/newsfirstlive-kannada/media/media_files/2025/10/18/rowdy-sheeter-1-2025-10-18-10-31-50.jpg)
ವಿಜಯಪುರ: ಪೊಲೀಸರ ಗುಂಡಿನ ದಾಳಿಗೆ ರೌಡಿಶೀಟರ್​ ಸಾವನ್ನಪ್ಪಿದ್ದಾನೆ. ಈ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ರಾಂಪೂರ ಗ್ರಾಮದ ಹೊರ ಭಾಗದಲ್ಲಿ ನಡೆದಿದೆ. ಯುನೂಸ್ ಇಕ್ಲಾಸ್ ಪಟೇಲ್ ಪೊಲೀಸರ ಗುಂಡಿನ ದಾಳಿಗೆ ಬಲಿಯಾದ ರೌಡಿಶೀಟರ್​. ಆತ್ಮರಕ್ಷಣೆಗಾಗಿ ಪೊಲೀಸರು ಆರೋಪಿ ಯುನೂಸ್ ಕಾಲಿಗೆ ಫೈರಿಂಗ್​ ಮಾಡಿದಾಗ ಈ ಘಟನೆ ನಡೆದಿದೆ.
ಆಗಿದ್ದೇನು?
ರೌಡಿಶೀಟರ್​ ಯೂನಸ್ ಪಟೇಲ್ ವಿಜಯಪುರದ ಗಾಂಧಿಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಓರ್ವ ವ್ಯಕ್ತಿಗೆ ಚಾಕು ತೋರಿಸಿ ರೂಪಾಯಿ 25 ಸಾವಿರ ಹಣ ದರೋಡೆ ಮಾಡಿದ್ದ. ಅಲ್ಲದೇ ಆತ ಸ್ಕೂಟಿಯನ್ನ ಸಹ ತೆಗೆದುಕೊಂಡು ಎಸ್ಕೇಪ್​ ಆಗಿದ್ದ. ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿ ಯೂನಸ್ ಸ್ವಗ್ರಾಮ ಆಲಮೇಲ ತಾಲೂಕಿನ ದೇವಣಗಾಂವ್ ಗ್ರಾಮದತ್ತ ತೆರಳುತ್ತಿರೋ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಅದರಂತೆ ರಾಂಪುರ್ ಬಳಿ ಆರೋಪಿ ಯೂನಿಸ್​​ನ ಬಂಧಿಸಲು ಪೊಲೀಸರು ಮುಂದಾಗಿದ್ದರು. ಆದ್ರೆ ಆರೋಪಿ ಪೊಲೀಸರಿಗೆ ಚಾಕುವಿನಿಂದ ಹಲ್ಲೆ ಮಾಡಲು ಯತ್ನಿಸಿದ. ಈ ವೇಳೆ ಇನ್ಸಪೆಕ್ಟರ್ ಪ್ರದೀಪ್ ತಳಕೇರಿ ಆಯ ತಪ್ಪಿ ಕೆಳಗೆ ಬಿದ್ದರು.
ಕೂಡಲೇ ಆತ್ಮರಕ್ಷಣೆಗಾಗಿ ಆರೋಪಿ ಯುನೂಸ್ ಕಾಲಿಗೆ ಇನ್ಸಪೆಕ್ಟರ್ ಪ್ರದೀಪ್ ತಳಕೇರಿ ಗುಂಡು ಹಾರಿಸಿದರು. ನಂತರ ಆರೋಪಿಯನ್ನ ಸಿಂದಗಿ ತಾಲೂಕು ಅಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಯಿತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಆರೋಪಿ ಯುನೂಸ್ ಸಾವನ್ನಪ್ಪಿದ್ದಾನೆ ಅಂತ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ರೌಡಿಶೀಟರ್​ ಯೂನೂಸ್ ಮೇಲೆ ದಾಖಲಾಗಿದ್ದ ಪ್ರಕರಣಗಳು:
ಮೃತಪಟ್ಟ ರೌಡಿಶೀಟರ್​ ಯೂನೂಸ್ ವಿರುದ್ಧ ಒಟ್ಟು 12 ಕೇಸ್​​ಗಳು ದಾಖಲಾಗಿದ್ದವು. ಜೊತೆಗೆ 2 ಕೊಲೆ, 1 ಕೊಲೆ ಯತ್ನ, ದರೋಡೆ, ರೋಡ್​​ ರಾಬರಿ, ಕಳ್ಳತನ ಹಾಗೂ ಗಾಂಜಾ ಪ್ರಕರಣದಲ್ಲಿ ಯೂನೂಸ್ ಪ್ರಮುಖ ಆರೋಪಿಯಾಗಿದ್ದ ಅಂತ ಎಸ್​​ಪಿ ಲಕ್ಷ್ಮಣ ನಿಂಬರಗಿ ಹೇಳಿದ್ದಾರೆ. 2017 ರಲ್ಲಿ ಅಮಾಯಕ ವೃದ್ಧನ ಮೇಲೆ ಬೈಕ್ ಹರಿಸಿ, ಟೈಲ್ಸ್ ನಿಂದ ಹೊಡೆದು ಕೊಲೆ ಮಾಡಿದ್ದ.
ಅದರಂತೆ 2018 ರಲ್ಲಿ ಅಮಾಯಕ ಯುವಕನ ಹೊಟ್ಟೆಗೆ ಚಾಕು ಹಾಕಿದ್ದ. ಪ್ರಕರಣ ಸಂಬಂಧ 2018 ಮಾರ್ಚ್ 12 ರಂದು ಈತನ ಮೇಲೆ ಪೊಲೀಸರು ಪೈರಿಂಗ್ ಮಾಡಿದ್ದರು. ಬಳಿಕ ಇತ್ತೀಚಿಗೆ ಯೂನೂಸ್ ಮತ್ತೆ ಕ್ರಿಮಿನಲ್​ ಚಟುವಟಿಕೆ ಶುರುಮಾಡಿದ್ದ. ಜನರನ್ನ ಬೆದರಿಸಿ ಹಣ ಸುಲಿಗೆ, ದರೋಡೆ ಮಾಡ್ತಿದ್ದ ಅಂತ ಪೊಲೀಸರು ಮಾಹಿತಿ ನೀಡಿದ್ದಾರೆ.