/newsfirstlive-kannada/media/media_files/2025/08/11/kn-rajanna4-2025-08-11-15-08-16.jpg)
ಸಹಕಾರ ಸಚಿವ ಕೆ.ಎನ್.ರಾಜಣ್ಣ ರಾಜೀನಾಮೆಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ರಾಜಣ್ಣ ಅವರು ರಾಜೀನಾಮೆ ನೀಡಿದ್ದಲ್ಲ, ಬದಲಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಅವರೇ ಸಂಪುಟದಿಂದ ವಜಾ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ರಾಜಣ್ಣ ಅವರು ಹೈಕಮಾಂಡ್ ಸೂಚನೆ ಮೇರೆಗೆ ಸಿಎಂ ಸಿದ್ದರಾಮಯ್ಯಗೆ ರಾಜೀನಾಮೆ ಪತ್ರ ನೀಡಿ, ಗೌರವಯುತವಾಗಿ ಸಂಪುಟದಿಂದ ಹೊರ ಹೋಗಿದ್ದಾರೆ ಎಂದು ಹೇಳಲಾಗಿತ್ತು. ಇದೀಗ ಸಿಕ್ಕಿರುವ ಮಾಹಿತಿ ಪ್ರಕಾರ, ಮುಖ್ಯಮಂತ್ರಿಗಳೇ ರಾಜಣ್ಣ ಅವರನ್ನು ವಜಾ ಮಾಡಿದ್ದಾರೆ. ರಾಜಣ್ಣ ವಜಾ ಆಗಿರೋದು, ಭಾರೀ ದೊಡ್ಡ ಅಪಮಾನ ಆದಂತೆ ಆಗಿದೆ. ಇತ್ತೀಚೆಗಿನ ವರ್ಷಗಳಲ್ಲಿ ರಾಜೀನಾಮೆ ಪ್ರಸಂಗಗಳು ನಡೆದಿದ್ದವು. ಆದರೆ ಮಂತ್ರಿ ಸ್ಥಾನದಿಂದ ವಾಜಾ ಮಾಡಿದ ಘಟನೆಗಳು ನಡೆದಿರಲಿಲ್ಲ.
ಸಿಎಂ ಸಿದ್ದರಾಮಯ್ಯ ಅವರು ರಾಜಣ್ಣ ಅವರು ಸಂಪುಟದಿಂದ ವಜಾ ಮಾಡುವಂತೆ ಕೋರಿ ರಾಜ್ಯಪಾಲರಿಗೆ ಶಿಫಾರಸು ಮಾಡಿದ್ದರು. ಇದೀಗ ರಾಜ್ಯಪಾಲರು ವಜಾ ಮಾಡಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್.ಪ್ರಭುಶಂಕರ್ ಅವರಿಂದ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ರವಾನಿಸಿದ್ದಾರೆ. ಅದರಲ್ಲಿ ಕೆಎನ್ ರಾಜಣ್ಣ ಅವರನ್ನು ಈ ಕ್ಷಣದಿಂದಲೇ ಸಚಿವ ಸ್ಥಾನದಿಂದ ವಜಾ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾದ KN ರಾಜಣ್ಣ ಹೇಳಿಕೆ ಏನು..? Video
ರಾಜಣ್ಣ ರಾಜೀನಾಮೆಗೆ ಕಾರಣ ಏನು..?
ಆಗಸ್ಟ್ 7 ರಂದು ಎಐಸಿಸಿ ನಾಯಕ ರಾಹುಲ್ ಗಾಂಧಿ (Rahul Gandhi) ಅವರು, ಬಿಜೆಪಿ ವಿರುದ್ಧ ಕಳೆದ ಲೋಕಸಭೆ ಚುನಾವಣಾ ಸಂದರ್ಭದಲ್ಲಿ ಮತಗಳ್ಳತನ ಮಾಡಿದೆ ಎಂದು ಆರೋಪಿಸಿದ್ದರು. ಅದರಲ್ಲೂ ವಿಶೇಷವಾಗಿ ಕರ್ನಾಟಕ ಮಹದೇವಪುರ ವಿಧಾನಸಭಾ ಕ್ಷೇತ್ರದ ಬಗ್ಗೆ ರಾಹುಲ್ ಗಾಂಧಿ ಹೇಳಿದ್ದರು. ಇದೇ ವಿಚಾರವನ್ನು ಇಟ್ಟುಕೊಂಡು ಕಾಂಗ್ರೆಸ್, ರಾಹುಲ್ ಗಾಂಧಿ ನೇತೃತ್ವದಲ್ಲಿ ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ಹೊರಾಟ ನಡೆಸುವ ಪ್ಲಾನ್ ಮಾಡಿತ್ತು. ಆದರೆ ರಾಹುಲ್ ಗಾಂಧಿ ಆರೋಪದ ವಿಚಾರವಾಗಿ ಮಾಧ್ಯಮಗಳು ತುಮಕೂರಲ್ಲಿ ಕೆಎನ್ ರಾಜಣ್ಣ ಅವರಿಗೆ ಪ್ರಶ್ನೆ ಮಾಡಿದ್ದವು. ಅದಕ್ಕೆ ರಾಜಣ್ಣ ಅವರ ಪ್ರತಿಕ್ರಿಯೆ ಹೀಗಿತ್ತು..
ಇದನ್ನೂ ಓದಿ:ಸಿಎಂ ಸಿದ್ದರಾಮಯ್ಯರಿಂದ KN ರಾಜಣ್ಣ ರಾಜೀನಾಮೆ ಅಂಗೀಕಾರ
ರಾಜಣ್ಣರ ರಾಜೀನಾಮೆಗೆ ಕಾರಣವಾದ ಹೇಳಿಕೆ..
‘ನೋಡ್ರಿ.. ಸುಮ್ನೆ ಇದೆಲ್ಲ ಮಾತನ್ನಾಡೋಕೆ ಹೋಗಬಾರದು. ಈ ವೋಟರ್ ಲಿಸ್ಟ್ಗಳನ್ನು ಯಾವ ಕಾಲದಲ್ಲಿ ಮಾಡಿರೋದು. ನಮ್ಮದೇ ಸರ್ಕಾರ ಇರುವಾಗ ಮಾಡಿರೋದು. ಆವಾಗ ಎಲ್ಲರೂ ಕಣ್ಮುಚ್ಚಿಕೊಂಡು ಕೂತಿರುತ್ತಾರಾ? ಮಾತಾಡಿದ್ರೆ ಮಾತನಾಡಬೇಕಾಗುತ್ತದೆ. ಏನು ಬೇಡ..’
‘ಆಯ್ತಲ್ವಾ ಈಗ.. ಅಕ್ರಮಗಳು ನಡೆದಿರೋದು ಸತ್ಯ. ಅದರಲ್ಲಿ ಯಾವುದೇ ಸುಳ್ಳುಗಳು ಇಲ್ಲ. ಆದರೆ ಅಕ್ರಮಗಳು ನಮ್ಮ ಕಣ್ಮುಂದೆಯೇ ನಡೆದಿಲ್ವಾ.. ನಮಗೇ ಅವಮಾನ ಆಗಬೇಕು. ಯಾಕೆಂದರೆ ನಾವು ಅದನ್ನು ನೋಡಿಕೊಳ್ಳಲಿಲ್ಲ. ಆದ್ದರಿಂದ ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಬೇಕು..’
‘ಮೊದಲು ಚುನಾವಣಾ ಆಯೋಗ ಡ್ರಾಪ್ಟ್ ಮಾಡಿ ವೋಟರ್ ಲಿಸ್ಟ್ಗಳನ್ನು ಪಬ್ಲಿಷ್ ಮಾಡುತ್ತೆ. ಅವರು ಪಬ್ಲಿಷ್ ಮಾಡಿದಾಗ ನಾವೆಲ್ಲ ಏನು ಮಾಡ್ತಿದ್ವಿ. ಅವರು ವೋಟ್ಗಳನ್ನು ಬದಲಾವಣೆ ಮಾಡಿಕೊಂಡು ಪ್ರಧಾನಮಂತ್ರಿ ಆಗಿದ್ದಾರೆ. ಅದು ನೂರಕ್ಕೆ ನೂರು ಸತ್ಯ. ಅದರಲ್ಲಿ ಎರಡನೇ ಮಾತಿಲ್ಲ. ಆದರೆ ಮೊದಲು ನಾವು ನೋಡಿಕೊಳ್ಳಬೇಕಾಗಿತ್ತು. ಈ ವಿಚಾರದಲ್ಲಿ ತಪ್ಪು ಆಗಿದೆ..’
‘ಮಹದೇವಪುರದಲ್ಲಿ ಒಬ್ಬಳೇ ಮೂರು ಕಡೆಗಳಲ್ಲಿ ವೋಟ್ ಮಾಡಿದ್ದಾಳೆ. 20, 15 ಜನ ಇರುವ ರೂಮ್ಗಳಲ್ಲಿ 60 ಜನರನ್ನ ಸೇರಿಸಿದ್ದಾರೆ. ಅವರಿಗೆ ಅಡ್ರೆಸ್ ಕೂಡ ಇಲ್ಲ. ಅವರ ತಂದೆಯ ಹೆಸರು ಕೂಡ ಇಲ್ಲ. ಈ ರೀತಿಯ ಅಕ್ರಮಗಳು ನಡೆದಿವೆ. ಆದರೆ ಚುನಾವಣಾ ಆಯೋಗ ಡ್ರಾಪ್ಟ್ ಪಬ್ಲಿಷ್ ಮಾಡಿದಾಗ ನಾವು ಎಚ್ಚೆತ್ತುಕೊಳ್ಳಬೇಕಿತ್ತು. ಈಗ ರಾಹುಲ್ ಗಾಂಧಿ ನೇತೃತ್ವದಲ್ಲಿ ನಾವು ಹೊರಾಟ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಇದರ ಬಗ್ಗೆ ಎಚ್ಚೆತ್ತುಕೊಳ್ಳಬೇಕು
ಕೆಎನ್ ರಾಜಣ್ಣ, ಕಾಂಗ್ರೆಸ್ ಹಿರಿಯ ನಾಯಕ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ