/newsfirstlive-kannada/media/media_files/2025/11/14/bihar-election-result-2025-11-14-08-06-35.jpg)
Bihar Election Result LIVE : ಚುನಾವಣಾ ಆಯೋಗವು ಬಿಹಾರದ 18ನೇ ವಿಧಾನಸಭೆಗೆ ನವೆಂಬರ್ 6 ಮತ್ತು 11 ರಂದು ಮೊದಲ ಮತ್ತು ಎರಡನೇ ಹಂತದ ಮತದಾನವನ್ನು ನಡೆಸಿತು. 243 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಯು ನಡೆಯುತ್ತಿದೆ. ಬಿಹಾರ ರಾಜ್ಯದಾದ್ಯಂತ 38 ಜಿಲ್ಲೆಗಳ 46 ಎಣಿಕೆ ಕೇಂದ್ರಗಳಲ್ಲಿ ಮತ ಎಣಿಕೆ ನಡೆಯುತ್ತಿದ್ದು, ಸರ್ಕಾರ ರಚನೆಗೆ 122 ಮ್ಯಾಜಿಕ್ ನಂಬರ್ ಆಗಿದೆ. ಚುನಾವಣಾ ಫಲಿತಾಂಶದ ಕ್ಷಣ ಕ್ಷಣದ ನಿಖರ ಮಾಹಿತಿ ಇಲ್ಲಿದೆ.
- Nov 14, 2025 15:52 IST
ಉಚಿತ ಕೊಡುಗೆಯಿಂದ ಬಿಹಾರದಲ್ಲಿ ಎನ್ಡಿಎಗೆ ಗೆಲುವು: VIP ಪಕ್ಷದ ಮುಖೇಶ್ ಸಾಹ್ನಿ
ಬಿಹಾರದಲ್ಲಿ ವಿರೋಧ ಪಕ್ಷಗಳ ಮೈತ್ರಿಕೂಟಕ್ಕೆ ತಳಮಟ್ಟದ ಪರಿಸ್ಥಿತಿಯ ಬಗ್ಗೆ ಸರಿಯಾದ ಮಾಹಿತಿಯೇ ಇರಲಿಲ್ಲ ಎಂಬುದು ಫಲಿತಾಂಶದಿಂದ ಸ್ಪಷ್ಟವಾಗಿದೆ.
ಬಿಹಾರದಲ್ಲಿ ವಿಐಪಿ ಪಕ್ಷದ ಮುಖೇಶ್ ಸಾಹ್ನಿ ಅವರನ್ನು ಮಹಾಘಟಬಂಧನ್ ನಿಂದ ಉಪಮುಖ್ಯಮಂತ್ರಿ ಅಭ್ಯರ್ಥಿ ಎಂದು ಮುಂಚಿತವಾಗಿಯೇ ಘೋಷಿಸಲಾಗಿತ್ತು. ಆದರೇ, ವಿಐಪಿ ಪಕ್ಷವು 12 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿತ್ತು. ಆದರೇ, ಯಾವುದೇ ಕ್ಷೇತ್ರದಲ್ಲೂ ಗೆಲ್ಲದೇ ಶೂನ್ಯ ಸಾಧನೆ ಮಾಡಿದೆ.
ಬಿಹಾರದಲ್ಲಿ ಎನ್ಡಿಎ ಗೆಲುವು ಫ್ರೀಬಿ ಅಥವಾ ಉಚಿತ ಕೊಡುಗೆಗಳಿಂದ ಆಗಿರುವ ಗೆಲುವು ಎಂದು ಮುಖೇಶ್ ಸಾಹ್ನಿ ಹೇಳಿದ್ದಾರೆ. ಇನ್ನೂ ವಿರೋಧ ಪಕ್ಷಗಳ ವೋಟ್ ಚೋರಿ ದೂರಿನ ಬಗ್ಗೆ ಚುನಾವಣಾ ಆಯೋಗ ಸಂಪೂರ್ಣ ಕಿವುಡು ಆಗಿತ್ತು ಎಂದು ದೂರಿದ್ದಾರೆ.
ನಾವು ಜನಾದೇಶವನ್ನು ಗೌರವಿಸುತ್ತೇವೆ. ಎಲ್ಲಿ ತಪ್ಪಾಯಿತು ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ. ಪ್ರಧಾನಿ ಮೋದಿ ಭಾಷೆಯಲ್ಲಿ ಹೇಳುವುದಾದರೇ, ಎನ್ಡಿಎ ರೀವಾಡಿ ಹಂಚುವ ಮೂಲಕ ಸರ್ಕಾರವನ್ನು ರಚಿಸುತ್ತಿದೆ. ನಿತೀಶ್ ಕುಮಾರ್ ಮಹಿಳೆಯರ ಬ್ಯಾಂಕ್ ಖಾತೆಗೆ 10 ಸಾವಿರ ರೂಪಾಯಿ ವರ್ಗಾವಣೆ ಮಾಡುವ ಮೂಲಕ ಮಹಿಳೆಯರ ಮತ ಪಡೆದಿದ್ದಾರೆ. ಇದು ನಿತೀಶ್ ಕುಮಾರ್ ಅವರ ಕೊನೆಯ ಚುನಾವಣೆ. ಕಳೆದ 20 ವರ್ಷಗಳಿಂದ ಮಹಿಳೆಯರಿಗಾಗಿ ನಿತೀಶ್ ಕುಮಾರ್ ಕೆಲಸ ಮಾಡಿದ್ದಾರೆ. 10 ಸಾವಿರ ರೂಪಾಯಿ ಹಣ ಹಂಚುವ ಮೂಲಕ ತಮ್ಮ ಸರ್ಕಾರವನ್ನು ನಿತೀಶ್ ಕುಮಾರ್ ಉಳಿಸಿಕೊಂಡಿದ್ದಾರೆ. ನಾನು ಅವರನ್ನು ಅಭಿನಂದಿಸುವೆ. ಆದರೇ, ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಮುಖೇಶ್ ಸಾಹ್ನಿ ಹೇಳಿದ್ದಾರೆ.ನಾವು ವೋಟ್ ಕಳ್ಳತನ ವಿಷಯ ಎತ್ತಿದ್ದೇವು. ರಾಹುಲ್ ಗಾಂಧಿ ನೇತೃತ್ವದಲ್ಲಿ ವೋಟ್ ಅಧಿಕಾರ ಯಾತ್ರೆ ನಡೆಸಿದ್ದೇವು. ಕೆಲವರನ್ನು ಮತದಾರರ ಪಟ್ಟಿಗೆ ಸೇರಿಸಲು ಕೇಳಿದ್ದೇವು. ಆದರೇ, ಅದು ಆಗಲೇ ಇಲ್ಲ ಎಂದು ವಿಐಪಿ ಪಕ್ಷದ ಮುಖ್ಯಸ್ಥ ಮುಖೇಶ್ ಸಾಹ್ನಿ ಹೇಳಿದ್ದಾರೆ.
- Nov 14, 2025 15:38 IST
ಬಿಹಾರದಲ್ಲಿ ರಾಹುಲ್ ಗಾಂಧಿ ಯಾತ್ರೆ ಮಾಡಿದ ಒಂದೂ ಕ್ಷೇತ್ರವನ್ನೂ ಕಾಂಗ್ರೆಸ್ ಗೆದ್ದಿಲ್ಲ!
ಬಿಹಾರದಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬಿಹಾರ ಯಾತ್ರೆ ಮಾಡಿದ್ದರು. ಬಿಹಾರದ 25 ಜಿಲ್ಲೆಗಳಲ್ಲಿ 110 ವಿಧಾನಸಭಾ ಕ್ಷೇತ್ರಗಳಲ್ಲಿ ರಾಹುಲ್ ಗಾಂಧಿ ಯಾತ್ರೆ ಮಾಡಿದ್ದರು. ರಾಹುಲ್ ಗಾಂಧಿ ಬರೋಬ್ಬರಿ 1,300 ಕಿ.ಮೀ. ಯಾತ್ರೆ ಮಾಡಿದ್ದರು. ಆದರೇ, ರಾಹುಲ್ ಯಾತ್ರೆ ಮಾಡಿದ್ದ 110 ಕ್ಷೇತ್ರಗಳ ಪೈಕಿ ಒಂದೇ ಒಂದು ವಿಧಾನಸಭಾ ಕ್ಷೇತ್ರದಲ್ಲೂ ಕಾಂಗ್ರೆಸ್ ಪಕ್ಷ ಗೆದ್ದಿಲ್ಲ. ಕಾಂಗ್ರೆಸ್ ಪಕ್ಷ ಬಿಹಾರದಲ್ಲಿ ಈ ಭಾರಿ 61 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿತ್ತು. ಈ ಪೈಕಿ ಬರೀ 2 ಕ್ಷೇತ್ರಗಳಲ್ಲಿ ಮಾತ್ರ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ.
ಈ ವರ್ಷದ ಆಗಸ್ಟ್ ತಿಂಗಳಿನಲ್ಲಿ ರಾಹುಲ್ ಗಾಂಧಿ ಬಿಹಾರದಲ್ಲಿ ವೋಟರ್ ಅಧಿಕಾರ ಯಾತ್ರೆ ನಡೆಸಿದ್ದರು. ರಾಹುಲ್ ಗಾಂಧಿ ಯಾತ್ರೆ ಮಾಡಿದ ಕ್ಷೇತ್ರಗಳಲ್ಲಿ ಪಕ್ಷ ಗೆಲ್ಲುವ ನಿರೀಕ್ಷೆಯಲ್ಲಿ ನಾಯಕರು, ಕಾರ್ಯಕರ್ತರು ಇಟ್ಟುಕೊಂಡಿದ್ದರು. ಆದರೆ ಅದೆಲ್ಲವೂ ಈಗ ಎನ್ಡಿಎ ಸುನಾಮಿ ಗೆಲುವಿನಿಂದಾಗಿ ಹುಸಿಯಾಗಿದೆ. ಹೀಗಾಗಿ ಬಿಹಾರದಲ್ಲಿ ರಾಹುಲ್ ಗಾಂಧಿ ಮ್ಯಾಜಿಕ್ ನಡೆದಿಲ್ಲ. - Nov 14, 2025 15:27 IST
ಬಿಹಾರದಲ್ಲಿ 208 ಕ್ಷೇತ್ರದಲ್ಲಿ ಎನ್ಡಿಎ ಗೆ ಮುನ್ನಡೆ, 2010ರ ಸಾಧನೆ ದಾಟಿದ ಎನ್ಡಿಎ!
ಬಿಹಾರದಲ್ಲಿ ಎನ್ಡಿಎ ಬರೋಬ್ಬರಿ 208 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ. ಇದು 2010 ವಿಧಾನಸಭಾ ಚುನಾವಣೆಯ ಸಾಧನೆಯನ್ನು ಮೀರಿಸಿದಂತೆ. 2010 ರಲ್ಲಿ ಬಿಹಾರದಲ್ಲಿ ಎನ್ಡಿಎ 206 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು . ಆದರೇ, 2025 ರಲ್ಲಿ 208 ಕ್ಷೇತ್ರಗಳಲ್ಲಿ ಎನ್ಡಿಎ ಗೆಲುವಿನ ಮುನ್ಸೂಚನೆಯನ್ನು ಈ ಮುನ್ನಡೆಯ ಮೂಲಕ ನೀಡಿದೆ.
2010 ರಲ್ಲಿ ಜೆಡಿಯು 115 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಬಿಜೆಪಿ 91 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಈ ಭಾರಿ ಬಿಜೆಪಿ 95, ಜೆಡಿಯು 84 ಕ್ಷೇತ್ರಗಳಲ್ಲಿ ಮುನ್ನಡೆ, ಗೆಲುವು ಸಾಧಿಸುತ್ತಿವೆ. - Nov 14, 2025 15:20 IST
25 ಕ್ಷೇತ್ರಕ್ಕಿಂತ ಕಡಿಮೆ ಸೀಟು ಪಡೆದರೇ, ಆರ್ಜೆಡಿಗೆ ವಿರೋಧ ಪಕ್ಷದ ನಾಯಕನ ಸ್ಥಾನವೂ ಸಿಗಲ್ಲ!
ಬಿಹಾರ ವಿಧಾನಸಭೆಯ ಒಟ್ಟು ಸಂಖ್ಯಾಬಲ 243. ಬಿಹಾರ ವಿಧಾನಸಭೆಯಲ್ಲಿ ವಿರೋಧ ಪಕ್ಷ ಹಾಗೂ ವಿರೋಧ ಪಕ್ಷದ ನಾಯಕನ ಸ್ಥಾನಮಾನ ಪಡೆಯಲು ಆರ್.ಜೆ.ಡಿ. 25 ಕ್ಕಿಂತ ಹೆಚ್ಚಿನ ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲೇಬೇಕು. ಲೋಕಸಭೆಯ ಶಕ್ದರ್ ಅಂಡ್ ಕೌಲ್ ನಿಯಮದ ಪ್ರಕಾರ, ವಿಧಾನಸಭೆಯಲ್ಲಿ ವಿರೋಧ ಪಕ್ಷದ ಸ್ಥಾನಮಾನ ಮತ್ತು ವಿರೋಧ ಪಕ್ಷದ ನಾಯಕನ ಸ್ಥಾನಮಾನ ಪಡೆಯಲು ರಾಜಕೀಯ ಪಕ್ಷವೊಂದು ಶೇ.10 ಕ್ಕಿಂತ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದು ಕಡ್ಡಾಯ . ಈಗ ಆರ್.ಜೆ.ಡಿ. ಗೆ ಬಿಹಾರ ವಿಧಾನಸಭೆಯಲ್ಲಿ ಅಧಿಕೃತ ವಿರೋಧ ಪಕ್ಷವಾಗಲು 25 ಕ್ಕಿಂತ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವು ಪಡೆಯುವುದು ಅನಿವಾರ್ಯ .
ಆಂಧ್ರದಲ್ಲಿ ಈಗ ವೈಎಸ್ಆರ್ ಕಾಂಗ್ರೆಸ್ ಪಕ್ಷವು ಅಧಿಕೃತ ವಿರೋಧಪಕ್ಷವೂ ಆಗಿಲ್ಲ. - Nov 14, 2025 15:15 IST
2ನೇ ಅತಿ ಕಳಪೆ ಸಾಧನೆ ಮಾಡಿದ ಆರ್.ಜೆ.ಡಿ. !
ಬಿಹಾರದಲ್ಲಿ ಆರ್.ಜೆ.ಡಿ. ಪಕ್ಷವು ಶೇ.22.84 ರಷ್ಟು ಮತಗಳನ್ನು ಪಡೆದು 25 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುತ್ತಿದೆ. ಇದು ಆರ್.ಜೆ.ಡಿ. ಪಕ್ಷದ ಇತಿಹಾಸದಲ್ಲಿ 2ನೇ ತೀರಾ ಕಳಪೆ ಸಾಧನೆ. ಈ ಹಿಂದೆ 2010 ರಲ್ಲಿ ಆರ್.ಜೆ.ಡಿ. ಪಕ್ಷವು ಕೇವ 22 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಿತ್ತು. ಈಗ 25 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುತ್ತಿದೆ.
ಇನ್ನೂ ಬಿಹಾರದ ಮಹಾಘಟಬಂಧನ್ ಪಕ್ಷಗಳ ಒಟ್ಟಾರೆ ಸಾಧನೆ 30 ಕ್ಷೇತ್ರಗಳ ಮುನ್ನಡೆಗೆ ಸೀಮಿತವಾಗಿದೆ. - Nov 14, 2025 15:12 IST
ಬಿಜೆಪಿ, ಜೆಡಿಯುಗಿಂತ ಆರ್ಜೆಡಿಗೆ ಹೆಚ್ಚಿನ ವೋಟ್, ಆದರೇ, ಸೀಟು ಬರಲಿಲ್ಲ!
ಬಿಹಾರದಲ್ಲಿ ಶೇಕಡಾವಾರು ಮತ ಗಳಿಕೆಯಲ್ಲಿ ಆರ್.ಜೆ.ಡಿ. ಉಳಿದ ಪಕ್ಷಗಳಿಗಿಂತ ಉತ್ತಮ ಸಾಧನೆ ಮಾಡಿದೆ. ಆದರೇ, ಹೆಚ್ಚಿನ ಮತಗಳನ್ನು ಸೀಟುಗಳಾಗಿ ಪರಿವರ್ತನೆ ಮಾಡಿಕೊಳ್ಳುವಲ್ಲಿ ಮಾತ್ರ ವಿಫಲವಾಗಿದೆ.
ಕೇಂದ್ರ ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ ಬಿಹಾರದಲ್ಲಿ ಶೇ.22.84 ರಷ್ಟು ಮತಗಳು ಆರ್.ಜೆ.ಡಿ. ಪಕ್ಷಕ್ಕೆ ಬಂದಿವೆ.
ಇನ್ನೂ ಬಿಜೆಪಿ ಪಕ್ಷಕ್ಕೆ ಶೇ.20.98 ರಷ್ಟು ಮತಗಳು ಬಂದಿವೆ. ಜೆಡಿಯು ಪಕ್ಷಕ್ಕೆ ಶೇ.18.87 ರಷ್ಟು ಮತಗಳು ಬಂದಿವೆ. ಬಿಜೆಪಿ ಮತ್ತು ಜೆಡಿಯು ಪಕ್ಷಗಳು ಕಡಿಮೆ ಶೇಕಡಾವಾರು ಮತಗಳನ್ನು ಪಡೆದರೂ, ಹೆಚ್ಚಿನ ಸೀಟುಗಳಲ್ಲಿ ಮುನ್ನಡೆ ಮತ್ತು ಗೆಲುವು ಪಡೆಯುತ್ತಿವೆ. ಆದರೇ, ಆರ್.ಜೆ.ಡಿ. ಪಕ್ಷವು ಹೆಚ್ಚಿನ ಶೇಕಡಾವಾರು ಮತ ಪಡೆದರೂ, 25 ಕ್ಷೇತ್ರಗಳಲ್ಲಿ ಮಾತ್ರ ಮುನ್ನಡೆ ಸಾಧಿಸಿದೆ.
ಕೆಲವೊಮ್ಮೆ ಹೆಚ್ಚಿನ ಶೇಕಡಾವಾರು ಮತ ಪಡೆದರೂ, ಅದನ್ನು ಸೀಟುಗಳ ಗೆಲುವಾಗಿ ಪರಿವರ್ತನೆ ಮಾಡಿಕೊಳ್ಳಲು ಸಾಧ್ಯವಾಗಲ್ಲ ಎಂಬುದು ಈಗ ಆರ್.ಜೆ.ಡಿ. ಯ ಮತ ಗಳಿಕೆಯಿಂದ ಸ್ಪಷ್ಟವಾಗುತ್ತೆ.
ಬಿಜೆಪಿ ಶೇ.20.98 ರಷ್ಟು ಮತ ಪಡೆದು 95 ವಿಧಾನಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಹಾಗೂ ಗೆಲುವು ಸಾಧಿಸುತ್ತಿದೆ.
ಇನ್ನೂ ಜೆಡಿಯು ಪಕ್ಷವು ಶೇ.18.87 ರಷ್ಟು ಮತ ಪಡೆದು 82 ಕ್ಷೇತ್ರಗಳಲ್ಲಿ ಮುನ್ನಡೆ ಹಾಗೂ ಗೆಲುವು ಸಾಧಿಸುತ್ತಿದೆ.
ಇನ್ನೂ ಆರ್.ಜೆ.ಡಿ. ಪಕ್ಷವು ಶೇ. 22.84 ರಷ್ಟು ಮತ ಪಡೆದರೂ 25 ವಿಧಾನಸಭಾ ಕ್ಷೇತ್ರಗಳ ಮುನ್ನಡೆ ಹಾಗೂ ಗೆಲುವಿಗೆ ಸೀಮಿತವಾಗುತ್ತಿದೆ. ಆರ್.ಜೆ.ಡಿ. ಪಕ್ಷವು ಬಿಜೆಪಿಗಿಂತ ಶೇ. 1.86 ರಷ್ಟು ಹೆಚ್ಚು ಮತ ಪಡೆದಿದೆ. ಇನ್ನೂ ಜೆಡಿಯು ಪಕ್ಷಕ್ಕಿಂತ ಆರ್.ಜೆ.ಡಿ. ಪಕ್ಷವು ಶೇ.3.97 ರಷ್ಟು ಹೆಚ್ಚಿನ ಮತಗಳನ್ನು ಗಳಿಸಿದೆ. ಆದರೇ, ಹೆಚ್ಚಿನ ಮತ ಗಳಿಸಿದರೂ, ಸೀಟುಗಳನ್ನು ಗಳಿಸದೇ ಇರೋದು ಆರ್.ಜೆ.ಡಿ. ದುರಾದೃಷ್ಟ.
ಇನ್ನೂ ಕಾಂಗ್ರೆಸ್ ಪಕ್ಷವು ಶೇ.8.34 ರಷ್ಟು ಮತಗಳನ್ನು ಮಾತ್ರ ಗಳಿಸಿದ್ದು, 3 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. - Nov 14, 2025 14:01 IST
ಕರ್ನಾಟಕ ಕಾಂಗ್ರೆಸ್ ಮಾಡೆಲ್ ಅನುಸರಿಸಿ ಬಿಹಾರದಲ್ಲಿ ಗೆದ್ದ ಎನ್ಡಿಎ!
ಇದು ಅಚ್ಚರಿಯಾದರೂ ಸತ್ಯ . ಕಾಂಗ್ರೆಸ್ ಮತ್ತು ಬಿಜೆಪಿ ಬದ್ದವೈರಿ ರಾಜಕೀಯ ಪಕ್ಷಗಳು. ಒಬ್ಬರ ತತ್ವ, ಸಿದ್ದಾಂತವನ್ನು ಮತ್ತೊಬ್ಬರು ಅನುಸರಿಸಲ್ಲ. ಕಾಂಗ್ರೆಸ್ ಜಾತ್ಯಾತೀತ ತತ್ವ ಸಿದ್ದಾಂತ ಪ್ರತಿಪಾದಿಸಿದರೇ, ಬಿಜೆಪಿ ಹಿಂದುತ್ವ ಪ್ರತಿಪಾದಿಸುವ ಪಕ್ಷ.
ಆದರೇ, ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯು, ಬಿಜೆಪಿ ಒಳಗೊಂಡ ಎನ್ಡಿಎ, ಕರ್ನಾಟಕದ ಕಾಂಗ್ರೆಸ್ ಮಾಡೆಲ್ ಅನ್ನು ಅನುಸರಿಸಿದೆ. ಕರ್ನಾಟಕದಲ್ಲಿ 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಂಚ ಗ್ಯಾರಂಟಿ ಭರವಸೆಗಳನ್ನು ಜನರಿಗೆ ನೀಡಿ ಅಧಿಕಾರದ ಗದ್ದುಗೆ ಹಿಡಿದಿತ್ತು. ಅದೇ ಗ್ಯಾರಂಟಿ ಸ್ಕೀಮ್ ಭರವಸೆಗಳನ್ನು ಬಿಹಾರದಲ್ಲಿ ಎನ್ಡಿಎ ಜನರಿಗೆ ನೀಡಿ ಜನರನ್ನು ತನ್ನತ್ತ ಸೆಳೆದಿದೆ.
ಕರ್ನಾಟಕದಂತೆ ಬಿಹಾರದಲ್ಲೂ ಎನ್ಡಿಎ ಮಹಿಳೆಯರಿಗೆ 10 ಸಾವಿರ ರೂಪಾಯಿ ನೀಡುವ ಭರವಸೆ ನೀಡಿ ಯಶಸ್ವಿಯಾಗಿದೆ.
ಇನ್ನೂ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು ಪ್ರತಿ ಮನೆಗೆ 200 ಯೂನಿಟ್ ವರೆಗೂ ಉಚಿತ ವಿದ್ಯುತ್ ನೀಡುವ ಭರವಸೆ ನೀಡಿ ಅಧಿಕಾರಕ್ಕೆ ಬಂದಿದೆ. ಅದೇ ರೀತಿ ಎನ್ಡಿಎ ಬಿಹಾರದಲ್ಲಿ 125 ಯೂನಿಟ್ ವರೆಗೂ ಉಚಿತ ವಿದ್ಯುತ್ ನೀಡುವ ಭರವಸೆ ನೀಡಿ ಜನರನ್ನು ತನ್ನತ್ತ ಸೆಳೆದಿದೆ.
ವೃದ್ದರಿಗೆ ತಿಂಗಳ ಪಿಂಚಣಿಯನ್ನು 400 ರೂ.ನಿಂದ 1,100 ರೂಪಾಯಿಗೆ ಎನ್ಡಿಎ ಹೆಚ್ಚಿಸುವ ಭರವಸೆ ನೀಡಿದೆ.
ಕರ್ನಾಟಕ ಕಾಂಗ್ರೆಸ್ ಪಕ್ಷ 2023 ರಲ್ಲಿ ಕೊಟ್ಟಿದ್ದ ಭರವಸೆ ಮಾದರಿಯಲ್ಲೇ ಬಿಹಾರದಲ್ಲೂ ಎನ್ಡಿಎ ಕೂಡ ಜನರಿಗೆ ಭರವಸೆ ನೀಡಿ ಅಧಿಕಾರದ ಗದ್ದುಗೆಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದೆ. - Nov 14, 2025 13:53 IST
ಟೈಗರ್ ಅಭಿ ಜಿಂದಾ ಹೈ ಎಂದ ನಿತೀಶ್ ಕುಮಾರ್ ಮನೆ ಮುಂದಿನ ಪೋಸ್ಟರ್
ಸಿಎಂ ನಿತೀಶ್ ಕುಮಾರ್ ಗೆ ವಯಸ್ಸಾಯಿತು, ಆರೋಗ್ಯ ಸರಿಯಿಲ್ಲ. ಮರೆವಿನ ರೋಗ ನಿತೀಶ್ ಕುಮಾರ್ ಗೆ ಕಾಡುತ್ತಿದೆ. ಹೀಗಾಗಿ ಈ ಭಾರಿ ಬಿಹಾರದಲ್ಲಿ ಜೆಡಿಯು ಗೆಲ್ಲಲು ಸಾಧ್ಯವಿಲ್ಲ ಎಂದು ವಿಪಕ್ಷಗಳು ಹೇಳುತ್ತಿದ್ದವು. ಆದರೇ, ಚುನಾವಣಾ ಫಲಿತಾಂಶದಲ್ಲಿ ಜನರು ಮತ್ತೆ ಸಿಎಂ ನಿತೀಶ್ ಕುಮಾರ್ ಗೆ ಮಣೆ ಹಾಕಿದ್ದಾರೆ. ಹೀಗಾಗಿ ಟೈಗರ್ ಅಭಿ ಜಿಂದಾ ಹೈ ಎಂಬ ಪೋಸ್ಟರ್ ಗಳು ಪಾಟ್ನಾದ ಸಿಎಂ ನಿತೀಶ್ ಕುಮಾರ್ ಮನೆ ಮುಂದೆ ರಾರಾಜಿಸುತ್ತಿವೆ.
ಇನ್ನೂ ಜೈಿಲಿನಲ್ಲಿರುವ ಮೋಕಾಮಾ ಕ್ಷೇತ್ರದ ಜೆಡಿಯು ಅಭ್ಯರ್ಥಿ ಅನಂತ್ ಸಿಂಗ್ ಮನೆ ಮುಂದೆಯೂ ಟೈಗರ್ ಅಭಿ ಜಿಂದಾ ಹೈ ಪೋಸ್ಟರ್ ಹಾಕಲಾಗಿದೆ. ಅಂದರೇ, ನಿತೀಶ್ ಕುಮಾರ್ ನಾಯಕತ್ವ ಇನ್ನೂ ಮಸುಕಾಗಿಲ್ಲ. ನಿತೀಶ್ ಕುಮಾರ್ ಇನ್ನೂ ಸ್ಟ್ರಾಂಗ್ ಆಗಿಯೇ ಇದ್ದಾರೆ ಎಂಬ ಸಂದೇಶ ರವಾನಿಸಿದ್ದಾರೆ. - Nov 14, 2025 13:44 IST
ಐದನೇ ಅವಧಿಗೆ ಮತ್ತೆ ಬಿಹಾರ ಸಿಎಂ ಆಗುವ ನಿತೀಶ್ ಕುಮಾರ್!
2000ನೇ ಇಸವಿಯಿಂದ ನಿರಂತರವಾಗಿ ಬಿಹಾರದ ಸಿಎಂ ಆಗುತ್ತಿರುವ ನಿತೀಶ್ ಕುಮಾರ್, ಈಗ ಐದನೇ ಅವಧಿಗೆ ಮತ್ತೊಮ್ಮೆ ಬಿಹಾರದ ಸಿಎಂ ಆಗಿ ಅಧಿಕಾರ ವಹಿಸಿಕೊಳ್ಳೋದು ಪಕ್ಕಾ ಆಗಿದೆ. 2000ನೇ ಇಸವಿಯಿಂದ 10ನೇ ಭಾರಿಗೆ ನಿತೀಶ್ ಕುಮಾರ್ ಸಿಎಂ ಆಗುತ್ತಿರುವುದು ವಿಶೇಷ. ಕೆಲವೊಮ್ಮೆ ಒಂದೇ ಅವಧಿಯಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ, ಮತ್ತೆ ನಿತೀಶ್ ಕುಮಾರ್ ಅವರೇ ಸಿಎಂ ಆಗಿ ಆಯ್ಕೆಯಾಗಿದ್ದಾರೆ. ಹೀಗಾಗಿ ಕಳೆದ 25 ವರ್ಷಗಳ ಅವಧಿಯಲ್ಲಿ ಈಗ 10ನೇ ಭಾರಿಗೆ ಸಿಎಂ ಆಗುತ್ತಿದ್ದಾರೆ.
- Nov 14, 2025 13:37 IST
ಜೆಡಿಯು 81, ಬಿಜೆಪಿ 90 ಕ್ಷೇತ್ರಗಳಲ್ಲಿ ಮುನ್ನಡೆ, 200 ರ ಗಡಿಯಲ್ಲಿ ಎನ್ಡಿಎ!
ಬಿಹಾರದಲ್ಲಿ ಕ್ಷಣ ಕ್ಷಣಕ್ಕೂ ಎನ್ಡಿಎ ಮುನ್ನಡೆಯ ಕ್ಷೇತ್ರಗಳ ಸಂಖ್ಯೆ ಏರಿಕೆಯಾಗುತ್ತಿದೆ. ಜೆಡಿಯು ಪಕ್ಷದ ಮುನ್ನಡೆಯ ಕ್ಷೇತ್ರಗಳ ಸಂಖ್ಯೆ 81 ಕ್ಕೇರಿಕೆಯಾಗಿದೆ. ಇನ್ನೂ ಬಿಜೆಪಿಯ ಮುನ್ನಡೆಯ ಕ್ಷೇತ್ರಗಳ ಸಂಖ್ಯೆ 90 ಕ್ಕೇರಿಕೆಯಾಗಿದೆ. ಬಿಹಾರದಲ್ಲಿ ಈ ಭಾರಿಯ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಯು ತಲಾ 101 ವಿಧಾನಸಭಾ ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಜೆಡಿಯುಗಿಂತ ಬಿಜೆಪಿ ಹೆಚ್ಚಿನ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿರುವುದು ವಿಶೇಷ. ಎಲ್ಜೆಪಿ ಪಕ್ಷ 21 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುತ್ತಿದೆ.
ಮತ್ತೊಂದೆಡೆ ಆರ್ಜೆಡಿ ಕೇವಲ 25 ಕ್ಷೇತ್ರಗಳಲ್ಲಿ ಮಾತ್ರ ಮುನ್ನಡೆ ಸಾಧಿಸುತ್ತಿದೆ. ಕಾಂಗ್ರೆಸ್ ಪಕ್ಷ 4 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುತ್ತಿದೆ. - Nov 14, 2025 13:34 IST
2010 ರಲ್ಲಿ 206 ಸೀಟು ಗೆದ್ದಿದ್ದ ಎನ್ಡಿಎ
ಬಿಹಾರದಲ್ಲಿ ಎನ್ಡಿಎ 200 ರ ಗಡಿ ತಲುಪಿದೆ. ಆದರೇ, ಬಿಹಾರದಲ್ಲಿ ಎನ್ಡಿಎ 200ರ ಗಡಿ ತಲುಪುತ್ತಿರುವುದು ಇದೇ ಮೊದಲೇನೂ ಅಲ್ಲ. 2010ರ ಬಿಹಾರ ವಿಧಾನಸಭಾ ಚುನಾವಣೆಯಲ್ಲೂ 200 ರ ಗಡಿಯನ್ನು ದಾಟಿತ್ತು. 2010 ರಲ್ಲಿ ಬಿಹಾರದಲ್ಲಿ ಎನ್ಡಿಎ 206 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು . ಆಗ ಜೆಡಿಯು 115 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರೇ, ಬಿಜೆಪಿ 91 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. 2010ರ ಮಿರಾಕಲ್ ಈಗ ಮತ್ತೆ ಪುನಾರವರ್ತನೆಯಾಗಿದೆ.
ಬಿಜೆಪಿ ಪಕ್ಷದ ಪ್ರಧಾನಿ ನರೇಂದ್ರ ಮೋದಿ ಹಾಗೂ ಜೆಡಿಯು ಪಕ್ಷದ ನಾಯಕ ನಿತೀಶ್ ಕುಮಾರ್ ನಾಯಕತ್ವದಲ್ಲಿ ಬಿಹಾರ ರಾಜ್ಯದ ಅಭಿವೃದ್ದಿ ಹಾಗೂ ರಾಜ್ಯದಲ್ಲಿ ಸ್ಥಿರ ಸರ್ಕಾರದ ಆಡಳಿತಕ್ಕಾಗಿ ಬಿಹಾರದ ಜನರು ಮತ್ತೆ ಎನ್ಡಿಎ ಯತ್ತ ಒಲವು ತೋರಿದ್ದಾರೆ. - Nov 14, 2025 13:22 IST
ಎನ್ಡಿಎ ಗೆಲುವಿಗೆ ಹತ್ತು ಕಾರಣಗಳು
ಬಿಹಾರದಲ್ಲಿ ಎನ್.ಡಿ.ಎ. ಗೆಲುವಿಗೆ ಪ್ರಮುಖ ಹತ್ತು ಕಾರಣಗಳು
1-ಚಿರಾಗ್ ಪಾಸ್ವಾನ್ ಈ ಭಾರಿ ಎನ್ಡಿಎ ನಿಂದ ಹೊರ ಹೋಗದಂತೆ ನೋಡಿಕೊಂಡಿದ್ದು, ಇದರಿಂದ ಜೆಡಿಯು ಹೆಚ್ಚಿನ ಕ್ಷೇತ್ರ ಗೆಲ್ಲಲು ಕಾರಣವಾಯಿತು
2-ಮಹಿಳೆಯರು ಎನ್ಡಿಎ ಕಡೆಗೆ ಒಲವು ತೋರಿದ್ದು, ಎನ್ಡಿಎ ಭರ್ಜರಿ ಗೆಲುವಿಗೆ ಕಾರಣವಾಗಿದೆ.
3- 2010 ರಲ್ಲೇ ನಿತೀಶ್ ಕುಮಾರ್ ಮದ್ಯಪಾನ ನಿಷೇಧಿಸಿದ್ದರು. ಆದರೇ, ಮದ್ಯಪಾನ ನಿಷೇಧ ವಾಪಸ್ ಪಡೆಯುವುದಾಗಿ ಹೇಳಿದ್ದ ಪ್ರಶಾಂತ್ ಕಿಶೋರ್. ಆದರೇ, ಮಹಿಳೆಯರಿಗೆ ಮದ್ಯಪಾನ ನಿಷೇಧ ವಾಪಸ್ ಪಡೆಯುವುದು ಇಷ್ಟ ಇರಲಿಲ್ಲ.
4- ಮಹಿಳೆಯರಿಗೆ 10 ಸಾವಿರ ರೂಪಾಯಿ ಹಣವನ್ನು ಸೆಪ್ಟೆಂಬರ್ ತಿಂಗಳಿನಲ್ಲಿ ನೀಡಿದ್ದು ಎನ್ಡಿಎಗೆ ವರವಾಯಿತು. ಹೆಚ್ಚಿನ ಸಂಖ್ಯೆಯ ಮಹಿಳೆಯರು ಎನ್ಡಿಎ ಪರ ಮತ್ತೆ ಮತ ಚಲಾಯಿಸಿದ್ದಾರೆ.
5- ಮತ್ತೆ ಕಟ್ಟಾ ಸರ್ಕಾರ್ ಬರುತ್ತೆ ಎಂದು ಮೋದಿ, ನಿತೀಶ್ ಜನರಲ್ಲಿ ಜಂಗಲ್ ರಾಜ್ ಸರ್ಕಾರ ಬರದಂತೆ ತಡೆಯಬೇಕೆಂದು ಪ್ರಚಾರ ಮಾಡಿದ್ದು ವರ್ಕೌಟ್ ಆಗಿದೆ.
6-ಜನರಿಗೆ ಪ್ರತಿ ತಿಂಗಳು 125 ಯೂನಿಟ್ ವರೆಗೂ ಉಚಿತ ವಿದ್ಯುತ್ ನೀಡುವ ನಿತೀಶ್ ಕುಮಾರ್ ಭರವಸೆಯಿಂದ ಎನ್ಡಿಎ ಕಡೆಗೆ ವಾಲಿದ ಮತದಾರರು.
7-ಯಾದವ್ ಯೇತರ ಜನಾಂಗಗಳು ಜೆಡಿಯು ಕಡೆಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದು ಎನ್ಡಿಎ ಗೆಲುವಿಗೆ ಕಾರಣ
8- ಮುಸ್ಲಿಂ ಸಮುದಾಯದ ಮತಗಳು ಪೂರ್ತಿಯಾಗಿ ಆರ್ಜೆಡಿ ಬೆಂಬಲಿಸದೇ ನಿತೀಶ್ ಕುಮಾರ್ ಕಡೆ ಒಲವು ತೋರಿವೆ.
9-ನಿತೀಶ್ ಕುಮಾರ್ ನಾಯಕತ್ವ, ಅನುಭವ, ಈ ಹಿಂದಿನ ಅಡಳಿತದ ಟ್ರ್ಯಾಕ್ ರೆಕಾರ್ಡ್ ಎನ್ಡಿಎ ಗೆಲುವಿಗೆ ಕಾರಣವಾಗಿದೆ.
10-ನಿತೀಶ್ ಕುಮಾರ್ ಆಳ್ವಿಕೆಯಲ್ಲಿ ಇದ್ದ ಮಹಿಳೆಯರ ಸುರಕ್ಷತೆ, ಮೂಲಸೌಕರ್ಯ ವೃದ್ದಿ ಎಲ್ಲವೂ ಎನ್ಡಿಎ ನತ್ತ ಜನರು ಮತ್ತೆ ಒಲವು ತೋರಲು ಕಾರಣವಾದವು.
ಮಹಾಘಟಬಂಧನ್ ಸೋಲಿಗೆ ಕಾರಣಗಳೇನು?
1- ಬಿಹಾರದಲ್ಲಿ ದುರ್ಬಲವಾಗಿದ್ದ ಕಾಂಗ್ರೆಸ್ ಗೆ 61 ಕ್ಷೇತ್ರ ನೀಡಿದ್ದು ಮಹಾಘಟಬಂಧನ್ ಸೋಲಿಗೆ ಕಾರಣ
2-ಪ್ರತಿ ಮನೆಗೊಂದು ಸರ್ಕಾರಿ ನೌಕರಿ ನೀಡುವ ಭರವಸೆ ಜನರನ್ನು ಸೆಳೆಯಲು ವಿಫಲವಾಯಿತು
3- 87 ಕ್ಷೇತ್ರಗಳಲ್ಲಿ ಶೇ.25 ರಷ್ಟು ಮುಸ್ಲಿಂ ಮತದಾರರಿದ್ದರೂ, ಹೆಚ್ಚಿನ ಟಿಕೆಟ್ ಮುಸ್ಲಿಂರಿಗೆ ಆರ್ಜೆಡಿ ನೀಡಿರಲಿಲ್ಲ. ಮುಸ್ಲಿಂ ಸಮುದಾಯ ಪೂರ್ತಿಯಾಗಿ ಆರ್ಜೆಡಿ , ಕಾಂಗ್ರೆಸ್ ಮೈತ್ರಿಯನ್ನು ಬೆಂಬಲಿಸಲಿಲ್ಲ.
4- ಲಾಲೂ ಪ್ರಸಾದ್ ಯಾದವ್ ಕುಟುಂಬದಲ್ಲೇ ಅಪ್ಪ- ಮಗನ ಕಿತ್ತಾಟವೂ ಪಕ್ಷದ ಮೇಲೆ ನೆಗೆಟಿವ್ ಪರಿಣಾಮ ಬೀರಿದೆ . ತೇಜ್ ಪ್ರತಾಪ್ ಯಾದವ್ ಪಕ್ಷ, ಕುಟುಂಬದಿಂದ ದೂರ ಸರಿದು ಜನಶಕ್ತಿ ಜನತಾದಳ ಮೂಲಕ ಸ್ಪರ್ಧಿಸಿ ಆರ್ಜೆಡಿ ಮತಗಳನ್ನೇ ನುಂಗಿ ಹಾಕಿದ್ದಾರೆ.
5- ಪ್ರಶಾಂತ್ ಕಿಶೋರ್ ಅವರ ಜನ ಸುರಾಜ್ ಪಾರ್ಟಿಯು ವಿಪಕ್ಷಗಳ ಮತ ಬ್ಯಾಂಕ ಅನ್ನೇ ಇಬ್ಬಾಗಿಸಿದೆಯೇ ಹೊರತು ಆಡಳಿತ ಪಕ್ಷದ ಮತಬುಟ್ಟಿಗೆ ಕೈ ಹಾಕಿಲ್ಲ.
6- ಅಸಾದುದ್ದೀನ್ ಓವೈಸಿ ಕಳೆದ ಚುನಾವಣೆಯಲ್ಲೂ ಆರ್ಜೆಡಿ, ಕಾಂಗ್ರೆಸ್ ಸೋಲಿಗೆ ಕಾರಣವಾಗಿದ್ದರು. ಈ ಭಾರಿಯೂ ಆ ಕೆಲಸವನ್ನೇ ಓವೈಸಿ ಮುಂದುವರಿಸಿದ್ದಾರೆ.
7- ಬಿಹಾರದಲ್ಲಿ ತೇಜಸ್ವಿ ಯಾದವ್ ಹೊರತುಪಡಿಸಿ, ಬೇರೆ ಪ್ರಬಲ ನಾಯಕರು ಆರ್ಜೆಡಿಯಲ್ಲಿ ಇಲ್ಲ. ಕಾಂಗ್ರೆಸ್ ಗೂ ತಳ ಸಮುದಾಯಗಳ ಬೆಂಬಲ ಗಳಿಸುವ ನಾಯಕರಿಲ್ಲ. ದಲಿತ ಸಮುದಾಯದ ಪ್ರಮುಖ ನಾಯಕರಿಲ್ಲ. ಇದರಿಂದಾಗಿ ಓಬಿಸಿ, ಇಬಿಸಿ ಬೆಂಬಲ ಗಳಿಸಲು ವಿಫಲ
8- ನಿತೀಶ್ ಕುಮಾರ್ ಮಹಿಳೆಯರಿಗೆ 10 ಸಾವಿರ ನೀಡುವ ಭರವಸೆ ಕೊಟ್ಟು ಜಾರಿಗೊಳಿಸಿದ್ದರು. ಇದರಿಂದಾಗಿ ಮಹಾಘಟಬಂಧನ್ ಗೆ ಮಹಿಳೆಯರಿಗೆ ಪ್ರತಿ ತಿಂಗಳು 2,500 ರೂಪಾಯಿ ನೀಡುವ ಭರವಸೆಯತ್ತ ಮಹಿಳೆಯರು ಒಲವು ತೋರಲಿಲ್ಲ. - Nov 14, 2025 13:02 IST
ಮಹಾಘಟಬಂಧನ್ ಗೆ ನಿರಾಶದಾಯಕ ಟ್ರೆಂಡ್ ಎಂದ ಅಶೋಕ್ ಗೆಹ್ಲೋಟ್
ಬಿಹಾರದ ಚುನಾವಣಾ ಫಲಿತಾಂಶವು ಮಹಾಘಟಬಂಧನ್ ನಿರಾಶದಾಯಕ ಟ್ರೆಂಡ್ ಎಂದು ಕಾಂಗ್ರೆಸ್ ಹಿರಿಯ ನಾಯಕ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ. ಚುನಾವಣೆಗೂ ಮುನ್ನ ಎನ್ಡಿಎ ಮಹಿಳೆಯರಿಗೆ ಹಣ ಹಂಚಿಕೆ ಮಾಡಿತ್ತು. ಚುನಾವಣಾ ಆಯೋಗವು ಸೈಲೆಂಟ್ ಆಗಿತ್ತು ಎಂದು ಮಾಜಿ ಸಿಎಂ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.
- Nov 14, 2025 12:58 IST
ಮಹಿಳೆಯರಿಗೆ 10 ಸಾವಿರ ನೀಡುವ ಯೋಜನೆಯಿಂದ ಎನ್ಡಿಎಗೆ ಭರ್ಜರಿ ಗೆಲುವು!
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್ಡಿಎ ಮತ್ತು ಮಹಾಘಟಬಂಧನ್ ಎರಡೂ ಭರ್ಜರಿ ಭರವಸೆಗಳನ್ನೇ ಜನರಿಗೆ ನೀಡಿದ್ದವು. ಮಹಾಘಟಬಂಧನ್ ಮನೆಗೊಬ್ಬರಿಗೆ ಸರ್ಕಾರಿ ಉದ್ಯೋಗ ನೀಡುವ ಭರವಸೆ ನೀಡಿತ್ತು.
ಇದಕ್ಕೆ ಪ್ರತಿಯಾಗಿ ಎನ್ಡಿಎ ಮಹಿಳೆಯರಿಗೆ 10 ಸಾವಿರ ನೀಡುವ ಭರವಸೆ ನೀಡಿತ್ತು. ಈ ಭರವಸೆಯಿಂದಾಗಿ ಮಹಿಳೆಯರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಎನ್ಡಿಎ ಪರ ಮತ ಚಲಾಯಿಸಿದ್ದಾರೆ. ಮಹಿಳೆಯರ ಮತಗಳನ್ನು ಸೆಳೆಯಲು 10 ಸಾವಿರ ರೂಪಾಯಿ ನೀಡುವ ಭರವಸೆ ವರ್ಕೌಟ್ ಆಗಿದೆ. ಜೊತೆಗೆ ಜನರಿಗೆ ಪ್ರತಿ ತಿಂಗಳು 125 ಯೂನಿಟ್ ವರೆಗೂ ಉಚಿತ ವಿದ್ಯುತ್ , ಹಿರಿಯ ನಾಗರಿಕರ ಪಿಂಚಣಿಯನ್ನು 400 ರೂಪಾಯಿಯಿಂದ 1,100 ರೂಪಾಯಿಗೆ ಏರಿಕೆ ಮಾಡುವ ಭರವಸೆಯನ್ನು ನಿತೀಶ್ ಕುಮಾರ್ ನೀಡಿದ್ದರು. ಇವುಗಳ ಜನರನ್ನು ಎನ್ಡಿಎ ಕಡೆಗೆ ಸೆಳೆದವು.
21 ಲಕ್ಷ ಮಹಿಳೆಯರಿಗೆ ಸೆಪ್ಟೆಂಬರ್ ತಿಂಗಳಲ್ಲಿ ತಲಾ 10 ಸಾವಿರ ರೂಪಾಯಿ ವರ್ಗಾವಣೆ ಮಾಡಿದ್ರು. ನೇರ ನಗದು ವರ್ಗಾವಣೆ ಯೋಜನೆ ಮೂಲಕ ಮಹಿಳೆಯರ ಬ್ಯಾಂಕ್ ಖಾತೆಗೆ 2,100 ಕೋಟಿ ರೂಪಾಯಿ ಹಣವನ್ನು ವರ್ಗಾವಣೆ ಮಾಡಲಾಗಿತ್ತು. ಇದರಿಂದಾಗಿ ಮಹಿಳೆಯರ ಮತದಾನದ ಪ್ರಮಾಣ ಶೇ.71 ಕ್ಕೇರಿಕೆಯಾಗಿತ್ತು. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಎನ್ಡಿಎ ಪರ ಮತ ಚಲಾಯಿಸಿದ್ದಾರೆ. ಬಿಹಾರದಲ್ಲಿ 1.3 ಕೋಟಿ ಮಹಿಳಾ ಮತದಾರರಿಗೆ 10 ಸಾವಿರ ರೂಪಾಯಿ ಹಣ ನೀಡುವ ಯೋಜನೆಯನ್ನು ಸಿಎಂ ನಿತೀಶ್ ಕುಮಾರ್ ಜಾರಿಗೆ ತಂದಿದ್ದಾರೆ.
ಇದರಿಂದಾಗಿ ಮಹಿಳೆಯರು, ವೃದ್ದರು ಮತ್ತೆ ಎನ್ಡಿಎ ಕಡೆಗೆ ಒಲವು ತೋರಿ ಮತ ಚಲಾಯಿಸಿದ್ದಾರೆ. ಇದೇ ಎನ್ಡಿಎ ಗೆಲುವಿನ ಗುಟ್ಟು.
ಇದರಿಂದಾಗಿ ಮಹಿಳೆಯರು, ವೃದ್ದರು, ಬಿಹಾರದ ಜನರು ನಾವು ನಿತೀಶ್ ಕುಮಾರ್ ರನ್ನು ರಾಜಕೀಯ ನಿವೃತ್ತಿ ತೆಗೆದುಕೊಳ್ಳಲು ಬಿಡಲ್ಲ, ನಾವು ನಿತೀಶ್ ಕುಮಾರ್ ರನ್ನೆ ಗೆಲ್ಲಿಸುತ್ತೇವೆ. ಅವರೇ ಯಾವಾಗ ನಿವೃತ್ತಿ ತಗೊಳ್ಳಬೇಕು ಅನ್ನೋದನ್ನು ನಿರ್ಧರಿಸಲಿ ಎಂದು ಚುನಾವಣೆಗೂ ಮುನ್ನ ಬಿಹಾರದ ಜನರೇ ಹೇಳುತ್ತಿದ್ದರು.
ಇದು ಹತ್ತು ಸಾವಿರ ರೂಪಾಯಿ ಚುನಾವಣೆ ಮತ್ತು ಕಟ್ಟಾ ಸರ್ಕಾರ್ ಚುನಾವಣೆ ಎಂದು ಪ್ರಧಾನಿ ಮೋದಿ ಹೇಳಿದ್ದರು. ಅಂದರೇ, ಮಹಿಳೆಯರಿಗೆ ಹತ್ತು ಸಾವಿರ ಬೇಕೋ ಇಲ್ಲವೇ ಜಂಗಲ್ ರಾಜ್ ಸರ್ಕಾರ್ ಬೇಕೋ ಎಂಬುದನ್ನು ಆಯ್ಕೆ ಮಾಡಿಕೊಳ್ಳುವ ಚುನಾವಣೆ ಎಂದು ಪ್ರಧಾನಿ ಮೋದಿ ಹೇಳಿದ್ದರು.
ಮತ್ತೊಂದೆಡೆ ಆರ್ಜೆಡಿ ಪಕ್ಷದ ತೇಜಸ್ವಿ ಯಾದವ್ ಮಹಿಳೆಯರಿಗೆ ಪ್ರತಿ ತಿಂಗಳು 2,500 ರೂಪಾಯಿ ನೀಡುವ ಭರವಸೆ ನೀಡಿದ್ದರು. - Nov 14, 2025 12:41 IST
ನಿಜವಾದ ಚುನಾವಣಾ ಚಾಣಾಕ್ಯ ಅಮಿತ್ ಶಾ ಭವಿಷ್ಯವಾಣಿ! 160 ಕ್ಕೂ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ ಎಂದಿದ್ದ ಶಾ
ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಅಮಿತ್ ಶಾ ತಾವು ಮತ್ತೊಮ್ಮೆ ಚುನಾವಣಾ ಚಾಣಾಕ್ಯ ಎಂಬುದನ್ನು ಸಾಬೀತುಪಡಿಸಿದ್ದಾರೆ. ಚುನಾವಣೆಗೂ ಮುನ್ನವೇ ಬಿಹಾರದಲ್ಲಿ ಈ ಭಾರಿ ಎನ್ಡಿಎ 160 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ಮೂರನೇ ಎರಡರಷ್ಟು ಬಹುಮತದೊಂದಿಗೆ ಸರ್ಕಾರ ರಚಿಸಲಿದೆ ಎಂದು ಚುನಾವಣಾ ಱಲಿಗಳಲ್ಲಿ ಹೇಳಿದ್ದರು. ಅದು ಈಗ ಫಲಿತಾಂಶ ಬಂದಾಗ ನಿಜವಾಗಿದೆ. ಬಿಹಾರದಲ್ಲಿ ಎನ್ಡಿಎ ಮೂರನೇ ಎರಡರಷ್ಟು ಬಹುಮತಕ್ಕೆ ಅಗತ್ಯವಾದ 162 ಸ್ಥಾನಗಳನ್ನು ದಾಟಿ 197 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುತ್ತಿದೆ. ಮುನ್ನಡೆ ಸಾಧಿಸಿರುವಷ್ಟು ಕ್ಷೇತ್ರಗಳಲ್ಲಿ ಎನ್ಡಿಎ ಗೆದ್ದರೇ, ಅಭೂತಪೂರ್ವ ಗೆಲುವು ಆಗಲಿದೆ.
ಎನ್ಡಿಎ ನಲ್ಲಿ ಐದು ರಾಜಕೀಯ ಪಕ್ಷಗಳಿವೆ. ಈ ಐದು ರಾಜಕೀಯ ಪಕ್ಷಗಳನ್ನು ಐವರು ಪಾಂಡವರಿದ್ದಂತೆ ಎಂದು ಅಮಿತ್ ಶಾ ಹೇಳಿದ್ದರು. ಪಾಂಡವರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಅಮಿತ್ ಶಾ ಹೇಳಿದ್ದರು.
ಎನ್ಡಿಎ ನಲ್ಲಿ ಬಿಜೆಪಿ, ಜೆಿಡಿಯು, ಎಲ್ಜೆಪಿ, ಎಚ್ಎಎಂ ಮತ್ತು ಆರ್ಎಲ್ಎಂ ಪಕ್ಷಗಳಿವೆ. - Nov 14, 2025 12:20 IST
5 ರಿಂದ 2 ಕ್ಕೆ ಕುಸಿದ ಎಂಐಎಂ
ಬಿಹಾರದಲ್ಲಿ ತೆಲಂಗಾಣದ ಎಐಎಂಐಎಂ ಪಕ್ಷವು ಕೂಡ ಸ್ಪರ್ಧಿಸಿದೆ. 2020 ರ ವಿಧಾನಸಭಾ ಚುನಾವಣೆಯಲ್ಲಿ ಅಸಾದುದ್ದೀನ್ ಓವೈಸಿ ಪಕ್ಷವು ಸೀಮಾಂಚಲದ ನಾಲ್ಕು ಜಿಲ್ಲೆಗಳಲ್ಲಿ ಸ್ಪರ್ಧಿಸಿ 5 ವಿಧಾನಸಭಾ ಕ್ಷೇತ್ರಗಳಲ್ಲಿ ಗೆದ್ದಿತ್ತು.
ಆದರೇ, ಈ ಭಾರಿ ಆರ್ಜೆಡಿಯಂತೆ ನಷ್ಟವಾಗಿರುವುದು ಅಸಾದುದ್ದೀನ್ ಓವೈಸಿ ಅವರ ಎಂಐಎಂ ಪಕ್ಷಕ್ಕೂ ಕೂಡ.
ಅಸಾದುದ್ದೀನ್ ಓವೈಸಿ ಪಕ್ಷವು ಈ ಭಾರಿ ಕೇವಲ 2 ಕ್ಷೇತ್ರಗಳಲ್ಲಿ ಮಾತ್ರ ಮುನ್ನಡೆ ಸಾಧಿಸಿದೆ. 5 ರಿಂದ 2 ಕ್ಕೆ ಎಂಐಎಂ ಕುಸಿಯುತ್ತಿದೆ. ಸೀಮಾಂಚಲದ ಅರಾರಿಯಾ, ಕತಿಹಾರ್, ಕಿಸಾನ್ ಗಂಜ್, ಪೂರ್ನಿಯಾ ಜಿಲ್ಲೆಗಳಲ್ಲಿ 24 ವಿಧಾನಸಭಾ ಕ್ಷೇತ್ರಗಳಿವೆ. ಈ ಕ್ಷೇತ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಮತದಾರರಿದ್ದಾರೆ.
ಈಗ ಕತಿಹಾರ್ ಜಿಲ್ಲೆಯ ಬಲರಾಮಪುರ ಹಾಗೂ ಪೂರ್ನಿಯಾ ಜಿಲ್ಲೆಯ ಬೈಸಿ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಎಂಐಎಂ ಮುನ್ನಡೆ ಸಾಧಿಸಿದೆ. ಕಳೆದ ಭಾರಿ ಎಂಐಎಂ ಪಕ್ಷದಿಂದ ಐದು ಮಂದಿ ಶಾಸಕರ ಪೈಕಿ ನಾಲ್ವರು ಆರ್ಜೆಡಿ ಗೆ ವಲಸೆ ಹೋಗಿದ್ದಾರೆ.
ಮುಸ್ಲಿಂ ಸಮುದಾಯದ ಜನಸಂಖ್ಯೆ ಹೆಚ್ಚಿರುವ ಸೀಮಾಂಚಲದ 24 ಕ್ಷೇತ್ರಗಳ ಪೈಕಿ 18 ಕ್ಷೇತ್ರಗಳಲ್ಲಿ ಎನ್ಡಿಎ ಮುನ್ನಡೆ ಸಾಧಿಸಿದೆ. ಮಹಾಘಟಬಂಧನ್ ನಾಲ್ಕು ಕ್ಷೇತ್ರಗಳಲ್ಲಿ ಮಾತ್ರ ಮುನ್ನಡೆ ಸಾಧಿಸಿದೆ. - Nov 14, 2025 12:14 IST
85 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿ ಅಸೆಂಬ್ಲಿಯ ಅತಿ ದೊಡ್ಡ ಪಕ್ಷವಾಗುವತ್ತ ಬಿಜೆಪಿ ಹೆಜ್ಜೆ!
ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶ ಸಾಕಷ್ಟು ಅಚ್ಚರಿಗಳಿಗೆ ಕಾರಣವಾಗಿದೆ. ಬಿಜೆಪಿ ಮತ್ತು ಜೆಡಿಯು ತಲಾ 101 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದವು. ಆದರೇ, ಬಿಜೆಪಿ ಪಕ್ಷವು 85 ಕ್ಷೇತ್ರಗಳಲ್ಲಿ ಈಗ ಮುನ್ನಡೆ ಸಾಧಿಸುತ್ತಿದೆ. ಜೆಡಿಯು ಪಕ್ಷ 76 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುತ್ತಿದೆ. ಆರ್ಜೆಡಿ 36 ಕ್ಷೇತ್ರಗಳಲ್ಲಿ ಮಾತ್ರ ಮುನ್ನಡೆ ಸಾಧಿಸಿ ಮೂರನೇ ಸ್ಥಾನಕ್ಕೆ ಕುಸಿದಿದೆ.
ಪ್ರಧಾನಿ ಮೋದಿ ನಾಯಕತ್ವದ ಕಾರಣದಿಂದ ಬಿಹಾರ ಜನರು ಈ ಭಾರಿ ಜೆಡಿಯುಗಿಂತ ಹೆಚ್ಚಿನ ಸ್ಥಾನಗಳನ್ನು ಬಿಜೆಪಿಗೆ ನೀಡಿದ್ದಾರೆ. - Nov 14, 2025 12:04 IST
M-Y ವೋಟ್ ಬ್ಯಾಂಕ್ ಆರ್ಜೆಡಿ ಕೈ ಹಿಡಿಯಲಿಲ್ಲವೇ?
ಬಿಹಾರದಲ್ಲಿ M-Y ಆರ್.ಜೆ.ಡಿ. ಪಕ್ಷದ ಪ್ರಮುಖ ವೋಟ್ ಬ್ಯಾಂಕ್. ಎಂ ಅಂದರೇ, ಮುಸ್ಲಿಂ ಮತ್ತು ವೈ ಅಂದರೇ, ಯಾದವ್. ಈ ಎರಡೂ ಸಮುದಾಯಗಳು ಆರ್.ಜೆ.ಡಿ. ಪಕ್ಷದ ಪ್ರಮುಖ ವೋಟ್ ಬ್ಯಾಂಕ್. ಆರ್.ಜೆ.ಡಿ. ಸ್ಥಾಪಕ ಲಾಲೂ ಪ್ರಸಾದ್ ಯಾದವ್ ಈ ಹಿಂದೆ ಲಾಲ್ ಕೃಷ್ಣ ಅಡ್ವಾಣಿ ಅವರ ರಥಯಾತ್ರೆಯನ್ನು ಬಿಹಾರದ ಸಮಷ್ಟಿಪುರದಲ್ಲಿ ತಡೆದು ನಿಲ್ಲಿಸಿದ್ದರು. ಅಡ್ವಾಣಿ ಅವರನ್ನು ಲಾಲೂ ಸರ್ಕಾರ ಬಂಧಿಸಿತ್ತು. ಇದರಿಂದಾಗಿ ಲಾಲೂ ಪ್ರಸಾದ್ ಯಾದವ್ ಬಿಹಾರದಲ್ಲಿ ಮುಸ್ಲಿಂ ಸಮುದಾಯದ ಪ್ರೀತಿ, ವಿಶ್ವಾಸ, ಬೆಂಬಲವನ್ನು ಗಳಿಸಿಕೊಂಡಿದ್ದರು .
ಬಿಹಾರದಲ್ಲಿ 87 ವಿಧಾನಸಭಾ ಕ್ಷೇತ್ರದಲ್ಲಿ ಶೇ.25 ರಷ್ಟು ಮುಸ್ಲಿಂ ಸಮುದಾಯದ ಮತಗಳಿವೆ. ಈ ಕ್ಷೇತ್ರಗಳಲ್ಲಿ ಮುಸ್ಲಿಂ ಸಮುದಾಯದ ಮತಗಳೇ ಯಾವುದೇ ಪಕ್ಷಕ್ಕಾಗಲೀ ಗೆಲುವಿಗೆ ನಿರ್ಣಾಯಕ. ಆದರೇ, ಈ ಭಾರಿ ಮುಸ್ಲಿಂ ಸಮುದಾಯದ ಮತಗಳು ಕೂಡ ಆರ್ಜೆಡಿ ಕೈ ಹಿಡಿದಿಲ್ಲ.
ಇದಕ್ಕೆ ಕಾರಣ ಆರ್.ಜೆ.ಡಿ ಪಕ್ಷ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿರಲಿಲ್ಲ. ಮುಸ್ಲಿಂ ಸಮುದಾಯದ ಹಿತಾಸಕ್ತಿ ರಕ್ಷಣೆ ಮಾಡುವಂಥ ಕ್ರಮಗಳನ್ನು ತೇಜಸ್ವಿ ಯಾದವ್ ಕೈಗೊಂಡಿರಲಿಲ್ಲ. ಹೀಗಾಗಿ ಈ ಭಾರಿ ಮುಸ್ಲಿಂ ಸಮುದಾಯ ಆರ್ಜೆಡಿ ಯನ್ನು ಈ ಹಿಂದಿನಂತೆ ಪ್ರಬಲವಾಗಿ ಬೆಂಬಲಿಸಿಲ್ಲ. ಇದು ಕೂಡ ಆರ್ಜೆಡಿ ಹಾಗೂ ಮಹಾಘಟಬಂಧನ್ ಗೆ ಹಿನ್ನಡೆಗೆ ಕಾರಣವಾಗಿದೆ. - Nov 14, 2025 12:00 IST
190ರ ಗಡಿ ದಾಟಿ NDA ಮೈತ್ರಿಕೂಟ ಮುನ್ನಡೆ
/fit-in/580x348/filters:format(webp)/newsfirstlive-kannada/media/media_files/2025/11/14/bihar_assembly_result_2025_12noon-2025-11-14-11-59-19.png)
- Nov 14, 2025 11:42 IST
ಎನ್ಡಿಎ ನಿಂದ ಸ್ಪರ್ಧಿಸಿ 22 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ ಎಲ್ಜೆಪಿ!
ಬಿಹಾರದ ವಿಧಾನಸಭೆ ಚುನಾವಣಾ ಫಲಿತಾಂಶ ಸಾಕಷ್ಟು ಅಚ್ಚರಿಗಳಿಗೆ ಕಾರಣವಾಗಿದೆ. ಕಳೆದ 2020ರ ವಿಧಾನಸಭಾ ಚುನಾವಣೆ ಫಲಿತಾಂಶಕ್ಕೂ ಈ ಭಾರಿಗೂ ಹೋಲಿಕೆ ಮಾಡಿ ನೋಡಲಾಗುತ್ತಿದೆ. ಕಳೆದ ಭಾರಿ ಕೇವಲ ಒಂದೇ ಒಂದು ಕ್ಷೇತ್ರ ಗೆದ್ದಿದ್ದ ಚಿರಾಗ್ ಪಾಸ್ವಾನ್ ಅವರ ಎಲ್ಜೆಪಿ ಪಕ್ಷ ಈ ಭಾರಿ ಎನ್ಡಿಎ ನಿಂದ ಸ್ಪರ್ಧಿಸಿತ್ತು. ಎನ್ಡಿಎ ನಲ್ಲಿ 29 ಕ್ಷೇತ್ರಗಳನ್ನು ಪಡೆದುಕೊಂಡು ಸ್ಪರ್ಧಿಸಿದ್ದ ಎಲ್ಜೆಪಿ ಪಕ್ಷ, 22 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.
ಕಳೆದ ಭಾರಿ ಎನ್ಡಿಎ ನಿಂದ ದೂರ ಸರಿದಿದ್ದ ಎಲ್ಜೆಪಿ ಪಕ್ಷ ಜೆಡಿಯು ಸ್ಪರ್ಧಿಸಿದ್ದ ಕ್ಷೇತ್ರಗಳಲ್ಲಿ ಮಾತ್ರವೇ ತನ್ನ ಅಭ್ಯರ್ಥಿಗಳನ್ನ ಕಣಕ್ಕಿಳಿಸಿ, ಜೆಡಿಯು ಪಕ್ಷ 43 ಸ್ಥಾನಗಳಿಗೆ ಕುಸಿಯುವಂತೆ ಮಾಡಿತ್ತು. ಆದರೇ, ಈ ಭಾರಿ ಆ ರೀತಿ ಮಾಡಲಿಲ್ಲ.
ಈ ಭಾರಿ ಎಲ್ಜೆಪಿ ಪಕ್ಷದ ಚಿರಾಗ್ ಪಾಸ್ವಾನ್ ರನ್ನು ವಿಶ್ವಾಸಕ್ಕೆ ಪಡೆಯುವಲ್ಲಿ ಬಿಜೆಪಿ ಮತ್ತು ಜೆಡಿಯು ನಾಯಕರು ಯಶಸ್ವಿಯಾಗಿದ್ದರು. ಕೇಂದ್ರದಲ್ಲಿ ಮೋದಿ ಸರ್ಕಾರದಲ್ಲಿ ಸಚಿವರಾಗಿರುವುದರಿಂದ ಬಿಜೆಪಿ ಹಾಗೂ ಜೆಡಿಯು ವಿರುದ್ಧ ಎಲ್ಜೆಪಿ ಪಕ್ಷ ಬಿಹಾರ ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವುದು ಸೂಕ್ತವಲ್ಲ, ಮೈತ್ರಿಧರ್ಮಕ್ಕೆ ಬದ್ದವಾಗಿ ಎನ್ಡಿಎ ನೊಳಗೆ ಚುನಾವಣೆಗೆ ಸ್ಪರ್ಧಿಸುವಂತೆ ಚಿರಾಗ್ ಪಾಸ್ವಾನ್ ರನ್ನು ಮನವೊಲಿಸಲಾಗಿತ್ತು. ಇದರಿಂದಾಗಿ ಚಿರಾಗ್ ಪಾಸ್ವಾನ್ ಎನ್ಡಿಎ ಮೈತ್ರಿಕೂಟದ ಭಾಗವಾಗಿ 29 ಕ್ಷೇತ್ರಗಳನ್ನು ತಮ್ಮ ಪಕ್ಷಕ್ಕೆ ಪಡೆದುಕೊಂಡು ಸ್ಪರ್ಧಿಸಿದ್ದರು. ಇದು ಚಿರಾಗ್ ಪಾಸ್ವಾನ್ ಗೂ ಉತ್ತಮ ಫಲಿತಾಂಶ ನೀಡಿದೆ. ಸ್ಪರ್ಧಿಸಿದ್ದ 29 ಕ್ಷೇತ್ರಗಳ ಪೈಕಿ 22 ಕ್ಷೇತ್ರಗಳಲ್ಲಿ ಎಲ್ಜೆಪಿ ಮುನ್ನಡೆ ಸಾಧಿಸಿದೆ. - Nov 14, 2025 11:07 IST
NDA ಮುನ್ನಡೆಯ ಕ್ಷೇತ್ರಗಳ ಸಂಖ್ಯೆ 190 ಕ್ಕೇರಿಕೆ!
ಬಿಹಾರದಲ್ಲಿ ಎನ್ಡಿಎ ಮುನ್ನಡೆಯ ಕ್ಷೇತ್ರಗಳ ಸಂಖ್ಯೆ 190 ಕ್ಕೇರಿಕೆಯಾಗಿದೆ. ಎನ್ಡಿಎ ಕಳೆದ ಭಾರಿಗಿಂತ ಈ ಭಾರಿ 70 ಕ್ಕೂ ಹೆಚ್ಚಿನ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.
ಮಹಾಘಟಬಂಧನ್ ಮುನ್ನಡೆಯ ಕ್ಷೇತ್ರಗಳ ಸಂಖ್ಯೆ 49 ಕ್ಕೆ ಕುಸಿದಿದೆ. - Nov 14, 2025 10:49 IST
ಒನ್ ಸೈಡೆಡ್ ಆದ ಬಿಹಾರ ಚುನಾವಣೆ : 185 ಕ್ಷೇತ್ರಗಳಲ್ಲಿ NDA ಗೆ ಮುನ್ನಡೆ
ದೇಶದಲ್ಲಿ ಭಾರಿ ಕುತೂಹಲಕ್ಕೆ ಕಾರಣವಾಗಿದ್ದ ಬಿಹಾರ ಅಸೆಂಬ್ಲಿ ಚುನಾವಣೆ ಈಗ ಫಲಿತಾಂಶ ಬಂದಾಗ, ಸಂಪೂರ್ಣ ಒನ್ ಸೈಡೆಡ್ ಆಗಿರೋದು ಪಕ್ಕಾ ಆಗಿದೆ . ಆಡಳಿತರೂಢ ಎನ್ಡಿಎ 243 ಕ್ಷೇತ್ರಗಳ ಪೈಕಿ 185 ಕ್ಷೇತ್ರಗಳಲ್ಲಿ ಭರ್ಜರಿ ಮುನ್ನಡೆ ಸಾಧಿಸಿದೆ. ಕಳೆದ ಭಾರಿ 122 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದ ಎನ್ಡಿಎ ಈ ಭಾರಿ ಅದಕ್ಕಿಂತ 63 ಹೆಚ್ಚಿನ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.
ವಿರೋಧ ಪಕ್ಷಗಳ ಮೈತ್ರಿಕೂಟವಾದ ಮಹಾಘಟಬಂಧನ್ 58 ಕ್ಷೇತ್ರಗಳಲ್ಲಿ ಮಾತ್ರ ಮುನ್ನಡೆ ಸಾಧಿಸಿದೆ. ಕಳೆದ ಭಾರಿ ಮಹಾಘಟಬಂಧನ್ 112 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಆದರೇ, ಕಳೆದ ಭಾರಿಗೆ ಹೋಲಿಸಿದರೇ, ಈ ಭಾರಿ ಮಹಾಘಟಬಂಧನ್ ಗೆ ಭಾರಿ ಹಿನ್ನಡೆ, ಮುಖಭಂಗ ಆಗಿದೆ. - Nov 14, 2025 10:38 IST
ವಿರೋಧ ಪಕ್ಷಗಳ ಅಸಂಬದ್ದತೆಗೆ ಸೋಲು, ಬಿಹಾರದ ಅಭಿವೃದ್ದಿಗೆ ಗೆಲುವು ಎಂದ ಜೆಡಿಯು!
ಬಿಹಾರ ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆ, ಜೆಡಿಯು ಪಕ್ಷದ ಪಾಳಯದಲ್ಲಿ ಸಂತಸ, ಖುಷಿ ಮನೆ ಮಾಡಿದೆ. ಜೆಡಿಯು ನೇತೃತ್ವದ ಎನ್ಡಿಎಗೆ ಭರ್ಜರಿ ಗೆಲುವು ಸಿಗೋದು ಪಕ್ಕಾ ಆಗಿದೆ. ಇದರಿಂದಾಗಿ ವಿರೋಧ ಪಕ್ಷಗಳ ಅಸಂಬದ್ದತೆಗೆ ಸೋಲು ಆಗಿದೆ. ಬಿಹಾರದ ಅಭಿವೃದ್ದಿಗೆ ಗೆಲುವು ಸಿಗುತ್ತಿದೆ ಎಂದು ಜೆಡಿಯು ಟ್ವೀಟ್ ಮಾಡಿದೆ. ಈ ಮೂಲಕ ವಿರೋಧ ಪಕ್ಷಗಳಿಗೆ ಜೆಡಿಯು ಭರ್ಜರಿಯಾಗಿ ಟಾಂಗ್ ನೀಡಿದೆ.
आज विपक्ष की बकवास हार रही है… बिहार का विकास जीत रहा है।
— Janata Dal (United) (@Jduonline) November 14, 2025
आज कोई एक नहीं, पूरा बिहार जीत रहा है।#Election2025#Biharpic.twitter.com/CGphNGE7jf - Nov 14, 2025 10:34 IST
ಕಾಂಗ್ರೆಸ್ ನಿಂದಾಗಿ ಮಹಾಘಟಬಂಧನ್ ಗೆ ಸೋಲು! 61 ಕ್ಷೇತ್ರದಲ್ಲಿ ಸ್ಪರ್ಧಿಸಿ 14 ಕ್ಷೇತ್ರದಲ್ಲಿ ಮಾತ್ರ ಮುನ್ನಡೆ!
ಬಿಹಾರದಲ್ಲಿ ಮಹಾಘಟಬಂಧನ್ 2020 ರಲ್ಲಿ ಮಾಡಿದ್ದ ತಪ್ಪುಗಳನ್ನೇ ಈ ಭಾರಿಯೂ ಮಾಡಿದೆ. 2020 ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ 70 ಕ್ಷೇತ್ರಗಳನ್ನು ನೀಡಲಾಗಿತ್ತು. ಆದರೇ, ಕಾಂಗ್ರೆಸ್ ಗೆದ್ದಿದ್ದು ಬರೀ 19 ಕ್ಷೇತ್ರ ಮಾತ್ರ. ಇನ್ನೂ ಈ ಭಾರಿಯೂ ಕಾಂಗ್ರೆಸ್ ನಾಯಕರು ಬಿಗಿ ಪಟ್ಟು ಹಿಡಿದು 61 ಕ್ಷೇತ್ರಗಳನ್ನು ಆರ್ಜೆಡಿಯಿಂದ ಪಡೆದು ಸ್ಪರ್ಧಿಸಿದ್ದರು. ಆದರೇ, ಕಾಂಗ್ರೆಸ್ ಈ ಭಾರಿ ಮತ್ತೆ ತನ್ನ ತೀರಾ ಕಳಪೆ ಸಾಧನೆ, ಪ್ರದರ್ಶನವನ್ನೇ ಮುಂದುವರಿಸಿದೆ. ಈ ಭಾರಿ ಕಾಂಗ್ರೆಸ್ ಪಕ್ಷ 14 ಕ್ಷೇತ್ರಗಳಲ್ಲಿ ಮಾತ್ರವೇ ಮುನ್ನಡೆ ಸಾಧಿಸಿದೆ.
ಈ ಭಾರಿ ಆರ್ಜೆಡಿ ಪಕ್ಷ 143 ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ. ಇವುಗಳ ಪೈಕಿ ಈಗ ಆರ್ಜೆಡಿ 46 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುತ್ತಿದೆ. ಆದರೇ, ಮೈತ್ರಿಕೂಟದಲ್ಲಿ ಎರಡನೇ ಅತಿ ಹೆಚ್ಚು ಸೀಟು ಪಡೆದ ಕಾಂಗ್ರೆಸ್ ಪಕ್ಷದ ಸಾಧನೆಯೇ ತೀರಾ ಕಳಪೆಯಾಗಿದೆ. ಇದರಿಂದಾಗಿ ಮಹಾಘಟಬಂಧನ್ 100ರ ಗಡಿಗೂ ಬರಲು ಸಾಧ್ಯವಾಗಿಲ್ಲ.
ಇನ್ನೂ ಈ ಭಾರಿಯ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯು ಮತ್ತು ಬಿಜೆಪಿ ಪಕ್ಷಗಳೆರಡೂ ತಲಾ 101 ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದವು. ಜೆಡಿಯು 75 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದರೇ, ಬಿಜೆಪಿ 73 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುತ್ತಿದೆ.
ಇನ್ನೂ 2020ರ ವಿಧಾನಸಭಾ ಚುನಾವಣೆಗೆ ಹೋಲಿಸಿದರೇ, ಈ ಭಾರಿ ಜೆಡಿಯುಗೂ ಭರ್ಜರಿ ಲಾಭವಾಗಿದೆ. ಸಿಎಂ ನೀತೀಶ್ ಕುಮಾರ್ ಅವರ ಆರೋಗ್ಯ ಸರಿ ಇಲ್ಲ, ನೀತೀಶ್ ಕುಮಾರ್ ಮತ್ತೆ ಸಿಎಂ ಆಗಲ್ಲ ಎಂದು ಆರ್ಜೆಡಿ ಪ್ರಚಾರ ನಡೆಸಿದರೂ, ಕೂಡ ಜನರು ಜೆಡಿಯು ಪಕ್ಷವನ್ನು ಕೈ ಬಿಟ್ಟಿಲ್ಲ. ಜೆಡಿಯು ಪಕ್ಷವು ಈಗ ವಿಧಾನಸಭೆಯ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತಿದೆ. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಜೆಡಿಯು 43 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಿತ್ತು. ಆದರೇ, ಈ ಭಾರಿ 75 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುತ್ತಿದೆ. ಕಳೆದ ಭಾರಿಗಿಂತ ಈ ಭಾರಿ ದೊಡ್ಡ ಲಾಭ ಜೆಡಿಯು ಗೆ ಆಗುತ್ತಿದೆ. - Nov 14, 2025 10:33 IST
ಭರ್ಜರಿ ಜಯಭೇರಿಯತ್ತ NDA ಮೈತ್ರಿಕೂಟ
/fit-in/580x348/filters:format(webp)/newsfirstlive-kannada/media/media_files/2025/11/14/bihar_assembly_result_2025-2025-11-14-10-32-16.png)
- Nov 14, 2025 10:14 IST
ಬಿಹಾರದಲ್ಲಿ ಮತ್ತೆ ನೀತೀಶ್ ಬರ್ತಿದ್ದಾರೆ ಎಂದು ಜೆಡಿಯು ಟ್ವೀಟ್
ಬಿಹಾರದಲ್ಲಿ ಮತ ಎಣಿಕೆ ಆರಂಭವಾದ ಬಳಿಕ ಪ್ರಾರಂಭಿಕ ಹಂತದಲ್ಲಿ ಎನ್ಡಿಎಗೆ ಭರ್ಜರಿ ಮುನ್ನಡೆ ಸಿಕ್ಕಿದೆ. ಮೊದಲ ಒಂದು ಗಂಟೆಯಲ್ಲೇ ಎನ್ಡಿಎ ಬಹುಮತದ ಮ್ಯಾಜಿಕ್ ನಂಬರ್ ಆದ 122 ಕ್ಷೇತ್ರಗಳಿಗಿಂತ ಹೆಚ್ಚಿನ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಇದು ಜೆಡಿಯು ಪಾಳಯದಲ್ಲಿ ಉತ್ಸಾಹ ಗರಿಗೆದರಲು ಕಾರಣವಾಗಿದೆ.
ಜೆಡಿಯು ಪಕ್ಷವು, ಬಿಹಾರದಲ್ಲಿ ಮತ್ತೆ ನೀತೀಶ್ ಕುಮಾರ್ ಜೀ ಸರ್ಕಾರ ಬರುತ್ತಿದೆ ಎಂದು ಟ್ವೀಟ್ ಮಾಡಿದೆ.
ಇನ್ನೂ ಮತ್ತೊಂದು ಟ್ವೀಟ್ ನಲ್ಲಿ ಬಿಹಾರದಲ್ಲಿ ಇಂದು ವಿರೋಧ ಪಕ್ಷಗಳು ಸೋಲುತ್ತಿವೆ. ಬಿಹಾರದ ಅಭಿವೃದ್ದಿಗೆ ಗೆಲುವಾಗುತ್ತಿದೆ. ಇಂದು ಯಾವುದೇ ಒಬ್ಬ ವ್ಯಕ್ತಿಯಲ್ಲ, ಇದು ಇಡೀ ಬಿಹಾರದ ಗೆಲುವು ಎಂದು ಜೆಡಿಯು ಟ್ವೀಟ್ ಮಾಡಿದೆ. ಜೆಡಿಯು ಪಕ್ಷ ಗೆಲುವು ಅನ್ನು ಸಂಭ್ರಮಿಸುತ್ತಿದೆ.बिहार है तैयार, फिर से आ रही है नीतीश जी की सरकार।#Bihar#NitishKumar#JDU#JanataDalUnited#25Se30FirSeNitishpic.twitter.com/tL7xLeZnqM
— Janata Dal (United) (@Jduonline) November 14, 2025 - Nov 14, 2025 09:59 IST
ಬಿಹಾರದಲ್ಲಿ ಮತ್ತೆ ಸ್ಟ್ರಾಂಗ್ ಆದ ಜೆಡಿಯು, ಬಿಜೆಪಿ!
ಬಿಹಾರದಲ್ಲಿ 2020 ರ ವಿಧಾನಸಭಾ ಚುನಾವಣೆಯಲ್ಲಿ ಎನ್ಡಿಎ 125 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಆದರೇ, 2025ರ ವಿಧಾನಸಭಾ ಚುನಾವಣೆಯಲ್ಲಿ ಇದುವರೆಗೂ 167 ವಿಧಾನಸಭಾ ಕ್ಷೇತ್ರಗಳಲ್ಲಿ ಎನ್ಡಿಎ ಮುನ್ನಡೆ ಸಾಧಿಸಿದೆ. ಕಳೆದ ಭಾರಿಗಿಂತ ಈ ಭಾರಿ ಹೆಚ್ಟಿನ ಕ್ಷೇತ್ರಗಳಲ್ಲಿ ಎನ್ಡಿಎ ಗೆಲ್ಲುವ ಸುಳಿವು ಸಿಗುತ್ತಿದೆ.
ಕಳೆದ ಭಾರಿ ಜೆಡಿಯು 43 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಿತ್ತು. ಬಿಜೆಪಿ ಪಕ್ಷ 74 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು.
ಇನ್ನೂ ವಿಪಕ್ಷ ಆರ್ಜೆಡಿ 75 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಕಾಂಗ್ರೆಸ್ 19 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು.
ಆದರೇ, 2025ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯು 75 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿ 73 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಈ ಭಾರಿ ನೀತೀಶ್ ಕುಮಾರ್ ಅವರ ಜೆಡಿಯು ಪಕ್ಷವೇ ವಿಧಾನಸಭೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮುವ ಸಾಧ್ಯತೆ ಕಾಣುತ್ತಿದೆ. - Nov 14, 2025 09:46 IST
ಪ್ರಶಾಂತ್ ಕಿಶೋರ್ ರ ಸುರಾಜ್ ಪಾರ್ಟಿಗೆ ಮೂರು ಕ್ಷೇತ್ರದಲ್ಲಿ ಮಾತ್ರ ಮುನ್ನಡೆ
ಚುನಾವಣಾ ರಣತಂತ್ರ ನಿಪುಣ ಪ್ರಶಾಂತ್ ಕಿಶೋರ್ ನಾಯಕತ್ವದ ಜನ ಸುರಾಜ್ ಪಾರ್ಟಿ ಬಿಹಾರ ಅಸೆಂಬ್ಲಿ ಚುನಾವಣೆಯಲ್ಲಿ ಕೇವಲ 3 ಕ್ಷೇತ್ರಗಳಲ್ಲಿ ಮಾತ್ರ ಮುನ್ನಡೆ ಸಾಧಿಸಿದೆ. ಬಿಹಾರದಲ್ಲಿ ಯಾವುದೇ ಇಂಪ್ಯಾಕ್ಟ್ ಉಂಟು ಮಾಡುವಲ್ಲಿ ವಿಫಲವಾಗಿದೆ. ಪ್ರಶಾಂತ್ ಕಿಶೋರ್ ಕೂಡ ಖುದ್ದಾಗಿ ಚುನಾವಣೆಗೆ ಸ್ಪರ್ಧಿಸಿರಲಿಲ್ಲ. ಆದರೇ, ಪ್ರಶಾಂತ್ ಕಿಶೋರ್ ಪಕ್ಷವು ವಿರೋಧ ಪಕ್ಷಗಳ ಮತಗಳನ್ನು ತನ್ನತ್ತ ಸೆಳೆದುಕೊಂಡು ಮಹಾಘಟಬಂಧನ್ ಗೆ ಹೊಡೆತ ನೀಡಿರುವ ಸಾಧ್ಯತೆ ಇದೆ. ಇದರಿಂದ ಜೆಡಿಯು, ಬಿಜೆಪಿಗೆ ಅನುಕೂಲವಾಗಿರಲೂಬಹುದು. ಚುನಾವಣಾ ರಣತಂತ್ರ ನಿಪುಣರಾಗಿ ಪ್ರಶಾಂತ್ ಕಿಶೋರ್ ಸಕ್ಸಸ್ ಆಗಿದ್ದಾರೆ. ಆದರೇ, ರಾಜಕಾರಣಿಯಾಗಿ ಮೊದಲ ಯತ್ನದಲ್ಲಿ ಸೋಲು ಅನುಭವಿಸಿದ್ದಾರೆ.
- Nov 14, 2025 09:41 IST
ಮೊಕಾಮಾ ಕ್ಷೇತ್ರದಲ್ಲಿ ಜೈಲಿನಲ್ಲಿರುವ ಜೆಡಿಯು ಪಕ್ಷದ ಅನಂತ್ ಸಿಂಗ್ ಗೆ ಮುನ್ನಡೆ
ಬಿಹಾರದ ಪಾಟ್ನಾದ ಮೊಕಾಮಾ ಕ್ಷೇತ್ರದಲ್ಲಿ ಜೆಡಿಯು ಪಕ್ಷದ ಅನಂತ್ ಸಿಂಗ್ ಮುನ್ನಡೆ ಸಾಧಿಸಿದ್ದಾರೆ. ಬಾಹುಬಲಿ ನಾಯಕ ಎಂದೇ ಹೆಸರಾಗಿರುವ ಅನಂತ್ ಸಿಂಗ್ ಮುನ್ನಡೆ ಸಾಧಿಸಿದ್ದು, ಎದುರಾಳಿ ಆರ್ಜೆಡಿ ಪಕ್ಷದ ವೀಣಾ ದೇವಿ ಹಿನ್ನಡೆ ಅನುಭವಿಸಿದ್ದಾರೆ. ಮೊದಲ ಸುತ್ತಿನಲ್ಲಿ 2,700 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಸುರಜಾಭಾನ್ ಸಿಂಗ್ ಪತ್ನಿ ವೀಣಾ ದೇವಿ, ಅನಂತ್ ಸಿಂಗ್ ವಿರುದ್ಧ ಸ್ಪರ್ಧಿಸಿದ್ದಾರೆ.
ಅನಂತ್ ಸಿಂಗ್ ಸದ್ಯ ಜೈಲಿನಲ್ಲಿದ್ದಾರೆ. ಅನಂತ್ ಸಿಂಗ್ ಪರವಾಗಿ ಮೊಕಾಮಾ ಕ್ಷೇತ್ರದಲ್ಲಿ ಜೆಡಿಯು ನಾಯಕ ಲಾಲನ್ ಸಿಂಗ್ ಪ್ರಚಾರದ ಹೊಣೆ ಹೊತ್ತಿಕೊಂಡಿದ್ದರು. ಜನ ಸುರಾಜ್ ಪಾರ್ಟಿಯ ಬೆಂಬಲಿಗನ ಕೊಲೆ ಕೇಸ್ ನಲ್ಲಿ ಅನಂತ್ ಸಿಂಗ್ ರನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳಿಸಿದ್ದಾರೆ.
ಇನ್ನೂ ಮೊಕಾಮಾ ಕ್ಷೇತ್ರದಲ್ಲಿ ಜೈಲಿನ ಕಂಬಿಗಳು ತುಂಡಾಗಲಿವೆ. ನಮ್ಮ ಸಿಂಹ ಹೊರಗೆ ಬರಲಿದೆ ಎಂಬ ಪೋಸ್ಟರ್ ಗಳು ಮೊಕಾಮಾ ಕ್ಷೇತ್ರದಲ್ಲಿ ರಾರಾಜಿಸುತ್ತಿವೆ. ಈ ಮೂಲಕ ಅನಂತ್ ಸಿಂಗ್ ಈ ಚುನಾವಣೆ ಗೆದ್ದು, ಜೈಲಿನಿಂದ ಹೊರ ಬರುತ್ತಾರೆ ಎಂದು ಬೆಂಬಲಿಗರು ಅನಂತ್ ಸಿಂಗ್ ಪರವಾಗಿ ಪೋಸ್ಟರ್ ಗಳನ್ನು ಹಾಕಿದ್ದಾರೆ. - Nov 14, 2025 09:34 IST
ಎನ್ಡಿಎಗೆ 152 ಕ್ಷೇತ್ರಗಳಲ್ಲಿ ಮುನ್ನಡೆ
ಬಿಹಾರದಲ್ಲಿ ಈಗ ಎನ್ಡಿಎ ಮುನ್ನಡೆಯ ಕ್ಷೇತ್ರಗಳ ಸಂಖ್ಯೆ 152 ಕ್ಕೇರಿಕೆಯಾಗಿದೆ. ಜೆಡಿಯು 64 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದರೇ, ಬಿಜೆಪಿ 66 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುತ್ತಿದೆ. ಎಲ್ಜೆಪಿ 13 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುತ್ತಿದೆ. ಎನ್ಡಿಎ ನಲ್ಲಿರುವ ಇತರೆ ಸಣ್ಣ ಪಕ್ಷಗಳು 3 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುತ್ತಿವೆ.
ಇನ್ನೂ ಆರ್ಜೆಡಿ ನೇತೃತ್ವದ ಮಹಾಘಟಬಂಧನ್ 74 ಕ್ಷೇತ್ರಗಳಲ್ಲಿ ಮಾತ್ರ ಮುನ್ನಡೆ ಸಾಧಿಸಿದೆ. ಆರ್ಜೆಡಿ 45 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದರೇ, ಕಾಂಗ್ರೆಸ್ 16 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುತ್ತಿದೆ. - Nov 14, 2025 09:25 IST
139 ಸೀಟುಗಳಲ್ಲಿ ಮುನ್ನಡೆ ಸಾಧಿಸುತ್ತಿರುವ ಎನ್ಡಿಎ
ಬೆಳಿಗ್ಗೆ 9.20
ಬಿಹಾರದಲ್ಲಿ ಬಿರುಸಿನಿಂದ ಮತ ಎಣಿಕೆ ನಡೆಯುತ್ತಿದೆ. ಕ್ಷಣಕ್ಷಣಕ್ಕೂ ಫಲಿತಾಂಶ ರೋಚಕತೆಯತ್ತ ಸಾಗುತ್ತಿದೆ. ಎನ್ಡಿಎ ಗೆ ಮುನ್ನಡೆ ಸಿಕ್ಕಿರುವ ಸ್ಥಾನಗಳ ಸಂಖ್ಯೆ 139 ಕ್ಕೇರಿಕೆಯಾಗಿದೆ. ಜೆಡಿಯು ಮತ್ತು ಬಿಜೆಪಿ ಪಕ್ಷಗಳು ಕ್ರಮವಾಗಿ 59 ಮತ್ತು 58 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ. ಎಲ್ಜೆಪಿ 10 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಎನ್ಡಿಎ ನಲ್ಲಿರುವ ಇತರೆ ಪ್ರಾದೇಶಿಕ ಪಕ್ಷಗಳು 2 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ.
ಆರ್ಜೆಡಿ ನೇತೃತ್ವದ ಮಹಾಘಟಬಂಧನ್ಗೆ 66 ಕ್ಷೇತ್ರಗಳಲ್ಲಿ ಮಾತ್ರ ಮುನ್ನಡೆ ಸಿಕ್ಕಿದೆ. ಆರ್ಜೆಡಿ 45 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದರೇ, ಕಾಂಗ್ರೆಸ್ 12 ಕ್ಷೇತ್ರಗಳಲ್ಲಿ ಮಾತ್ರ ಮುನ್ನಡೆ ಸಾಧಿಸಿದೆ. ತೇಜಸ್ವಿ ಯಾದವ್ ನೇತೃತ್ವದ ಮಹಾಘಟಬಂಧನ್ ಗೆ ಈ ಭಾರಿಯೂ ಕಾಂಗ್ರೆಸ್ ಹೊರೆಯಾಗಿ ಪರಿಣಮಿಸಿದೆ. ಕಾಂಗ್ರೆಸ್ ಪಕ್ಷದ ತೀರಾ ಕಳಪೆ ಪ್ರದರ್ಶನದ ಪರಿಣಾಮ ಮಹಾಘಟಬಂಧನ್ ಹೆಚ್ಚಿನ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಲು ಸಾಧ್ಯವಾಗಿಲ್ಲ. ಜೊತೆಗೆ ತೇಜ್ ಪ್ರತಾಪ್ ಯಾದವ್ ರ ಜನಶಕ್ತಿ ಜನತಾದಳ ಕೂಡ ಆರ್ಜೆಡಿ ಗೆ ಕೆಲವೆಡೆ ಆರ್ಜೆಡಿ ಮತ ಇಬ್ಬಾಗಿಸಿ ಹೊಡೆತ ನೀಡಿದೆ. - Nov 14, 2025 09:06 IST
ಮ್ಯಾಜಿಕ್ ನಂಬರ್ ದಾಟಿದ NDA
ಬಿಹಾರನಲ್ಲಿ ಸರ್ಕಾರ ರಚಿಸಲು 122 ಮ್ಯಾಜಿಕ್ ನಂಬರ್ ಆಗಿದೆ. ಚುನಾವಣೋತ್ತರ ಸಮೀಕ್ಷೆಗಳ ಭವಿಷ್ಯದಂತೆ ಎನ್ಡಿಎ ಒಕ್ಕೂಟ 122ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಆ ಮೂಲಕ ಮತ್ತೊಮ್ಮೆ ಸರ್ಕಾರ ರಚಿಸುವ ವಿಶ್ವಾಸದಲ್ಲಿ ಬಿಜೆಪಿ, ಜೆಡಿಯು ಪಕ್ಷಗಳಿವೆ.
- Nov 14, 2025 08:45 IST
ವುಮೆನ್ ಪವರ್ಗೇಮ್!
ಸರ್ಕಾರ ರಚನೆಗೆ ಮಹಿಳಾ ಮತದಾರರ ನಿರ್ಣಾಯಕವಾಗಿದೆ. ಬಿಹಾರದಲ್ಲಿ 7.43 ಕೋಟಿ ಮತದಾರರಲ್ಲಿ 3.5 ಕೋಟಿ ಮಹಿಳೆಯರಿದ್ದಾರೆ. ಈ ಬಾರಿ 2.52 ಕೋಟಿ ಮಹಿಳೆಯರು, 2.47 ಕೋಟಿ ಪುರುಷರು ಮತ ಚಲಾವಣೆ ಆಗಿದೆ. 2010ರಿಂದ ಇಲ್ಲಿ ಮಹಿಳೆಯರ ಮತದಾನವು ನಿರಂತರವಾಗಿ ಪುರುಷರಿಗಿಂತ ಹೆಚ್ಚಾಗಿದೆ.
ಸಂಪೂರ್ಣ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ :ಬಿಹಾರದಲ್ಲಿ ವುಮೆನ್ ಪವರ್ಗೇಮ್! ಮಹಿಳಾ ಮತದಾರರೇ ನಿರ್ಣಾಯಕ.. ಯಾಕೆ ಗೊತ್ತಾ?
- Nov 14, 2025 08:30 IST
ದಾಖಲೆ ಬರೆದ ಮತದಾನ
ಈ ಬಾರಿ ಚುನಾವಣೆಯಲ್ಲಿ ಮತದಾರ ಹೊಸ ದಾಖಲೆ ಬರೆದಿದ್ದಾನೆ. 2 ಹಂತಗಳಲ್ಲಿ ನಡೆದ ಮತದಾನ, ಶೇ 66.91 ಚಲಾವಣೆ ಆಗಿದೆ.
ದಾಖಲೆ ಬರೆದ ಮತದಾನ
- 2020ರ ವಿಧಾನಸಭಾ ಚುನಾವಣೆಗಿಂತ ಶೇ.12 ರಷ್ಟು ಹೆಚ್ಚಳ
- 2020ರಲ್ಲಿ ಶೇ 59.7ರಷ್ಟಿದ್ದ ಚಲಾವಣೆ, ಶೇ.12 ರಷ್ಟು ಏರಿಕೆ
- ಬಿಹಾರದಲ್ಲಿ ಒಟ್ಟು 7.5 ಕೋಟಿ ಜನ ತಮ್ಮ ಹಕ್ಕು ಚಲಾವಣೆ
- ಮೊದಲ ಹಂತದಲ್ಲಿ ಶೇ.69.04ರಷ್ಟು ಮಹಿಳಾ ಮತದಾನ
- ಕೇವಲ ಶೇ.61.56ರಷ್ಟು ಪುರುಷರು ಮತ ಚಲಾಯಿಸಿದ್ದಾರೆ
- 2ನೇ ಹಂತದಲ್ಲಿ ಶೇ.74.03ಕ್ಕೇರಿದ ಮಹಿಳೆಯರ ಮತದಾನ
- 2ನೇ ಹಂತದಲ್ಲಿ ಶೇ. 64.1ಕ್ಕೆ ಪುರುಷರ ಮತದಾನ ಕುಸಿತ
- ಒಟ್ಟು ಪುರುಷರು ಶೇ.62.8 ಮತ್ತು ಮಹಿಳೆಯರು ಶೇ.71.6
- ಶೇ. 9 ರಷ್ಟು ಭಾರಿ ವ್ಯತ್ಯಾಸ ಕಾಣಿಸಿದ ಲಿಂಗ ಅನುಪಾತ
- Nov 14, 2025 08:27 IST
122 ಮ್ಯಾಜಿಕ್ ನಂಬರ್
ಬಿಹಾರದ 243 ವಿಧಾನಸಭಾ ಕ್ಷೇತ್ರಗಳಲ್ಲೂ ಮತ ಎಣಿಕೆಕಾರ್ಯ ಆರಂಭವಾಗಿದೆ. 38 ಜಿಲ್ಲೆಗಳಲ್ಲಿ ಏಕಾಕಾಲಕ್ಕೆ ಮತದಾನ ಶುರುವಾಗಿದ್ದು, 14 ಸಾವಿರ ಸಿಬ್ಬಂದಿ, 70ಕ್ಕೂ ಹೆಚ್ಚು ವೀಕ್ಷಕರ ನಿಯೋಜನೆ ಮಾಡಲಾಗಿದೆ. ಸಿಸಿಟಿವಿ ಕಣ್ಗಾವಲು ಜೊತೆ 3 ಹಂತದ ಭದ್ರತಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಇನ್ನು, ರಾಜ್ಯದ ಹಲವು ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. AAP, JSP ಸ್ಪರ್ಧೆ, ಫೋಟೋ ಫಿನಿಶ್ ರಿಸಲ್ಟ್ ನಿರೀಕ್ಷೆ ಹೊಂದಿವೆ. 243 ಸಂಖ್ಯೆ ಬಲಾಬಲ ಹೊಂದಿರುವ ಬಿಹಾರ ವಿಧಾನಸಭೆಗೆ ಸರ್ಕಾರ ರಚನೆ ಮಾಡಲು 122 ಮ್ಯಾಜಿಕ್ ನಂಬರ್.
- Nov 14, 2025 08:22 IST
ಯಾರಿಗೆ ಮಣೆ..?
ಬಿಹಾರ ಚುನಾವಣೆಗೆ ಇವತ್ತು ಕ್ಲೈಮ್ಯಾಕ್ಸ್ ಸಿಗಲಿದೆ. ಎಲೆಕ್ಷನ್ ಫಲಿತಾಂಶಕ್ಕಾಗಿ ದೇಶವೇ ಕಾತರದಿಂದ ಕಾಯುತ್ತಿದ್ದು, ಮತದಾರ ಯಾರಿಗೆ ಮಣೆ ಹಾಕಿದ್ದಾನೆ ಎಂದು ತಿಳಿಯಲಿದೆ. ಈಗಾಗಲೇ ಕೌಂಟಿಂಗ್ಗೆ ಶುರುವಾಗಿದ್ದು, ಎಕ್ಸೈಟ್ಮೆಂಟ್ ಹೆಜ್ಜಾಗಿದೆ.
ರಾಜಕಾರಣದಲ್ಲಿ ಎದ್ದಿರುವ ಪ್ರಶ್ನೆಗಳು..?
- ಬಿಹಾರದಲ್ಲಿ ನವೆಂಬರ್ ಕ್ರಾಂತಿ ಗಾಳಿ ಬೀಸುತ್ತಾ?
- ವಿರೋಧಿಗಳ ಚಕ್ರವ್ಯೂಹ ಭೇದಿಸುತ್ತಾ ನಿತೀಶ್ ‘ಬಾಣ’?
- ಎನ್ಡಿಎಗೆ ಕತ್ತಲಕೂಪಕ್ಕೆ ತಳ್ಳಿ ಬೆಳಗುತ್ತಾ ಲಾಟೀನ್?
- ನಿತೀಶ್ಗೆ ಗೆಲುವಿನ ಹೂವಿನ ಹಾಸಿಗೆ ಹಾಸುತ್ತಾ ಬಿಜೆಪಿ?
- ತೇಜಸ್ವಿಗೆ ವರ ಆಗುತ್ತಾ ಶಾಪವಾಗುತ್ತಾ ‘ಹಸ್ತ’ಲಾಘವ?
- Nov 14, 2025 08:17 IST
ಪ್ರಮುಖ ಅಭ್ಯರ್ಥಿಗಳು
ಅಭ್ಯರ್ಥಿ
ಪಕ್ಷ
ಕ್ಷೇತ್ರ
ತೇಜಸ್ವಿ ಯಾದವ್ ಆರ್ಜೆಡಿ ರಾಘೋಪುರ ತೇಜ್ ಪ್ರತಾಪ್ ಯಾದವ್ ಆರ್ಜೆಡಿ ಮಹುಮಾ ವಿಜಯ್ ಕುಮಾರ್ ಸಿಜ್ಹಾ ಬಿಜೆಪಿ ಲಿಖಿಸರಾಯ್ ಸಾಮ್ರಾಟ್ ಚೌಧರಿ ಬಿಜೆಪಿ ತಾರಾಪುರ ಅನಂತ್ ಸಿಂಗ್ ಜೆಡಿಯು ಮೊಕಾಮಾ ಮೈಥಿಲಿ ಠಾಕೂರ್ ಬಿಜೆಪಿ ಅಲಿನಗರ - Nov 14, 2025 08:11 IST
ಮತ ಎಣಿಕೆ ಮೇಲೆ ಎಲ್ಲರ ಚಿತ್ತ
ಬಿಹಾರ ವಿಧಾನಸಭಾ ಚುನಾವಣೆಯ ಎರಡೂ ಹಂತಗಳಲ್ಲಿ ಭಾರೀ ಮತದಾನ ನಡೆದ ನಂತರ, ಎಲ್ಲರ ಕಣ್ಣುಗಳು ಇಂದಿನ ಮತ ಎಣಿಕೆಯ ಮೇಲೆ ನೆಟ್ಟಿವೆ. ಎನ್ಡಿಎ, ಮಹಾ ಮೈತ್ರಿಕೂಟ ಮತ್ತು ಪ್ರಶಾಂತ್ ಕಿಶೋರ್ ಅವರ ಜನ ಸುರಾಜ್ ಪಕ್ಷ (jan suraaj party) ಎಲ್ಲವೂ ಸರ್ಕಾರ ರಚನೆಗಾಗಿ ಪೈಪೋಟಿ ನಡೆಸುತ್ತಿವೆ.
ಇದನ್ನೂ ಓದಿ: ಇವತ್ತು ಬಿಹಾರ ಚುನಾವಣಾ ಫಲಿತಾಂಶ.. ಯಾರಿಗೆ ಗೆಲುವಿನ ಹಾರ..?
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us