/newsfirstlive-kannada/media/media_files/2025/08/17/kl_rahul_kohli-1-2025-08-17-15-54-37.jpg)
ಏಷ್ಯಾಕಪ್ ಆರಂಭಕ್ಕೆ ಕೌಂಟ್ಡೌನ್ ಶುರುವಾಗಿದೆ. ಇನ್ನಷ್ಟೇ ಟೀಮ್ ಇಂಡಿಯಾವನ್ನು ಪ್ರಕಟಿಸಬೇಕಿದೆ. ಹಾಲಿ ಚಾಂಪಿಯನ್ಸ್ ಆಗಿ ಕಣಕ್ಕಿಳಿಯುತ್ತಿರುವ ಟೀಮ್ ಇಂಡಿಯಾ ಮುಂದೆ ಬೆಟ್ಟದಷ್ಟು ನಿರೀಕ್ಷೆ ಇದೆ. ಆದ್ರೆ, ಈ ಕನಸು ನನಸಾಗಿಸಿಕೊಳ್ಳಲು ಹೆಡ್ ಕೋಚ್ ಗಂಭೀರ್ ಈಗ, ಮಹಾಕಾಳೇಶ್ವರನ ಮೊರೆ ಹೋಗಿದ್ದಾರೆ.
ಉಜ್ಜಯಿನಿಯ ಶ್ರೀ ಮಹಾಕಾಳೇಶ್ವರ, ದೇಶದಲ್ಲಿರೋ ಪವಿತ್ರ ಸ್ಥಳಗಳಲ್ಲಿ ಒಂದು. ಶಿವನಿಗೆ ಸಮರ್ಪಿತವಾದ ಪುಣ್ಯ ಕ್ಷೇತ್ರ, 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವ ಈ ಪವಿತ್ರ ಸ್ಥಳ ಶಿವನ ವಾಸಸ್ಥಾನ. ಜ್ಯೋತಿರ್ಲಿಂಗದಲ್ಲಿ ಒಂದಾದ ಶ್ರೀ ಮಹಾಕಾಳೇಶ್ವರ ದರ್ಶನದಿಂದ ಅಕಾಲ ಮೃತ್ಯು, ಕಷ್ಟ ಕಾರ್ಪಣ್ಯ, ಇಷ್ಟಾರ್ಥ ಸಿದ್ಧಿಯಾಗುತ್ತೆ ಅನ್ನೋದು ಭಕ್ತರ ನಂಬುಗೆ. ಟೀಮ್ ಇಂಡಿಯಾ ಕ್ರಿಕೆಟರ್ಗಳೂ ಅಷ್ಟೇ. ಕಷ್ಟ ಅಂದ್ರೆ, ಮೊದಲು ಮೊರೆ ಹೋಗುವುದೇ ಮಹಾಕಾಳೇಶ್ವರನ ಸನ್ನಿಧಿಗೆ.
ವಿರುಷ್ಕಾ ದಂಪತಿಯಿಂದ ಮಹಾಕಾಳೇಶ್ವನ ಆರಾಧನೆ..!
ಸಂಕಟ ಅಂದ್ರೆ ಸಾಕು. ಟೀಮ್ ಇಂಡಿಯಾ ಕ್ರಿಕೆಟರ್ಗಳು ಮೊದಲು ಹೋಗುವುದೇ ಮಹಾಕಾಳೇಶ್ವರನ ದರ್ಶನಕ್ಕೆ..! ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್, ಸೂರ್ಯಕುಮಾರ್ ಯಾದವ್ ಸೇರಿದಂತೆ ಹಲವು ಆಟಗಾರರು ಕಷ್ಟ ಎದುರಾದಾಗಲೆಲ್ಲಾ ಭೇಟಿ ನೀಡುವುದು ಉಜ್ಜಯಿನಿಯ ಈಪುಣ್ಯಕ್ಷೇತ್ರಕ್ಕೆ.. ಇದೀಗ ಹೆಡ್ ಕೋಚ್ ಗೌತಮ್ ಗಂಭೀರ್ ಸಹ ಮಹಾಕಾಳನ ಮೊರೆ ಹೋಗಿದ್ದಾರೆ.
ಏಷ್ಯಾಕಪ್ಗೂ ಮುನ್ನ ಗಂಭೀರ್ ಮಹಾಕಾಳೇಶ್ವರನ ದರ್ಶನ..!
ಇಷ್ಟು ದಿನ ಸಾಲು ಸಾಲು ಟೀಮ್ ಇಂಡಿಯಾ ಕ್ರಿಕೆಟಿಗರು, ಉಜ್ಜಯಿನಿಯ ಶ್ರೀ ಮಹಾಕಾಳೇಶ್ವರ ದರ್ಶನ ಮಾಡಿದ್ದಾರೆ. ಇಷ್ಟಾರ್ಥ ಸಿದ್ಧಿಗಾಗಿ ನಮಿಸಿದ್ದಾರೆ. ಇಷ್ಟಾರ್ಥಗಳ ಸಿದ್ದಿಯೂ ಆಗಿದೆ. ಇದೀಗ ಇದೇ ಹಾದಿಯಲ್ಲಿ ಟೀಮ್ ಇಂಡಿಯಾದ ಹೆಡ್ ಕೋಚ್ ಗೌತಮ್ ಗಂಭೀರ್ ಸಾಗಿದ್ದಾರೆ.
ಏಷ್ಯಾಕಪ್ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್, ಮಹಾಕಾಳೇಶ್ವರನ ದರ್ಶನ ಪಡೆದಿದ್ದಾರೆ. ಟೀಮ್ ಇಂಡಿಯಾ ಪ್ರಕಟಕ್ಕೂ ಮುನ್ನ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಭಸ್ಮಾರತಿಯಲ್ಲಿ ಭಾಗಿಯಾಗಿ ಶಿವನ ಆಶೀರ್ವಾದ ಪಡೆದಿದ್ದಾರೆ.
ನಂದಿ ಮುಂದೆ ಕೂತು ಭಜನೆ ಮಾಡಿದ ಗೌತಮ್ ಗಂಭೀರ್.!
ಮಹಾಕಾಳನ ಭಸ್ಮಾರತಿಯಲ್ಲಿ ಗೌತಮ್ ಗಂಭೀರ್ ಮಾತ್ರವಲ್ಲ. ಗಂಭೀರ್ ಪತ್ನಿ ನತಾಶ್ ಜೈನ್, ಇಬ್ಬರು ಮಕ್ಕಳು ಸಹ ಭಾಗಿಯಾಗಿದ್ದರು. ನಂದಿಯ ಬಳಿ ಧ್ಯಾನದಲ್ಲಿ ಮಗ್ನರಾಗಿದ್ದರು. ಅಷ್ಟೇ ಅಲ್ಲ, ಪೂಜೆಯ ವೇಳೆ ಭಜನೆ ಮಾಡುತ್ತಾ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದ್ರು. ಅಷ್ಟೇ ಅಲ್ಲ.! ಕುಟುಂಬ, ದೇಶವಾಸಿಗಳ ಸಂತೋಷಕ್ಕಾಗಿ ನಮಿಸಿದ್ದಾರೆ.
ಟೀಮ್ ಇಂಡಿಯಾ ಕ್ರಿಕೆಟರ್ಸ್ಗೆ ಇದೆ ಮಹಾಕಾಳನ ಅಭಯ..!
ಮಹಾಕಾಳೇಶ್ವರನ ನಮಿಸಿದ್ರೆ, ಇಷ್ಟಾರ್ಥ ನೆರವೇರುತ್ತೆ ಅನ್ನೋದು ನಂಬಿಕೆ. ಆ ನಂಬಿಕೆ ಈಗಾಗಲೇ ಹಲವ ಬಾರಿ ಇಂಡಿಯನ್ ಕ್ರಿಕೆಟರ್ಸ್ ವಿಚಾರದಲ್ಲಿ ನಿಜವಾಗಿದೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ವಿರಾಟ್ ಕೊಹ್ಲಿ & ಕೆ.ಎಲ್.ರಾಹುಲ್ ಅನ್ನೋದ್ರಲ್ಲಿ ಡೌಟೇ ಇಲ್ಲ. ಯಾಕಂದ್ರೆ, ಬ್ಯಾಡ್ ಫಾರ್ಮ್ಗೆ ಸಿಲುಕಿದ್ದ ಕೊಹ್ಲಿ, ಕಮ್ಬ್ಯಾಕ್ ಮಾಡಿದ್ದು ಇದೇ ಮಹಾಕಾಳನ ದರ್ಶನ ಪಡೆದ್ಮೇಲೆನೇ.
ಮದುವೆ ಬಳಿಕ ಕುಸಿತ ಕಂಡಿದ್ದ ಕೆ.ಎಲ್.ರಾಹುಲ್, ಕ್ರಿಕೆಟ್ ಭವಿಷ್ಯ ಅಂತತ್ರಕ್ಕೆ ಸಿಲುಕಿತ್ತು. ಈ ವೇಳೆ ಶಿವನ ದರ್ಶನ ಪಡೆದ ಕೆ.ಎಲ್.ರಾಹುಲ್, ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ನಲ್ಲಿ ಸ್ಥಾನವೂ ಖಾಯಂ ಆಯ್ತು. ಇದೇ ಕಾರಣಕ್ಕೆ ಕ್ರಿಕೆಟರ್ಸ್ ಹೆಚ್ಚು ಮಹಾಕಾಳೇಶ್ವರ ಮೊರೆ ಹೋಗುವುದು.
ಇದನ್ನೂ ಓದಿ:MS ಧೋನಿ ಕ್ಯಾಪ್ಟನ್ಸಿಯಿಂದ ನಮ್ಮ ಕರಿಯರ್ ಅಂತ್ಯ.. ದಿಗ್ಗಜ ಆಟಗಾರರಿಂದ ಸ್ಫೋಟಕ ಹೇಳಿಕೆ..!
ದೇವರ ಆರಾಧಕ ಹೆಡ್ ಕೋಚ್ ಗೌತಮ್ ಗಂಭೀರ್..!
ಹೆಡ್ ಕೋಚ್ ಗಂಭೀರ್ ಅಪ್ಪಟ ದೈವ ಭಕ್ತ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ 2024ರ ಐಪಿಎಲ್.. ಈ ಐಪಿಎಲ್ ಆರಂಭಕ್ಕೂ ಮುನ್ನ ಅಸ್ಸಾಂನ ಗುವಾಹಟಿಯಲ್ಲಿರೋ ಕಾಮಾಕ್ಯ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥಿಸಿದ್ರು. ಸೀಸನ್ನ ಅಂತ್ಯದಲ್ಲಿ ಕೆಕೆಆರ್ ಚಾಂಪಿಯನ್ ಆಗಿ ಹೊರ ಹೊಮ್ಮಿತು.
ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಮತ್ತೆ ಕಾಮಾಕ್ಯ ದೇವಿಗೆ ವಿಶೇಷ ಪೂಜೆ ಸಲ್ಲಿಸಿಯೇ ಪ್ಲೈಟ್ ಏರಿದ್ದರು. ಉತ್ತಮ ಫಲಿತಾಂಶವೂ ಸಿಕ್ಕಿತ್ತು. ಇದಿಷ್ಟೇ ಅಲ್ಲ, ಕೊಲ್ಕತ್ತಾ ಕಾಳಿಘಾಟ್ನ ಕಾಳಿ, ಮುಂಬೈನ ಸಿದ್ದಿ ವಿನಾಯಕ, ಆಂಧ್ರ ಪ್ರದೇಶದ ತಿರುಪತಿ ದೇವಸ್ಥಾನಕ್ಕೆ ಒಂದಿಲ್ಲೋಂದು ಸಮಯದಲ್ಲಿ ಭೇಟಿ ನೀಡ್ತಾನೆ ಇರ್ತಾರೆ. 3ನೇ ಬಾರಿ ಮಹಾಕಾಳೇಶ್ವನ ದರ್ಶನ ಪಡೆದಿರುವ ಗೌತಮ್ ಗಂಭೀರ್, ಏಷ್ಯಾಕಪ್ ಉಳಿಸಿಕೊಳ್ತಾರಾ ಕಾದುನೋಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ