/newsfirstlive-kannada/media/media_files/2025/08/07/kr_market-2025-08-07-08-10-25.jpg)
ಬೆಂಗಳೂರು: ಶ್ರಾವಣದಲ್ಲಿ ಬರುವಂತಹ ವರಮಹಾಲಕ್ಷ್ಮಿ ಹಬ್ಬವನ್ನು ಸಂಭ್ರಮ, ಸಡಗರದಿಂದ ಎಲ್ಲರೂ ಆಚರಿಸುತ್ತಾರೆ. ಮನೆಯಲ್ಲಿ ದೇವರಿಗೆ ವಿಶೇಷ ಪೂಜೆ ನೆರವೇರಿಸಿ ತಮ್ಮ ಇಷ್ಟಾರ್ಥಗಳನ್ನು ಪೂರೈಸಲಿ ಎಂದು ಪ್ರಾರ್ಥಿಸುತ್ತಾರೆ. ಸದ್ಯ ನಾಳೆ ವರಮಹಾಲಕ್ಷ್ಮಿ ಹಬ್ಬ ಇರುವುದರಿಂದ ಮಾರ್ಕೆಟ್ನಲ್ಲಿ ಖರೀದಿ ಭರಾಟೆ ಜೋರು ನಡೆದಿದೆ. ಆದರೆ ಇದಕ್ಕೆ ಟ್ರಾಫಿಕ್ ಜಾಮ್ ಬಿಸಿ ತಟ್ಟಿದೆ.
ನಾಳೆ ವರಮಹಾಲಕ್ಷ್ಮಿ ಹಬ್ಬ ಹಿನ್ನೆಲೆಯಲ್ಲಿ ಮಾರ್ಕೆಟ್ಗೆ ಭಾರೀ ಪ್ರಮಾಣದಲ್ಲಿ ವ್ಯಾಪಾರಸ್ಥರು ಲಗ್ಗೆ ಇಟ್ಟಿದ್ದಾರೆ. ಇದರಿಂದ ಮಾರ್ಕೆಟ್ ಸುತ್ತಮುತ್ತ ಎಲ್ಲಿ ನೋಡಿದರೂ ಟ್ರಾಫಿಕ್ ಜಾಮ್..ಜಾಮ್ ಆಗಿದೆ. ಕೇವಲ ಮಾರ್ಕೆಟ್ನಲ್ಲಿ ಮಾತ್ರ ಟ್ರಾಫಿಕ್ ಜಾಮ್ ಆಗಿಲ್ಲ. ಕೆಆರ್ ಸರ್ಕಲ್ನಿಂದ ಕಾರ್ಪೋರೇಷನ್, ಟೌನ್ ಹಾಲ್, ಎಸ್ಪಿ ರೋಡ್, ಮಾರ್ಕೆಟ್ವರೆಗೆ ಟ್ರಾಫಿಕ್ ಜಾಮ್ ಆಗಿದೆ. ಕಂಗೇರಿ ಕಡೆಯಿಂದ ಬರುವ ರಸ್ತೆಯೂ ಟ್ರಾಫಿಕ್ನಿಂದ ಕೂಡಿತ್ತು.
ರಾತ್ರಿ ಮಳೆ ಬಂದಿತ್ತು. ಜಡಿ ಮಳೆ ಬೆಳಗಿನ ಜಾವ ಕೂಡ ಹಾಗೆ ಇತ್ತು. ಆದರೂ ಜನರು ದೊಡ್ಡ ಸಂಖ್ಯೆಯಲ್ಲಿ ಮಾರ್ಕೆಟ್ಗೆ ಲಗ್ಗೆ ಇಟ್ಟಿದ್ದಾರೆ. ದೇವರಿಗೆ ಬೇಕಾದ ವಸ್ತುಗಳು, ಹೂವು, ಹಣ್ಣು, ತರಕಾರಿ, ಬಾಳೆ ಎಲೆ, ಬಾಳೆ ದಿಂಬು, ಸಿಹಿ ತಿನಿಸು ಹಾಗೂ ಕೆಲವು ವಸ್ತುಗಳನ್ನು ಖರೀದಿ ಮಾಡಲು ಜನರು ಮುಗಿ ಬಿದ್ದಿದ್ದಾರೆ. ಇದರಿಂದ ಬೆಳ್ಳಂಬೆಳಗ್ಗೆಯೇ ಎಲ್ಲರಿಗೂ ಟ್ರಾಫಿಕ್ ಬಿಸಿ ತಟ್ಟಿದೆ. ಇನ್ನು ಎಂದಿನಂತೆ ಕೆಲಸಕ್ಕೆ ಹಾಜರಾಗುವವರ ಮೇಲೆಯೂ ಈ ಟ್ರಾಫಿಕ್ ಪರಿಣಾಮ ಬೀರಿದೆ.
ಇದನ್ನು ಓದಿ: RCB ಯಶ್ ದಯಾಳ್ ಪ್ರಕರಣದಲ್ಲಿ ಹೈಕೋರ್ಟ್ ಮಹತ್ವದ ನಿರ್ಧಾರ.. ಬೌಲರ್ಗೆ ಢವಢವ!
ಸವಾರರು, ಸಾರ್ವಜನಿಕರು ಟ್ರಾಫಿಕ್ನಿಂದ ಸಾಕಷ್ಟು ಸಮಸ್ಯೆ ಅನುಭವಿಸಿದರು. ಅದರಲ್ಲಿ ಜಡಿ ಮಳೆ ಬರುತ್ತಿದ್ದರಿಂದ ಬೈಕ್ ಸವಾರರು ಮಳೆಯಲ್ಲೇ ಹಾಗೆ ನಿಂತಿದ್ದು ಕಂಡು ಬಂದಿತು. ಬಿಎಂಟಿಸಿ ಬಸ್ಗಳಂತೂ ಸಾಲುಗಟ್ಟಿದ್ದವು. ಬಸ್ ಪ್ರಯಾಣಿಕರು ಬಸ್ ನಿಂತಲ್ಲೇ ಇಳಿದು ಮಾರ್ಕೆಟ್ ಕಡೆಗೆ ನಡೆದುಕೊಂಡೇ ಹೋದರು. ಈ ಎಲ್ಲದರ ನಡುವೆ ಮಾರ್ಕೆಟ್ನಲ್ಲಿ ಯಾವುದೇ ವಸ್ತು ಮುಟ್ಟಲು ಹೋದರೆ ಕೈ ಸುಡುವಂತೆ ಆಗಿದೆ. ಅಂದರೆ ಹಬ್ಬದ ಹಿನ್ನೆಲೆಯಲ್ಲಿ ಹೂವು, ಹಣ್ಣು ಸೇರಿ ಪ್ರತಿ ವಸ್ತುವಿನ ಬೆಲೆ ದುಪ್ಪಟ್ಟು ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ