/newsfirstlive-kannada/media/media_files/2025/09/30/kaveri-2025-09-30-20-44-48.jpg)
ಮಂಡ್ಯ: ಕೃಷ್ಣರಾಜ ಸಾಗರದ ಬೃಂದಾವನದಲ್ಲಿ ಕಾವೇರಿ ಆರತಿ ಯಶಸ್ವಿಯಾಗಿ ಸಂಪನ್ನಗೊಂಡಿದೆ. ಗೋಧೂಳಿ ಮುಹೂರ್ತದಲ್ಲಿ ಕಾವೇರಿ ನದಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾವೇರಿ ಆರತಿ ಕಾರ್ಯಕ್ರಮಕ್ಕೆ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ವಿದ್ಯುಕ್ತ ಚಾಲನೆ ನೀಡಿದ್ದರು. 5 ದಿನಗಳ ಕಾಲ ನಡೆದ ಕಾವೇರಿ ಆರತಿಗೆ ಇಂದು ತೆರೆ ಬಿದ್ದಿದೆ.
ಕಾವೇರಿ ಆರತಿ ಸಮಾರೋಪ ಕಾರ್ಯಕ್ರಮದಲ್ಲಿ ಗೌರಿಗದ್ದೆಯ ವಿನಯ್ ಗುರೂಜಿ, ಪ್ರೋ, ಕೃಷ್ಣೇಗೌಡ, ಶಾಸಕ ರವಿಕುಮಾರ್ ಗಣಿಗ, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಜಿಲ್ಲಾಧಿಕಾರಿ ಕುಮಾರ್ ಸೇರಿ ಹಲವರು ಭಾಗಿಯಾಗಿದ್ದರು.
ಡಿಸಿಎಂ ಡಿ.ಕೆ.ಶಿವಕುಮಾರ್ ಕನಸಿನ ಕಾವೇರಿ ಆರತಿಯನ್ನು ಇದೇ ಮೊದಲ ಬಾರಿಗೆ ದಸರಾ ಹಿನ್ನೆಲೆಯಲ್ಲಿ ಆಯೋಜನೆ ಮಾಡಲಾಗಿತ್ತು. ಮೊದಲಿಗೆ ದಕ್ಷಿಣ ಶೈಲಿಯಲ್ಲಿ ಸ್ಥಳಿಯ ವೈದಿಕರಿಂದ ಕಾವೇರಿ ಆರತಿ ನಡೆಯಿತು. ವಾರಣಾಸಿ ತಂಡದಿಂದ ಗಂಗಾರತಿ ಮಾದರಿಯಲ್ಲಿ ಕಾವೇರಿ ಆರತಿ ಅಮೋಘವಾಗಿ ನಡೆಯಿತು. ಇದಾದ ಬಳಿಕ ಹೇಮಂತ್ ತಂಡದಿಂದ ಸಂಗೀತ ಸಂಜೆ ಇತ್ತು.
ಡಿ.ಕೆ.ಶಿವಕುಮಾರ್ ಅವರ ಕನಸಿನ ಯೋಜನೆಯಾಗಿರುವ ಕಾವೇರಿ ಆರತಿಯನ್ನು ಶಾಶ್ವತವಾಗಿ ವರ್ಷದ 365 ದಿನಗಳೂ ನಡೆಸಲು ಮೊದಲಿಗೆ ತೀರ್ಮಾನ ಮಾಡಲಾಗಿತ್ತು. ಇದಕ್ಕಾಗಿ ಸರ್ಕಾರದಿಂದ 100 ಕೋಟಿ ರೂಪಾಯಿ ಕೂಡ ಬಿಡುಗಡೆ ಮಾಡಲಾಗಿತ್ತು. ಆದ್ರೆ ಈ ಯೋಜನೆ ವಿರುದ್ಧ ರೈತ ಸಂಘದ ಸದಸ್ಯರು ಕೋರ್ಟ್ ಮೊರೆ ಹೋಗಿದ್ದರು. ಇದರಿಂದ ಅಂದುಕೊಂಡಂತೆ ದಸರಾ ವೇಳೆ ತಾತ್ಕಾಲಿಕ ಸ್ಟ್ರಕ್ಚರ್ ನಿರ್ಮಾಣ ಮಾಡಿ ಕಾವೇರಿ ಆರತಿ ನಡೆಸಲಾಯಿತು.
ಸೆಪ್ಟೆಂಬರ್​ 26 ರಂದು ಡಿಸಿಎಂ ಡಿ.ಕೆ ಶಿವಕುಮಾರ್ ಹಾಗೂ ಸಿದ್ದಗಂಗಾ ಮಠದ ಸ್ವಾಮೀಜಿ ಸೇರಿ ಹಲವು ಮಠಾಧಿಪತಿಗಳಿಂದ ಕಾವೇರಿ ಆರತಿಗೆ ಚಾಲನೆ ನೀಡಿದ್ದರು. ಇದಾದ ಬಳಿಕ 5 ದಿನಗಳ ಕಾಲ ನಡೆದ ಕಾವೇರಿ ಆರತಿ ಕಾರ್ಯಕ್ರಮದಲ್ಲಿ ಹಲವು ಮಠಾಧೀಶರು ಭಾಗಿಯಾಗಿದ್ದರು. ದಕ್ಷಿಣ ಭಾರತದ ಇತಿಹಾಸದಲ್ಲೇ ಪ್ರಪ್ರಥಮವಾಗಿ ಕಾವೇರಿ ಆರತಿಯನ್ನು ಸಾಂಕೇತಿಕವಾಗಿ ನೆರವೇರಿಸಲಾಯಿತು. ಅದರಂತೆ ಇಂದು ಸಂಪನ್ನಗೊಂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ