/newsfirstlive-kannada/media/media_files/2025/10/19/mys-neerupalu-2025-10-19-10-55-27.jpg)
ಮೈಸೂರು: ಕೆರೆಗೆ ಈಜಲು ಹೋಗಿದ್ದ ಇಬ್ಬರು ಮಕ್ಕಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಈ ದಾರುಣ ಘಟನೆ ಮೈಸೂರಿನ ನಂಜನಗೂಡು ತಾಲೂಕಿನ ಬದನವಾಳು ಗ್ರಾಮದಲ್ಲಿ ನಡೆದಿದೆ. ಮೋಹಿತ್ (9) ಮತ್ತು ಆರ್ಯ (9) ಮೃತ ದುರ್ದೈವಿಗಳಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.
ಆಗಿದ್ದೇನು?
ಮೃತ ಬಾಲಕರಾದ ಮೋಹಿತ್​​ ಮತ್ತು ಆರ್ಯ ದಸರಾ ರಜೆ ಹಿನ್ನಲೆ ಬದನವಾಳು ಗ್ರಾಮದಲ್ಲಿರುವ ಕೆರೆಗೆ ಈಜಲು ಹೋಗಿದ್ದರು. ಸೈಕಲ್​ನಲ್ಲಿ ತೆರಳಿದ್ದ ಇಬ್ಬರು ಬಾಲಕರು ಕೆರೆ ಬಳಿ ಬಟ್ಟೆಯನ್ನ ಬಿಚ್ಚಿ ಈಜಲು ಇಳಿದಿದ್ದಾರೆ. ಆದ್ರೆ ಕೆರೆಯ ಸುಳಿಗೆ ಸಿಲುಕಿ ಮೇಲೆ ಬರಲಾಗದೆ ಇಬ್ಬರು ಸಾವನ್ನಪ್ಪಿದ್ದಾರೆ.
ಮೋಹಿತ್ ಎಂಬ ಬಾಲಕ ಮೂರನೇ ತರಗತಿ ಹಾಗೂ ಆರ್ಯ ನಾಲ್ಕನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಸದ್ಯ ಸ್ಥಳಕ್ಕೆ ಕವಲಂದೆ ಪೊಲೀಸ್ ಪಿಎಸ್ಐ ಬಸವರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.