ಶಿಕ್ಷಣ ‌ಇಲಾಖೆಯಿಂದ ಮಹತ್ವದ ಆದೇಶ.. ಶಿಕ್ಷಕರು, ಪೋಷಕರು ಓದಲೇಬೇಕಾದ ಸ್ಟೋರಿ

ಶಾಲಾ ಮಕ್ಕಳ ಸುರಕ್ಷತೆಗೆ ಶಿಕ್ಷಣ ಇಲಾಖೆಯಿಂದ ಹೊಸ ಮಾರ್ಗಸೂಚಿ ಪ್ರಕಟವಾಗಿದೆ. ಧ್ವಜಾರೋಹಣದಿಂದ ಪ್ರವಾಸದವರೆಗೆ ಕಟ್ಟುನಿಟ್ಟಿನ ನಿಯಮ ಜಾರಿಗೆ ಸೂಚಿಸಿ ಹೊಸ ಆದೇಶ ಹೊರಡಿಸಿದೆ.

author-image
Ganesh Kerekuli
SCHOOL (6)
Advertisment

ಬೆಂಗಳೂರು: ಶಾಲಾ-ಕಾಲೇಜುಗಳಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳ ಸಂದರ್ಭದಲ್ಲಿ ವಿದ್ಯಾರ್ಥಿಗಳ ಸುರಕ್ಷತೆಯನ್ನು ಖಚಿತಪಡಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯು ಮಹತ್ವದ ಹೆಜ್ಜೆ ಇಟ್ಟಿದೆ. ಸರ್ಕಾರಿ ಕಾರ್ಯಕ್ರಮಗಳು, ರಾಷ್ಟ್ರೀಯ ಹಬ್ಬಗಳು ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ವೇಳೆ ಮಕ್ಕಳ ರಕ್ಷಣೆಗಾಗಿ ಹೊಸ ಸುರಕ್ಷತಾ ಮಾರ್ಗಸೂಚಿಗಳನ್ನು ಒಳಗೊಂಡ ಸುತ್ತೋಲೆಯನ್ನು ಹೊರಡಿಸಲಾಗಿದೆ.

ಇತ್ತೀಚಿನ ದಿನಗಳಲ್ಲಿ ಶಾಲಾ ಆವರಣಗಳಲ್ಲಿ ಸಂಭವಿಸುತ್ತಿರುವ ಸಣ್ಣಪುಟ್ಟ ಅವಘಡಗಳನ್ನು ಗಂಭೀರವಾಗಿ ಪರಿಗಣಿಸಿರುವ ಇಲಾಖೆ, ಎಲ್ಲಾ ಶಾಲಾ-ಕಾಲೇಜುಗಳು ಈ ಕೆಳಗಿನ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಆದೇಶಿಸಿದೆ.

ಮಾರ್ಗಸೂಚಿಯ ಪ್ರಮುಖ ಅಂಶಗಳು ಇಲ್ಲಿವೆ

ಧ್ವಜಾರೋಹಣದ ವೇಳೆ ಎಚ್ಚರಿಕೆ:

  • ಧ್ವಜಾರೋಹಣ ಮಾಡುವ ಕಂಬದ ಹತ್ತಿರ ಯಾವುದೇ ವಿದ್ಯುತ್ ತಂತಿಗಳು ಹಾದುಹೋಗದಂತೆ ನೋಡಿಕೊಳ್ಳಬೇಕು.
  • ಧ್ವಜವನ್ನು ಏರಿಸಲು ಅಥವಾ ಇಳಿಸಲು ಮಕ್ಕಳನ್ನು ಬಳಸಿಕೊಳ್ಳುವಂತಿಲ್ಲ
  • ಒಂದು ವೇಳೆ ಧ್ವಜವು ಕಂಬದಲ್ಲಿ ಸಿಕ್ಕಿಹಾಕಿಕೊಂಡರೆ, ಅದನ್ನು ಸರಿಪಡಿಸಲು ಮಕ್ಕಳನ್ನು ಕಂಬ ಹತ್ತಿಸುವುದು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ವಿದ್ಯುತ್ ಮತ್ತು ಬೆಂಕಿ ಅವಘಡ ತಡೆ

  • ಕಾರ್ಯಕ್ರಮ ನಡೆಯುವ ಸ್ಥಳಗಳಲ್ಲಿ ವಿದ್ಯುತ್ ಸೋರಿಕೆಯಾಗದಂತೆ ತಂತ್ರಜ್ಞರ ಮೂಲಕ ತಪಾಸಣೆ ನಡೆಸಬೇಕು.
  • ವಿದ್ಯುತ್ ತಂತಿಗಳಿರುವಲ್ಲಿ ಮಳೆ ನೀರು ಸೋರದಂತೆ ಜಾಗ್ರತೆ ವಹಿಸಬೇಕು.
  • ಗ್ಯಾಸ್ ಹಾಗೂ ಒಲೆಗಳು ಸುಸ್ಥಿತಿಯಲ್ಲಿರುವುದನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ಅಡುಗೆ ತಯಾರಿಸುವ ಸ್ಥಳಕ್ಕೆ ಮಕ್ಕಳ ಪ್ರವೇಶ ನಿರ್ಬಂಧಿಸಬೇಕು.

ವಾಹನ ಮತ್ತು ಪ್ರಯಾಣದ ಸುರಕ್ಷತೆ

  • ಮಕ್ಕಳನ್ನು ಕಾರ್ಯಕ್ರಮಗಳಿಗೆ ಕರೆದೊಯ್ಯುವ ವಾಹನಗಳ ಚಾಲಕರು ಮದ್ಯಪಾನ ಮಾಡಿರದಂತೆ ಗಮನಹರಿಸಬೇಕು.
  • ವಾಹನ ಚಾಲಕರು ನಿಗದಿತ ವೇಗಮಿತಿಯಲ್ಲೇ ಚಲಿಸಬೇಕು ಮತ್ತು ವಾಹನದ ಸಾಮರ್ಥ್ಯಕ್ಕಿಂತ ಹೆಚ್ಚು ಮಕ್ಕಳನ್ನು ತುಂಬಬಾರದು.
  • ಕಾರ್ಯಕ್ರಮ ನಡೆಯುವ ಸ್ಥಳದಿಂದ ಕನಿಷ್ಠ 100 ಮೀಟರ್ ದೂರದಲ್ಲಿ ವಾಹನ ನಿಲುಗಡೆಗೆ (ಪಾರ್ಕಿಂಗ್) ವ್ಯವಸ್ಥೆ ಮಾಡಬೇಕು.

ಆಹಾರ ಮತ್ತು ಶುಚಿತ್ವ

  • ಮಕ್ಕಳಿಗೆ ನೀಡುವ ನೀರು, ಪಾನೀಯ ಮತ್ತು ಆಹಾರವು ಅತ್ಯಂತ ಶುಚಿಯಾಗಿರುವಂತೆ ನೋಡಿಕೊಳ್ಳುವುದು ಕಡ್ಡಾಯ.
  • ತುರ್ತು ಸಿದ್ಧತೆ ಮತ್ತು ತರಬೇತಿ:
  • ಅನಿರೀಕ್ಷಿತ ಅವಘಡಗಳನ್ನು ಎದುರಿಸುವ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಬೇಕು.
  • ಹಿರಿಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ತುರ್ತು ಪರಿಸ್ಥಿತಿ ನಿಭಾಯಿಸುವ ಕುರಿತು ತರಬೇತಿ ನೀಡಬೇಕು.
  • ಯಾವುದೇ ಕಾರ್ಯಕ್ರಮ ಆಯೋಜಿಸುವ ಮುನ್ನ ಸ್ಥಳೀಯ ಪೊಲೀಸ್ ಠಾಣೆ, ಅಗ್ನಿಶಾಮಕ ದಳ ಮತ್ತು ವೈದ್ಯಕೀಯ ತಂಡಕ್ಕೆ ಕಡ್ಡಾಯವಾಗಿ ಮಾಹಿತಿ ನೀಡಬೇಕು.

ಸ್ಥಳದ ಪರಿಶೀಲನೆ

ಕವಾಯತು, ಪಥಸಂಚಲನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವ ವೇದಿಕೆ ಹಾಗೂ ಮಕ್ಕಳು ಕುಳಿತುಕೊಳ್ಳುವ ಸ್ಥಳಗಳು ಸುರಕ್ಷಿತವಾಗಿರುವ ಬಗ್ಗೆ ಆಗಿಂದಾಗ್ಗೆ ಪರಿಶೀಲನೆ ನಡೆಸಬೇಕು.

ಸ್ಥಳೀಯ ಆಡಳಿತಗಳು ಮತ್ತು ಶಾಲಾ ಮಂಡಳಿಗಳು ಈ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರುವಂತೆ ಶಿಕ್ಷಣ ಇಲಾಖೆ ಸೂಚಿಸಿದೆ. ವಿದ್ಯಾರ್ಥಿಗಳ ಸುರಕ್ಷತೆಯಲ್ಲಿ ಯಾವುದೇ ಲೋಪ ಕಂಡುಬಂದಲ್ಲಿ ಸಂಬಂಧಪಟ್ಟವರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಇಲಾಖೆ ಎಚ್ಚರಿಸಿದೆ.

ಇದನ್ನೂ ಓದಿ:ಜೆಡಿಎಸ್​​ ಬೆಳ್ಳಿ ಹಬ್ಬ! ಹಾಸನದಲ್ಲಿ ಇವತ್ತು ಬೃಹತ್​ ಸಮಾವೇಶ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

School safety government guidelines
Advertisment