/newsfirstlive-kannada/media/media_files/2025/08/23/lionel_messi_2-2025-08-23-09-43-36.jpg)
ತಿರುವನಂತಪುರಮ್: ವರ್ಲ್ಡ್​ ಫುಟ್​ಬಾಲ್ ಸ್ಟಾರ್ ಲಿಯೋನೆಲ್ ಮೆಸ್ಸಿ ಹಾಗೂ ಅರ್ಜೆಂಟೀನಾ ತಂಡದ ಫುಟ್​ಬಾಲ್ ಆಟಗಾರರು ಅಕ್ಟೋಬರ್​ನಲ್ಲಿ ಕೇರಳಕ್ಕೆ ಭೇಟಿ ನೀಡಲಿದ್ದಾರೆ ಎಂದು ಅರ್ಜೆಂಟೀನಾದ ಫುಟ್​ಬಾಲ್ ಅಸೋಸಿಯೇಷನ್ (ಎಎಫ್​ಎ)​ ಅಧಿಕೃತವಾಗಿ ಮಾಹಿತಿ ನೀಡಿದೆ.
ಫುಟ್​ಬಾಲ್ ಐಕಾನ್​ ಲಿಯೋನೆಲ್ ಮೆಸ್ಸಿ ಹಾಗೂ ಅರ್ಜೆಂಟೀನಾ ತಂಡದ ಫುಟ್​ಬಾಲ್ ಆಟಗಾರರು ನವೆಂಬರ್​ 10 ರಿಂದ 18ರ ವರೆಗೆ ಭಾರತದ ಪ್ರವಾಸದಲ್ಲಿ ಇರುತ್ತಾರೆ. ಈ ವೇಳೆ ಕೇರಳ ಸರ್ಕಾರ ಹಾಗೂ ರಿಪೋರ್ಟರ್ ಬ್ರಾಡ್ಕಾಸ್ಟಿಂಗ್ ಕಂಪನಿ ಪ್ರೈವೇಟ್ ಲಿಮಿಟೆಡ್ನ (Reporter Broadcasting Company Private Limited) ಸಹಭಾಗಿತ್ವದಲ್ಲಿ ಫುಟ್​ಬಾಲ್ ಪಂದ್ಯವನ್ನು ಆಯೋಜನೆ ಮಾಡಲಾಗುತ್ತದೆ. ತಿರುವನಂತಪುರದ ಗ್ರೀನ್ಫೀಲ್ಡ್ ಸ್ಟೇಡಿಯಂನಲ್ಲಿ ನಡೆಯುವ ಈ ಮಹತ್ವದ ಪಂದ್ಯದಲ್ಲಿ ಲಿಯೋನೆಲ್ ಮೆಸ್ಸಿ ಹಾಗೂ ಅರ್ಜೆಂಟೀನಾ ತಂಡದ ಫುಟ್​ಬಾಲ್ ಆಟಗಾರರು ಅಖಾಡಕ್ಕೆ ಇಳಿಯಲಿದ್ದಾರೆ. ಇದು ಭಾರತದ ಫುಫ್​ಬಾಲ್ ಅಭಿಮಾನಿಗಳಿಗೆ ಐತಿಹಾಸಿಕ ಕ್ಷಣವಾಗಿರಲಿದೆ ಎಂದು ಹೇಳಲಾಗಿದೆ.
ಎಎಫ್​ಎ ಅಧಿಕೃತವಾಗಿ ಮಾಹಿತಿ
ಲಿಯೋನೆಲ್ ಮೆಸ್ಸಿ ಅವರು ಕೇರಳಕ್ಕೆ ಭೇಟಿ ನೀಡುತ್ತಾರೋ, ಇಲ್ವೋ ಎನ್ನುವ ಅನುಮಾನವಿತ್ತು. ಇನ್ನು ಫಿಫಾ ಟ್ರೋಫಿಯಲ್ಲಿ ಅರ್ಜೆಂಟೀನಾ ಟೀಮ್ ಪಾಲ್ಗೊಳ್ಳುವುದರಿಂದ ಕೇರಳಕ್ಕೆ ಪ್ರಯಾಣಿಸುವುದಿಲ್ಲ ಎನ್ನಲಾಗಿತ್ತು. ಆದರೆ ರಿಪೋರ್ಟರ್ ಟಿವಿಯ ವ್ಯವಸ್ಥಾಪಕ ನಿರ್ದೇಶಕ, ಸಂಪಾದಕ ಆಂಟೊ ಆಗಸ್ಟೀನ್ ಅವರು ಇದನ್ನ ತಳ್ಳಿ ಹಾಕಿದ್ದರು. ಅದರಂತೆ ಇದೀಗ ಎಎಫ್​ಎ ಅಧಿಕೃತವಾಗಿ ಮಾಹಿತಿ ನೀಡಿದ್ದರಿಂದ ಲಿಯೋನೆಲ್ ಮೆಸ್ಸಿ ಹಾಗೂ ಅರ್ಜೆಂಟೀನಾ ಟೀಮ್ ಕೇರಳಕ್ಕೆ ಭೇಟಿ ನೀಡುವುದಷ್ಟೇ ಅಲ್ಲ, ಫುಟ್​ಬಾಲ್ ಪಂದ್ಯ ಕೂಡ ಆಡಲಿದೆ ಎನ್ನುವುದು ಅಭಿಮಾನಿಗಳಿಗೆ ಸಂತಸವನ್ನು ಮತ್ತಷ್ಟು ಹೆಚ್ಚು ಮಾಡಿದೆ.
2022ರಲ್ಲಿ ಕತಾರ್​ನಲ್ಲಿ ನಡೆದಂತಹ ವಿಶ್ವಕಪ್​ ಫುಟ್​ಬಾಲ್​ ಟೂರ್ನಿಯಲ್ಲಿ ಲಿಯೋನೆಲ್ ಮೆಸ್ಸಿ ಹಾಗೂ ಅವರ ಅರ್ಜೆಂಟೀನಾ ಟೀಮ್​ಗೆ ಕೇರಳಿಗರು ದೊಡ್ಡ ಮಟ್ಟದಲ್ಲಿ ಬೆಂಬಲ ವ್ಯಕ್ತಪಡಿಸಿದ್ದರು. ಅಲ್ಲದೇ ಈ ಟೂರ್ನಿಯಲ್ಲಿ ಅರ್ಜೆಂಟೀನಾ ವರ್ಲ್ಡ್​ಕಪ್​ ಗೆದ್ದು ಇತಿಹಾಸ ನಿರ್ಮಿಸಿತ್ತು. ಈ ಕಾರಣದಿಂದಲೇ ಅವರು ಭೇಟಿ ನೀಡುತ್ತಿದ್ದಾರೆ ಎನ್ನಲಾಗಿದೆ. ಆ ತಂಡ ಭೇಟಿ ನೀಡುವುದನ್ನು ಈ ಹಿಂದೆಯೇ ಕೇರಳದ ಕ್ರೀಡಾ ಸಚಿವ ವಿ ಅಬ್ದುರಹಿಮಾನ್ ಅವರು ಸ್ಪಷ್ಟ ಪಡಿಸಿದ್ದರು.
/filters:format(webp)/newsfirstlive-kannada/media/media_files/2025/08/23/reporter_tv-2025-08-23-10-43-35.jpg)
ಫುಟ್​ಬಾಲ್ ಟೀಮ್ ಅನ್ನು ಕರೆ ತರುವ ಹಿಂದಿನ ಶ್ರಮ
ವಿಶ್ವ ಫುಟ್​ಬಾಲ್ ಚಾಂಪಿಯನ್ಸ್​ಗೆ ಆತಿಥ್ಯ ವಹಿಸುವ ಬಗ್ಗೆ ಮೊದಲು ಕಳವಳ ವ್ಯಕ್ತಪಡಿಸಲಾಗಿತ್ತು. ಸೋಷಿಯಲ್​ ಮೀಡಿಯಾದಲ್ಲಿ ಈ ಬಗ್ಗೆ ಭಾರೀ ಚರ್ಚೆಗಳು ನಡೆದವು. ಸಾಕಷ್ಟು ಬೆಂಬಲ ವ್ಯಕ್ತವಾಯಿತು. ಹೀಗಾಗಿ ಕೇರಳ ಸರ್ಕಾರವೂ ಎಎಫ್ಎಗೆ ಅಧಿಕೃತವಾಗಿ ಆಹ್ವಾನ ನೀಡಿತು. ಈ ಬಗ್ಗೆ ಸರ್ಕಾರ ಕಾರ್ಪೊರೇಟ್ ಕಂಪನಿಗಳ ಜೊತೆ ಮಾತನಾಡಿತ್ತು. ಬಳಿಕ ರಿಪೋರ್ಟರ್ ಬ್ರಾಡ್ಕಾಸ್ಟಿಂಗ್ ಕಂಪನಿ ಪ್ರೈವೇಟ್ ಲಿಮಿಟೆಡ್ ಜೊತೆ 2024ರ ಡಿಸೆಂಬರ್ 20 ರಂದು ಒಪ್ಪಂದಕ್ಕೆ ಮಾಡಿಕೊಳ್ಳಲಾಯಿತು. ಈ ಎಲ್ಲ ಪರಿಶ್ರಮದಿಂದ ಲಿಯೋನೆಲ್ ಮೆಸ್ಸಿ ಹಾಗೂ ಅರ್ಜೆಂಟೀನಾ ಟೀಮ್ ಅನ್ನು ಅಧೀಕೃತವಾಗಿ ಕೇರಳಕ್ಕೆ ಕರೆತರಲಾಗುತ್ತಿದೆ ಎಂದು ಆಂಟೊ ಆಗಸ್ಟೀನ್ ಅವರು ಖುಷಿ ವ್ಯಕ್ತಪಡಿಸಿದ್ದಾರೆ.
ಅರ್ಜೆಂಟೀನಾ ತಂಡ ಸೆಪ್ಟೆಂಬರ್ 5 ರಂದು ವೆನೆಜುವೆಲಾ ಮತ್ತು ಸೆಪ್ಟೆಂಬರ್ 10 ರಂದು ಈಕ್ವೆಡಾರ್ ವಿರುದ್ಧ ಪಂದ್ಯಗಳನ್ನು ಆಡಲಿದೆ. ಈ ಪಂದ್ಯಗಳ ನಂತರ, ಮೆಸ್ಸಿ ಹಾಗೂ ಅರ್ಜೆಂಟೀನಾ ತಂಡ ನೇರವಾಗಿ ಕೇರಳಕ್ಕೆ ಪ್ರಯಾಣ ಬೆಳೆಸಲಿದೆ. 2026ರ ವರ್ಲ್ಡ್​ಕಪ್​ ದೃಷ್ಟಿಯಲ್ಲಿ ಇಟ್ಟುಕೊಂಡು ತಿರುವನಂತಪುರದ ಗ್ರೀನ್ಫೀಲ್ಡ್ ಸ್ಟೇಡಿಯಂನಲ್ಲಿ ಫುಟ್​ಬಾಲ್ ಪಂದ್ಯವನ್ನು ಆಡಲಿದ್ದಾರೆ. ಆದ್ದರಿಂದ ಈ ಪಂದ್ಯಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ ಎಂದು ಹೆಳಿದ್ದಾರೆ.
ಕೇರಳ ಸರ್ಕಾರ ಹಾಗೂ ರಿಪೋರ್ಟರ್ ಬ್ರಾಡ್ಕಾಸ್ಟಿಂಗ್ ಕಂಪನಿಯ ದೊಡ್ಡ ಪರಿಶ್ರಮದಿಂದ ಕೇರಳದ ಫುಟ್​ಬಾಲ್ ಅಭಿಮಾನಿಗಳ ಆಸೆ ಈಡೇರಲಿದೆ. ಏಕೆಂದರೆ ಕೇರಳದಲ್ಲಿ ಲಿಯೋನೆಲ್ ಮೆಸ್ಸಿ ಎಂದರೆ ಜೀವ ಕೊಡುವ ಅಭಿಮಾನಿಗಳೇ ಇದ್ದಾರೆ. ಫುಟ್​ಬಾಲ್ ಎಂದರೆ ಅವರಿಗೆ ಪಂಚಪ್ರಾಣ. ಇಂತಹ ಸಾಕಷ್ಟು ಫ್ಯಾನ್ಸ್​ಗಳ ಆಸೆ ಇನ್ನೇನು ಕೆಲವೇ ದಿನಗಳಲ್ಲಿ ಈಡೇರಲಿದೆ. ಇದಕ್ಕೆ ಮುಖ್ಯ ಕಾರಣ ಎಂದರೆ ಕೇರಳ ಸರ್ಕಾರ ಹಾಗೂ ರಿಪೋರ್ಟರ್ ಬ್ರಾಡ್ಕಾಸ್ಟಿಂಗ್ ಕಂಪನಿ ಪ್ರೈವೇಟ್ ಲಿಮಿಟೆಡ್ ಎಂದು ಹೇಳಬಹುದು.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ