/newsfirstlive-kannada/media/media_files/2025/09/08/mnd_ganesha_lady-2025-09-08-11-34-01.jpg)
ಮಂಡ್ಯ: ಮದ್ದೂರು ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಸ್ಥಳದಲ್ಲಿ ಪೊಲೀಸರು ಲಘು ಲಾಠಿ ಚಾರ್ಜ್ ಮಾಡಿದ್ದಾರೆ. ಈ ವೇಳೆ ಯುವತಿಯೊಬ್ಬರ ಮೇಲೆ ಪೊಲೀಸ್ ಕಾನ್ಸ್ಟೆಬಲ್ ಒಬ್ಬ ಲಾಠಿ ತೆಗೆದುಕೊಂಡು ಬಲವಾಗಿ ಹೊಡೆದಿದ್ದಾನೆ.
ಮದ್ದೂರಿನಲ್ಲಿ ಗಣೇಶ ವಿಸರ್ಜನಾ ಗಲಾಟೆಗೆ ಸಂಬಂಧಿಸಿದಂತೆ ಮಹಿಳೆಯರು ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಜೈಶ್ರೀರಾಮ ಎಂದು ಕೂಗುತ್ತಿದ್ದರು. ಬಿಜೆಪಿ, ಹಿಂದೂ ಸಂಘಟನೆಗಳ ಯುವಕ, ಯುವತಿಯರು ಪ್ರತಿಭಟನೆಯಲ್ಲಿ ಭಾಗಿದ್ದರು. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆದಿದೆ. ಈ ವಾಗ್ವಾದ ತೀವ್ರಗೊಂಡಿದ್ದರಿಂದ ಪೊಲೀಸರು ಲಾಠಿ ಬೀಸಿದ್ದಾರೆ.
ಜನರು ಓಡಿ ಹೋಗುತ್ತಿದ್ದರೂ ಬಿಡದ ಪೊಲೀಸರು ಅಟ್ಟಾಡಿಸಿಕೊಂಡು ಹೋಗಿ ಮನ ಬಂದಂತೆ ಲಾಠಿ ತೆಗೆದುಕೊಂಡು ಹೊಡೆದಿದ್ದಾರೆ. ಇದು ಅಲ್ಲದೇ ಪ್ರತಿಭಟನೆಗೆ ಬಂದಿದ್ದ ಯುವತಿಯೊಬ್ಬರ ಮೇಲೆ ಪುರುಷ ಕಾನ್ಸ್ಟೆಬಲ್ ಲಾಠಿ ತೆಗೆದುಕೊಂಡು ಹೊಡೆದಿದ್ದಾನೆ. ಯುವತಿ ಓಡಿ ಹೋಗುತ್ತಿದ್ದರೂ ಬಿಡದ ಕಾನ್ಸ್ಟೆಬಲ್ ಆಕೆಯ ಹಿಂದೆ ಓಡಿ ಹೋಗಿ ಹಿಂಭಾಗಕ್ಕೆ ಹೊಡೆದಿದ್ದಾನೆ.
ಇದನ್ನೂ ಓದಿ: ಗಣೇಶ ವಿಸರ್ಜನಾ ಮೆರವಣಿಗೆ, ಕಲ್ಲು ತೂರಾಟ ಕೇಸ್; 21ಕ್ಕೂ ಹೆಚ್ಚು ಯುವಕರು ವಶಕ್ಕೆ
ಲಾಠಿಯ ಏಟಿಗೆ ಭಯಬಿದ್ದ ಯುವತಿ ರಸ್ತೆ ಮೇಲೆಯೇ ಕಿರುಚಾಡಿ, ಗೋಗರೆದಿದ್ದಾಳೆ. ರಸ್ತೆ ಮೇಲೆ ಕುಳಿತು ಹಣೆ..ಹಣೆ ಬಡಿದುಕೊಂಡು ಪೊಲೀಸರಿಗೆ ಇಡೀ ಶಾಪ ಹಾಕುತ್ತ ಕಣ್ಣೀರು ಹಾಕಿದ್ದಾಳೆ. ಸದ್ಯ ಮದ್ದೂರಿನಲ್ಲಿ ಉದ್ವಿಗ್ನ ಪರಿಸ್ಥಿತಿ ಇದ್ದು ಪ್ರತಿಭಟನೆ ಮುಂದುವರೆದಿದೆ. ಜೊತೆಗೆ ಪೊಲೀಸರು ಕೂಡ ಫುಲ್ ಅಲರ್ಟ್ ಆಗಿ ಸ್ಥಳದಲ್ಲಿ ನಿಗಾವಹಿಸಿದ್ದಾರೆ.
ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 21ಕ್ಕೂ ಅಧಿಕ ಯುವಕರನ್ನ ವಶಕ್ಕೆ ತೆಗೆದುಕೊಂಡಿದ್ದಾರೆ. ಅನ್ಯಧರ್ಮಿಯ ಯುವಕರು ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆಸಿದ್ದಾರೆ. ತಕ್ಷಣ ಅಲರ್ಟ್ ಅದ ಮದ್ದೂರು ಪೊಲೀಸರು ಮಧ್ಯರಾತ್ರಿಯೇ ಕಲ್ಲು ತೂರಿದ 21ಕ್ಕೂ ಅಧಿಕ ಯುವಕರನ್ನ ವಶಕ್ಕೆ ಪಡೆದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ