CM ಸಿದ್ದರಾಮಯ್ಯ ಕೇವಲ ವ್ಯಕ್ತಿ ಅಲ್ಲ, ಸಿದ್ಧಾಂತ, ಇದಕ್ಕೆ ಪರಂಪರೆಯೇ ಇದೆ: ಕೆವಿ ಪ್ರಭಾಕರ್

ಒಂದು ಬಲಿಷ್ಠ ವ್ಯವಸ್ಥೆ ಏಕಲವ್ಯರ ಬೆರಳುಗಳನ್ನು, ಅವಕಾಶ ಮತ್ತು ಪ್ರತಿಭೆಗಳನ್ನು ಹೇಗೆ ಕಿತ್ತುಕೊಳ್ಳುತ್ತದೆ ಎನ್ನುವುದನ್ನು ನಾನು ಪತ್ರಕರ್ತನಾಗಿ ಕಲಿತಿದ್ದೆ. ಆದರೆ, ಏಕಲವ್ಯರ ಬೆರಳುಗಳಿಗೆ ಶಕ್ತಿ ತುಂಬಿ ಬೆವರಿನ‌ ಸಂಸ್ಕೃತಿಗೆ ಘನತೆ ತರುವುದು ಹೇಗೆ ಎನ್ನುವುದನ್ನು ಸಿಎಂ ಸಿದ್ದರಾಮಯ್ಯರಿಂದ ಕಲಿತೆ.

author-image
Bhimappa
KV_PRABHAKAR (2)
Advertisment

ಬೆಳಗಾವಿ: ಸಿಎಂ ಸಿದ್ದರಾಮಯ್ಯ ಎಂದರೆ ಕೇವಲ ಒಬ್ಬ ವ್ಯಕ್ತಿಯಲ್ಲ, ಒಂದು ಸಿದ್ದಾಂತ. ಬೆವರಿನ‌ ಸಂಸ್ಕೃತಿಗೆ ಮೌಲ್ಯ ಮತ್ತು ಘನತೆ ತಂದು ಕೊಡುವ ಸಿದ್ಧಾಂತ ಎಂದು ಮುಖ್ಯಮಂತ್ರಿಗಳ ಮಾಧ್ಯಮ‌ ಸಲಹೆಗಾರ ಕೆವಿ ಪ್ರಭಾಕರ್ ಅವರು ಹೇಳಿದ್ದಾರೆ. 

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಜಿಲ್ಲಾ ಶಾಖೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ, ಕೆವಿ ಪ್ರಭಾಕರ್ ಅವರು ಮಾತನಾಡಿ, ಪತ್ರಕರ್ತನಾಗಿ 2 ಕಣ್ಣುಗಳಿಂದ ಸಮಾಜ ನೋಡುತ್ತಿದ್ದ ನನಗೆ ಸಮಾಜದ ಲಕ್ಷಾಂತರ ಕಣ್ಣುಗಳು ನನ್ನೊಬ್ಬನನ್ನು ಗಮನಿಸುತ್ತಿರುತ್ತೆ ಎನ್ನುವ ಸಾಮಾಜಿಕ ಎಚ್ಚರ, ಸಿಎಂ ಸಿದ್ದರಾಮಯ್ಯ ಅವರ ನೆರಳಲ್ಲಿ ಕಲಿತುಕೊಂಡೆ ಎಂದು ಹೇಳಿದರು. 

ಒಂದು ಮಾತು ಪದೇ ಪದೇ ನನ್ನ ಕಿವಿಗೆ ಬೀಳುತ್ತದೆ

ಒಂದು ಬಲಿಷ್ಠ ವ್ಯವಸ್ಥೆ ಏಕಲವ್ಯರ ಬೆರಳುಗಳನ್ನು, ಅವಕಾಶ ಮತ್ತು ಪ್ರತಿಭೆಗಳನ್ನು ಹೇಗೆ ಕಿತ್ತುಕೊಳ್ಳುತ್ತದೆ ಎನ್ನುವುದನ್ನು ನಾನು ಪತ್ರಕರ್ತನಾಗಿ ಕಲಿತಿದ್ದೆ. ಆದರೆ, ಏಕಲವ್ಯರ ಬೆರಳುಗಳಿಗೆ ಶಕ್ತಿ ತುಂಬಿ ಬೆವರಿನ‌ ಸಂಸ್ಕೃತಿಗೆ ಘನತೆ ತರುವುದು ಹೇಗೆ ಎನ್ನುವುದನ್ನು ಸಿಎಂ ಸಿದ್ದರಾಮಯ್ಯರಿಂದ ಕಲಿತೆ. ಸಿಎಂ ನೆರಳಿಗೆ ಬಂದು ಒಂದು ಡಜನ್ ವರ್ಷಗಳೇ ಕಳೆದವು. ಈ ಅವಧಿಯಲ್ಲಿ ಗ್ರಹಿಸಿದ್ದು ಏನೆಂದರೆ, ಸಿಎಂ ಸಿದ್ದರಾಮಯ್ಯ ಕೇವಲ ಒಬ್ಬ ರಾಜಕೀಯ ನಾಯಕರಲ್ಲ, ಒಂದು ಸಿದ್ಧಾಂತ. ಈ ಸಿದ್ಧಾಂತಕ್ಕೆ ಒಂದು ಪರಂಪರೆ ಇದೆ. ಆ ಪರಂಪರೆ ಸೃಷ್ಟಿಸಿದ ಅವಕಾಶಗಳ ಕಾರಣಕ್ಕೆ ಇಂದು ಇಲ್ಲಿ ಸನ್ಮಾನಿತ ಆಗುತ್ತಿದ್ದೇನೆ. ಆದ್ದರಿಂದ ಈ ಸನ್ಮಾನ ಸಿದ್ದರಾಮಯ್ಯ ಅವರ ಪರಂಪರೆಗೆ ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ. 

ಇದನ್ನೂ ಓದಿ: ಫಸ್ಟ್ ಓವರ್,​ ಫಸ್ಟ್ ಬಾಲ್​, ಫಸ್ಟ್ ವಿಕೆಟ್ ಡಕೌಟ್​​.. ಪಾಂಡ್ಯ, ಬೂಮ್ರಾ ಬೌಲಿಂಗ್​ಗೆ ನಡುಗಿದ ಪಾಕ್

KV_PRABHAKAR_NEW (1)

ವಿಧಾನಸೌಧದಲ್ಲಿ ಬೇರೆ ಬೇರೆ ಜನ ಸಮುದಾಯಗಳ, ದುಡಿಯುವ ವರ್ಗಗಳ ಸಭೆಗಳು ನಡೆಯುವಾಗ ಅವರೆಲ್ಲರ ಬಾಯಲ್ಲಿ ಬರುವ ಒಂದು ಮಾತು ಪದೇ ಪದೇ ನನ್ನ ಕಿವಿಗೆ ಬೀಳುತ್ತದೆ. ಸಾರ್, ನಮಗೆ ನ್ಯಾಯ ಸಿಕ್ಕರೆ ನಿಮ್ಮ ಅವಧಿಯಲ್ಲೇ ಸಿಗಬೇಕು ಸರ್. ಹಿಂದಿನವರೂ ಮಾಡಿಲ್ಲ, ಮುಂದೆ ಬರುವವರೂ ಮಾಡುವುದೂ ಕಷ್ಟ ಸರ್. ಈ ಮಾತು ಸದಾ ಎಚ್ಚರದಲ್ಲಿ ಇರುವಂತೆ ಮಾಡಿ ಕರ್ತವ್ಯ ನನ್ನ ಪ್ರಜ್ಞೆ ರೂಪಿಸಿದೆ ಎಂದರು. 

ಸಿಎಂ ಸಿದ್ದರಾಮಯ್ಯ ಅವರ ಸಾಮಾಜಿಕ ಬದ್ಧತೆ ಎತ್ತಿ ತೋರಿಸುತ್ತದೆ

ಎರಡು ಬಾರಿ ಮುಖ್ಯಮಂತ್ರಿ ಆಗುವುದು, ಸತತ ಮೂರು ದಶಕಗಳ ಕಾಲ ಜನ ಸಮುದಾಯಗಳ ಭರವಸೆಯ ನಾಯಕರಾಗಿ ರೂಪುಗೊಂಡಿದ್ದು ಅವರ ಸಾಮಾಜಿಕ ಬದ್ಧತೆ ಎತ್ತಿ ತೋರಿಸುತ್ತದೆ. ಈ ಬದ್ಧತೆ ನೇರವಾಗಿ ನನ್ನ ಮೇಲೆ ಪ್ರಭಾವ ಬೀರಿದೆ. ಪತ್ರಕರ್ತ ಸಮುದಾಯದ 20-25 ವರ್ಷಗಳ ಬೇಡಿಕೆಗೆ ನಾನು ಮುಕ್ತಿ ದೊರಕಿಸಿಕೊಟ್ಟೆ ಎಂದು ನೀವೆಲ್ಲಾ ಹೇಳುತ್ತಿದ್ದೀರಿ. ಇದೆಲ್ಲವೂ ಒಬ್ಬನಿಂದ ಆಗಿದ್ದಲ್ಲ, ಮುಖ್ಯಮಂತ್ರಿಗಳು ನನಗೆ ಕೊಟ್ಟ ಶಕ್ತಿ ಮತ್ತು ಪತ್ರಕರ್ತರ ಸಂಘದ ಸತತ ಹೋರಾಟ, ನಿರಂತರ ಪ್ರಯತ್ನ ಕೂಡ ಕಾರಣ ಎಂದು ಹೇಳಲು ಬಯಸುತ್ತೇನೆ ಎಂದರು. 

ನಿಮ್ಮಲ್ಲರ ಹಾರೈಕೆ ಮತ್ತು ಬೆಂಬಲದಲ್ಲಿ ಇಲ್ಲಿಯವರೆಗೂ ಹೆಜ್ಜೆ ಇಟ್ಟಿದ್ದೇನೆ. ನಡೆಯಬೇಕಾಗಿರುವ ಹಾದಿ ಬಹಳ ಇದೆ. ಆದರೆ, ಒದಗಿ ಬಂದಿರುವ ಈ ಅವಕಾಶದಲ್ಲಿ ಪತ್ರಕರ್ತರ ಬಹುತೇಕ ಸಮಸ್ಯೆಗಳಿಗೆ ಮುಕ್ತಿ ಹಾಡಬೇಕು ಎನ್ನುವ ಖಚಿತ ನಿರ್ಧಾರ ಮಾಡಿಯೇ ಕೆಲಸ ಮಾಡುತ್ತಿದ್ದೇನೆ. ಹತ್ತಾರು ವರ್ಷಗಳಿಂದ ಜಡ್ಡುಗಟ್ಟಿರುವ ತಾಂತ್ರಿಕ‌ ಅಡೆ ತಡೆಗಳನ್ನು, ಆಡಳಿತಾತ್ಮಕ ತೊಡಕುಗಳನ್ನು ನಿವಾರಿಸಲು ಇಲಾಖೆಯ ಕಾರ್ಯದರ್ಶಿಗಳಾದ ಕಾವೇರಿ ಮೇಡಂ, ಆಯುಕ್ತರಾದ ಹೇಮಂತ್ ನಿಂಬಾಳ್ಕರ್ ಅವರೂ ಸಹಕಾರ ನೀಡುತ್ತಿದ್ದಾರೆ. ಜೊತೆಗೆ ನಿಮ್ಮೆಲ್ಲರ ಒತ್ತಾಯ ಮತ್ತು ಆಗ್ರಹಗಳಿಗೂ ನಾನು ಕಿವಿಯಾಗಿದ್ದೇನೆ. ಎಲ್ಲರ ಒಟ್ಟು ಶ್ರಮದಲ್ಲಿ ಇನ್ನಷ್ಟು ಅನುಕೂಲಗಳು ಪತ್ರಕರ್ತ ಸಮುದಾಯಕ್ಕೆ ಸಿಗಲಿದೆ. ಈ ಸನ್ಮಾನ ಮತ್ತು ದೀಪಕ್ ಕುರಂದವಾಡೆ ತಂಡದ ಪ್ರೀತಿ, ಅಭಿಮಾನಕ್ಕೆ ಆಭಾರಿ‌ ಆಗಿದ್ದೇನೆ ಎಂದು ಹೇಳಿದ್ದಾರೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

CM SIDDARAMAIAH KV Prabhakar
Advertisment