/newsfirstlive-kannada/media/media_files/2025/09/13/hd_devegowda_new-2025-09-13-18-15-49.jpg)
ಹಾಸನ: ಮೊಸಳೆಹೊಸಹಳ್ಳಿ ಗ್ರಾಮದ ಬಳಿ ಗಣಪತಿ ಮೆರವಣಿಗೆ ಮೇಲೆ ಏಕಾಏಕಿ ಟ್ರಕ್ ನುಗ್ಗಿ 9 ಜನರು ಕೊನೆಯುಸಿರೆಳೆದಿದ್ದರು. 25 ಜನರು ಗಂಭೀರವಾಗಿ ಗಾಯಗೊಂಡಿದ್ದರು. ಸದ್ಯ ಈ ಪ್ರಕರಣಕ್ಕೆ ಸಂಬಂಧ ಹಿರಿಯ ರಾಜಕಾರಣಿ ಹಾಗೂ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಹಾಸನದ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ್ದಾರೆ.
ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಗಾಯಾಳುಗಳ ಆರೋಗ್ಯ ವಿಚಾರಿಸಲು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ್ದಾರೆ. ಹೆಚ್.ಡಿ ದೇವೇಗೌಡರ ಜೊತೆ ಸ್ಥಳೀಯ ಶಾಸಕ ಸ್ವರೂಪ್ ಪ್ರಕಾಶ್, ಶಾಸಕ ಎ ಮಂಜು, ಶಾಸಕ ಬಾಲಕೃಷ್ಣ ಹಾಗೂ ಎಂಎಲ್ಸಿ ಸೂರಜ್ ರೇವಣ್ಣ ಅವರು ಇದ್ದರು. ಗಾಯಾಳುಗಳ ಆರೋಗ್ಯ ವಿಚಾರಿಸಿ, ದೇವೇಗೌಡರು ಧೈರ್ಯ ತುಂಬಿದ್ದಾರೆ.
ಗಾಯಾಳುಗಳ ಆರೋಗ್ಯ ವಿಚಾರಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರು, ದುರದೃಷ್ಟಕರ ಘಟನೆಯಲ್ಲಿ 9 ಜನ ಜೀವ ಬಿಟ್ಟಿದ್ದು ಉಳಿದ ಕೆಲ ಮಂದಿಗೆ ಗಾಯಗಳು ಆಗಿವೆ. ಆಡಳಿತವನ್ನು ದೂಷಿಸಲು ಬಯಸುವುದಿಲ್ಲ. ಪೊಲೀಸರು ಜಾಗರೂಕರಾಗಿರಬೇಕಾಗಿತ್ತು. ಯುವ ಪೀಳಿಗೆ ಡ್ಯಾನ್ಸ್ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ವಾಹನ ಬಂದಿದೆ. ತುಂಬಾ ದುಃಖಕರ ಘಟನೆ ಎಂದು ಹೇಳಿದ್ದಾರೆ.
ಈ ಘಟನೆ ಸಂಬಂಧ ಯಾರನ್ನು ದೂಷಿಸುವುದು?, ಡಿಸಿ ಅಥವಾ ಎಸ್ಪಿ?. ಇಲ್ಲಿ ನಾನು ರಾಜಕೀಯವನ್ನು ಬೆರೆಸಲು ಬಯಸುವುದಿಲ್ಲ. ಇದು ಕೇಂದ್ರ ಸ್ಥಳ, ನಾನು ಆ ಹಳ್ಳಿಯಲ್ಲಿ ಹುಟ್ಟಿದ್ದೇನೆ. ನನ್ನ ತಾಯಿ ತವರು ಅದು. ನನ್ನ ಮಕ್ಕಳಾದ ಹೆಚ್.ಡಿ ರೇವಣ್ಣ, ಹೆಚ್.ಡಿ ಸುರೇಶ್ ಅಲ್ಲಿಯವರು. ಸಂಸದರು ಮತ್ತು ಶಾಸಕರು ತಮ್ಮ ತಮ್ಮ ಊರುಗಳಿಗೆ ಹೋಗಿದ್ದಾರೆ. ರೇವಣ್ಣ ಅಲ್ಲಿಗೆ ಹೋಗಿದ್ದಾರೆ ಏಕೆಂದರೆ ಅದು ಅವರ ಕ್ಷೇತ್ರ ಎಂದು ಹೇಳಿದ್ದಾರೆ.
93 ವರ್ಷದಲ್ಲೂ ಬಂದಿರೋದು ಗೌರವದಿಂದ. ವೈದ್ಯರ ಬಳಿ ಈಗಾಗಲೇ ಚರ್ಚೆ ಮಾಡಿದ್ದೇನೆ. ಪಕ್ಷದ ವತಿಯಿಂದ ದೊಡ್ಡ ಗಾಯಾಳುಗಳಿಗೆ 25೦೦೦ ರೂಪಾಯಿ, ಮಧ್ಯಮ ಗಾಯಾಳುಗಳಿಗೆ 20,೦೦೦ ರೂಪಾಯಿ ಹಾಗೂ ಸಣ್ಣಪುಟ್ಟ ಗಾಯಾಳುಗಳಿಗೆ 15,೦೦೦ ಪರಿಹಾರ ನೀಡಲಾಗುವುದು. ಗಾಯಾಳುಗಳಿಗೆ ರೋಗಿಗಳಿಗೆ ತೊಂದರೆ ಆಗೋದು ಬೇಡ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಹಾಸನದಲ್ಲಿ ಸಾವನ್ನಪ್ಪಿದ್ದವರಲ್ಲಿ ನಾಲ್ಕು ಮಂದಿ ಇಂಜಿನಿಯರಿಂಗ್ ವಿದ್ಯಾರ್ಥಿಗಳು
ಸಿಎಂ ಸಿದ್ದರಾಮಯ್ಯ ಅವರಿಗೆ ಪರಿಹಾರ ಮೊತ್ತ ಹೆಚ್ಚು ಮಾಡಬೇಕು ಎಂದು ಹೇಳುತ್ತೇನೆ. ಸಾಧ್ಯವಾದರೆ 10 ಲಕ್ಷ ರೂಪಾಯಿ ಕೊಡುವಂತೆ ಅವರನ್ನ ಕೋರಲಾಗುವುದು. ನೆರೆ ರಾಜ್ಯದಲ್ಲಿ ಹೇಗೆ ಪರಿಹಾರ ಕೊಡ್ತಾ ಇದ್ದಾರೆ. ಇಲ್ಲಿ ಇಂತಹ ದುರ್ಘಟನೆ ಆದಾಗ, ಕೆಲವು ಕುಟುಂಬಗಳು ನಿರ್ಗತಿಕರಾಗೋ ರೀತಿ ಇದೆ. ವಯಸ್ಸಾದ ತಂದೆ, ತಾಯಿ ಇದ್ದಾರೆ. ನಾನು ಸರ್ಕಾರದ ವಿರುದ್ಧ ಮಾತಾಡಿಲ್ಲ. ರಾಜಕೀಯ ಮಾಡೋದಕ್ಕೆ ಬೇಕಾದಷ್ಟು ವಿಚಾರ ಇದೆ. ಪ್ರತಿ ಊರಲ್ಲಿ ಗಣೇಶ ಇಟ್ಟು ಪೂಜೆ ಮಾಡಬೋದು. ಮುಸ್ಲಿಮರು ಕೂಡ ಪೂಜೆ ಮಾಡ್ತಾರೆ. ನಮ್ಮ ಹುಡುಗರು ಮಾಡುವಾಗ ಸ್ವಲ್ಪ ಲೋಕಲ್ ಪೊಲೀಸ್ ಮುಂಜಾಗ್ರತೆ ವಹಿಸಬೇಕಿತ್ತು ಎಂದು ಹೇಳಿದ್ದಾರೆ.
ನಾನು ಇವತ್ತು ಇಲ್ಲೇ ಇರುತ್ತೇನೆ. ವಾಪಸ್ ಹೋಗಲ್ಲ. ನಾಳೆ ಎಲ್ಲಾದರೂ ಹೋಗಬೇಕು ಅನ್ನೋ ಮನಸ್ಸಿದೆ. ನಂಗೆ ಭ್ರಮೆ ಇಲ್ಲ. ಸಂಕಲ್ಪ ಮಾಡುವ ಶಕ್ತಿ ಇದೆ. ಅಲ್ಲಿಯವರೆಗೂ ಹೋರಾಟ ಮಾಡ್ತೀನಿ. ರಾಜಕೀಯಕ್ಕೆ ನಿವೃತ್ತಿ ಅಂತ ನಾನು ಎಲ್ಲೂ ಹೇಳಿಲ್ಲ. ಮೊನ್ನೆ ಎನ್ಡಿಎ ಸಭೆಗೆ ಹೋಗಿ ಬಂದಿದ್ದೇನೆ. ಕೆಲಸ ಇನ್ನೂ ಮುಗಿದಿಲ್ಲ, ಬಾಕಿಯಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ