ರೆ ಔರಂಗ್ ಕೂಡ ಒಪ್ಪಿದನಂತೆ ಶಿವಾಜಿಯನ್ನು ಮತ್ತೊಮ್ಮೆ ದರ್ಬಾರ್ಗೆ ಆಗಮಿಸುವಂತೆ ಆಹ್ವಾನ ನೀಡಲಾಯ್ತು, ಇದನ್ನು ಖುದ್ದು ಜೈಬುನ್ನಿಸ್ಸಾಳೆ ಮಾಡಿದ್ದಳು.
ಇದನ್ನೂ ಓದಿ:ಕುಂಭಮೇಳ ಸುಂದರಿ ಲುಕ್ಕೇ ಅದಲು.. ಬದಲು.. ವೇದಿಕೆ ಮೇಲೆ ಮೊನಾಲಿಸಾ ಜಬರ್ದಸ್ತ್ ಡ್ಯಾನ್ಸ್; VIDEO
ಈ ಬಾರಿಯೂ ದರ್ಬಾರ್ಗೆ ಬಂದ ಶಿವಾಜಿ ಔರಂಗಜೇಬ್ನನ್ನು ಭೇಟಿ ಮಾಡಿದ ಆದ್ರೆ ಮೊದಲಿನ ಹಾಗೆ ಸಲಾಂ ಮಾಡಲಿಲ್ಲ. ನಾನೊಬ್ಬ ಸಾಮ್ರಾಟನ ರೂಪದಲ್ಲಿ ಹುಟ್ಟಿದ್ದೇನೆ ನನಗೆ ಗುಲಾಮನ ರೀತಿ ವ್ಯವಹರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದನಂತೆ. ಹೀಗೆ ಹೇಳಿ ಶಿವಾಜಿ ಸಿಂಹಾಸನದ ಮೇಲೆ ಕುಳಿತಾಗ ಔರಂಗಜೇಬ್ ಕ್ರೂರ ಆದೇಶ ನೀಡಲು ಸಿದ್ಧನಾಗಿದ್ದನಂತೆ. ಆದ್ರೆ ಶಿವಾಜಿ ನಾನು ನನ್ನ ಘನತೆಯೊಂದಿಗೆ ಎಂದಿಗೂ ರಾಜೀಯಾಗಲಾರೆ ಬೇಕಾದರೆ ನೀನು ನನ್ನನ್ನು ಇಲ್ಲಿಯೇ ಕೊಲ್ಲಬಹುದು ಎಂದಾಗ ಔರಂಗಜೇಬ್ ಶಿವಾಜಿಯನ್ನು ಬಂಧಿಸಲು ಅದೇಶ ನೀಡಿದ. ಆದರೆ ಶಿವಾಜಿ ಕೆಲವೇ ದಿನಗಳಲ್ಲಿ ಔರಂಗಜೇಬ್ನಿಗೆ ಹಾಗೂ ಅವನ ಸೇನೆಗೆ ಚಳ್ಳೆ ಹಣ್ಣು ತಿನ್ನಿಸಿ ಪರಾರಿಯಾಗಿದ್ದ. ಆಗ ಔರಂಗಜೇಬ್ನಿಗೆ ಒಂದು ಸಂಶಯ ಬಂದಿತ್ತು. ಶಿವಾಜಿ ಪರಾರಿಯಾಗುವುದರ ಹಿಂದೆ ತನ್ನ ಮಗಳು ಜೈಬುನ್ನಿಸ್ಸಾಳ ಕೈವಾಡವಿದೆ ಎಂಬ ಶಂಕೆ ಅವನಲ್ಲಿ ಮೂಡಿತ್ತು.
ಇದನ್ನೂ ಓದಿ:ಇಡೀ ಭಾರತದಲ್ಲಿ ಇದೇ ಮೊದಲು.. ಸಾಕುವ ಬೆಕ್ಕಿನಲ್ಲಿ H5N1 ಜ್ವರ ಪತ್ತೆ; ಆತಂಕಕ್ಕೆ ಕಾರಣವೇನು?
ಶಿವಾಜಿ ಹಾಗೂ ಜೈಬುನ್ನಿಸ್ಸಾಳ ನಡುವಿನ ಪ್ರೇಮ ಕಥೆಗಳ ಬಗ್ಗೆ ಅನೇಕ ಇತಿಹಾಸಕಾರರು, ಲೇಖಕರು ಬರೆದಿದ್ದಾರೆ. ಅರ್ಜುನ್ ಕೆಲುಸ್ಕರ್ ಎಂಬ ಲೇಖಕರು ಕೂಡ ಈ ಬಗ್ಗೆ ಒಂದು ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. The Life Of Shivaji Maharaj ಎಂಬ ಪುಸ್ತಕದಲ್ಲಿ ಶಿವಾಜಿಯ ಧೈರ್ಯ ಸಾಹಸ ಹಾಗೂ ಅದರೆಡೆಗೆ ಜೈಬುನ್ನಿಸ್ಸಾಳಿಗೆ ಇದ್ದ ಆಕರ್ಷಣೆಯ ಬಗ್ಗೆ ಉಲ್ಲೇಖವಾಗಿದೆ. ಶಿವಾಜಿಯ ಬಗ್ಗೆ ಜೈಬುನ್ನಿಸ್ಸಾಳಿಗೆ ಒಂದು ರೀತಿಯ ಆಕರ್ಷಣೆ ಮತ್ತು ಗೌರವ ಎರಡು ಇದ್ದವಂತೆ.
ಆದರೆ ಖ್ಯಾತ ಇತಿಹಾಸಕಾರ ಜಾದುನಾಥ್ ಸರಕಾರ ಈ ಮಾತನ್ನು ಅಲ್ಲಗಳೆಯುತ್ತಾರೆ. 1919ರಲ್ಲಿ ಪ್ರಕಟನೆಗೊಂಡ ಅವರ Studies in Mughal India' ಎಂಬ ಕೃತಿಯಲ್ಲಿ ಅವರು ಹೇಳುವ ಪ್ರಕಾರ ಬಂಗಾಳಿ ಲೇಖಕ ಭೂದೇವ್ ಮುಖರ್ಜಿಯವರು ತಮ್ಮ ಉಪನ್ಯಾಸದಲ್ಲಿ ಇಬ್ಬರು ಪ್ರೇಮಿಗಳು ಉಂಗುರುವನ್ನು ಬದಲಾಯಿಸಿಕೊಂಡು ದೂರವಾದರು ಎನ್ನುತ್ತಾರೆ. ಆದ್ರೆ ಇದು ಸುಳ್ಳು. ಇದೊಂದು ಕಾಲ್ಪನಿಕದ ಒಂದು ಕಥೆಯಷ್ಟೇ. ಶಿವಾಜಿಯನ್ನು ಜೈಬುನ್ನಿಸ್ಸಾ ಪ್ರೀತಿಸುತ್ತಿದ್ದಳು ಎಂಬ ಪ್ರೇಮ ಕಥೆ ಮರಾಠ ಸಾಮ್ರಾಜ್ಯದ ಯಾವ ಇತಿಹಾಸದಲ್ಲಿಯೂ ಕೂಡ ಉಲ್ಲೇಖವಿಲ್ಲೆ ಎನ್ನುತ್ತಾರೆ. ಹೀಗೆ ಶಿವಾಜಿ ಹಾಗೂ ಔರಂಗಜೇಬ್ನ ಪುತ್ರಿಯ ನಡುವಿನ ಪ್ರೇಮ ಕಥೆಗಳ ಬಗ್ಗೆ ಇಂದಿಗೂ ಕೂಡ ಅನೇಕ ವಾದ ಪ್ರತಿವಾದಗಳು ಕೇಳಿ ಬರುತ್ತಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ