ಬರೀ ಟ್ವೀಟ್ ಮಾಡಬೇಡಿ, ಬಹಿರಂಗ ಚರ್ಚೆಗೆ ಬನ್ನಿ; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ರಾಜಧಾನಿ ಬೆಂಗಳೂರಿನ ಸಾರಿಗೆ ವ್ಯವಸ್ಥೆ ಮತ್ತು ಬಿಎಂಟಿಸಿ ಬಸ್‌ಗಳ ಕೊರತೆ ವಿಚಾರವಾಗಿ ರಾಜ್ಯ ಸರ್ಕಾರ ಹಾಗೂ ಉದ್ಯಮಿ ಟಿ.ವಿ. ಮೋಹನ್ ದಾಸ್ ಪೈ ನಡುವೆ ವಾಕ್ಸಮರ ಶುರುವಾಗಿದೆ. ಬಿಎಂಟಿಸಿ ಬಸ್‌ಗಳ ಕೊರತೆ ಬಗ್ಗೆ ಟೀಕೆ ಮಾಡಿದ್ದ ಪೈ ಅವರಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಬಹಿರಂಗ ಸವಾಲು ಹಾಕಿದ್ದಾರೆ.

author-image
Ganesh Kerekuli
Ramalinga reddy
Advertisment

ಬೆಂಗಳೂರು: ರಾಜಧಾನಿ ಬೆಂಗಳೂರಿನ ಸಾರಿಗೆ ವ್ಯವಸ್ಥೆ ಮತ್ತು ಬಿಎಂಟಿಸಿ ಬಸ್‌ಗಳ ಕೊರತೆ ವಿಚಾರವಾಗಿ ರಾಜ್ಯ ಸರ್ಕಾರ ಹಾಗೂ ಉದ್ಯಮಿ ಟಿ.ವಿ. ಮೋಹನ್ ದಾಸ್ ಪೈ ನಡುವೆ ವಾಕ್ಸಮರ ಶುರುವಾಗಿದೆ. ಬಿಎಂಟಿಸಿ ಬಸ್‌ಗಳ ಕೊರತೆ ಬಗ್ಗೆ ಟೀಕೆ ಮಾಡಿದ್ದ ಪೈ ಅವರಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಬಹಿರಂಗ ಸವಾಲು ಹಾಕಿದ್ದಾರೆ.

ವಿವಾದದ ಹಿನ್ನೆಲೆ ಏನು?

ಇತ್ತೀಚೆಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಬಸ್‌ಗಳ ಕೊರತೆ ಕುರಿತು ಟ್ವೀಟ್ ಮಾಡಿದ್ದ ಉದ್ಯಮಿ ಮೋಹನ್ ದಾಸ್ ಪೈ, ಬೆಂಗಳೂರಿನಲ್ಲಿ 10,000ಕ್ಕೂ ಹೆಚ್ಚು ಬಸ್‌ಗಳ ಕೊರತೆಯಿದೆ. ಆದರೆ ಸರ್ಕಾರ ಅರ್ಧಕ್ಕಿಂತ ಕಡಿಮೆ ಬಸ್‌ಗಳನ್ನು ಖರೀದಿ ಮಾಡಲು ಮುಂದಾಗಿದೆ. ಬಸ್ ಖರೀದಿ ಪ್ರಕ್ರಿಯೆಯಲ್ಲಿ ಭಾರೀ ವಿಳಂಬವಾಗುತ್ತಿದೆ. ಸಚಿವರಾಗಿ ನೀವು ಜನರಿಗೆ ಉತ್ತಮ ಸೇವೆ ನೀಡುವಲ್ಲಿ ವಿಫಲರಾಗಿದ್ದೀರಿ ಎಂದು ನೇರವಾಗಿ ಸಚಿವ ರಾಮಲಿಂಗಾರೆಡ್ಡಿ ವಿರುದ್ಧ ಕಿಡಿಕಾರಿದ್ದರು.

ಇದನ್ನೂ ಓದಿ: ವಯಸ್ಸಾದಂತೆ ಕೂದಲು ಬಿಳಿ ಆಗೋದು ಯಾಕೆ..? ಇದನ್ನು ನಿಲ್ಲಿಸಲು ಸಾಧ್ಯವೇ..?

ಸಚಿವ ರಾಮಲಿಂಗಾರೆಡ್ಡಿ ತಿರುಗೇಟು

ಪೈ ಅವರ ಈ ಟೀಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ರಾಮಲಿಂಗಾರೆಡ್ಡಿ, "ಬರೀ ಟ್ವೀಟ್ ಮಾಡುವುದಲ್ಲ, ಅಂಕಿ-ಅಂಶಗಳೊಂದಿಗೆ ಚರ್ಚೆಗೆ ಬನ್ನಿ" ಎಂದು ಸವಾಲು ಹಾಕಿದ್ದಾರೆ.

ಸಚಿವರ ಸವಾಲಿನ ಮುಖ್ಯಾಂಶಗಳು..

ನೇರ ಚರ್ಚೆಗೆ ಆಹ್ವಾನ: ನೀವು ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಟ್ವೀಟ್ ಮಾಡುತ್ತಾ ಕುಳಿತುಕೊಳ್ಳಬೇಡಿ. ಸಾರಿಗೆ ಇಲಾಖೆಯ ವಾಸ್ತವಾಂಶಗಳ ಬಗ್ಗೆ ಚರ್ಚಿಸಲು ಮುಂದಾಗಿ.

ಬಿಎಂಟಿಸಿ ಎಂಡಿ ಸಿದ್ಧ: ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರು (MD) ನಿಮ್ಮೊಂದಿಗೆ ಚರ್ಚಿಸಲು ಸಿದ್ಧರಿದ್ದಾರೆ. ಬಸ್ ಖರೀದಿ, ಕಾರ್ಯನಿರ್ವಹಣೆ ಮತ್ತು ಯೋಜನೆಗಳ ಬಗ್ಗೆ ಅವರಿಗೆ ಮಾಹಿತಿ ಇದೆ.

ಸಾರ್ವಜನಿಕ ಸೇವೆ: ಸರ್ಕಾರವು ಹಂತ ಹಂತವಾಗಿ ಹೊಸ ಬಸ್‌ಗಳನ್ನು ಸೇರ್ಪಡೆಗೊಳಿಸುತ್ತಿದೆ. ವಿಳಂಬದ ಹಿಂದಿನ ತಾಂತ್ರಿಕ ಕಾರಣಗಳನ್ನು ಅರಿಯದೆ ಟೀಕೆ ಮಾಡುವುದು ಸರಿಯಲ್ಲ ಎಂದು ಸಚಿವರು ಹೇಳಿದ್ದಾರೆ.

ಟ್ವೀಟ್ ವರ್ಸಸ್ ರಿಯಾಲಿಟಿ

ಬೆಂಗಳೂರಿನಂತಹ ಬೆಳೆಯುತ್ತಿರುವ ನಗರಕ್ಕೆ ಮೆಟ್ರೋ ಜೊತೆಗೆ ಬಿಎಂಟಿಸಿ ಬಸ್‌ಗಳ ಅಗತ್ಯವೂ ಹೆಚ್ಚಿದೆ. ಶಕ್ತಿ ಯೋಜನೆಯ ನಂತರ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಇದೇ ಸಂದರ್ಭದಲ್ಲಿ ಹಳೆಯ ಬಸ್‌ಗಳ ಬದಲಿಗೆ ಹೊಸ ಬಸ್‌ಗಳ ಸೇರ್ಪಡೆ ಪ್ರಕ್ರಿಯೆ ನಿಧಾನವಾಗುತ್ತಿದೆ ಎಂಬುದು ಸಾರ್ವಜನಿಕರ ದೂರು ಕೂಡ ಆಗಿದೆ. ಆದರೆ, ಉದ್ಯಮಿ ಪೈ ಅವರು ಇದನ್ನು 'ಸರ್ಕಾರದ ವೈಫಲ್ಯ' ಎಂದು ಕರೆದಿದ್ದು ಈಗ ಸಚಿವರ ಕೆಂಗಣ್ಣಿಗೆ ಗುರಿಯಾಗಿದೆ.

ಇದನ್ನೂ ಓದಿ: ಹಳ್ಳಿ ಸಮಸ್ಯೆ ಹೇಳಿದ್ದಕ್ಕೆ ವ್ಯಕ್ತಿಯ ಬೆನ್ನು ಕಚ್ಚಿದ ಪಂಚಾಯತ್ ಅಧ್ಯಕ್ಷ.. ತಾಯಿಯ ತಾಳಿ ಸರವನ್ನೂ ಕಿತ್ತ ಆರೋಪ !

ಸಚಿವರ ಈ ಬಹಿರಂಗ ಸವಾಲಿಗೆ ಉದ್ಯಮಿ ಮೋಹನ್ ದಾಸ್ ಪೈ ಅವರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ? ಅವರು ಚರ್ಚೆಗೆ ಬರುತ್ತಾರಾ ಅಥವಾ ಟ್ವೀಟ್ ಮೂಲಕವೇ ಉತ್ತರ ನೀಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Ramalinga Reddy BMTC TV Mohandas Pai
Advertisment