/newsfirstlive-kannada/media/media_files/2026/02/21/red-fort-2026-02-21-10-45-27.jpg)
ನವದೆಹಲಿ: ದೇಶದ ರಾಜಧಾನಿ ದೆಹಲಿಯಲ್ಲಿ ಮತ್ತೊಮ್ಮೆ ಉಗ್ರರ ಕರಿನೆರಳು ಆವರಿಸಿದೆ. ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾ (LeT) ಉಗ್ರ ಸಂಘಟನೆಯು ದೆಹಲಿಯ ಐತಿಹಾಸಿಕ ಕೆಂಪು ಕೋಟೆ ಹಾಗೂ ಚಾಂದಿನಿ ಚೌಕ್ನಲ್ಲಿರುವ ಪ್ರಸಿದ್ಧ ದೇವಾಲಯವೊಂದರ ಬಳಿ ಸ್ಫೋಟ ನಡೆಸಲು ಸಂಚು ರೂಪಿಸುತ್ತಿದೆ ಎಂಬ ಆಘಾತಕಾರಿ ಮಾಹಿತಿ ಲಭ್ಯವಾಗಿದೆ.
ಭದ್ರತಾ ಏಜೆನ್ಸಿಗಳ ಮೂಲಗಳ ಪ್ರಕಾರ, ಉಗ್ರರು ಸುಧಾರಿತ ಸ್ಫೋಟಕ ಸಾಧನಗಳನ್ನು (IED) ಬಳಸಿ ದಾಳಿ ನಡೆಸಲು ಯೋಜನೆ ರೂಪಿಸುತ್ತಿದ್ದಾರೆ ಎನ್ನಲಾಗಿದೆ.
ಪ್ರತಿಕಾರದ ನೆಪ
ಕಳೆದ ಫೆಬ್ರವರಿ 6ರಂದು ಪಾಕಿಸ್ತಾನದ ಇಸ್ಲಾಮಾಬಾದ್ನ ಮಸೀದಿಯೊಂದರಲ್ಲಿ ಆತ್ಮಾ*ತಿ ದಾಳಿ ನಡೆದಿತ್ತು. ಈ ಘಟನೆಯಲ್ಲಿ 31 ಮಂದಿ ಮೃತಪಟ್ಟು, 160ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಈ ದಾಳಿಯ ಹೊಣೆಯನ್ನು 'ಇಸ್ಲಾಮಿಕ್ ಸ್ಟೇಟ್' (ISIS) ಹೊತ್ತುಕೊಂಡಿದ್ದರೂ, ಲಷ್ಕರ್-ಎ-ತೈಬಾ ಸಂಘಟನೆಯು ಇದಕ್ಕೆ ಪ್ರತಿಕಾರವಾಗಿ ಭಾರತದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಮುಂದಾಗಿದೆ ಎಂದು ಗುಪ್ತಚರ ಮೂಲಗಳು ಎಚ್ಚರಿಸಿವೆ.
ನವೆಂಬರ್ 2025ರ ಘಟನೆ ಮಾಸುವ ಮುನ್ನವೇ ಮತ್ತೊಂದು ಭೀತಿ:
ಕೇವಲ ಮೂರು ತಿಂಗಳ ಹಿಂದಷ್ಟೇ ಅಂದರೆ 2025ರ ನವೆಂಬರ್ 10ರಂದು ದೆಹಲಿಯ ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಬಳಿ ಕಾರು ಸ್ಫೋಟ ಸಂಭವಿಸಿತ್ತು. ಆ ದುರಂತದಲ್ಲಿ 12 ಅಮಾಯಕರು ಪ್ರಾಣ ಕಳೆದುಕೊಂಡಿದ್ದರು ಮತ್ತು ಎರಡು ಡಜನ್ಗೂ ಹೆಚ್ಚು ಜನ ಗಾಯಗೊಂಡಿದ್ದರು. ಆ ಘಟನೆಯ ಕರಾಳ ನೆನಪು ಮಾಸುವ ಮುನ್ನವೇ ಮತ್ತೊಂದು ದಾಳಿಯ ಬೆದರಿಕೆ ಎದುರಾಗಿದೆ.
ಇದನ್ನೂ ಓದಿ: 16 ಲಕ್ಷ ಮೌಲ್ಯದ ಚಿನ್ನ ಮಾರಲು ಬಂದಾಗ ಮಹಿಳೆ ಲಾಕ್..! ಕಾರಣ..?
ನವೆಂಬರ್ ಸ್ಫೋಟದ ತನಿಖೆಯಲ್ಲಿ ಅಲ್-ಫಲಾಹ್ ವಿಶ್ವವಿದ್ಯಾಲಯದ ವೈದ್ಯ ಉಮರ್ ಮೊಹಮ್ಮದ್ ಎಂಬಾತ ಸ್ಫೋಟಕ ತುಂಬಿದ್ದ ಕಾರನ್ನು ಚಲಾಯಿಸುತ್ತಿದ್ದ ಎಂಬುದು ಡಿಎನ್ಎ ಪರೀಕ್ಷೆಯಿಂದ ದೃಢಪಟ್ಟಿತ್ತು. ಅಂದು ಹರಿಯಾಣದ ಫರಿದಾಬಾದ್ನಲ್ಲಿ ಬರೋಬ್ಬರಿ 2,900 ಕೆಜಿ ಅಮೋನಿಯಂ ನೈಟ್ರೇಟ್ ಸ್ಫೋಟಕಗಳು ಪತ್ತೆಯಾಗಿದ್ದವು. ಪೊಲೀಸರು ಇಬ್ಬರು ಪ್ರಮುಖ ಆರೋಪಿಗಳನ್ನು (ಡಾ. ಮುಜಮ್ಮಿಲ್ ಶಕೀಲ್ ಮತ್ತು ಡಾ. ಆದಿಲ್ ರಾಥರ್) ಬಂಧಿಸುತ್ತಿದ್ದಂತೆ ಗಾಬರಿಗೊಂಡಿದ್ದ ಉಮರ್, ಅವಸರದಲ್ಲಿ ಕೆಂಪು ಕೋಟೆ ಬಳಿ ಸ್ಫೋಟ ನಡೆಸಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ.
7 ಉಗ್ರರು ಅಂದರ್, ಎನ್ಐಎ ತನಿಖೆಗೆ ವೇಗ
ನವೆಂಬರ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೀರ್ ರಶೀದ್ ಮಿರ್, ಜಾಸಿರ್ ಬಿಲಾಲ್ ವಾನಿ, ಮುಫ್ತಿ ಇರ್ಫಾನ್ ಅಹ್ಮದ್ ಸೇರಿದಂತೆ ಒಟ್ಟು 7 ಜನರನ್ನು ಬಂಧಿಸಲಾಗಿದ್ದು, ಅವರ ನ್ಯಾಯಾಂಗ ಬಂಧನವನ್ನು ಮಾರ್ಚ್ 13ರವರೆಗೆ ವಿಸ್ತರಿಸಲಾಗಿದೆ. ಈ ಮಧ್ಯೆ ದೆಹಲಿ ನ್ಯಾಯಾಲಯವು ರಾಷ್ಟ್ರೀಯ ತನಿಖಾ ದಳಕ್ಕೆ (NIA) ಸ್ಫೋಟ ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಲು ಇನ್ನೂ 45 ದಿನಗಳ ಕಾಲಾವಕಾಶ ನೀಡಿದೆ. ಸದ್ಯ ಲಷ್ಕರ್ ಬೆದರಿಕೆ ಹಿನ್ನೆಲೆಯಲ್ಲಿ ದೆಹಲಿಯಾದ್ಯಂತ ಹೈ-ಅಲರ್ಟ್ ಘೋಷಿಸಲಾಗಿದ್ದು ಧಾರ್ಮಿಕ ಕೇಂದ್ರಗಳ ಬಳಿ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಇದನ್ನೂ ಓದಿ:ಬಾಗಲಕೋಟೆಯಲ್ಲಿ ಭೀಕರ ದುರಂತ: ಕಂದಕಕ್ಕೆ ಉರುಳಿದ ಟ್ರ್ಯಾಕ್ಟರ್; ಮಗು ಸೇರಿ ನಾಲ್ವರ ಅಂತ್ಯ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us