/newsfirstlive-kannada/media/media_files/2025/08/26/kamandala-ganesha-2025-08-26-21-54-11.jpg)
ಇಲ್ಲಿ ಗಣಪತಿಯನ್ನು ಪಾರ್ವತಿ ದೇವಿಯೇ ಪ್ರತಿಷ್ಠಾಪಿಸಿದ್ದಾಳೆ. ಈ ದೇವಾಲಯ ರಹಸ್ಯಗಳನ್ನು ಹೊದ್ದು ನಿಂತಿದೆ. ಶನಿಯ ದುಷ್ಟತನದಿಂದ ಪರಿಹಾರ ಪಡೆಯಲು ಪಾರ್ವತಿ ದೇವಿಯು ಸ್ವತಃ ತಪಸ್ಸು ಮಾಡಿದ ಸ್ಥಳ ಇದು. ಇಂದು ಆ ಸ್ಥಳ ತುಂಬಾನೇ ಶಕ್ತಿಶಾಲಿ ಕ್ಷೇತ್ರ. ಆ ಗಣಪತಿ ದೇವಾಲಯ ಎಲ್ಲಿದೆ? ಹಿನ್ನೆಲೆ ಏನು ಅನ್ನೋ ವಿವರ ಇಲ್ಲಿದೆ.
ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದ ಕೆಸವೆ ಗ್ರಾಮದಲ್ಲಿ ಕಮಂಡಲ ಗಣಪತಿ ದೇವಾಲಯ ಇದೆ. ಇದೊಂದು ಪ್ರಾಚೀನ ಯಾತ್ರಾ ಸ್ಥಳ. ಈ ಗಣಪತಿ ದೇವಾಲಯವು ಆಹ್ಲಾದಕರ ವಾತಾವರಣದಲ್ಲಿ ಸುಂದರವಾದ ನೋಟಗಳೊಂದಿಗೆ ಭಕ್ತರನ್ನು ರಂಜಿಸುತ್ತದೆ. ಈ ಭವ್ಯತೆಯ ಜೊತೆಗೆ ಸಾವಿರ ವರ್ಷಗಳಷ್ಟು ಹಳೆಯದಾದ ದೇವಾಲಯದ ಬಗ್ಗೆ ಅನೇಕ ಆಧ್ಯಾತ್ಮಿಕ ಕಥೆಗಳಿವೆ. ಪಾರ್ವತಿ ದೇವಿಯು ಇಲ್ಲಿ ಗಣೇಶನನ್ನು ಪೂಜಿಸುತ್ತಿದ್ದಳು ಎಂದು ನಂಬಲಾಗಿದೆ. ಕಮಂಡಲ ಗಣಪತಿ ದೇವಾಲಯದಲ್ಲಿ ವಿಶೇಷವಾಗಿ ಮಹಿಳೆಯರಿಂದ ಪೂಜಿಸಲ್ಪಡುವುದು ಶುಭವೆಂದು ಪರಿಗಣಿಸಲಾಗಿದೆ. ಇಲ್ಲಿ ಪೂಜೆ ಅಥವಾ ಧ್ಯಾನ ಮಾಡುವುದರಿಂದ ಗಣೇಶನ ಆಶೀರ್ವಾದ ಸಿಗುತ್ತದೆ ಎಂದು ನಂಬಲಾಗಿದೆ. ಶನಿ ದೋಷದಿಂದ ಬಳಲುತ್ತಿರೋರಿಗೆ ಪರಿಹಾರ ಸಿಗುತ್ತದೆ ಎಂದು ಹೇಳಲಾಗುತ್ತದೆ.
ದಂತಕಥೆಯ ಕಥೆ..
ದೇವಲೋಕದಲ್ಲಿರುವ ಪಾರ್ವತಿ ದೇವಿಗೆ ಒಮ್ಮೆ ಶನಿ ದೋಷ ಎದುರಾಗಿತ್ತಂತೆ. ದೋಷ ಪರಿಹಾರ ಹೇಗೆಂದು ದೇವರು ಹಾಗೂ ದೇವಾನು ದೇವತೆಗಳಲ್ಲಿ ಕೇಳಿದಾಗ ಭೂಲೋಕಕ್ಕೆ ತೆರಳಿ ತಪಸ್ಸು ಮಾಡಿದರೆ ಶನಿ ದೋಷ ನಿವಾರಣೆ ಆಗುತ್ತದೆ ಎಂದು ಹೇಳುತ್ತಾರೆ. ಅಂತೆಯೇ ಪಾರ್ವತಿ ದೇವಿ ಭೂಲೋಕಕ್ಕೆ ಪ್ರಯಾಣ ಬೆಳೆಸಿ ಮೃಗವಧೆ ಎಂಬ ಸ್ಥಳದಲ್ಲಿ ತಪಸ್ಸು ಮಾಡುತ್ತಾಳೆ. ಬಳಿಕ ಅಗಸ್ಯ ಮಹರ್ಷಿಗಳ ವಿಚಾರ ತಿಳಿದು ಕೆಸವೆ ಗ್ರಾಮಕ್ಕೆ ಬರುತ್ತಾಳೆ. ಅಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿ ಮತ್ತೆ ಧ್ಯಾನದಲ್ಲಿ ಮಗ್ನಳಾಗುತ್ತಾಳೆ.
ಇದನ್ನೂ ಓದಿ: ಸಮಯ ಬದಲಾಗಿದೆ.. ಬೆಂಗಳೂರಲ್ಲಿ ಕಸ ಕೊಟ್ಟು ಕೆಲಸಕ್ಕೆ ಹೋಗಿ..!
ನಂತರ ಪಾರ್ವತಿ ಶನಿ ದೋಷದಿಂದ ಮುಕ್ತಳಾಗುತ್ತಾಳೆ. ಶನಿ ದೋಷ ಮುಕ್ತಳಾದ ಪಾರ್ವತಿ ದೇವಿಯು ತಾನು ಪ್ರತಿಷ್ಠಾಪಿಸಿದ ಗಣೇಶನಿಗೆ ಅಭಿಷೇಕ ಮಾಡಲು ನೀರು ತರಲು ಹೋಗುತ್ತಾಳೆ. ಆದರೆ ಪಾರ್ವತಿಗೆ ಎಲ್ಲೂ ನೀರು ಸಿಗುವುದಿಲ್ಲ. ಬಳಿಕ ನೀರಿಗಾಗಿ ಬ್ರಹ್ಮದೇವನಲ್ಲಿ ಬೇಡಿಕೊಳ್ಳುತ್ತಾಳೆ. ಈ ವೇಳೆ ಬ್ರಹ್ಮದೇವ ಪ್ರತ್ಯಕ್ಷಗೊಂಡು ಬಾಣವನ್ನು ಹೊಡೆದು ಕಮಂಡಲದಿಂದ ನೀರು ಚಿಮ್ಮುವಂತೆ ಮಾಡುತ್ತಾನೆ. ಹೀಗೆ ಚಿಮ್ಮಿದೆ ನೀರು ಮುಂದೆ ಬ್ರಾಹ್ಮ ನದಿಯಾಗಿ ಹರಿಯುತ್ತದೆ. ಜೊತೆಗೆ ಈ ಸ್ಥಳವನ್ನು ಕಮಂಡಲ ಗಣಪತಿ ದೇವಸ್ಥಾನ ಎಂದು ಕರೆಯಲಾಯಿತು ಎಂಬ ಕತೆ ಇದೆ.
ಜ್ಞಾನ ವೃದ್ಧಿ, ಶನಿ ದೋಷ ನಿವಾರಣೆ
ಈ ದೇವಸ್ಥಾನದ ಗರ್ಭಗುಡಿಯಲ್ಲಿ ಉಗಮಗೊಂಡಿರುವ ಬ್ರಾಹ್ಮ ನದಿ ಹರಿದು ದೇವಸ್ಥಾನದ ಎದುರು ತೀರ್ಥ ರೂಪದಲ್ಲಿ ಬೀಳುತ್ತಂತೆ. ಈ ತೀರ್ಥದಲ್ಲಿ ಮಿಂದೆದ್ದರೆ ಶನಿ ದೋಷ ನಿವಾರಣೆಯಾಗುತ್ತದೆ ಎಂಬುವುದು ಭಕ್ತರ ನಂಬಿಕೆ. ಇದೇ ಕಾರಣಕ್ಕೆ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದು ತೀರ್ಥ ಸ್ನಾನ ಮಾಡಿ ವಿಘ್ನೇಶ್ವರನ ದರ್ಶನ ಪಡೆಯುತ್ತಾರೆ. ಇಲ್ಲಿನ ತೀರ್ಥ ಮಕ್ಕಳಿಗೆ ಕುಡಿಸಿದರೆ ಅವರ ಜ್ಞಾಪಕ ಶಕ್ತಿ ವೃದ್ಧಿಯಾಗುತ್ತದೆ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ:ಗಣೇಶನ ಮುಳುಗಿಸಲು ಬೆಂಗಳೂರಲ್ಲಿ ಖಡಕ್ ರೂಲ್ಸ್.. ಎಲ್ಲೆಲ್ಲಿ ವಿಸರ್ಜನೆಗೆ ಅವಕಾಶ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ