‘ನಾವು ಹೇಗೆ ಪ್ರಾಣ ಉಳಿಸಿಕೊಂಡ್ವಿ ಅಂದರೆ..’ ಅಪಘಾತ ನಡೆದ ಕ್ಷಣದಲ್ಲಿ ಆಗಿದ್ದೇನು..?

ಚಿತ್ರದುರ್ಗದ ಬಳಿ ಸಂಭವಿಸಿದ ಬಸ್​ ದುರಂತದಲ್ಲಿ ಐವರು ಪ್ರಾಣ ಕಳೆದುಕೊಂಡಿದ್ದಾರೆ. ಘೊರ ದುರಂತದಲ್ಲಿ ರಾಜಸ್ಥಾನ ಮೂಲದ ಹೇಮರಾಜ್ ಅನ್ನೋರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರು ತಮ್ಮ ಜೀವವನ್ನು ಉಳಿಸಿಕೊಂಡ ಭಯಾನಕ ಕತೆಯನ್ನ ನ್ಯೂಸ್​ ಫಸ್ಟ್ ಜೊತೆ ಹಂಚಿಕೊಂಡಿದ್ದಾರೆ.

author-image
Ganesh Kerekuli
Chitradurga accident (2)
Advertisment

ಚಿತ್ರದುರ್ಗದ ಬಳಿ ಸಂಭವಿಸಿದ ಬಸ್​ ದುರಂತದಲ್ಲಿ ಐವರು ಪ್ರಾಣ ಕಳೆದುಕೊಂಡಿದ್ದಾರೆ. ಘೊರ ದುರಂತದಲ್ಲಿ ರಾಜಸ್ಥಾನ ಮೂಲದ ಹೇಮರಾಜ್ ಅನ್ನೋರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರು ತಮ್ಮ ಜೀವವನ್ನು ಉಳಿಸಿಕೊಂಡ ಭಯಾನಕ ಕತೆಯನ್ನ ನ್ಯೂಸ್​ ಫಸ್ಟ್ ಜೊತೆ ಹಂಚಿಕೊಂಡಿದ್ದಾರೆ. 

ಬೆಂಗಳೂರಿನ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಹೇಮರಾಜ್, ತಮ್ಮ ಪತ್ನಿ ಹಾಗೂ ಪುತ್ರನ ಜೊತೆ ರಜೆ ಹಿನ್ನೆಲೆಯಲ್ಲಿ ಗೋಕರ್ಣಕ್ಕೆ ಹೊರಟಿದ್ದರು. ನಿನ್ನೆ ರಾತ್ರಿ ಬಸ್​ ಹಿಡಿದು ಹೊರಟಿದ್ದ ಅವರು, ಅಪಘಾತ ಬಳಿಕ ವಾಪಸ್ ತುಮಕೂರಿಗೆ ಬಂದು ಅಲ್ಲಿ ಚಿಕಿತ್ಸೆ ಪಡೆದು, ಈಗ ಬೆಂಗಳೂರಿಗೆ ಬಂದಿದ್ದಾರೆ. 

ಇದನ್ನೂ ಓದಿ: ಮೈಸೂರು ಮೃಗಾಲಯದಲ್ಲಿ ಹೆಣ್ಣು ಹುಲಿ ದುರಂತ ಅಂತ್ಯ

ಏನಂದ್ರು ಹೇಮರಾಜ್..? 

ಚಿತ್ರದುರ್ಗ ಜಿಲ್ಲೆಯ ಜೋಗನಹಳ್ಳಿಯಲ್ಲಿ ಅಪಘಾತ ಆಗಿದೆ. ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಲಾರಿಯೊಂದು ಬಸ್ಸಿನ ಹಿಂಬದಿಗೆ ಡಿಕ್ಕಿ ಹೊಡೆದಿದೆ. ನಾವೆಲ್ಲರೂ ಮಲಗಿದ್ದೇವು. ನಾವು ಬಸ್ಸಿನ ಮುಂದಿನ ಸೀಟಿನಲ್ಲಿದ್ದೆವು. ಅಂದರೆ ಡ್ರೈವರ್ ಸೀಟ್​​ನ ಹಿಂಬದಿಯಲ್ಲಿರುವ ಅಪ್ಪರ್ ಸೀಟಿನಲ್ಲಿ ಮಲಗಿದ್ದೆವು. ಹೀಗಾಗಿ ನಾವು ಸುಲಭವಾಗಿ ಪ್ರಾಣ ಉಳಿಸಿಕೊಂಡೆವು. 

ನಾವು ಬೆಂಗಳೂರಿನಿಂದ ಗೋಕರ್ಣಕ್ಕೆ ಹೊರಟಿದ್ದೆವು. ರಜೆ ಹಿನ್ನೆಲೆಯಲ್ಲಿ ಪ್ರವಾಸ ಬೆಳೆಸಿದ್ದೆವು. ಮಧ್ಯರಾತ್ರಿ ನಿದ್ದೆಯಲ್ಲಿದ್ದ ಕಾರಣ ಅಪಘಾತ ಆಗಿರೋದು ಗೊತ್ತಾಗಲಿಲ್ಲ. ನಿದ್ರೆ ಜಂಪಿನಲ್ಲಿದ್ದ ನನಗೆ ಬಸ್ಸಿಗೆ ಏನೋ ಬಂದು ಗುದ್ದಿದಂತೆ ಆಯಿತು. ನಂತರ ತಲೆಗೆ ಮೇಲಿಂದ ಏನೋ ಹೊಡೆದಂತೆ ಆಗಿದೆ. ಕೂಡಲೇ ಉಸಿರು ಕಟ್ಟಿದ ಅನುಭವ ಆಗಿದೆ. ಅಷ್ಟರಲ್ಲೇ ಬೆಂಕಿಯ ಜ್ವಾಲೆ ಆವರಿಸಿಬಿಟ್ಟಿದೆ. 

ಅಪಘಾತದ ಹೊಡೆತಕ್ಕೆ ನಮ್ಮ ಬಳಿಯಿದ್ದ ಕಿಟಕಿಯ ಗ್ಲಾಸ್​ ಒಡೆದಿತ್ತು. ಅದರ ಮೂಲಕ ನಾವು ಜಂಪ್ ಮಾಡಿದೆವು. ಅಪಘಾತದಲ್ಲಿ ಇತರೆ ಪ್ರಯಾಣಿಕರು ಯಾರೂ ಕಾಣಲಿಲ್ಲ. ನನ್ನ ಅಕ್ಕ, ಪಕ್ಕದಲ್ಲಿರೋರೆಲ್ಲ ನಮ್ಮ ಹಾಗೆಯೇ ಜಂಪ್ ಮಾಡಿ ಪರಾರಿ ಆಗಿದ್ದಾರೆ. ನಾವು ಜಂಪ್ ಮಾಡಿದ ಕಿಟಕಿ ಮೂಲಕವೇ ಒಂದಿಬ್ಬರು ಹಾರಿದ್ದಾರೆ. 

ನನ್ನ ಹಿಂದೆ ಯಾರೆಲ್ಲ ಇದ್ದರು ಅನ್ನೋದ್ರ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಕೆಲವರು ನಾವು ಜಂಪ್ ಮಾಡುವ ಮೊದಲೇ ಹೊರಗಡೆ ಬಂದು ಬಿಟ್ಟಿದ್ದರು. ಬಸ್ಸಿನ ಹಿಂಬದಿಯಲ್ಲಿದ್ದವರಿಗೆ ಬಹುಶಃ ಅಪಯಾದಿಂದ ಪಾರಾಗಲು ಸಾಧ್ಯವಾಗಲಿಲ್ಲ. ಯಾಕೆಂದರೆ ಲಾರಿ ವಿರುದ್ಧ ದಿಕ್ಕಿನಿಂದ ಬಂದು ಬಸ್ಸಿನ ಹಿಂಬದಿಯ ಸೈಡ್​ಗೆ ಡಿಕ್ಕಿ ಹೊಡೆದಿದೆ. ಹೀಗಾಗಿ ಹಿಂದೆ ಕೂತವರೆಲ್ಲ ಪಾರಾಗಲು ಸಾಧ್ಯವಾಗಲಿಲ್ಲ. ಅಲ್ಲಿ ಬೆಂಕಿಯ ಜ್ವಾಲೆ ಜೋರಾಗಿತ್ತು. 

ಅಪಘಾತ ಬಳಿ ಬಸ್ಸಿನಿಂದ ಯಾರೂ ಇಳಿಯಲು ಸಾಧ್ಯವಾಗಲಿಲ್ಲ. ಎಲ್ಲರೂ ಜಂಪ್ ಮಾಡಿಯೇ ಪ್ರಾಣ ಉಳಿಸಿಕೊಂಡಿದ್ದಾರೆ. ನಾವು ಮಲಗಿದ್ದ ಸೀಟನ ವಿಂಡೋದಲ್ಲೇ ಎರಡ್ಮೂರು ಮಂದಿ ಜಂಪ್ ಮಾಡಿದ್ದಾರೆ. ಕೊನೆಗೆ ನಾವು ನೋಡಿದ್ದು ಬೆಂಕಿಯ ನರ್ತನ. ಬೆಂಕಿಯೊಂದೇ ನಮಗೆ ಕಾಣಿಸಿದೆ. ಒಂದೇ ಸಮನೆ ಬೆಂಕಿ ಹೊತ್ತಿ ಉರಿದಿದೆ. ಅಲ್ಲದೇ, ಕೆಲವು ಸೆಕೆಂಡ್​ಗಳಲ್ಲಿ ಸ್ಫೋಟಗೊಂಡ ರೀತಿಯಲ್ಲಿ ಜೋರಾಗಿ ಸದ್ದಾಗಿದೆ. 

ಅಪಘಾತದಲ್ಲಿ ನನಗೆ ಮತ್ತು ಪತ್ನಿಗೆ ಗಾಯವಾಗಿತ್ತು. ಹೀಗಾಗಿ ನಾವು ಆ್ಯಂಬುಲೆನ್ಸ್​ಗಾಗಿ ಕಾದೆವು. ನನ್ನ ತಲೆ ಮತ್ತು ಬೆನ್ನಿಗೆ ಪೆಟ್ಟು ಬಿದ್ದಿತ್ತು. ಹೀಗಾಗಿ ಎಲ್ಲರಂತೆ ನಾವು ಕೂಡ ಆ್ಯಂಬುಲೆನ್ಸ್​ಗಾಗಿ ಕಾದೆವು. ಅಷ್ಟರಲ್ಲೇ ಸ್ಥಳೀಯ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದರು. ಪೊಲೀಸರು ಬರುವಷ್ಟರೊಳಗೆ ಕೆಲ ಮಂದಿ ಆ್ಯಂಬುಲೆನ್ಸ್​ಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಅಪಘಾತ ಸಂಭವಿಸಿ ಸುಮಾರು 40 ರಿಂದ 50 ನಿಮಿಷಗಳ ಬಳಿಕ ಆ್ಯಂಬುಲೆನ್ಸ್ ಬಂದಿದೆ. ಆ್ಯಂಬುಲೆನ್ಸ್ ಬರುವ ಮೊದಲು ಒಂದು ಕ್ಯಾಬ್ ಬಂದಿತ್ತು.

ಆ ಕ್ಯಾಬ್ ಮೂಲಕ ಕೆಲವರ ಶಿಫ್ಟ್ ಮಾಡಲಾಗಿದೆ. ನಾವು ವಾಪಸ್ ತುಮಕೂರಿಗೆ ಬಂದು ಪ್ರಥಮ ಚಿಕಿತ್ಸೆ ಪಡೆದವು. ಬಳಿಕ ಬೆಂಗಳೂರಿಗೆ ವಾಪಸ್ ಆದೆವು. ಈಗ ಮನೆಯಲ್ಲಿದ್ದೇವೆ. ನಾವು ಚೆನ್ನಾಗಿದ್ದೆವೆ. ನಮಗೆ ಆಗಿರೋದು ಸಣ್ಣ, ಪುಟ್ಟ ಸಾಮಾನ್ಯ ಗಾಯ. ನನ್ನ ಮಗನಿಗೆ ಏನೂ ಆಗಿಲ್ಲ. ಇತರೆ ಪ್ರಯಾಣಿಕರ ಆರೋಗ್ಯದ ಬಗ್ಗೆ ನನಗೆ ಗೊತ್ತಿಲ್ಲ. ಯಾಕೆಂದರೆ ಅವರ ಪರಿಚಯ ನನಗೆ ಇರಲಿಲ್ಲ. ಹೀಗಾಗಿ ನಾನು ಯಾರನ್ನೂ ಸಂಪರ್ಕ ಮಾಡುವ ಪ್ರಯತ್ನ ಮಾಡಿಲ್ಲ. 

ಇನ್ನು ಅಪಘಾತದಲ್ಲಿ  ಬೆಂಕಿಯ ಕೆನ್ನಾಲಿಗೆಗೆ ಸಿಲುಕಿರೋರು ಬದುಕಿರೋ ಸಾಧ್ಯತೆ ತುಂಬಾನೇ ಕಡಿಮೆ ಇದೆ. ಬಸ್ಸಿನ ಹಿಂಬದಿಯ ಭಾಗದಲ್ಲಿ ಅಧಿಕೃತವಾಗಿ ಏನಾಗಿದೆ ಎಂದು ನನಗೆ ಗೊತ್ತಿಲ್ಲ. ಆದರೂ ಬೆಂಕಿಯ ತೀವ್ರತೆಯನ್ನು ನೋಡಿದ್ರೆ ಹೇಳಬಲ್ಲೆ. ಅದೃಷ್ಟ ಏನೆಂದರೆ ಬಸ್ ನಾನ್ ಎಸಿ ಸ್ಲೀಪರ್ ಆಗಿತ್ತು. ಹೀಗಾಗಿ ಅಪಘಾತದ ಅನಾಹುತ ಕಡಿಮೆ ಪ್ರಮಾಣದಲ್ಲಿ ಆಗಿದೆ ಎಂದು ಅನುಭವ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಚಿತ್ರದುರ್ಗ ಬಸ್ ದುರಂತ.. ಮೃತರ ಕುಟುಂಬಗಳಿಗೆ 5 ಲಕ್ಷ ರೂಪಾಯಿ ಪರಿಹಾರ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Chitradurga bus tragedy ಹಿರಿಯೂರು ಬಸ್ ದುರಂತ
Advertisment