/newsfirstlive-kannada/media/post_attachments/wp-content/uploads/2024/04/BBMP-1.jpg)
ಬೆಂಗಳೂರು: ಮಳೆಯಿಂದ ಉದ್ಯಾನ ನಗರಿಯ ಸಮಸ್ಯೆಗಳಿಂದ ಜನರು ರೋಸಿ ಹೋಗಿದ್ದಾರೆ. ಇದರ ಬೆನ್ನಲ್ಲೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಬರೋಬ್ಬರಿ 50 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಮಹಿಳೆಯೊಬ್ಬರು ನೋಟಿಸ್ ಕಳುಹಿಸಿದ್ದಾರೆ.
ಬೆಂಗಳೂರಿನ ರಿಚ್ಮಂಡ್ ನಿವಾಸಿ ಆಗಿರುವ ಡಾ. ದಿವ್ಯಾ ಕಿರಣ್ ಎಸ್ ಎನ್ನುವರು ಕೇವಲ 15 ದಿನಗಳಲ್ಲಿ 50 ಲಕ್ಷ ರೂಪಾಯಿ ಪರಿಹಾರದ ಜೊತೆಗೆ ನೋಟಿಸ್ ಶುಲ್ಕ 10 ಸಾವಿರ ರೂಪಾಯಿಗಳನ್ನು ನೀಡಬೇಕು ಎಂದು ಬಿಬಿಎಂಪಿಗೆ ಲೀಗಲ್ ನೋಟಿಸ್ ಅನ್ನು ನೀಡಿದ್ದಾರೆ. ಬೆಂಗಳೂರಿನ ರಸ್ತೆಗಳಲ್ಲಿ ಸಾಕಷ್ಟು ಗುಂಡಿಗಳಿದ್ದು ಇದರಿಂದ ಓಡಾಡುವಾಗ ನೋವು ಅನುಭವಿಸುತ್ತಿದ್ದೇವೆ ಎಂದು ನೋಟಿಸ್ನಲ್ಲಿ ಉಲ್ಲೇಖ ಮಾಡಲಾಗಿದೆ.
ಬಿಬಿಎಂಪಿಗೆ ತೆರಿಗೆ ಪಾವತಿದಾರಳು ಆಗಿದ್ದರೂ ನಗರದಲ್ಲಿ ಉತ್ತಮ ಮೂಲಭೂತ ಸೌಕರ್ಯ ಸಿಗುತ್ತಿಲ್ಲ ಎಂದು ಆರೋಪಿಸಲಾಗಿದೆ. ಆಟೋ, ಬೈಕ್ ಮೂಲಕ ಕಳಪೆ ರಸ್ತೆಗಳಲ್ಲಿ ಹೋಗೋಕೆ ಆಗುತ್ತಿಲ್ಲ. ಬಿಬಿಎಂಪಿಯ ತೀವ್ರ ನಿರ್ಲಕ್ಷ್ಯದಿಂದ ಸಾರ್ವಜನಿಕ ಕರ್ತವ್ಯ ನಿರ್ವಹಿಸುವಲ್ಲಿ ವಿಫಲವಾಗಿದೆ ಎಂದು ಟೀಕೆ ಮಾಡಿದ್ದಾರೆ. ನಗರದ ಕಳಪೆ ರಸ್ತೆಗಳಲ್ಲಿ ಸಂಚರಿಸಿ ದೈಹಿಕ, ಮಾನಸಿಕ ಯಾತನೆ ಅನುಭವಿಸುತ್ತಿರುವುದಕ್ಕೆ ಪಾಲಿಕೆ ಕಾರಣವಾಗಿದೆ ಎಂದು ದೂರಲಾಗಿದೆ.
ಇದನ್ನೂ ಓದಿ:ಪೂರ್ವ ಮುಂಗಾರು ಆರ್ಭಟ.. ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಸುರಿಯಲಿದೆ ಭಾರೀ ಮಳೆ
ಅನಿಯಂತ್ರಿತ ರಸ್ತೆಯಿಂದ ಬೆನ್ನು ನೋವು, ಕುತ್ತಿಗೆ ನೋವು ಬಂದಿದೆ. ನಾಲ್ಕೈದು ಬಾರಿ ಮೂಳೆ ತಜ್ಞರನ್ನ ಭೇಟಿ ಮಾಡಿದ್ದೇನೆ. ಅಪಾಯಕಾರಿ ರಸ್ತೆಗಳಲ್ಲಿ ಸಂಚರಿಸಿದ್ದೇ ಇದಕ್ಕೆ ಕಾರಣ. ಸೇಂಟ್ ಫಿಲೋಮಿನಾ ಆಸ್ಪತ್ರೆಗೆ 4 ಬಾರಿ ತುರ್ತು ಭೇಟಿ ಕೊಟ್ಟಿದ್ದೇನೆ. ತೀವ್ರ ನೋವಿನಿಂದ ಇಂಜೆಕ್ಷನ್ ತಗೊಂಡಿದ್ದೇನೆ. ಈಗಲೂ ಔಷಧಿಗಳನ್ನ ಪಡೆಯುತ್ತಿದ್ದೇನೆ ಎಂದು ಡಾ. ದಿವ್ಯಾ ಕಿರಣ್ ಪರ ವಕೀಲ ಕೆ.ವಿ ಲವೀನ್ ನೋಟಿಸ್ನಲ್ಲಿ ಉಲ್ಲೇಖ ಮಾಡಿದ್ದಾರೆ.
ನಗರದಲ್ಲಿರುವ ವ್ಯವಸ್ಥೆಯಿಂದ ನೋವಿನಿಂದ ನಿದ್ದೆಯ ಕೊರತೆ ಹಾಗೂ ಮಾನಸಿಕ ಚಿಂತನೆಗೆ ಒಳಗಾಗಿದ್ದೇನೆ. ಇದರಿಂದ ದಿನನಿತ್ಯದ ಚಟುವಟಿಕೆ, ಕೆಲಸದ ಮೇಲೆ ವ್ಯತಿರಿಕ್ತ ಪರಿಣಾಮ ಆಗುತ್ತಿದೆ. ಹೀಗಾಗಿ ಐವತ್ತು ಲಕ್ಷ ರೂಪಾಯಿಗಳ ಪರಿಹಾರದ ಜೊತೆ ಹತ್ತು ಸಾವಿರ ರೂಪಾಯಿ ನೋಟಿಸ್ ಶುಲ್ಕವನ್ನು ಬಿಬಿಎಂಪಿ ಪಾವತಿಸುವಂತೆ ಉಲ್ಲೇಖ ಮಾಡಲಾಗಿದೆ. ಆದರೆ ಈ ನೋಟಿಸ್ ಕುರಿತು ಬಿಬಿಎಂಪಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ