/newsfirstlive-kannada/media/media_files/2026/03/06/siddaramiah-budget-2026-2026-03-06-13-42-29.jpg)
ಬೆಂಗಳೂರು: ರಾಜ್ಯ ಸರ್ಕಾರದ 2026-27ನೇ ಸಾಲಿನ ಆಯವ್ಯಯದಲ್ಲಿ ‘ಹಿಂದುಳಿದ ವರ್ಗಗಳ ಕಲ್ಯಾಣ’ಕ್ಕೆ ವಿಶೇಷ ಒತ್ತು ನೀಡಲಾಗಿದ್ದು, ಶೈಕ್ಷಣಿಕ ಅಭಿವೃದ್ಧಿ, ವೃತ್ತಿ ಕೌಶಲ್ಯ ಹಾಗೂ ಆರ್ಥಿಕ ಸಬಲೀಕರಣದತ್ತ ಹಲವು ಮಹತ್ವದ ಯೋಜನೆಗಳನ್ನು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ವಿಶೇಷವಾಗಿ ಸಾಂಪ್ರದಾಯಿಕ ವೃತ್ತಿಗಳನ್ನು ನಂಬಿರುವ ಮಡಿವಾಳ ಹಾಗೂ ಸವಿತಾ ಸಮಾಜದ ಏಳಿಗೆಗೆ ವಿಶೇಷ ಪ್ಯಾಕೇಜ್ ನೀಡಲಾಗಿದೆ.
ಹಿಂದುಳಿದ ವರ್ಗಗಳ ಕಲ್ಯಾಣ ಬಜೆಟ್ನ ಪ್ರಮುಖ ಹೈಲೈಟ್ಸ್
1. ವಿದ್ಯಾರ್ಥಿನಿಲಯಗಳ ನಿರ್ಮಾಣ ಮತ್ತು ಅಭಿವೃದ್ಧಿ
50 ಹೊಸ ಹಾಸ್ಟೆಲ್ಗಳು: ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಶೈಕ್ಷಣಿಕ ಅನುಕೂಲಕ್ಕಾಗಿ ಬೇಡಿಕೆ ಇರುವ ಬೆಂಗಳೂರು, ಮೈಸೂರು, ಮಂಗಳೂರು, ಧಾರವಾಡ, ಬೆಳಗಾವಿ, ಕಲಬುರಗಿ, ದಾವಣಗೆರೆ, ಶಿವಮೊಗ್ಗ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ 150 ಸಂಖ್ಯಾಬಲದ 50 ಹೊಸ 'ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯ'ಗಳನ್ನು ಪ್ರಾರಂಭಿಸಲಾಗುವುದು.
ಸ್ವಂತ ಕಟ್ಟಡಗಳ ನಿರ್ಮಾಣ: ಬಾಡಿಗೆ ಕಟ್ಟಡದಲ್ಲಿರುವ ಹಾಸ್ಟೆಲ್ಗಳಿಗೆ ತಲಾ 5 ಕೋಟಿ ರೂ. ವೆಚ್ಚದಲ್ಲಿ 50 ಸ್ವಂತ ಕಟ್ಟಡಗಳ ನಿರ್ಮಾಣ.
ದುರಸ್ತಿ ಹಾಗೂ ಮೂಲಸೌಕರ್ಯ: ಹಾಸ್ಟೆಲ್ಗಳ ಮೂಲಸೌಕರ್ಯಕ್ಕೆ 30 ಕೋಟಿ ರೂ. ಹಾಗೂ ಸ್ವಂತ ಕಟ್ಟಡಗಳ ದುರಸ್ತಿಗೆ 50 ಕೋಟಿ ರೂ. ಅನುದಾನ ಮೀಸಲು.
2. ಮಡಿವಾಳ ಮತ್ತು ಸವಿತಾ ಸಮಾಜಕ್ಕೆ ವೃತ್ತಿಪರ ನೆರವು
ಆಧುನಿಕ ಲಾಂಡ್ರಿ: ಬೆಂಗಳೂರು ಮತ್ತು ಮೈಸೂರು ನಗರದ ಧೋಬಿಘಾಟ್ಗಳಲ್ಲಿ ಮಡಿವಾಳ ಸಮಾಜದವರಿಗೆ ವಾಷಿಂಗ್ ಮೆಷಿನ್, ಡ್ರೈಯರ್, ಐರನಿಂಗ್ ಮೆಷಿನ್ ಒಳಗೊಂಡಂತೆ ತಲಾ 75 ಲಕ್ಷ ರೂ. ವೆಚ್ಚದಲ್ಲಿ ‘ಆಧುನಿಕ ಲಾಂಡ್ರಿ’ ಸ್ಥಾಪನೆ.
ಸ್ವಯಂ ಉದ್ಯೋಗಕ್ಕೆ ಸಾಲ: ನಿರುದ್ಯೋಗಿ ಯುವಕ/ಯುವತಿಯರು ಲಾಂಡ್ರಿ ತೆರೆಯಲು ಕೇವಲ ಶೇ.4ರ ಬಡ್ಡಿದರದಲ್ಲಿ 5 ಲಕ್ಷ ರೂ.ವರೆಗೆ ಸಾಲ ಸೌಲಭ್ಯ.
ಸಲೂನ್ಗಳಿಗೆ ನೆರವು: ಸವಿತಾ ಸಮಾಜದವರು ಹೊಸದಾಗಿ ಸಲೂನ್ಗಳನ್ನು ತೆರೆಯಲು ಶೇ.4ರ ಬಡ್ಡಿದರದಲ್ಲಿ 10 ಲಕ್ಷ ರೂ.ಗಳವರೆಗೆ ಸಾಲ ಮತ್ತು ಸಹಾಯಧನ ಮಂಜೂರು.
3. ಸಾಲದ ಬಡ್ಡಿ ಮನ್ನಾ! (One Time Settlement):
ಸಮಾಜ ಕಲ್ಯಾಣ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ನಿಗಮಗಳಿಂದ ಮಾರ್ಚ್ 31, 2021ರವರೆಗೆ ಪಡೆದ ಸಾಲಕ್ಕೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಈ ಸಾಲದ ಅಸಲನ್ನು ಪಾವತಿಸುವವರಿಗೆ 'ಸಾಲದ ಮೇಲಿನ ಬಡ್ಡಿ ಮನ್ನಾ' ಮಾಡುವ ಒಂದಾವರ್ತಿ ತೀರುವಳಿ ಯೋಜನೆಯನ್ನು (OTS - One Time Settlement) ಜಾರಿಗೆ ತರಲಾಗುವುದು.
ಇದನ್ನೂ ಓದಿ: ಗ್ರಾಮ ಪಂಚಾಯಿತಿಗಳು ʻಮಹಾತ್ಮಾ ಗಾಂಧಿ ಗ್ರಾಮ ಪಂಚಾಯಿತಿʼ ಆಗಿ ನಾಮಕರಣ : ವಿಬಿ ರಾಮ್ಜಿ ಯೋಜನೆಗೆ ಟೀಕೆೆ
4. ಪ್ರತ್ಯೇಕ ನಿಗಮಗಳ ಸ್ಥಾಪನೆ
ಕುಂಬಾರ, ತಿಗಳ, ಗಾಣಿಗ, ಕೊಡವ, ಉಪ್ಪಾರ, ಈಡಿಗ ಮತ್ತು ಕಾಡುಗೊಲ್ಲ ಸಮುದಾಯದ ಜನರ ಆರ್ಥಿಕ ಏಳಿಗೆಗಾಗಿ ಪ್ರತ್ಯೇಕ ನಿಗಮಗಳನ್ನು ಸ್ಥಾಪಿಸಲಾಗಿದೆ. ಇವುಗಳ ಮೂಲಕ ಹೊಸ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲಾಗುವುದು.
5. ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ AI ತರಬೇತಿ
ಹಿಂದುಳಿದ ವರ್ಗಗಳ 250 ಇಂಜಿನಿಯರಿಂಗ್ ಪದವೀಧರರಿಗೆ ತಾಂತ್ರಿಕ ಕೌಶಲ್ಯ ಹೆಚ್ಚಿಸಲು, ಡಿ. ದೇವರಾಜ ಅರಸು ಅಭಿವೃದ್ಧಿ ನಿಗಮದಿಂದ ದೇಶದ ಪ್ರತಿಷ್ಠಿತ NIT, IIT, IIM ಗಳಲ್ಲಿ 'ಕೃತಕ ಬುದ್ಧಿಮತ್ತೆ' (Artificial Intelligence) ತರಬೇತಿ ಪಡೆಯಲು ತಲಾ 2 ಲಕ್ಷ ರೂ. ಸಾಲ ನೀಡಲಾಗುವುದು.
6. ಅಲೆಮಾರಿ ವಿದ್ಯಾರ್ಥಿಗಳಿಗೆ ಪಿಜಿ ಸೌಲಭ್ಯ
ಹಿಂದುಳಿದ ವರ್ಗಗಳ ಪ್ರವರ್ಗ-1ರಡಿ ಬರುವ 46 ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗಗಳ ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ (PG) ಓದಲು ಉತ್ತೇಜಿಸಲು, ಎಸ್ಸಿ/ಎಸ್ಟಿ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಸೌಲಭ್ಯಗಳನ್ನೇ ಇವರಿಗೂ ವಿಸ್ತರಿಸಲಾಗುವುದು.
7. ಸಿಎಂ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ
ಹಿಂದುಳಿದ ವರ್ಗಗಳ ಯೋಜನೆಗಳ ಅನುಷ್ಠಾನ, ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಪಾಲನೆ, ಬ್ಯಾಕ್ಲಾಗ್ ಹುದ್ದೆಗಳ ಭರ್ತಿ ಹಾಗೂ ಸಮಗ್ರ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಖುದ್ದು ‘ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲೇ ಉನ್ನತ ಮಟ್ಟದ ಸಮಿತಿ’ಯನ್ನು ರಚಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us