/newsfirstlive-kannada/media/media_files/2026/02/14/swamiji-badti-2026-02-14-14-32-42.jpg)
ಬೆಂಗಳೂರು: ಸರ್ಕಾರಿ ಅಧಿಕಾರಿಗಳು ಕಡತಗಳನ್ನು ವಿಲೇವಾರಿ ಮಾಡುವ ಭರದಲ್ಲಿ ಎಂತಹ ಎಡವಟ್ಟುಗಳನ್ನು ಮಾಡುತ್ತಾರೆ ಎಂಬುದಕ್ಕೆ ಇದೊಂದು ತಾಜಾ ಹಾಗೂ ವಿಚಿತ್ರ ಉದಾಹರಣೆ. ಸ್ವಯಂ ನಿವೃತ್ತಿ ಪಡೆದು, ಸನ್ಯಾಸ ಸ್ವೀಕರಿಸಿ ಪೀಠಾಧಿಪತಿಯಾಗಿರುವ ಸ್ವಾಮೀಜಿಯೊಬ್ಬರಿಗೆ ರಾಜ್ಯ ಸರ್ಕಾರ ಬಡ್ತಿ (Promotion) ನೀಡಿ ಆದೇಶ ಹೊರಡಿಸಿದೆ!
ಸರ್ಕಾರದ ಈ ಆದೇಶ ಈಗ ಸಾಮಾಜಿಕ ಜಾಲತಾಣಗಳಲ್ಲಿ ನಗೆಪಾಟಲಿಗೆ ಈಡಾಗಿದೆ.
ಏನಿದು ಎಡವಟ್ಟು?
ರಾಜ್ಯ ಸರ್ಕಾರ ಇತ್ತೀಚೆಗೆ 20 ಕೆ.ಎ.ಎಸ್ (KAS) ಅಧಿಕಾರಿಗಳಿಗೆ ಬಡ್ತಿ ನೀಡಿ ಆದೇಶ ಹೊರಡಿಸಿದೆ. ಸರ್ಕಾರದ ಅಧೀನ ಕಾರ್ಯದರ್ಶಿ ಕೇಶವ್ ಪ್ರಸಾದ್ ಅವರು ಹೊರಡಿಸಿರುವ ಈ ಪಟ್ಟಿಯಲ್ಲಿ, ಮಂಡ್ಯದ ಮಾಜಿ ಅಪರ ಜಿಲ್ಲಾಧಿಕಾರಿ (ADC) ಹೆಚ್.ಎಲ್.ನಾಗರಾಜ್ ಅವರ ಹೆಸರೂ ಸೇರಿದೆ.
ಇದನ್ನೂ ಓದಿ: ಭಾರತೀಯ ಸೇನೆಯಿಂದ ಅಗ್ನಿವೀರ್ 2026ರ ನೇಮಕಾತಿಗೆ ಅರ್ಜಿ ಆಹ್ವಾನ: 25 ಸಾವಿರ ಹುದ್ದೆ ಭರ್ತಿಗೆ ನಿರ್ಧಾರ
ಆದರೆ ಹೆಚ್.ಎಲ್.ನಾಗರಾಜ್ ಅವರು ಈಗಾಗಲೇ ಸರ್ಕಾರಿ ಸೇವೆಗೆ ಸ್ವಯಂ ನಿವೃತ್ತಿ (VRS) ಘೋಷಿಸಿ, ಸನ್ಯಾಸತ್ವ ಸ್ವೀಕರಿಸಿ ಸ್ವಾಮೀಜಿಯಾಗಿದ್ದಾರೆ. ಆದರೂ ಅಧಿಕಾರಿಗಳು ಕಣ್ಮುಚ್ಚಿ ಅವರನ್ನು ‘ಸ್ಥಳ ನಿರೀಕ್ಷಣೆಯಲ್ಲಿರುವ ಅಧಿಕಾರಿ’ (Waiting for posting) ಎಂದು ನಮೂದಿಸಿ ಬಡ್ತಿ ಪಟ್ಟಿಯಲ್ಲಿ ಸೇರಿಸಿದ್ದಾರೆ.
ಅಧಿಕಾರಿಯಾಗಿದ್ದವರು ಈಗ ಪೀಠಾಧಿಪತಿ!
ಹೆಚ್.ಎಲ್. ನಾಗರಾಜ್ ಅವರು ಹಿಂದೆ ಮಂಡ್ಯದಲ್ಲಿ ಅಪರ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಬಳಿಕ ಲೌಕಿಕ ಬದುಕಿಗೆ ವಿದಾಯ ಹೇಳಿ, ಆದಿಚುಂಚನಗಿರಿ ಮಠದ ಡಾ. ನಿರ್ಮಲಾನಂದನಾಥ ಶ್ರೀಗಳ ಸಮ್ಮುಖದಲ್ಲಿ ದೀಕ್ಷೆ ಪಡೆದಿದ್ದರು. ಸದ್ಯ ಅವರು ‘ವಿಶ್ವ ಒಕ್ಕಲಿಗ ಮಹಾಸಂಸ್ಥಾನ’ದ ಪೀಠಾಧಿಪತಿಯಾಗಿ 'ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ' ಎಂಬ ಹೆಸರಿನಲ್ಲಿ ಧಾರ್ಮಿಕ ಕೈಂಕರ್ಯದಲ್ಲಿ ತೊಡಗಿದ್ದಾರೆ.
ದಾಖಲೆ ಪರಿಶೀಲಿಸದ ಅಧಿಕಾರಿಗಳು
ಒಬ್ಬ ಕೆ.ಎ.ಎಸ್ ಅಧಿಕಾರಿ ಸೇವೆಯಿಂದ ನಿವೃತ್ತಿ ಪಡೆದು, ಸ್ವಾಮೀಜಿಯಾಗಿ ಬದಲಾಗಿರುವುದು ರಾಜ್ಯಮಟ್ಟದಲ್ಲಿ ಸುದ್ದಿಯಾಗಿತ್ತು. ಆದರೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ (DPAR) ಅಧಿಕಾರಿಗಳು ದಾಖಲೆಗಳನ್ನು ಸರಿಯಾಗಿ ಪರಿಶೀಲಿಸದೆ, ಸ್ವಾಮೀಜಿಯಾದವರಿಗೂ ಪ್ರಮೋಷನ್ ನೀಡಿರುವುದು ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಕನ್ನಡಿ ಹಿಡಿದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us