/newsfirstlive-kannada/media/media_files/2025/09/30/ramalinga_reddy_pralhad_joshi-2025-09-30-22-33-42.jpg)
ಬೆಂಗಳೂರು: ದಸರಾ ಹಿನ್ನೆಲೆಯಲ್ಲಿ ಬೆಂಗಳೂರು- ಮೈಸೂರು ಬಸ್​ ಪ್ರಯಾಣ ದರವನ್ನು ಏರಿಕೆ ಮಾಡಲಾಗಿತ್ತು. ಈ ಸಂಬಂಧ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಅವರು ಮಹಿಷಾಸುರ ಸರ್ಕಾರ ಎಂದು ವಾಗ್ದಾಳಿ ನಡೆಸಿದ್ದರು. ಸದ್ಯ ಈ ಸಂಬಂಧ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಪ್ರಹ್ಲಾದ್​ ಜೋಶಿಗೆ ಟಾಂಗ್ ಕೊಟ್ಟಿದ್ದಾರೆ.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ತಮ್ಮ ಸೋಷಿಯಲ್ ಮೀಡಿಯಾ ಮೂಲಕ ಪ್ರಹ್ಲಾದ್​ ಜೋಶಿ ವಿರುದ್ಧ ಕಿಡಿ ಕಾರಿದ್ದಾರೆ. ರಾಜ್ಯದ ಎಲ್ಲಾ ಬಿಜೆಪಿ ನಾಯಕರು ಇತ್ತೀಚಿನ ದಿನಗಳಲ್ಲಿ ಯಾವ ಮನಸ್ಥಿತಿಯಲ್ಲಿ ನಿಯಂತ್ರಣ ಕಳೆದುಕೊಂಡು ಮಾತಾಡುತ್ತಿದ್ದಾರೋ, ನಿಮಗೆ ತಿಳಿಯಬೇಕು. ಕೆಎಸ್​​ಆರ್​​ಟಿಸಿ ಯು ಪ್ರತಿವರ್ಷ ದಸರಾ ಹಾಗೂ ಇತರೆ ವಿಶೇಷ ಸಂದರ್ಭಗಳಲ್ಲಿ ಕಳೆದ 20 ವರ್ಷಗಳಿಂದ ಬಸ್​ ದರ ಏರಿಕೆ ಮಾಡುತ್ತ ಬರುತ್ತಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಡಿಗ್ರಿ ಸ್ಟೂಡೆಂಟ್ಸ್​ಗೆ ಗುಡ್ ನ್ಯೂಸ್.. ಪ್ರಥಮ ದರ್ಜೆ ಕಾಲೇಜು ಶೈಕ್ಷಣಿಕ ವೇಳಾಪಟ್ಟಿ ಪರಿಷ್ಕರಣೆ
ನೀವು ಹೇಳುತ್ತಿರುವ ಮಹಿಷಾಸುರ ಟ್ಯಾಕ್ಸ್ ಅನ್ನು ಬಿಜೆಪಿ ಅಧಿಕಾರದಲ್ಲಿ ಇದ್ದಾಗಲೇ ಜಾರಿ ಮಾಡಿದ್ದೀರಾಲ್ಲ ಅದಕ್ಕೆ ನಿಮ್ಮ ಉತ್ತರವೇನು?. ಮಾಹಿತಿ ಕೊರತೆ ಇದ್ದರೆ ಸಮರ್ಪಕವಾದ ಮಾಹಿತಿ ಪಡೆದು ಮಾತನಾಡಿ, ಕೇಂದ್ರ ಸಚಿವ ಸ್ಥಾನದಲ್ಲಿ ಇದ್ದು ಅದರ ಗೌರವವನ್ನು ಕಾಪಾಡಿ. ನೀವು ಜನಗಳ ಮೇಲೆ 2017-2025 ರವರೆಗೆ ಸತತ 8 ವರ್ಷ ಜಿಎಸ್​ಟಿ ಹೆಸರಿನಲ್ಲಿ ಟ್ಯಾಕ್ಸ್ ಹಾಕಿ ಜನರ ರಕ್ತ ಹೀರಿದ್ದೀರಿ. ಇದನ್ನು ಬ್ರಹ್ಮರಾಕ್ಷಸ ಟ್ಯಾಕ್ಸ್ ಎಂದು ಕರೆಯಬಹುದೇ ಎಂದು ಸಾರಿಗೆ ಸಚಿವರು ಪ್ರಶ್ನೆ ಮಾಡಿದ್ದಾರೆ.
ಜಿಎಸ್​​ಟಿ ಟ್ಯಾಕ್ಸ್ ಮೂಲಕ ಅಮಾಯಕ ಜನರಿಂದ ವರ್ಷಗಳ ಕಾಲ ಸುಲಿಗೆ ಮಾಡಿದ್ದು ಮರೆತು ಬಿಟ್ಟಿರಾ?. ಇದಕ್ಕಾಗಿ ಕೇಂದ್ರ ಸರ್ಕಾರ, ಬಿಜೆಪಿ ಪಕ್ಷ ಮತ್ತು ಅದರ ನಾಯಕರು ದೇಶದ ಜನರ ಕ್ಷಮೆ ಕೋರಬಾರದೇ?. ಈಗ ಜಿಎಸ್​​ಟಿ ಟ್ಯಾಕ್ಸ್ ಕಡಿಮೆ ಮಾಡಿ, ಸಂಭ್ರಮ ಆಚರಣೆ ಮಾಡುವ ಮೂಲಕ ಪ್ರಚಾರ ಪಡೆಯುವ ತಮ್ಮ ನೈತಿಕತೆಯ ಬಗ್ಗೆ ಹೇಳಲಿಕ್ಕೆ ಪದಗಳು ಸಾಲದಾಗಿದೆ. ನಿಮ್ಮ ಇಲ್ಲಸಲ್ಲದ ಮಾಹಿತಿಯನ್ನು ಅಪಪ್ರಚಾರ ಮಾಡಿ ಜನರನ್ನು ತಪ್ಪು ದಾರಿಗೆ ಎಳೆಯುವ ದುಸ್ಸಾಹಸಕ್ಕೆ ಇನ್ನಾದರೂ ಪೂರ್ಣವಿರಾಮ ಹಾಕುವಿರಾ ಎಂದು ಪ್ರಹ್ಲಾದ್​ ಜೋಶಿಗೆ ರಾಮಲಿಂಗಾರೆಡ್ಡಿ ಅವರು ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ