/newsfirstlive-kannada/media/media_files/2025/08/21/sameer-md5-2025-08-21-17-05-58.jpg)
ಯೂಟ್ಯೂಬರ್ ಸಮೀರ್ ಎಂ.ಡಿ.
ಮಂಗಳೂರು: ಬಂಧನದ ಭೀತಿಯಲ್ಲಿದ್ದ ಯೂಟ್ಯೂಬರ್ ಸಮೀರ್ಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಸತ್ರ ನ್ಯಾಯಾಲಯವು ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಇದರಿಂದಾಗಿ ಸಮೀರ್ ಪೊಲೀಸರ ಬಂಧನದಿಂದ ಬಚಾವ್ ಆಗಿದ್ದಾನೆ. ಈ ನಿರೀಕ್ಷಣಾ ಆದೇಶದ ಪ್ರತಿ ಪಡೆದು ಪೊಲೀಸರ ವಿಚಾರಣೆಗೆ ಹಾಜರು ಆಗಬಹುದು. ಆಗ ಪೋಲಿಸರು ಸಮೀರ್ನನ್ನು ಬಂಧಿಸುವಂತಿಲ್ಲ. ವಿಚಾರಣೆ ನಡೆಸಿ ಕಳಿಸಬಹುದು. ಅಲ್ಲದೇ ಸಮೀರ್ ವಿಚಾರಣೆಗೆ ಸಹಕಾರ ನೀಡಬೇಕಾಗುತ್ತದೆ.
ಕೋರ್ಟ್ನಿಂದ ಸಮೀರ್ಗೆ ನಿರೀಕ್ಷಣಾ ಜಾಮೀನು ಕಂಡೀಷನ್ಸ್
1. ಸಮೀರ್ಗೆ 75 ಸಾವಿರ ವೈಯಕ್ತಿಕ ಬಾಂಡ್ ನೀಡಬೇಕು
2. ಮತ್ತೆ ಇದೇ ರೀತಿಯ ಅಪರಾಧವನ್ನು ಮಾಡಬಾರದು
3. ಸಮೀರ್ ತಪ್ಪಿಸಿಕೊಳ್ಳಬಾರದು
4. ಬೆದರಿಕೆ, ಪ್ರಚೋದನೆ ಅಥವಾ ಇನ್ಯಾವುದೇ ರೀತಿಯಲ್ಲಿ ಸಾಕ್ಷಿಗಳನ್ನು ತಿರುಚಬಾರದು.
5. ಪ್ರಾಸಿಕ್ಯೂಷನ್ ಸಾಕ್ಷ್ಯವನ್ನು ನಾಶಪಡಿಸಬಾರದು.
6. ತನಿಖಾಧಿಕಾರಿಗೆ ಸಮೀರ್ ಸಿಗುವಂತಿರಬೇಕು. ಅಗತ್ಯವಿದ್ದಾಗ ವಿಚಾರಣೆಗೆ ಹಾಜರಾಗಬೇಕು.
7. ನಿಗದಿತ ಸಂದರ್ಭದಲ್ಲಿ ಕೋರ್ಟ್ಗೆ ಹಾಜರಾಗಬೇಕು.
ಈ ಷರತ್ತುಗಳನ್ನು ಆರೋಪಿ ಸಮೀರ್ ಎಂ.ಡಿ. ಪಾಲಿಸಬೇಕು. ಷರತ್ತು ಉಲಂಘಿಸಿದರೇ, ನಿರೀಕ್ಷಣಾ ಜಾಮೀನು ರದ್ದುಪಡಿಸುವಂತೆ ಪೊಲೀಸರು, ಪ್ರಾಸಿಕ್ಯೂಷನ್ ಗೆ ಕೋರ್ಟ್ ಗೆ ಮನವಿ ಮಾಡಲು ಅವಕಾಶ ಸಿಗಲಿದೆ.
ಇದನ್ನೂ ಓದಿ:ಅನನ್ಯ ಭಟ್ ಬಗ್ಗೆ ಸುಜಾತ ಭಟ್ ರಿಂದ ಗೊಂದಲ, ಅಸ್ಪಷ್ಟ ಹೇಳಿಕೆ, ಉತ್ತರ ಸಿಗದ 15 ಪ್ರಶ್ನೆಗಳು
ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡಿದ್ದ ಆರೋಪದ ಮೇಲೆ ಪೊಲೀಸರು ಜುಲೈ 12ರಂದು ಸಮೀರ್ ವಿರುದ್ಧ ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದರು. ಇದೇ ಪ್ರಕರಣದಲ್ಲಿ ಯೂಟ್ಯೂಬರ್ ಸಮೀರ್ ಎಂ.ಡಿ. ಯನ್ನ ಬಂಧಿಸಲು ಧರ್ಮಸ್ಥಳ ಪೊಲೀಸರು ಬೆಂಗಳೂರಿಗೆ ಎಂಟ್ರಿ ಕೊಟ್ಟಿದ್ದರು.
ಇದಕ್ಕೂ ಮೊದಲೇ ಆಗಸ್ಟ್ 19ರಂದೇ ಸಮೀರ್ ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ. ಜಿಲ್ಲಾ ನ್ಯಾಯಾಲಯವು ಸಂಜೆ 4.30ಕ್ಕೆ ಆದೇಶ ಕಾಯ್ದಿರಿಸಿತ್ತು. ಇದೀಗ ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಲಯ ಯೂಟ್ಯೂಬರ್ ಸಮೀರ್ಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ