/newsfirstlive-kannada/media/media_files/2025/08/22/chinnaswami_studium_new-2025-08-22-10-31-19.jpg)
ಬೆಂಗಳೂರು: ಸಿಲಿಕಾನ್ ಸಿಟಿಯ ಎಂ ಚಿನ್ನಸ್ವಾಮಿಯ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಜಯೋತ್ಸವದ ವೇಳೆ ಕಾಲ್ತುಳಿತ ಸಂಭವಿಸಿ 11 ಜನರು ಜೀವ ಕಳೆದುಕೊಂಡಿದ್ದರು. ಇದು ಆದ್ಮೇಲೆ ಇದುವರೆಗೂ ಎಂ ಚಿನ್ನಸ್ವಾಮಿಯ ಸ್ಟೇಡಿಯಂನಲ್ಲಿ ಯಾವುದೇ ಪಂದ್ಯಗಳನ್ನು ನಡೆಸಿಲ್ಲ. ಅದರಲ್ಲೂ ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿಯ ಪಂದ್ಯಗಳು ಬೇರೆಡೆಗೆ ಸ್ಥಳಾಂತರ ಆಗುತ್ತವೆ ಎನ್ನಲಾಗುತ್ತಿದೆ. ಇದರ ನಡುವೆ ಪಂದ್ಯಗಳನ್ನು ನಡೆಸಬೇಕು ಎಂದ್ರೆ ಈ ಷರತ್ತು ಅನ್ವಯ ಎನ್ನುತ್ತಿದೆ ಪೊಲೀಸ್ ಇಲಾಖೆ.
ಎಂ ಚಿನ್ನಸ್ವಾಮಿಯ ಸ್ಟೇಡಿಯಂನಲ್ಲಿ ಪಂದ್ಯಗಳನ್ನು ನಡೆಸಬೇಕು ಎಂದರೆ ಈ 17 ಷರತ್ತುಗಳನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಪಾಲಿಸಬೇಕು. ಹಾಗಾದರೆ ಮೈದಾನದಲ್ಲಿ ಅಂತರಾಷ್ಟ್ರೀಯ ಪಂದ್ಯಗಳನ್ನು ನಡೆಸಬಹುದು ಎಂದು ತಿಳಿಸಲಾಗಿದೆ. ಚಿನ್ನಸ್ವಾಮಿ ಮೈದಾನವನ್ನು ಪರಿಶೀಲನೆ ನಡೆಸಿರುವ ಇಲಾಖೆಯು ಹಲವು ಲೋಪದೋಷಗಳನ್ನು ಕಂಡುಕೊಂಡಿದೆ. ಹೀಗಾಗಿ ಷರತ್ತುಗಳ ಪಾಲನೆ ಅತಿ ಮುಖ್ಯ ಎನ್ನುತ್ತಿದೆ.
ಪೊಲೀಸ್ ಇಲಾಖೆಯು ಕೆಎಸ್ಸಿಎ ಗೆ ಪತ್ರ ಬರೆದಿದ್ದು ಮಹಿಳಾ ವಿಶ್ವಕಪ್ ಪಂದ್ಯಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಇನ್ನು 15 ದಿನಗಳಲ್ಲಿ 17 ಅಗತ್ಯತೆಗಳನ್ನು ಪೂರೈಸಲು ಸೂಚಿಸಲಾಗಿದೆ. ಚಿನ್ನಸ್ವಾಮಿ ಮೈದಾನ ನಗರದ ಹೃದಯಭಾಗದಲ್ಲಿ ಇರುವ ಕಾರಣ ಸಮಸ್ಯೆಗಳನ್ನು ಸರಿಪಡಿಸಲು ಕಷ್ಟವಾಗಬಹುದು. ಅಗ್ನಿ ಸುರಕ್ಷತಾ ನಿಯಮಗಳನ್ನು ಪಾಲಿಸದ ಕಾರಣ ಕಳೆದ ತಿಂಗಳಿನಿಂದ ಸ್ಟೇಡಿಯಂಗೆ ಕರೆಂಟ್ ಅನ್ನು ಸ್ಥಗಿತ ಮಾಡಲಾಗಿದೆ. ಈ ಎಲ್ಲದ ನಡುವೆ ಷರತ್ತುಗಳು ಏನೇನು? ಎನ್ನುವುದರ ಮಾಹಿತಿ ಇಲ್ಲಿದೆ.
ಚಿನ್ನಸ್ವಾಮಿ ಸ್ಟೇಡಿಯಂನವರು ಈ ನಿಯಮಗಳನ್ನ ಪಾಲಿಸಬೇಕು
- ಸ್ಟೇಡಿಯಂನಲ್ಲಿ ಎಂಟ್ರಿ, ಎಕ್ಸಿಟ್ ಡೋರ್ಗಳನ್ನ ದೊಡ್ಡದಾಗಿ ಮಾಡಬೇಕು
- ಕ್ರಿಕೆಟ್ ಆಟಗಾರರಿಗೆ ಪ್ರತ್ಯೇಕ ಪ್ರವೇಶ ಮತ್ತು ನಿರ್ಗಮನ ದ್ವಾರದ ವ್ಯವಸ್ಥೆ
- ಸ್ಟೇಡಿಯಂನಲ್ಲಿ ಕೆಲಸ ಮಾಡುವವರಿಗೆ ಪೊಲೀಸ್ ಪರಿಶೀಲನಾ ಪ್ರಮಾಣಪತ್ರ ಕಡ್ಡಾಯ
- ಮಹಿಳೆಯರು ಮತ್ತು ಮಕ್ಕಳಿಗೆ ಪ್ರತ್ಯೇಕ ಪ್ರವೇಶ ವ್ಯವಸ್ಥೆ ಕಲ್ಪಿಸಬೇಕು
- ಸ್ಟೇಡಿಯಂನಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು
- ವೈದ್ಯಕೀಯ ಸೌಲಭ್ಯಗಳು ಲಭ್ಯ ಇರಲೇಬೇಕು
- ಬೆಂಕಿ ಅವಘಡ ಸಂದರ್ಭದಲ್ಲಿ ತಡೆಗಟ್ಟುವಿಕೆ
- ಮೈದಾನದ ಹೊರಗೆ 2, 4 ಚಕ್ರದ ವಾಹನ ನಿಲುಗಡೆಗೆ ವ್ಯವಸ್ಥೆ
- ಪ್ರೇಕ್ಷಕರ ಮೇಲೆ ನಿಗಾ ಇಡಲು ವಿಶೇಷವಾದ ತಂತ್ರಜ್ಞಾನ ಅಳವಡಿಸಿ
- ಜನಸಂದಣಿ ತಪ್ಪಿಸಲು ಪಿಕಪ್ ಮತ್ತು ಡ್ರಾಪ್ ಪಾಯಿಂಟ್ ಇರಬೇಕು
- ತುರ್ತು ಸಂದರ್ಭದಲ್ಲಿ ಅನುಕೂಲವಾಗಲು ಸುರಕ್ಷಿತ ಸ್ಥಳ ಗುರುತಿಸಬೇಕು
- ಮೈದಾನದ ದ್ವಾರದಲ್ಲಿ ಲಗೇಜ್ ಸ್ಕ್ಯಾನ್ ಮಾಡಲು ಉನ್ನತ ಕ್ಯಾಮೆರಾಗಳ ಅಳವಡಿಕೆ
- ವೈದ್ಯಕೀಯ ಸೌಲಭ್ಯದಲ್ಲಿ ಆಂಬ್ಯುಲೆನ್ಸ್ಗೆ ಪ್ರತ್ಯೇಕ ಮಾರ್ಗ ಗುರುತಿಸಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ