/newsfirstlive-kannada/media/media_files/2025/08/08/rahul_gandhi_bng-2025-08-08-13-14-33.jpg)
ಬೆಂಗಳೂರು: ಒಬ್ಬ ಮತದಾರ ಕರ್ನಾಟಕ ಮಾತ್ರವಲ್ಲ, ಮಹಾರಾಷ್ಟ್ರ, ಉತ್ತರ ಪ್ರದೇಶ ಸೇರಿದಂತೆ ಬೇರೆ ಬೇರೆ ಸ್ಥಳಗಳಿಗೆ ಹೋಗಿ ವೋಟ್ ಹಾಕಿದ್ದಾನೆ. ನಮಗೆ ಎಲೆಕ್ಟ್ರಾನಿಕ್ ಡಾಟಾ ಸಿಕ್ಕರೇ, ಕಳ್ಳಮತಗಳಿಂದ ಪ್ರಧಾನಿ ಆಗಿರುವುದನ್ನು ನಾವು ನಿರೂಪಿಸುತ್ತೇವೆ ಎಂದು ರಾಹುಲ್ ಗಾಂಧಿ ಅವರು ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಮಹದೇವಪುರ ಕ್ಷೇತ್ರದಲ್ಲಿ ಆರುವರೆ ಲಕ್ಷ ಮತಗಳಿದ್ದು 1 ಲಕ್ಷ 250 ಮತಗಳು ಕಳ್ಳತನವಾಗಿವೆ. ಆರು ಮತಗಳಲ್ಲಿ ಒಂದು ಮತವನ್ನ ಕಳ್ಳತನ ಮಾಡಿದ್ದಾರೆ. ಒಬ್ಬ ವೋಟರ್ ಅನೇಕ ಬಾರಿ ಮತದಾನ ಮಾಡಿದ್ದಾನೆ. ನಾಲ್ಕು ನಾಲ್ಕು, ಐದು ಐದು ವೋಟಿಂಗ್ ಬೂತ್ಗೆ ಹೋಗಿ ಮತ ಹಾಕಿ ಬಂದಿದ್ದಾನೆ. ನಕಲಿ ಸ್ಥಳಗಳಲ್ಲಿ ಇದ್ದಂತಹ 40 ಸಾವಿರ ವೋಟರ್ಸ್ ಇದ್ದಾರೆ. ಒಂದೇ ಒಂದು ಕೊಠಡಿಯಲ್ಲಿ 40, 50, 80 ಜನ ಇದ್ದಾರೆ. ಆದರೆ ನಾವು ಆಸ್ಥಳಕ್ಕೆ ಹೋದಾಗ ಅಲ್ಲಿ ಯಾರು ಇಲ್ಲ. ಅಲ್ಲಿ ಹೋಗಿ ನೋಡಿದರೆ ಅದು ಬಿಜೆಪಿ ನಾಯಕನ ಮನೆ ಆಗಿತ್ತು ಎಂದು ಹೇಳಿದ್ದಾರೆ.
32,000 ಪ್ರಕರಣದಲ್ಲಿ ನಮೂನೆ 6 ರಲ್ಲಿ ಅವ್ಯವಹಾರ ಕಂಡಿದ್ದೇವೆ. ಹೊಸ ಮತದಾರರಿಗೆ ಇರುವಂತಹದ್ದನ್ನ 90, 85, 80, 70 ವರ್ಷದವರಿಗೆ ನೀಡಲಾಗಿದೆ. ಈ ಮಾದರಿಯಲ್ಲಿ ಬಿಜೆಪಿ, ಚುನಾವಣಾ ಆಯೋಗ ಮತದಾನ ಕಳ್ಳತನ ಮಾಡಿದ್ದಾರೆ. ನಕಲಿ ಮತದಾರರ ಪಟ್ಟಿಯಲ್ಲಿ ಒಬ್ಬ ಮತದಾರನು ಕರ್ನಾಟಕ ಮತ ಹಾಕಿ, ಮಹಾರಾಷ್ಟ್ರ, ಉತ್ತರ ಪ್ರದೇಶ ಸೇರಿದಂತೆ ಬೇರೆ ಬೇರೆ ಸ್ಥಳಗಳಲ್ಲಿ ವೋಟ್ ಹಾಕುತ್ತಾರೆ ಎಂದು ರಾಹುಲ್ ಗಾಂಧಿ ಆರೋಪ ಮಾಡಿದ್ದಾರೆ.
ನನ್ನ ಬಳಿಯಿಂದ ಚುನಾವಣಾ ಆಯೋಗ ಪ್ರಮಾಣ ಪತ್ರ ಕೇಳುತ್ತಿದ್ದಾರೆ. ಆದರೆ ನಾನು ಸಂಸತ್ನಲ್ಲಿ ಸಂವಿಧಾನದ ಮೇಲೆ ಪ್ರಮಾಣ ಮಾಡಿದ್ದಾನೆ. ಚುನಾವಣಾ ಆಯೋಗದ ವೆಬ್ಸೈಟ್ನಲ್ಲಿ ಪ್ರಶ್ನೆ ಮಾಡಲು ಶುರು ಮಾಡಿದ್ರೆ ಆಯೋಗದ ಅಧಿಕಾರಿಗಳು ವೆಬ್ಸೈಟ್ ಅನ್ನೇ ಬ್ಯಾನ್ ಮಾಡಿದ್ದಾರೆ. ದೇಶದ ಪ್ರಜೆಗಳು ಪ್ರಶ್ನೆಗಳು ಕೇಳಲು ಶುರು ಮಾಡಿದ್ರೆ ಅವರಿಗೆ ಭಯವಾಗಿ ವೆಬ್ಸೈಟ್ ಅನ್ನು ಬ್ಯಾನ್ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಬಿಜೆಪಿ ಪರ ಚುನಾವಣಾ ಆಯೋಗ ಇದೆ
ಮತಗಟ್ಟೆಯಲ್ಲಿ ರೆಕಾರ್ಡ್ ಮಾಡಿದ ವಿಡಿಯೋವನ್ನು, ಮತ ಗಣತಿ, ಡಿಜಿಟಲ್ ದಾಖಲೆಗಳನ್ನು ನಮಗೆ ನೀಡಿ. ಕೇವಲ ಕರ್ನಾಟಕ ಅಲ್ಲ, ಇಡೀ ದೇಶದಲ್ಲಿ ಮತ ಕಳ್ಳತನ ಆಗಿದೆ. ಚುನಾವಣಾ ಆಯೋಗ ಬಿಜೆಪಿ ಪರವಾಗಿ ನಿಂತಿದೆ. ಸಂವಿಧಾನದ ಧ್ಯೇಯವನ್ನು ಉಲ್ಲಂಘಿಸಲಾಗಿದೆ. ಒಬ್ಬರಿಗೆ ಒಂದು ಮತ ಎನ್ನುವುದನ್ನು ಇಲ್ಲಿ ಹೇಗೆಂದರೆ ಹಾಗೇ ಬಳಸಲಾಗಿದೆ. ಇವತ್ತು ರಾಜ್ಯದಲ್ಲಿ ಒಂದು ಕ್ಷೇತ್ರದಲ್ಲಿ ಆಯ್ಕೆ ಮಾಡಿ ಪರಿಶೀಲನೆ ಮಾಡಿ ಇದೆಲ್ಲಾ ಮಾಹಿತಿ ಕಲೆ ಹಾಕಿದ್ದೇವೆ ಎಂದು ಹೇಳಿದ್ದಾರೆ.
ನಾನು ಅವರಿಗೆಲ್ಲಾ ಒಂದು ಮಾತು ಹೇಳುತ್ತೇನೆ. ಸಂವಿಧಾನದ ಮೇಲೆ ಪ್ರಹಾರ ಮಾಡಿ ಯಶಸ್ಸು ಕಾಣಲು ಪ್ರತಿ ಬಾರಿ ಆಗಲ್ಲ. ಆಲೋಚನೆ ಮಾಡಬೇಕು. ಎಚ್ಚರಿಕೆ ಕೊಡುತ್ತೇನೆ. ನಿಮ್ಮನ್ನು ಹಿಡಿಯಲು ಸಮಯ ಬೇಕಾಗುತ್ತದೆ. ಒಬ್ಬಬ್ಬೊರನ್ನ ಹುಡುಕಿ ನಿಮಗೆ ಪಾಠ ಕಲಿಸುತ್ತೇವೆ. ನೀವು ಪವಿತ್ರ ಸಂವಿಧಾನದ ಮೇಲೆ ಹಲ್ಲೆ ಮಾಡಿದ್ರೆ ನಾವು, ನಿಮ್ಮ ಮೇಲೆ ಹಲ್ಲೆ ಮಾಡುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಡ್ರೈವರ್ ಬಾಬು ಕೇಸ್; ಡಾ.ಕೆ ಸುಧಾಕರ್ಗೆ ನೈತಿಕತೆ ಇದ್ರೆ ರಾಜೀನಾಮೆ ಕೊಡಲಿ- ಶಾಸಕ ಪ್ರದೀಪ್ ಈಶ್ವರ್
25 ಮತಗಳಿಂದ ಪ್ರಧಾನಿ ಆಗಿದ್ದಾರೆ
ನರೇಂದ್ರ ಮೋದಿ ಅವರು 25 ಸ್ಥಾನಗಳಿಂದ ಪ್ರಧಾನಿ ಆಗಿದ್ದಾರೆ. ನಾನು ಒಂದು ಸೀಟ್ನಲ್ಲಿ ಕಳ್ಳತನ ಆಗಿದೆ ಎಂದು ತೋರಿಸಿದ್ದೇವೆ. 25 ಸ್ಥಾನಗಳನ್ನು 34 ಸಾವಿರದ ಕಡಿಮೆ ಅಂತರದಲ್ಲಿ ಜಯ ಸಾಧಿಸಿದ್ದಾರೆ. ನಮಗೆ ಎಲೆಕ್ಟ್ರಾನಿಕ್ ಡಾಟಾ ಸಿಕ್ಕರೇ, ಭಾರತದ ಪ್ರಧಾನಮಂತ್ರಿ ಮತಗಳ್ಳತನದಿಂದ ಪ್ರಧಾನಿ ಆಗಿದ್ದಾರೆ ಎನ್ನುವುದನ್ನು ಸಾಬೀತು ಮಾಡುತ್ತೇವೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಆರೋಪ ಮಾಡಿದ್ದಾರೆ.
ಇಡೀ ದೇಶವೇ ಈ ಸವಾಲು ಅನ್ನು ಕೇಳಲೇಬೇಕು. ಚುನಾವಣಾ ಆಯೋಗ ಡಿಜಿಟಲ್ ರೆಕಾರ್ಡ್, ಎಲೆಕ್ಟ್ರಾನಿಕ್ ಡಾಟಾ, ವಿಡಿಯೋಗ್ರಾಫಿಯನ್ನು ಯಾಕೆ ಕೊಡುತ್ತಿಲ್ಲ. ವಿರೋಧ ಪಕ್ಷದ ನಾಯಕನಾಗಿದ್ದು ಒಬ್ಬನೇ ಮಾತನಾಡುತ್ತಿದ್ದೇನೆ. ನನ್ನ ಹಿಂದೆ ಜನರು, ವಿರೋಧ ಪಕ್ಷದವರು ಇದ್ದಾರೆ. ಚುನಾವಣಾ ಆಯೋಗ ಈ ಕೂಡಲೇ ಈ ಮಾಹಿತಿಗಳನ್ನ ಬಹಿರಂಗ ಪಡಿಸಬೇಕು. ಕರ್ನಾಟಕದಲ್ಲಿ ಡಾಟಾವನ್ನು ಪಡೆದಾಗ ಅದು ಕ್ರಿಮಿನಲ್ ರೀತಿಯಲ್ಲಿದೆ. ಈ ಡಾಟಾ ತೆಗೆದುಕೊಳ್ಳಲು ನಮಗೆ 6 ತಿಂಗಳು ಬೇಕಾಯಿತು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ