/newsfirstlive-kannada/media/media_files/2025/08/16/kambala-2025-08-16-19-24-03.jpg)
ಉಡುಪಿ: ತುಳುನಾಡಿನ ಜನಪ್ರೀಯ ಕ್ರೀಡೆ ಕಂಬಳ ಸ್ಪರ್ಧೆಯಲ್ಲಿ ಅತಿ ಹೆಚ್ಚು ಪ್ರಶಸ್ತಿ ಪಡೆಯುವ ಮೂಲಕ ಅತ್ಯಗ್ರಣ್ಯ ಎನಿಸಿಕೊಂಡಿದ್ದ ಕೋಣವೊಂದು ಇಹಲೋಕ ತ್ಯಜಿಸಿದೆ. ಚೆನ್ನ ಎನ್ನುವ ಕೋಣಕ್ಕೆ ಸಕಲ ವಿಧಿವಿಧಾನಗಳೊಂದಿಗೆ ಅಂತ್ಯ ಸಂಸ್ಕರಾ ಮಾಡಲಾಗಿದೆ.
ಕೋಣದ ಹೆಸರು ಚೆನ್ನ, ಕೊಳಚೂರು ಕೊಂಡೊಟ್ಟು ಸುಕುಮಾರ್ ಶೆಟ್ಟಿ ಅವರ 25 ವರ್ಷದ ಕೋಣ ಕಳೆದ ಮೂರು ವರ್ಷದಿಂದ ವಿಶ್ರಾಂತಿಯಲ್ಲಿದ್ದು ಈಗ ವಯೋಸಹಜ ಕಾರಣಗಳಿಂದ ಅಸುನೀಗಿದೆ. ಕಂಬಳ ಲೋಕದ ಬಂಗಾರ ಎಂದೇ ಪ್ರಸಿದ್ಧಿಯಾಗಿದ್ದ ಕೊಳಚೂರು ಕೊಂಡೊಟ್ಟು ಚೆನ್ನ ಇನ್ನಿಲ್ಲ ಅನ್ನೊದು ಕಂಬಳ ಅಭಿಮಾನಿಗಳಿಗೆ ಅಪಾರ ನೋವಿಗೆ ಕಾರಣವಾಗಿದೆ.
ಚೆನ್ನ ಮೊದಲು ಎಲ್ಲಿದ್ದ?
ಕಂಬಳ ಕ್ಷೇತ್ರದಲ್ಲಿ ಅತಿ ಹೆಚ್ಚು ಪ್ರಶಸ್ತಿ ಗೆದ್ದಿದ್ದ ಕಂಬಳ ಪ್ರಿಯರ ಮುದ್ದಿನ ಕೋಣ ಚೆನ್ನ, ಸುಮಾರು 22 ವರ್ಷಗಳ ಹಿಂದೆ ಕಡಂದಲೆ ಕಾಳು ಪಾಣಾರ ಅವರ ಹಟ್ಟಿಯಲ್ಲಿದ್ದ ಆ ಕೋಣನ್ನು ಬಾರ್ಕೂರು ಶಾಂತಾರಾಮ ಶೆಟ್ಟಿ ಅವರು ತಮ್ಮಲ್ಲಿಗೆ ಕರೆ ತಂದು ಮುದ್ದಿನಿಂದ ಸಾಕಿದ್ದರು. ಬಳಿಕ ಕಂಬಳಕ್ಕಾಗಿ ಚೆನ್ನನನ್ನು ಅಣಿಗೊಳಿಸಿದ್ದರು. ಮೂಡಬಿದಿರೆಯ ಕೋಟಿ-ಚೆನ್ನ ಕಂಬಳದ ಗದ್ದೆಗಳಿಂದ ಮೊದಲ ಮೂರು ವರ್ಷವೂ ನೇಗಿಲು ಜೂನಿಯರ್ ವಿಭಾಗದಲ್ಲಿ ಬಾರ್ಕೂರು ಶಾಂತಾರಾಮ ಶೆಟ್ಟರಿಗೆ ಈ ಚೆನ್ನ ಮೆಡಲ್ ಬಾಚಿಕೊಟ್ಟಿದ್ದನು.
ತುಸು ತುಂಟ ಪೋಕುರಿಯ ಕೋಣನಾದ್ದರಿಂದ ಕಂಬಳ ಓಟ ಆರಂಭವಾಗುವ ಸಮಯದಲ್ಲಿಯೂ ಪೋಕರಿ ಮಾಡುತ್ತಿತ್ತು. ಇದೇ ಕಾರಣಕ್ಕೆ ಸೀನಿಯರ್ ವಿಭಾಗದಲ್ಲಿ ಒಂದು ವರ್ಷ ನೇಗಿಲು ವಿಭಾಗದಲ್ಲಿ ಚೆನ್ನನನ್ನು ಓಡಿಸಲಾಯಿತು. ಬಳಿಕ ಬಂಟ್ವಾಳದ ಮಹಾಕಾಳಿಬೆಟ್ಟು ಸೀತಾರಾಮ್ ಶೆಟ್ಟಿ ಅವರು ಚೆನ್ನನಿಗೆ ತನ್ನ ಕೋಣದ ಜತೆ ಮಾಡಿದ್ದರು. ಆಗಲೇ ಅಲ್ಲಿ ಪಾದೆ ವಿನ್ಸೆಂಟ್ ಅವರು ಚೆನ್ನನಿಗೆ ಪ್ರೀತಿಯಿಂದ ಆರೈಕೆ ಮಾಡಿ ಕಂಬಳದ ಪಾಠ ಹೇಳಿಕೊಟ್ಟರು. ಅದೇ ವರ್ಷದ ನೇಗಿಲು ಹಿರಿಯ ವಿಭಾಗದಲ್ಲಿ ಚೆನ್ನ ಚಾಂಪಿಯನ್ ಆಗಿ ಹೊರಮ್ಮಿದ್ದ.
ಇದನ್ನೂ ಓದಿ:ಪಾಕ್ ಜೊತೆ ಭಾರತ ಕ್ರಿಕೆಟ್ ಆಡಬಾರದು.. ರಕ್ತ, ನೀರು ಒಟ್ಟಿಗೆ ಹರಿಯಲ್ಲ, ದೇಶ ಮೊದಲು- ಮಾಜಿ ಆಟಗಾರ!
4 ಬಾರಿ ಸರಣಿಶ್ರೇಷ್ಠ ಪ್ರಶಸ್ತಿ
ಕಂಬಳದಲ್ಲಿ ಚೆನ್ನ ನಡೆದದ್ದೇ ಹಾದಿ. ಹಗ್ಗ ಹಿರಿಯ ವಿಭಾಗದಲ್ಲಿ ಗೆಂದಬೆಟ್ಟು ಮೋಡೆ ಮತ್ತು ಚೆನ್ನ ಜತೆಯಾಗಿ ಹತ್ತಾರು ಪದಕ ಗೆದ್ದುಕೊಂಡಿತು. 4 ಬಾರಿ ಸರಣಿಶ್ರೇಷ್ಠ ಪ್ರಶಸ್ತಿ ಬಾಚಿಕೊಂಡಿತು. ಸತತ 13 ವರ್ಷ ಪದಕ ಗೆದ್ದ ಸರದಾರ ಚೆನ್ನ. ಕಂಬಳ ಕ್ಷೇತ್ರ ಪ್ರಸಿದ್ಧ ಓಟಗಾರ ಶ್ರೀನಿವಾಸ ಗೌಡ ಹಲವರು ಚೆನ್ನನ ಹಿಂದೆ ಓಡಿ ಪದಕ ಬಾಚಿಕೊಂಡಿದ್ದಾರೆ. ಅಲ್ಲದೇ ಚೆನ್ನನನ್ನು ಸಾಕಿದ್ದ ಯಜಮಾನ ಮತ್ತು ಅವನನ್ನು ಓಡಿಸಿದ್ದ ನಾಲ್ವರು ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ ಪಡೆದ ಕೀರ್ತಿಗೆ ಪಾತ್ರರಾಗಿದ್ದಾರೆ. ಯಾವತ್ತೂ ಇತರ ಕೋಣಗಳಿಗಿಂತ ಒಂದು ಹೆಜ್ಜೆ ಮುಂದೆಯೇ ಇರುತ್ತಿದ್ದ ಚೆನ್ನನೆಂದರೆ ಎಲ್ಲರಿಗೂ ಪ್ರೀತಿಯಿತ್ತು. ಚೆನ್ನನ ಓಟವನ್ನು ಕಾಣಲು ಕಂಬಳ ಅಭಿಮಾನಿಗಳು ಕಾತರಿಸುತ್ತಿದ್ದರು. ಹಾಗಾಗಿ ಚೆನ್ನ ಸಾರ್ವಕಾಲಿಕ ಪದಕ ವಿಜೇತರ ಪಟ್ಟಿಯಲ್ಲಿ ಎರಡನೇ ಸ್ಥಾನಿ.
ಕಂಬಳ ಇತಿಹಾಸದಲ್ಲಿ ಎಂದೆಂದಿಗೂ ಅಜರಾಮರವಾಗಿರುವ ದಾಖಲೆಯನ್ನು ಬರೆದ ಚೆನ್ನ ಇನ್ನೂ ಇಲ್ಲ. ಇದೀಗ ಚೆನ್ನ ಈ ಕಣ್ಮರೆಯಾದ್ರೂ, ಕಂಬಳಾಭಿಮಾನಿಗಳ ಹೃದಯದಲ್ಲಿ ಎಂದಿಗೂ ಮರೆಯದ ಮಾಣಿಕ್ಯ ಅನ್ನೊದು ಮಾತ್ರ ಸತ್ಯ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ