/newsfirstlive-kannada/media/post_attachments/wp-content/uploads/2024/11/Duniya-Vijay-Accused.jpg)
ಬೆಂಗಳೂರು: ಜೈಲು ಹಕ್ಕಿಗಳಿಗೆ ಬಿಡುಗಡೆಯ ಭಾಗ್ಯ ಕರುಣಿಸಿದ್ದ ನಟ ದುನಿಯಾ ವಿಜಯ್ ಅವರ ಆಶಯ ವ್ಯರ್ಥವಾಗಿದೆ. ದುನಿಯಾ ವಿಜಿ ಜೈಲಿನಿಂದ ಬಿಡಿಸಿದ್ದ ಆರೋಪಿಯಿಂದ ಜೋಡಿ ಕೊಲೆಯಾಗಿದೆ. ದುನಿಯಾ ವಿಜಯ್ ಶೂರಿಟಿಯಿಂದ ರಿಲೀಸ್ ಆಗಿದ್ದ ಪಾತಕಿ ಮತ್ತೆ ಪೊಲೀಸರ ಅತಿಥಿಯಾಗಿದ್ದಾರೆ.
ಸುರೇಶ್ ಎಂಬ ಅಪರಾಧಿ ಈ ಹಿಂದೆ ಜೋಡಿ ಕೊಲೆ ಹಾಗೂ ಅತ್ಯಾಚಾರ ಕೇಸ್ನಲ್ಲಿ ಜೈಲು ಸೇರಿದ್ದ. ಕೆಲ ದಿನಗಳ ಹಿಂದೆ ದುನಿಯಾ ವಿಜಯ್ ಅವರು ಒಂದಷ್ಟು ಅಪರಾಧಿಗಳಿಗೆ ತಲಾ 3 ಲಕ್ಷ ರೂಪಾಯಿ ಶ್ಯೂರಿಟಿ ಹಣ ಕಟ್ಟಿ ಬಿಡುಗಡೆಗೆ ಸಹಾಯವಾಗಿದ್ದರು.
ಇದನ್ನೂ ಓದಿ: ಜೈಲಿನಿಂದ ಖೈದಿಗಳನ್ನು ಬಿಡುಗಡೆ ಮಾಡಿಸಿದ ದುನಿಯಾ ವಿಜಯ್.. ನುಡಿದಂತೆ ನಡೆದ ‘ಭೀಮ’
ದುನಿಯಾ ವಿಜಯ್ ಶ್ಯೂರಿಟಿ ಕೊಟ್ಟ ಅಪರಾಧಿಗಳಲ್ಲಿ ಈ ಸುರೇಶ್ ಕೂಡ ಒಬ್ಬರು. ಬಾಗಲೂರು ಡಬಲ್ ಮರ್ಡರ್ ಕೇಸ್ನಲ್ಲಿ ಜೈಲು ಸೇರಿದ್ದ ಸುರೇಶ್ 10 ವರ್ಷ ಶಿಕ್ಷೆ ಅನುಭವಿಸಿದ್ದ. ಈ ಅಪರಾಧಿಗೆ ಶ್ಯೂರಿಟಿ ಹಣ ನೀಡಲು ಯಾರು ಇರಲಿಲ್ಲ. ಈ ವೇಳೆ ದುನಿಯಾ ವಿಜಯ್ ಅವರು ಸುರೇಶ್ಗೆ ಮೂರು ಲಕ್ಷ ಶ್ಯೂರಿಟಿ ಹಣ ನೀಡಿ ಜೈಲಿಂದ ಬಿಡುಗಡೆಗೊಳಿಸಿದ್ದರು.
ಜೈಲಿಂದ ಬಿಡುಗಡೆ ಬಳಿಕ ಸುರೇಶ್, ಮಾರ್ಕೆಟ್ನಲ್ಲಿ ಕೊತ್ತಮಿರಿ ಸೊಪ್ಪು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ. ಆಮೇಲೆ ಸುರೇಶ್ ಸಂಬಂಧಿಯಿಂದ ಬಸ್ ಸರ್ವೀಸ್ ಶೆಡ್ನಲ್ಲಿ ಕೆಲಸ ಪಡೆದುಕೊಂಡಿದ್ದ. ಈ ವೇಳೆ ಗುಜರಿ ಮಾರುವ ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದಾರೆ. ಈ ಗಲಾಟೆಯಲ್ಲಿ ನಾಗೇಶ್ ಮತ್ತು ಮಂಜುನಾಥ್ ಎಂಬುವವರನ್ನ ಕೊಲೆ ಮಾಡಿದ್ದಾನೆ.
ಕುಳ್ಳ ಎಂದು ರೇಗಿಸಿದ್ದಕ್ಕೆ ರಕ್ತಪಾತ!
ಕಳೆದ ನವೆಂಬರ್ 8ರಂದು ಬೆಂಗಳೂರು ಉತ್ತರ ತಾಲ್ಲೂಕಿನ ಸಿಂಗಹಳ್ಳಿ ಗ್ರಾಮದ SRS ಟ್ರಾವೆಲ್ಸ್ನ ಪಾರ್ಕಿಂಗ್ ಶೆಡ್ನಲ್ಲಿ ಇಬ್ಬರ ಕೊಲೆಯಾಗಿತ್ತು. ಎಸ್ಕೇಪ್ ಆಗಿದ್ದ ಆರೋಪಿಯನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ.
ಬಸ್ ಸರ್ವಿಸ್ ಶೆಡ್ನಲ್ಲಿ ಕೆಲಸ ಮಾಡುತ್ತಿದ್ದ ಸುರೇಶ್, ನಾಗೇಶ್ (55) ಮತ್ತು ಮಂಜುನಾಥ್ (50) ಎಂಬುವವರ ಮಧ್ಯೆ ಕುಡಿದ ನಶೆಯಲ್ಲಿ ಗಲಾಟೆ ಆಗಿದೆ. ನಾಗೇಶ್ ಹಾಗೂ ಮಂಜುನಾಥ್ ಆರೋಪಿ ಸುರೇಶ್ಗೆ ನೀನು ಕುಳ್ಳ, ನಿನ್ನ ಮೇಲೆ ಕೇಸ್ಗಳಿವೆ ಎಂದು ಸದಾ ಹೀಯಾಳಿಸುತ್ತದ್ದರಂತೆ. ಕುಳ್ಳ ಎಂದು ರೇಗಿಸುವುದಕ್ಕೆ ಬೇಸತ್ತ ಸುರೇಶ್ ಇಬ್ಬರಿಗೂ ರಾಡ್ನಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ