/newsfirstlive-kannada/media/post_attachments/wp-content/uploads/2024/11/Mohammed-Siraj_Kohli.jpg)
ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿಗೆ ಮೊದಲೇ ಎಲ್ಲಾ 10 ಐಪಿಎಲ್ ಫ್ರಾಂಚೈಸಿಗಳು ಉಳಿಸಿಕೊಂಡ ಆಟಗಾರರ ಹೆಸರನ್ನು ಬಿಡುಗಡೆ ಮಾಡಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡ ರಿಟೇನ್ ಪಟ್ಟಿ ರಿಲೀಸ್ ಮಾಡಿದ್ದು, ಎಲ್ಲರಿಗೂ ಅಚ್ಚರಿ ಮೂಡಿಸಿದೆ.
ಆರ್ಸಿಬಿ ಕೇವಲ ಮೂವರು ಆಟಗಾರನ್ನು ಮಾತ್ರ ರೀಟೈನ್ ಮಾಡಿಕೊಂಡಿದ್ದು, ತಂಡದ ಸ್ಟಾರ್ ಆಟಗಾರರನ್ನೇ ಕೈ ಬಿಟ್ಟಿದೆ. ಕ್ಯಾಪ್ಟನ್ ಫಾಪ್ ಡುಪ್ಲೆಸಿಸ್, ಮೊಹಮ್ಮದ್ ಸಿರಾಜ್, ವಿಲ್ ಜಾಕ್ಸ್, ಕ್ಯಾಮೆರಾನ್ ಗ್ರೀನ್ ಸೇರಿದಂತೆ ಹಲವರನ್ನು ಆಟಗಾರರನ್ನು ಆರ್ಸಿಬಿ ಕೈ ಬಿಟ್ಟಿದೆ.
ಐಪಿಎಲ್ 2025ರ ಟೂರ್ನಿಗೆ ಬಲಿಷ್ಠ ತಂಡ ಕಟ್ಟಲು ಮುಂದಾಗಿರೋ ಆರ್ಸಿಬಿ ಅಳೆದು ತೂಗಿ ಮೂವರು ಆಟಗಾರರನ್ನು ಮಾತ್ರ ರೀಟೈನ್ ಮಾಡಿಕೊಂಡಿದೆ. ಆದರೆ, ತಂಡದ ಬೌಲಿಂಗ್ ವಿಭಾಗದ ಆಧಾರಸ್ಥಂಬ ಆಗಿದ್ದ ಮೊಹಮ್ಮದ್ ಸಿರಾಜ್ ಅವರನ್ನು ಕೈ ಬಿಟ್ಟಿದ್ದು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.
ಸಿರಾಜ್ ಕೈ ಬಿಡಲು ಕಾರಣವೇನು?
ಟೀಮ್ ಇಂಡಿಯಾದ ಆಲ್ ಫಾರ್ಮೇಟ್ ಪ್ಲೇಯರ್ ಮೊಹಮ್ಮದ್ ಸಿರಾಜ್ ಅವರು. ಇವರನ್ನು ಕೈ ಬಿಟ್ಟು ಆರ್ಸಿಬಿ ಯಶ್ ದಯಾಳ್ ಅವರನ್ನು ಉಳಿಸಿಕೊಂಡಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಕಳೆದ ಸೀಸನ್ನಲ್ಲಿ ಸಿರಾಜ್ಗಿಂತಲೂ ಯಶ್ ದಯಾಳ್ ಅತ್ಯುತ್ತಮ ಪ್ರದರ್ಶನ ನೀಡಿದ್ರು. ದಯಾಳ್ ತಾನು ಆಡಿದ 14 ಪಂದ್ಯಗಳಲ್ಲಿ 15 ವಿಕೆಟ್ ಪಡೆದಿದ್ರು. ಆರ್ಸಿಬಿ ತಂಡವನ್ನು ಪ್ಲೇ-ಆಫ್ಗೆ ಕರೆದೊಯ್ಯುವಲ್ಲಿ ದಯಾಳ್ ಪ್ರಮುಖ ಪಾತ್ರವಹಿಸಿದ್ದರು. ಹೀಗಾಗಿ ಸಿರಾಜ್ ಬದಲಿಗೆ ದಯಾಳ್ಗೆ ಆರ್ಸಿಬಿ ಮಣೆ ಹಾಕಿದೆ.
ಚೆನ್ನೈ ವಿರುದ್ಧ ಖದರ್ ತೋರಿಸಿದ್ದ ದಯಾಳ್
ಕಳೆದ ಸೀಸನ್ನಲ್ಲಿ ಲೀಗ್ ಹಂತದ ಕೊನೆ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ದಯಾಳ್ ತಮ್ಮ ಖದರ್ ತೋರಿಸಿದ್ದರು. ಕೊನೆಯ ಓವರ್ 6 ಎಸೆತಗಳಲ್ಲಿ 17 ರನ್ಗಳ ಅಗತ್ಯವಿತ್ತು. ಕ್ರೀಸ್ನಲ್ಲಿದ ಎಂಎಸ್ ಧೋನಿ ದಯಾಳ್ ಮೊದಲ ಎಸೆತದಲ್ಲಿ ಭರ್ಜರಿ ಸಿಕ್ಸರ್ ಬಾರಿಸಿದ್ದರು. ಯಾವುದಕ್ಕೂ ಹೆದರದ ದಯಾಳ್ 2ನೇ ಎಸೆತದಲ್ಲಿ ಧೋನಿ ಅವರನ್ನು ಔಟ್ ಮಾಡಿದರು. ನಂತರ ಉಳಿದ 5 ಎಸೆತಗಳಲ್ಲಿ ಕೇವಲ 1 ರನ್ ಮಾತ್ರ ಬಿಟ್ಟುಕೊಟ್ಟು ಆರ್ಸಿಬಿ ತಂಡವನ್ನು ಗೆಲ್ಲಿಸಿದ್ರು.
ಆರ್ಸಿಬಿ ಉಳಿಸಿಕೊಂಡ ಆಟಗಾರರು ಇವರೇ
ಮುಂದಿನ ಸೀಸನ್ನಲ್ಲಿ ಹೇಗಾದ್ರೂ ಮಾಡಿ ಕಪ್ ಗೆಲ್ಲಲೇಬೇಕು ಎಂದು ಮುಂದಾಗಿರೋ ಆರ್ಸಿಬಿ ರೀಟೈನ್ ಮಾಡಿಕೊಳ್ಳಲು ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಆರ್ಸಿಬಿ ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಯಶ್ ದಯಾಳ್ ಅವರನ್ನು ಮಾತ್ರ ಉಳಿಸಿಕೊಂಡು ಎಲ್ಲರನ್ನು ಕೈ ಬಿಟ್ಟಿದೆ. ವಿರಾಟ್ ಕೊಹ್ಲಿ ಅವರಿಗೆ 21 ಕೋಟಿ, ರಜತ್ ಪಾಟಿದಾರ್ ಅವರಿಗೆ 11 ಕೋಟಿ, ಯಶ್ ದಯಾಳ್ ಅವರಿಗೆ 5 ಕೋಟಿ ಕೊಟ್ಟು ರೀಟೈನ್ ಮಾಡಿಕೊಂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ