/newsfirstlive-kannada/media/media_files/2025/09/20/ind_oman-2025-09-20-07-08-40.jpg)
ಒಮಾನ್ ವಿರುದ್ಧ ಸೂರ್ಯಕುಮಾರ್ ನೇತೃತ್ವದ ಭಾರತ ತಂಡ ಹರಸಾಹಸ ಪಟ್ಟು ಕೊನೆಗೆ 21 ರನ್​ಗಳಿಂದ ಗೆದ್ದು ಬೀಗಿದೆ. ಕೈಜಾರುತ್ತಿದ್ದ ಪಂದ್ಯವನ್ನು ಗೆದ್ದುಕೊಳ್ಳುವಲ್ಲಿ ಟೀಮ್ ಇಂಡಿಯಾ ಯಶಸ್ವಿಯಾಗಿದೆ.
ಅಬುಧಾಬಿಯ ಶೇಖ್ ಜಾಯೆದ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಕ್ಯಾಪ್ಟನ್ ಸೂರ್ಯಕುಮಾರ್ ಅವರು ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಓಪನರ್​ ಆಗಿ ಕ್ರೀಸ್​ಗೆ ಆಗಮಿಸಿದ್ದ ಅಭಿಷೇಕ್ ಶರ್ಮಾ ಹಾಗೂ ಶುಭ್​ಮನ್​ ಗಿಲ್​ ಉತ್ತಮ ಆರಂಭ ಪಡೆಯಲಿಲ್ಲ. ಗಿಲ್​ 5 ರನ್​ಗೆ ಕ್ಲೀನ್​ ಬೋಲ್ಡ್​ ಆಗಿ ಮತ್ತೆ ಬ್ಯಾಟಿಂಗ್​ನಲ್ಲಿ ವೈಫಲ್ಯ ಅನುಭವಿಸಿದರು.
ಇದನ್ನೂ ಓದಿ: ಬೇಕೇ ಬೇಕು ಪಾನಿಪುರಿ ಬೇಕು.. 2 ಗೋಲ್ಗಪ್​​ಗಾಗಿ ರಸ್ತೆ ಮಧ್ಯೆ ಮಹಿಳೆ ಧರಣಿ; ಆಗಿದ್ದೇನು?
ಗಿಲ್​ ಬಳಿಕ ಕ್ರೀಸ್​ಗೆ ಸಂಜು ಸ್ಯಾಮ್ಸನ್​ ಆಗಮಿಸಿ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ಮಾಡಿದರು. ಇನ್ನೊಂದೆಡೆ ಅಬ್ಬರದ ಬ್ಯಾಟಿಂಗ್ ಮಾಡುತ್ತಿದ್ದ ಅಭಿಷೇಕ್ ಶರ್ಮಾ 5 ಬೌಂಡರಿ, 2 ಸಿಕ್ಸರ್​​ಗಳಿಂದ​ 38 ರನ್​ ಗಳಿಸಿ ಆಡುವಾಗ ಕ್ಯಾಚ್ ಕೊಟ್ಟರು. ಹಾರ್ದಿಕ್ ಪಾಂಡ್ಯ ಕೇವಲ 1 ರನ್​ಗೆ ರನೌಟ್​ ಆದರು. ಆಲ್​ರೌಂಡರ್ ಅಕ್ಷರ್ ಪಟೇಲ್ 26 ರನ್​ ಗಳಿಸಿದರೆ ಶಿವಂ ದುಬೆ 5 ರನ್​ಗೆ ಔಟ್ ಆದರು. ತಿಲಕ್​ ವರ್ಮಾ 2 ಸಿಕ್ಸರ್​ಗಳಿಂದ 29, ಆರ್ಷ್​ದೀಪ್ ಸಿಂಗ್ ರನೌಟ್ ಆದರು.
ಆದರೆ ಕ್ರೀಸ್​ ಕಾಯ್ದುಕೊಂಡಿದ್ದ ಸಂಜು ಸ್ಯಾಮ್ಸನ್, ಒಮಾನ್ ವಿರುದ್ಧ ಭರ್ಜರಿ ಬ್ಯಾಟಿಂಗ್ ಮಾಡಿ ತಂಡದ ಮಾನ ಕಾಪಾಡಿದರು. 41 ಬಾಲ್​ಗಳಲ್ಲಿ 3 ಬೌಂಡರಿ, 3 ಭರ್ಜರಿ ಸಿಕ್ಸರ್​ಗಳಿಂದ ಅರ್ಧಶತಕ ಸಿಡಿಸಿದರು. ಇದೇ ವೇಳೆ 56 ರನ್​ ಗಳಿಸಿ ಆಡುವಾಗ ಸಂಜು ಔಟ್ ಆದರು. ಹೀಗಾಗಿ ಟೀಮ್ ಇಂಡಿಯಾ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ಗೆ​ 189 ರನ್​ಗಳ ಗುರಿಯನ್ನು ಒಮಾನ್​ಗೆ ನೀಡಿತ್ತು.
ಈ ಟಾರ್ಗೆಟ್ ಬೆನ್ನು ಬಿದ್ದ ಒಮಾನ್ ಉತ್ತಮ ಪೈಪೋಟಿಯನ್ನೇ ಕೊಟ್ಟಿತು. ಒಂದು ರೀತಿಯಲ್ಲಿ ಸೂರ್ಯಕುಮಾರ್ ಪಡೆಗೆ ನೀರುಕುಡಿಸುವ ಮಟ್ಟಕ್ಕೆ ಕೊನೆವರೆಗೆ ಪಂದ್ಯ ತಂದು ಸೋಲುಂಡಿತು. ಭರ್ಜರಿ ಬ್ಯಾಟಿಂಗ್ ಮಾಡಿದ ಒಮಾನ್ ಪರ ಓಪನರ್ಸ್​ ನಾಯಕ ಜತೀಂದರ್ ಸಿಂಗ್ 32 ಬಾರಿಸಿ ಔಟ್ ಆದರು. ಆದರೆ ಇನ್ನೊಬ್ಬ ಆರಂಭಿಕ ಬ್ಯಾಟ್ಸ್​ಮನ್​ ಅಮೀರ್ ಕಲೀಮ್​ 2 ಸಿಕ್ಸ್​, 7 ಅಮೋಘವಾದ ಬೌಂಡರಿಗಳಿಂದ 64 ರನ್​ ಚಚ್ಚಿದರು.
ಇನ್ನು 3ನೇ ಬ್ಯಾಟರ್​ ಆಗಿ ಕ್ರೀಸ್​ಗೆ ಬಂದಿದ್ದ ಹಮ್ಮದ್ ಮಿರ್ಜಾ ಕೇವಲ 33 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸ್​ಗಳಿಂದ ಅರ್ಧಶತಕ ಸಿಡಿಸಿದರು. ವಿನಾಯಕ ಶುಕ್ಲಾ 1 ರನ್​, ಜಿಕ್ರಿಯಾ ಇಸ್ಲಾಂ ಹಾಗೂ ಜಿತೇನ್ ರಾಮನಂದಿ ಕ್ರೀಸ್​​ನಲ್ಲಿರುವಾಗ ಓವರ್​ ಮುಗಿದಿದ್ದರಿಂದ ಒಮಾನ್ ಗುರಿ ತಲುಪಲು ಆಗಲಿಲ್ಲ. ಹೀಗಾಗಿ ಟೀಮ್ ಇಂಡಿಯಾ 21 ರನ್​ಗಳಿಂದ ಪಂದ್ಯವನ್ನು ವಶಪಡಿಸಿಕೊಂಡಿತು. ಕೊನೆಗೆ ಮಾತನಾಡುವಾಗ ಕ್ಯಾಪ್ಟನ್​ ಸೂರ್ಯಕುಮಾರ್ ಅವರು ಒಮಾನ್​ ತಂಡದ ಬ್ಯಾಟಿಂಗ್​ಗೆ ಶ್ಲಾಘನೆ ವ್ಯಕ್ತಪಡಿಸಿದರು.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ