/newsfirstlive-kannada/media/media_files/2025/09/08/lunar_eclipse_protest_3-2025-09-08-08-01-08.jpg)
ತಡರಾತ್ರಿ ವಿಶ್ವಾದ್ಯಂತ ಖಗ್ರಾಸ ಚಂದ್ರಗ್ರಹಣ ಸಂಭವಿಸಿದೆ. ದೇಶದಲ್ಲಿ ಪೂರ್ಣ ಚಂದ್ರ ರಕ್ತವರ್ಣಕ್ಕೆ ತಿರುಗಿ ಗೋಚರಿಸಿದ್ದಾನೆ. ಇದ್ರ ಮಧ್ಯೆ ಗ್ರಹಣ ಕಾಲದಲ್ಲಿ ಊಟ ಮಾಡಬಾರದು ಅನ್ನೋದು ಕೆಲವರ ನಂಬಿಕೆ. ಆದ್ರೆ, ಇದು ಮೂಢನಂಬಿಕೆ ಅನ್ನೋದು ಕೆಲವರ ವಾದ. ಹೀಗಾಗಿ ರಾಜ್ಯದ ಹಲವೆಡೆ ಮೂಢನಂಬಿಕೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ನಡೀತು.
ಗ್ರಹಣ ಅನ್ನೋದು ಖಗೋಳದಲ್ಲಿ ನಡೆಯುವ ಅಪರೂಪದ ವಿಸ್ಮಯ. ನಭೋ ಮಂಡಲದಲ್ಲಿ ನಡೆಯುವ ನೆರಳಿನಾಟ. ಆದ್ರೆ, ವೈಜ್ಞಾನಿಕತೆಯ ಕಾಲದಲ್ಲೂ ಅವೈಜ್ಞಾನಿಕ ಆಚರಣೆಗಳು ನಡೆಯುತ್ತಲೇ ಇರುತ್ತವೆ. ಇದೀಗ ಖಗ್ರಾಸ ಚಂದ್ರಗ್ರಹಣದ ವೇಳೆ ಕೆಲವು ಮೌಢ್ಯ ಆಚರಿಸೋದು ಸರ್ವೇಸಾಮಾನ್ಯ. ಇಂಥಹ ಮೌಢ್ಯತೆಯ ವಿರುದ್ಧ ಪ್ರಗತಿಪರರು ಸೆಡ್ಡು ಹೊಡೆದಿದ್ದಾರೆ.
ಗ್ರಹಣದ ವೇಳೆ ಆಹಾರ ಸೇವನೆ ಮಾಡಬಾರದೆಂಬ ನಂಬಿಕೆ!
ಭೂರಿ ಭಕ್ಷ ಭೋಜನಗಳ ಸಾಲು, ಹಣ್ಣು-ಹಂಪಲು, ಬಗೆ ಬಗೆಯ ಖಾದ್ಯಗಳು ನೋಡಿದರೆ ನಾಲಿಗೆ ನೀರೂರಿಸುವಂತ ರುಚಿಕರ ಆಹಾರಗಳು. ಇದು ಗ್ರಹಣ ಕಾಲದಲ್ಲಿ ಬೆಂಗಳೂರಿನ ಟೌನ್ಹಾಲ್ ಮುಂಭಾಗ ಕಂಡುಬಂದ ದೃಶ್ಯ.
ಖಗ್ರಾಸ ಚಂದ್ರಗ್ರಹಣದ ಸಮಯದಲ್ಲಿ ಊಟ ಮಾಡಬಾರದು ಅನ್ನೋದು ಕೆಲವರ ನಂಬಿಕೆ. ಆದ್ರೆ, ಇದು ಮೌಢ್ಯ ಆಚರಣೆ ಅನ್ನೋದು ಕೆಲವು ಪ್ರಗತಿಪರರ ವಾದ. ಹೀಗಾಗಿ ಟೌನ್ಹಾಲ್ ಬಳಿ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. 150ಕ್ಕೂ ಹೆಚ್ಚು ಮಂದಿ ಪ್ರಗತಿಪರರು ಬಗೆ ಬಗೆಯ ಆಹಾರವನ್ನ ಸೇವಿಸಿ ಜಾಗೃತಿಯನ್ನ ಮೂಡಿಸಿದರು. ಹಾಡುಗಳನ್ನ ಹಾಡುತ್ತಾ ಊಟ ಸೇವಿಸುತ್ತಾ, ಮಕ್ಕಳಿಗೂ ಊಟ ತಿನ್ನಿಸುತ್ತಾ ಮೌಢ್ಯಗಳ ವಿರುದ್ಧ ಸೆಡ್ಡು ಹೊಡೆದರು.
ಇದನ್ನೂ ಓದಿ:ರಾತ್ರಿ ಕ್ಷಣ ಕ್ಷಣಕ್ಕೂ ಶಶಿಯ ಬಣ್ಣ ಬದಲಾವಣೆ.. ಅಪರೂಪದ ಚಂದ್ರಗ್ರಹಣ ಚಂದವೋ ಚಂದ!
‘ಮೌಡ್ಯವನ್ನ ವಿರೋಧಿಸಿದ್ದೇವೆ’
ಊಟ ಮಾಡಬೇಡ, ಹೊರಗಡೆ ಬರಬೇಡ ಎಂದು ಹೇಳಿದ್ದಾರೆ. ಆದರೆ ನಾವು ಹೊರಗಡೆ ಬಂದು ಊಟ ಮಾಡಿದ್ದೇವೆ. ಹಾಡು ಹೇಳಿಕೊಂಡು, ಡ್ಯಾನ್ಸ್ ಕೂಡ ಮಾಡಲಾಗಿದೆ. ಹಿಂದೆನೂ ಹೀಗೆ ಮಾಡಿದ್ದೇವೆ, ಮುಂದೆನೂ ಮಾಡುತ್ತೇವೆ.
ನರಸಿಂಹ ಮೂರ್ತಿ, ಪ್ರಗತಿಪರ ಚಿಂತಕ
‘ಮೌಢ್ಯಗಳಿಗೆ ಸಾಂಕೇತಿಕ ಉತ್ತರ’
ಚಂದ್ರ ಗ್ರಹಣ, ಸೂರ್ಯ ಗ್ರಹಣ ಎಲ್ಲವೂ ವೈಜ್ಞಾನಿಕವಾಗಿ ವಿದ್ಯಾರ್ಥಿಗಳು ಅರ್ಥೈಸಿಕೊಳ್ಳಬೇಕು. ಯಾರು ಈ ಜ್ಯೋತಿಷ್ಯಾ ಶಾಸ್ತ್ರವನ್ನ ನಂಬಿಕೊಂಡು ಊಟ ಮಾಡಬಾರದು, ಹೊರಗಡೆನೇ ಬರಬಾರದು, ಕಿರಣಗಳಿಂದ ಎಫೆಕ್ಟ್ ಆಗುತ್ತೆ. ತೊಂದರೆ ಆಗುತ್ತದೆ ಎಂದು ಬಿಂಬಿಸಲಾಗಿದೆ. ಅವರಿಗೆ ಈ ಪ್ರತಿಭಟನೆ ಮೂಲಕ ಸರಿಯಾದ ಉತ್ತರ ಕೊಟ್ಟಿದ್ದೇವೆ.
ರಮ್ಯಾ, ಪ್ರಗತಿಪರ ಚಿಂತಕಿ
ಮೌಢ್ಯತೆಗೆ ಸೆಡ್ಡು ಹೊಡೆದ ಬೀದರ್ನ ಸೈನಿಕ ಶಾಲೆ!
ಬೀದರ್ನ ಸೈನಿಕ ಶಾಲೆಯಲ್ಲಿ ಮೌಢ್ಯತೆಯ ವಿರುದ್ಧವಾಗಿ ಮಕ್ಕಳಿಗೆ ಜಾಗೃತಿ ಮೂಡಿಸುವ ಕೆಲಸ ನಡೀತು. ಬೈನಾಕ್ಯೂಲರ್ ಹಾಗೂ ದೂರದರ್ಶಕದ ಮೂಲಕ ಮಕ್ಕಳಿಗೆ ಚಂದ್ರಗ್ರಹಣ ಕಣ್ತುಂಬಿಕೊಳ್ಳಲು ಅವಕಾಶ ಮಾಡಿಕೊಡಲಾಗಿತ್ತು. ಇದರ ಜೊತೆಗೆ ಖಗ್ರಾಸ ಚಂದ್ರಗ್ರಹಣದ ಸಂದರ್ಭದಲ್ಲಿ ಮಕ್ಕಳಿಗೆ ಬಾಳೆಹಣ್ಣು ವಿತರಿಸಿದ ಶಾಲಾ ಆಡಳಿತ ಮಂಡಳಿ, ವೈಚಾರಿಕತೆಯ ಪಾಠ ಮಾಡ್ತು. ಅಲ್ಲದೇ ಮೌಢ್ಯತೆ ಆಚರಿಸಬಾರದು ಅಂತ ಪ್ರತಿಜ್ಞೆಯನ್ನೂ ಮಾಡಲಾಯ್ತು.
ನಂಬಿಕೆ ಇರಬೇಕು.. ಆದ್ರೆ, ಮೂಢನಂಬಿಕೆ ಇರಬಾರದು ಅನ್ನೋದು ಕೆಲವರ ವೈಚಾರಿಕತೆ. ಅದರಂತೆ ಖಗ್ರಾಸ ಚಂದ್ರಗ್ರಹಣ ನಂಬಿಕೆ. ಆಚರಣೆ.. ವೈಚಾರಿಕತೆಗೆ ಸಾಕ್ಷಿಯಾಯ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ