/newsfirstlive-kannada/media/media_files/2025/10/05/mogalli_ganesh-2025-10-05-16-29-23.jpg)
ವಿಜಯನಗರ: ಖ್ಯಾತ ಕಥೆಗಾರ, ಹಂಪಿ ಕನ್ನಡ ವಿಶ್ವ ವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಮೊಗಳ್ಳಿ ಗಣೇಶ್ ನಿಧನ ಹೊಂದಿದ್ದಾರೆ. ಅನಾರೋಗ್ಯದಿಂದ ಇಂದು ಬೆಳಗಿನ ಜಾವ ಮೊಗಳ್ಳಿ ಗಣೇಶ್ ಅವರು ಕೊನೆಯುಸಿರೆಳೆದಿದ್ದಾರೆ.
ರಾಮನಗರದ ಚನ್ನಪಟ್ಟಣ ತಾಲೂಕಿನ ಮೊಗಳ್ಳಿ ಗ್ರಾಮದ ಮೊಗಳ್ಳಿ ಗಣೇಶ್ ಅವರು ಅನಾರೋಗ್ಯದಿಂದ ಇಂದು ಬೆಳಗಿನ ಜಾವ ನಿಧನರಾಗಿದ್ದಾರೆ. ಹುಟ್ಟೂರು ಮೊಗಳ್ಳಿಯಲ್ಲಿ ಅವರ ಅಂತ್ಯಕ್ರಿಯೆ ನೆರವೇರಲಿದೆ. ಹಂಪಿ ಕನ್ನಡ ವಿವಿಗೆ 1996ರಲ್ಲಿ ಸಂಶೋಧನಾ ಸಹಾಯಕರಾಗಿ ಗಣೇಶ್ ಮೊಗಳ್ಳಿ ಸೇವೆ ಸಲ್ಲಿಸಿದರು. 1997 ಸಹಾಯಕ ಪ್ರಾಧ್ಯಾಪಕರಾಗಿ ವೃತ್ತಿ ಪ್ರಾರಂಭಿಸಿ, 2023ರ ಬಳಿಕ ನಿವೃತ್ತಿ ಹೊಂದಿದರು.
ಮೊಗಳ್ಳಿ ಗಣೇಶ್​ ಅವರು ವಿಜಯನಗರದ ಹೊಸಪೇಟೆ ತಾಲೂಕಿನ ಹಂಪಿ ಕನ್ನಡದ ವಿವಿಯಲ್ಲಿ 28 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಕಥೆಗಳಲ್ಲದೇ 10 ಸಂಶೋಧನಾ ಯೋಜನೆಗಳ ಭಾಗವಾಗಿ ಕೃತಿಗಳನ್ನು ರಚನೆ ಮಾಡಿದ್ದಾರೆ. ಹೀಗಾಗಿಯೇ ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಿಗೆ ಮುಖ್ಯ ಅತಿಥಿಯಾಗಿ ಹೋಗಿರುವುದು ಇದೆ.
ವಿಶ್ವವಿದ್ಯಾಲಯದಲ್ಲಿ ಜಾನಪದ ಅಧ್ಯಯನ ವಿಭಾಗದ ಮುಖ್ಯಸ್ಥರಾಗಿದ್ದರು. ಸದ್ಯ ಹಾವೇರಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಸಿಂಡಿಕೇಟ್​ ಸದಸ್ಯರಾಗಿದ್ದರು. ಸೂರ್ಯನನ್ನು ಬಚ್ಚಿಡಬಹುದೇ ಇದು ಅವರ ಕವನ ಸಂಕಲನವಾಗಿದೆ. ಇದು ಅಲ್ಲದೇ ಬುಗುರಿ, ಮಣ್ಣು, ಅತ್ತೆ, ದೇವರ ದಾರಿ ಇವೆಲ್ಲ ಅವರ ಪ್ರಮುಖ ಕಥಾಸಂಕಲನಗಳು ಆಗಿವೆ.
1963 ಜುಲೈ 1 ರಂದು ರಾಮನಗರದ ಚನ್ನಪಟ್ಟಣದ ಸಂತೆಮೊಗೇನ ಹಳ್ಳಿಯಲ್ಲಿ ಗಣೇಶ್ ಮೊಗಳ್ಳಿ ಜನಿಸಿದ್ದರು. ಮುಂದಿ ಇವರು ಉನ್ನತ ವ್ಯಾಸಂಗದಲ್ಲಿ ಅರ್ಥಶಾಸ್ತ್ರ ಹಾಗೂ ಜಾನಪದವನ್ನು ಓದಿದರು. ಹೀಗಾಗಿ ಸಾಹಿತ್ಯ ಕಡೆಗೆ ಹೆಚ್ಚಿನ ಪ್ರೀತಿ ಹರಿಯಿತು. ಇದರಿಂದಲೇ ಬುಗುರಿ, ಒಂದು ಹಳೆಯ ಚಡ್ಡಿ, ನನ್ನಜ್ಜನಿಗೊಂದಾಸೆಯಿತ್ತು ಇಂತಹ ಕಥೆಗಳು ಕನ್ನಡದ ಅತ್ಯುತ್ತಮ ಕಥೆಗಳೆಂದು ಗುರುತಿಸಲ್ಪಟ್ಟಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ