/newsfirstlive-kannada/media/post_attachments/wp-content/uploads/2023/06/Electricity-Bill-1.jpg)
ಬೆಂಗಳೂರು: ರಾಜ್ಯದ ಜನತೆಗೆ ಮತ್ತೊಂದು ಬೆಲೆ ಏರಿಕೆಯ ಬಿಸಿ ತಟ್ಟುವ ಸಾಧ್ಯತೆ ದಟ್ಟವಾಗಿದೆ. ವಿದ್ಯುತ್ ಸರಬರಾಜು ಕಂಪನಿಗಳು (ESCOMs) ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದು, ನಷ್ಟವನ್ನು ಸರಿದೂಗಿಸಲು ವಿದ್ಯುತ್ ದರ ಏರಿಕೆ ಮಾಡುವಂತೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ (KERC) ಪ್ರಸ್ತಾವನೆ ಸಲ್ಲಿಸಿವೆ.
ಏನಿದು ನಷ್ಟದ ಲೆಕ್ಕಾಚಾರ?
ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳು ಆದಾಯ ಕೊರತೆಯನ್ನು ಎದುರಿಸುತ್ತಿವೆ. ಲಭ್ಯವಿರುವ ಮಾಹಿತಿಯ ಪ್ರಕಾರ, ರಾಜ್ಯದ ಎಲ್ಲಾ ಎಸ್ಕಾಂಗಳು ಸೇರಿ ಅಂದಾಜು 4,500 ಕೋಟಿ ರೂಪಾಯಿ ನಷ್ಟದಲ್ಲಿವೆ. ಇದರಲ್ಲಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಒಂದರಲ್ಲೇ 2024-25ನೇ ಸಾಲಿನಲ್ಲಿ ಬರೋಬ್ಬರಿ 2,800 ಕೋಟಿಗೂ ಹೆಚ್ಚು ನಷ್ಟ ಉಂಟಾಗಿದೆ ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಕಂಪನಿಗಳು ದರ ಏರಿಕೆಗೆ ಪಟ್ಟು ಹಿಡಿದಿವೆ.
ಸಾರ್ವಜನಿಕರ ಆಕ್ಷೇಪಣೆಗೆ ಆಹ್ವಾನ
ಬೆಸ್ಕಾಂ ಸೇರಿದಂತೆ ರಾಜ್ಯದ ವಿವಿಧ ಎಸ್ಕಾಂಗಳು 2024-25ನೇ ಸಾಲಿನ ತಮ್ಮ ಕಾರ್ಯನಿರ್ವಹಣಾ ವರದಿಯನ್ನು ಮತ್ತು ದರ ಏರಿಕೆಯ ಪ್ರಸ್ತಾವನೆಯನ್ನು ಕೆಇಆರ್ಸಿಗೆ ಸಲ್ಲಿಸಿವೆ. ವರದಿ ಸಲ್ಲಿಕೆಯ ಬೆನ್ನಲ್ಲೇ ಆಯೋಗವು ಸಾರ್ವಜನಿಕರ ಅಹವಾಲು ಮತ್ತು ಆಕ್ಷೇಪಣೆಗಳನ್ನು ಆಲಿಸಲು ಮುಂದಾಗಿದೆ.
ಫೆಬ್ರವರಿ 16 ರಿಂದ ಫೆಬ್ರವರಿ 27ರವರೆಗೆ ರಾಜ್ಯದ ನಾನಾ ಭಾಗಗಳಲ್ಲಿ ಕೆಇಆರ್ಸಿ ಸಾರ್ವಜನಿಕ ವಿಚಾರಣಾ ಸಭೆಗಳನ್ನು ನಡೆಸಲಿದೆ. ಈ ಸಭೆಗಳಲ್ಲಿ ಗ್ರಾಹಕರು ತಮ್ಮ ಅಭಿಪ್ರಾಯಗಳನ್ನು ತಿಳಿಸಬಹುದಾಗಿದೆ.
ಏಪ್ರಿಲ್ 1 ರಿಂದ ದರ ಏರಿಕೆ?
ಈಗಾಗಲೇ 2025-26, 2026-27 ಮತ್ತು 2027-28ನೇ ಆರ್ಥಿಕ ವರ್ಷಗಳಿಗೆ ದರ ನಿಗದಿ ಮಾಡಲಾಗಿತ್ತು. ಆದರೆ, ಈಗ ಎದುರಾಗಿರುವ ನಷ್ಟವನ್ನು ಸರಿದೂಗಿಸಲು 'ಹೆಚ್ಚುವರಿ ದರ ಏರಿಕೆ'ಗೆ ಕೆಇಆರ್ಸಿ ಚಿಂತನೆ ನಡೆಸಿದೆ ಎನ್ನಲಾಗಿದೆ. ವಿಚಾರಣೆಯ ನಂತರ, ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ ಪರಿಷ್ಕೃತ ವಿದ್ಯುತ್ ದರ ಪ್ರಕಟವಾಗುವ ಸಾಧ್ಯತೆಯಿದೆ. ಇದು ಜಾರಿಯಾದರೆ ಗ್ರಾಹಕರ ಜೇಬಿಗೆ ಕತ್ತರಿ ಬೀಳುವುದು ಖಚಿತ.
ಇದನ್ನೂ ಓದಿ: ರಾಯಚೂರಲ್ಲಿ ದಾರಿ ತಪ್ಪಿದ CM ಹೆಲಿಕಾಪ್ಟರ್; ಲಿಂಗಸುಗೂರಿನಲ್ಲಿ ಹೈಡ್ರಾಮಾ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us