/newsfirstlive-kannada/media/media_files/2026/03/08/lavekesh-2026-03-08-10-34-22.jpg)
ಸೌಲಭ್ಯಗಳ ಕೊರತೆ, ಬಡತನ ಯಾವುದೂ ಸಾಧನೆಗೆ ಅಡ್ಡಿಯಾಗಲಾರದು ಎಂಬುದಕ್ಕೆ ಹರಿಯಾಣದ ಕರ್ನಾಲ್ ಜಿಲ್ಲೆಯ ಮುನಕ್ ಗ್ರಾಮದ ನಿವಾಸಿ ಲವೆಕೇಶ್ (lavekesh) ಜೀವಂತ ಉದಾಹರಣೆ. ದೇಶದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾದ ಯುಪಿಎಸ್ಸಿ (UPSC) ಸಿವಿಲ್ ಸೇವಾ ಪರೀಕ್ಷೆಯಲ್ಲಿ ಲವ್ಕೇಶ್ 488ನೇ ಱಂಕ್​ಗಳಿಸುವ ಮೂಲಕ ಇತಿಹಾಸ ನಿರ್ಮಿಸಿದ್ದು, ತಮ್ಮ ಪೋಷಕರು ಹಾಗೂ ಹಳ್ಳಿಯ ಹೆಸರನ್ನು ಉಜ್ವಲಗೊಳಿಸಿದ್ದಾರೆ.
ಲಭ್ಯವಿರುವ ಸೀಮಿತ ಸಂಪನ್ಮೂಲಗಳನ್ನು ಸರಿಯಾಗಿ ಬಳಸಿಕೊಂಡು ಹೋರಾಟವನ್ನೇ ಶಕ್ತಿಯನ್ನಾಗಿಸಿಕೊಂಡರೆ ಯಾವುದೇ ಗುರಿ ಅಸಾಧ್ಯವಲ್ಲ ಎಂಬುದನ್ನು ಲವೆಕೇಶ್ ಇಡೀ ದೇಶಕ್ಕೆ ತೋರಿಸಿಕೊಟ್ಟಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಪ್ರತಿಯೊಬ್ಬರಿಗೂ ಇವರ ಕಥೆ ನಿಜಕ್ಕೂ ಸ್ಫೂರ್ತಿದಾಯಕ.
ಬಡತನದ ಬೇಗೆ, ಅನಾರೋಗ್ಯ ಪೀಡಿತ ಪೋಷಕರು
ಲವೆಕೇಶ್ ಅತ್ಯಂತ ಸಾಮಾನ್ಯ ಮತ್ತು ಬಡ ಕುಟುಂಬದಿಂದ ಬಂದವರು. ಇವರ ತಂದೆಯ ಹೃದಯದಲ್ಲಿ ರಂಧ್ರವಿದೆ (Hole in heart). ತೀವ್ರ ಅನಾರೋಗ್ಯದ ನಡುವೆಯೂ ಮಗನ ಕನಸುಗಳನ್ನು ನನಸು ಮಾಡಲು ಅವರು ಸಣ್ಣ ಕಿರಾಣಿ ಅಂಗಡಿ ನಡೆಸುತ್ತಿದ್ದಾರೆ. ಮತ್ತೊಂದೆಡೆ ಲವೆಕೇಶ್ ಅವರ ತಾಯಿ ಆಗಾಗ್ಗೆ ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಇವರ ಬಡತನ ಎಷ್ಟರಮಟ್ಟಿಗಿದೆ ಎಂದರೆ, ಇವರು
ವಾಸವಿರುವ ಮನೆಗೆ ಇನ್ನೂ ಪ್ಲಾಸ್ಟರ್ (ಗಾರೆ) ಕೂಡ ಆಗಿಲ್ಲ!
ಸಂಸಾರ ಸಾಗಿಸಲು ತಂದೆಯ ಸಣ್ಣ ಅಂಗಡಿಯೇ ಏಕೈಕ ಆಧಾರ. ತಂದೆಗೆ ನೆರವಾಗಲು ಲವೆಕೇಶ್ ಮತ್ತು ಅವರ ಸಹೋದರಿಯರು ಸರದಿಯ ಮೇಲೆ ಅಂಗಡಿಯಲ್ಲಿ ಕೂರುತ್ತಿದ್ದರು. ಲವೆಕೇಶ್ ಅಂಗಡಿಯನ್ನು ನೋಡಿಕೊಳ್ಳುತ್ತಲೇ ಅಲ್ಲಿಯೇ ಕುಳಿತು ತಮ್ಮ ವ್ಯಾಸಂಗವನ್ನೂ ಮಾಡುತ್ತಿದ್ದರು.
ಮೂರು ಬಾರಿ ಸೋತರೂ, ಛಲ ಬಿಡದ ತ್ರಿವಿಕ್ರಮ
ತಮ್ಮ ನಾಲ್ಕನೇ ಪ್ರಯತ್ನದಲ್ಲಿ ಲವೆಕೇಶ್ ಕಠಿಣ ಪರೀಕ್ಷೆಯನ್ನು ಪಾಸ್ ಮಾಡಿದ್ದಾರೆ. ಇದಕ್ಕೂ ಮುನ್ನ ಮೂರು ಬಾರಿ ಪರೀಕ್ಷೆ ಬರೆದಿದ್ದರೂ ಆಯ್ಕೆಯಾಗಿರಲಿಲ್ಲ. ಆದರೂ ಲವೆಕೇಶ್ ಎದೆಗುಂದಲಿಲ್ಲ, ತಮ್ಮ ತಪ್ಪುಗಳಿಂದ ಪಾಠ ಕಲಿತು ಪ್ರತಿ ಬಾರಿಯೂ ಹೆಚ್ಚು ಶ್ರಮಪಟ್ಟರು. ಪ್ಲಾಸ್ಟರ್ ಮಾಡದ ತಮ್ಮ ಸಣ್ಣ ಕೋಣೆಯ ಗೋಡೆಗಳ ಮೇಲೆಯೇ ತಮ್ಮ ಗುರಿಗಳನ್ನು ಮತ್ತು ಪಠ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ಬರೆದುಕೊಳ್ಳುತ್ತಿದ್ದರು. ಇದರಿಂದ ಸದಾ ತಮ್ಮ ಗುರಿಯೆಡೆಗೆ ಗಮನ ಹರಿಸಲು ಸಾಧ್ಯವಾಗುತ್ತಿತ್ತು ಎನ್ನುತ್ತಾರೆ ಲವೆಕೇಶ್.
ಇದನ್ನೂ ಓದಿ: ವಿಶ್ವಕಪ್ ಟೂರ್ನಿಯಲ್ಲೇ ಅತೀ ಹೆಚ್ಚು ಬಾರಿ ‘ಈ ತಪ್ಪು’ ಮಾಡಿದೆ ಟೀಂ ಇಂಡಿಯಾ.. ಇವತ್ತು ಹಾಗೆ ಮಾಡಂಗಿಲ್ಲ!
ಓದಿಗಾಗಿ ಬಡ್ಡಿಗೆ ಸಾಲ ತಂದ ತಂದೆ
ಕುಟುಂಬದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿತ್ತು. ಈ ವೇಳೆ ತಂದೆ ಸಾಲ ಮಾಡಿ ಮಗನನ್ನು ಓದಿಸಿದರಲ್ಲದೆ, ಅದೇ ಹಣದಲ್ಲಿ ಮನೆಯನ್ನೂ ನಿಭಾಯಿಸಿದರು. ಸಿವಿಲ್ ಸರ್ವೀಸಸ್ ಪರೀಕ್ಷೆ ಬರೆಸಲು ಸಹ ಫೈನಾನ್ಸ್ನಲ್ಲಿ (ಬಡ್ಡಿಗೆ) ಹಣ ಪಡೆದಿದ್ದರು. ಕಷ್ಟವೆಂದು ಮಗನಿಗೆ ಯಾವತ್ತೂ 'ಓದು ನಿಲ್ಲಿಸು' ಎಂದು ಹೇಳಲಿಲ್ಲ. ಮಗನ ಮೇಲಿದ್ದ ಅಪಾರ ನಂಬಿಕೆಯಿಂದ ಸದಾ ಅವನನ್ನು ಪ್ರೋತ್ಸಾಹಿಸುತ್ತಿದ್ದರು. "ನನ್ನ ಮಗ ದೊಡ್ಡ ಅಧಿಕಾರಿಯಾಗಬೇಕೆಂಬುದು ನನ್ನ ಆಸೆಯಾಗಿತ್ತು. ಅವನ ಕಠಿಣ ಪರಿಶ್ರಮಕ್ಕೆ ಇಂದು ತಕ್ಕ ಪ್ರತಿಫಲ ಸಿಕ್ಕಿದೆ" ಎಂದು ತಾಯಿ ಹೆಮ್ಮೆಯಿಂದ ಹೇಳುತ್ತಾರೆ.
ಲವೆಕೇಶ್ ಅವರಿಗೆ ಕವಿತೆಗಳನ್ನು ಬರೆಯುವ ಹವ್ಯಾಸವಿದೆ. ‘ನೀವು ಕಷ್ಟಪಡುತ್ತಿದ್ದರೆ, ಆ ಕಷ್ಟದ ವಿರುದ್ಧದ ಹೋರಾಟವನ್ನು ಮುಂದುವರಿಸಿ, ಎಲ್ಲಿಯೂ ನಿಲ್ಲದಿರಿ. ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತದೆ, ನಿಮ್ಮ ಜೀವನದಲ್ಲಿ ಖಂಡಿತ ಒಳ್ಳೆಯದಾಗುತ್ತದೆ’ ಎಂಬುದು
ಯುವಜನತೆಗೆ ಲವ್ಕೇಶ್ ಅವರ ಸಂದೇಶ.
ಸದ್ಯ 488ನೇ ಱಂಕ್ ಪಡೆದಿರುವ ಲವೆಕೇಶ್ ಅವರ ಅಂತಿಮ ಗುರಿ ಐಎಎಸ್ (IAS) ಅಧಿಕಾರಿಯಾಗುವುದಾಗಿದೆ. ಈ ಱಂಕ್​ನಿಂದ ಐಪಿಎಸ್ ಅಥವಾ ಐಆರ್ಎಸ್ ಸಿಗುವ ಸಾಧ್ಯತೆಯಿದ್ದು, ಹೀಗಾಗಿ ಮತ್ತೆ ಪರೀಕ್ಷೆ ಬರೆದು ಐಎಎಸ್ ಆಗುವ ಪ್ರಯತ್ನವನ್ನು ಮುಂದುವರಿಸುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ಟಿ20 ವಿಶ್ವಕಪ್ 2026 ಫೈನಲ್.. ಇವತ್ತು ಭಾರತ ಗೆದ್ದರೆ ಸಿಗುವ ಬಹುಮಾನ ಎಷ್ಟು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us