/newsfirstlive-kannada/media/post_attachments/wp-content/uploads/2024/10/RATAN-TATA-DOG-LOVE.jpg)
ಅದೊಂದು ದೃಶ್ಯ ಅಕ್ಷರಶಃ ಕಣ್ಣಾಲಿಗಳಲ್ಲಿ ನೀರು ಜಿನುಗುವಂತೆ ಮಾಡುತ್ತಿದೆ. ರತನ್ ಟಾಟಾರ ಪಾರ್ಥೀವ ಶರೀರದ ಅಕ್ಕ ಪಕ್ಕದಲ್ಲೇ ಅವರ ಪ್ರೀತಿಯ ಶ್ವಾನಗಳು ಓಡಾಡುತ್ತಿರುವುದು ನಿಜಕ್ಕೂ ಹೃದಯವನ್ನ ಭಾರಮಾಡುತ್ತಿದೆ.. ಅಷ್ಟಕ್ಕೂ ಇದು, ರತನ್ ಟಾಟಾರ ಪರಪಂಚದ ಮತ್ತೊಂದು ಅಚ್ಚುಮೆಚ್ಚಿನ ಜೀವ ಗೋವಾ. ಸಾಕು ನಾಯಿಯೇ ಮುಖ್ಯ ಎನ್ನುತ್ತಿದ್ದ ಪ್ರಾಣಿ ಪ್ರಿಯ ರತನ್.
ಇದನ್ನೂ ಓದಿ:ಟಾಪ್ ಬಿಲಿಯನೇರ್ ಪಟ್ಟಿಯಲ್ಲಿ ರತನ್ ಟಾಟಾ ಹೆಸರು ಯಾಕಿಲ್ಲ? ಕಾರಣ ಗೊತ್ತಾದ್ರೆ ಮತ್ತಷ್ಟು ಹೆಮ್ಮೆ ಪಡ್ತೀರಿ..
ನೋಡಿ, ಇವತ್ತು ರತನ್ ಟಾಟಾ ಶಾರೀರಿಕವಾಗಿ ನಮ್ಮೊಂದಿಗಿಲ್ಲ. ಆದರೆ, ಅವರೊಂದಿಗೆ ಇದ್ದ ಅಚ್ಚುಮೆಚ್ಚಿನ ನಾಯಿ ಗೋವಾ ರತನ್ ಕಳೇಬರ ಕಂಡು ಬಿಕ್ಕಳಿಸುತ್ತಿದೆ. ಪದೇ ಪದೇ ಅವರ ಪಾರ್ಥಿವ ಶರೀರ ಇರಿಸಿರುವ ಬಾಕ್ಸ್ನ ಮೂಸಿ ನೋಡುತ್ತಿದೆ. ಏನಾಗಿದೆ ನನ್ನ ಮಾಲೀಕನಿಗೆ ಅನ್ನೋ ಸಂಕಟಕ್ಕೋ ಏನೋ ಹಿಂದೆ ಮುಂದೆ ಓಡಾಡುತ್ತಿದೆ. ಎದ್ದು ಬರಬಹುದು ಅನ್ನೋ ಆಸೆಗಣ್ಣಿನಿಂದ ಸುತ್ತಲೂ ನೋಡುತ್ತಿದೆ. ರತನ್ ಪರಪಂಚದಲ್ಲಿ ಇನ್ನೂ ಎರಡು ಸಾಕು ನಾಯಿಗಳಿದ್ವು. ಅವುಗಳ ಹೆಸರೇ ಟ್ಯಾಂಗೋ ಹಾಗೂ ಟಿಟೋ.
ರತನ್ ಪ್ರೀತಿ ಕಂಡು ಬೆಕ್ಕಸ ಬೆರಗಾಗಿದ್ದ ಪ್ರಿನ್ಸ್ ಚಾರ್ಲ್ಸ್!
ಅದು 2018 ಫೆಬ್ರವರಿ 6ನೇ ತಾರೀಖು. ಬ್ರಿಟನ್ನ ರಾಜಮನೆತನ ಪ್ರಿನ್ಸ್ ಚಾರ್ಲ್ಸ್ರ ಬಕಿಂಗ್ ಹ್ಯಾಮ್ ಪ್ಯಾಲೇಸ್ನಲ್ಲಿ ರಾಜಕುಮಾರ ಚಾರ್ಲ್ಸ್ ಒಂದು ಕಾರ್ಯಕ್ರಮ ಹಮ್ಮಿಕೊಂಡಿದ್ರು..ರತನ್ ಟಾಟಾ ಅವರು ಮಾಡಿರೋ ಸಮಾಜಮುಖಿ ಕೆಲಸಗಳಿಗಾಗಿ, ಜೀವಮಾನ ಸಾಧನೆಗಾಗಿ ಒಂದು ಅಭಿನಂದನಾ ಕಾರ್ಯಕ್ರಮ ಇಟ್ಟುಕೊಂಡಿದ್ದರು. ಆ ಕಾರ್ಯಕ್ರಮಕ್ಕಾಗಿ ಸರ್ವ ಸಿದ್ಧತೆಗಳೂ ನಡೆದಿದ್ದವು. ಪ್ರಿನ್ಸ್ ಚಾರ್ಲ್ಸ್ ಅವರು ಗಣ್ಯರನ್ನೆಲ್ಲಾ ಆಹ್ವಾನಿಸಿದ್ದರು. ಕಾರ್ಯಕ್ರಮಕ್ಕಿಂತ ನಾಲ್ಕು ದಿನಗಳ ಮೊದಲು, ಸುಹೇಲ್ ಸೇಥ್ ಸಹ ಲಂಡನ್ ತಲುಪಿದ್ದರು. ಆದರೆ, ರತನ್ ಟಾಟಾ ಈ ಕಾರ್ಯಕ್ರಮದಲ್ಲಿ ಭಾಗಿಯಾಗೋದಕ್ಕೆ ಸಾಧ್ಯವಾಗುತ್ತಿಲ್ಲ ಅಂತ ಪ್ರಿನ್ಸ್ಗೆ ತಿಳಿಸಿದ್ರು. ಅದೂ ಸಹ ಒಂದೇ ಒಂದು ಮೆಸೇಜ್ ಮೂಲಕ. ಅಷ್ಟಕ್ಕೂ ಏನದು ಮೆಸೇಜ್ ಅಂತೀರಾ? ಅದುವೇ, MY DOG IS UNWELL, I CAN'T LEAVE HIM...ಅಂದ್ರೆ, ನನ್ನ ಸಾಕು ನಾಯಿಗೆ ಹುಷಾರಿಲ್ಲ. ಅವನನ್ನ ಬಿಟ್ಟು ಬರೋದಕ್ಕೆ ಆಗೋದಿಲ್ಲ ಅಂತ ಬ್ರಿಟನ್ ರಾಜಕುಮಾರನಿಗೆ ಸಂದೇಶ ರವಾನಿಸಿದ್ರು ರತನ್ ಟಾಟಾ.
ಇದನ್ನೂ ಓದಿ:ತಂದೆ-ತಾಯಿ ಡಿವೋರ್ಸ್ ಪಡೆದರೂ ರತನ್ ಟಾಟಾ ಓದಿದ್ದು ಹೇಗೆ.. ಯಾವ್ಯಾವ ಪದವಿ ಪಡೆದರು?
ನನ್ನ ಎರಡು ನಾಯಿಗಳಾದ ಟ್ಯಾಂಗೋ ಮತ್ತು ಟಿಟೋ ಪೈಕಿ ಒಂದು ತೀವ್ರ ಅಸ್ವಸ್ಥವಾಗಿದೆ. ನಿಮಗೆ ಗೊತ್ತು, ನಾನು ಈ ಎರಡೂ ಶ್ವಾನಗಳನ್ನ ಎಷ್ಟು ಪ್ರೀತಿಸ್ತೀನಿ ಅಂತಾ. ಇಂಥ ಸನ್ನಿವೇಶದಲ್ಲಿ ನಾನು ಈ ನಾಯಿಗಳನ್ನ ಬಿಟ್ಟು ಲಂಡನ್ ಕಾರ್ಯಕ್ರಮಕ್ಕೆ ಬರಲಾರೆ. ನೀವು ನನ್ನನ್ನು ಅರ್ಥ ಮಾಡಿಕೊಳ್ಳುತ್ತೀರಿ ಅಂತಾ ಭಾವಿಸಿದ್ದೇನೆ. ಈ ವಿಷಯವನ್ನ ನಿಮಗೆ ತುರ್ತಾಗಿ ತಿಳಿಸಬೇಕು ಎಂಬ ಕಾರಣಕ್ಕೆ ನಾನು ನಿಮಗೆ ನಿರಂತರವಾಗಿ ಫೋನ್ ಮಾಡಿದೆ. ಪ್ರಿನ್ಸ್ ಚಾರ್ಲ್ಸ್ ಅವರಿಗೆ ತಿಳಿಸಿಬಿಡಿ ಎಂದು ಉದ್ಯಮಿ ಹಾಗೂ ಅಂಕಣಕಾರ ಸುಹೇಲ್ ಸೇಥ್ಗೆ ರತನ್ ಟಾಟಾ ಹೇಳಿದ್ದರಂತೆ.
ಖುದ್ದು ರಾಜಕುಮಾರ ಚಾರ್ಲ್ಸ್ ಕಾರ್ಯಕ್ರಮವನ್ನು ಮುಂದೂಡಿದ್ದರು!
ರತನ್ ಸಂದೇಶ ಕೇಳಿದ ಚಾರ್ಲ್ಸ್ ಅವರ ಮೊದಲ ಉದ್ಗಾರ - 'That's the man.'..ಅಂದ್ರೆ ಎಂಥಹ ಮನುಷ್ಯ ಸ್ವಾಮಿ ಅನ್ನೋದಾಗಿತ್ತು.ಆದ್ರೂ, ರತನ್ಗೆ ಕಾರ್ಯಕ್ರಮಕ್ಕೆ ಬರಲಾಗುತ್ತಿಲ್ಲ ಎಂಬುದನ್ನು ಕೇಳಿ ಒಂದು ಕ್ಷಣ ಬೇಸರವಾಗಿತ್ತು. ಆದರೆ ರತನ್ ಟಾಟಾ ನೀಡಿದ್ದ ಕಾರಣ ಕೇಳಿ ಅವರ ಬಗ್ಗೆ ನನಗೆ ಇನ್ನಷ್ಟು ಗೌರವ, ಪ್ರೀತಿ ಮತ್ತು ಅಭಿಮಾನ ಹೆಚ್ಚಿತ್ತು ಅಂತಾ ಪ್ರಿನ್ಸ್ ಚಾರ್ಲ್ಸ್ ಹೇಳಿಕೊಂಡಿದ್ದರು. ಪ್ರಿನ್ಸ್ ಚಾರ್ಲ್ಸ್ ನೋ ಪ್ರಾಬ್ಲಮ್, ಕಾರ್ಯಕ್ರಮವನ್ನ ಮುಂದೂಡೋಣ. ಎಂದಿದ್ದರಂತೆ. ಕೊನೆಗೂ, ರತನ್ ಆ ಕಾರ್ಯಕ್ರಮಕ್ಕೆ ಹೋಗಲಿಲ್ಲ ಮತ್ತು ಆ ಕಾರ್ಯಕ್ರಮ ನಡೆಯಲಿಲ್ಲ. ಹೀಗೆ ತಮ್ಮ ಸಾಕು ನಾಯಿಗಳಂದ್ರೆ ವಿಪರೀತ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದರು. ದುರಾದೃಷ್ಟ ಏನಂದ್ರೆ ಇಂಥದ್ದೊಂದು ಘಟನೆ ನಡೆದ ಮೂರೇ ವರ್ಷಕ್ಕೆ ಟಿಟೋ ಅನಾರೋಗ್ಯದಿಂದಲೇ ಕಣ್ಮುಚ್ಚಿತ್ತು. ಆ ಕ್ಷಣ ಮಗುವಿನಂತೆ ಅತ್ತಿದ್ದರು ರತನ್ ಟಾಟಾ.
₹150 ಕೋಟಿ ವೆಚ್ಚದಲ್ಲಿ ಮಹಾಲಕ್ಷ್ಮಿ ಆಸ್ಪತ್ರೆ ಕಟ್ಟಿಸಿದ್ದಾರೆ ರತನ್ ಟಾಟಾ!
ಮುಂಬೈನಲ್ಲಿ 2023ರಲ್ಲಿ ರತನ್ ಟಾಟಾ ಸಾಕು ಪ್ರಾಣಿಗಳಿಗಾಗಿ 24X7 ವೈದ್ಯಕೀಯ ಸೌಲಭ್ಯ ಒದಗಿಸುವ ಉಚಿತ ಆಸ್ಪತ್ರೆಯನ್ನು ಕಟ್ಟಿಸಿದ್ದಾರೆ. ಈ ಆಸ್ಪತ್ರೆಗೆ ಮಹಾಲಕ್ಷ್ಮಿ ಅಂತ ಹೆಸರಿಟ್ಟಿದ್ದಾರೆ. ಟಾಟಾ ಟ್ರಸ್ಟ್ ಈ ಆಸ್ಪತ್ರೆಯನ್ನ ನೋಡಿಕೊಳ್ಳುತ್ತಿದೆ. ಇದು ರತನ್ ಟಾಟಾ ಅನ್ನೋ ರಿಯಲ್ ಪ್ರೇಮಿಯ ಮನಸ್ಸು. ಇನ್ನೂ ಅಚ್ಚರಿಯ ಸಂಗತಿ ಏನು ಗೊತ್ತಾ? ಬೀದಿ ನಾಯಿಗಳನ್ನು ನೋಡಿದರೇ ಪಾಲಿಕೆ ಸದಸ್ಯರು ಎತ್ತಾಕಿಕೊಂಡು ಹೋಗ್ತಾರೆ. ಆದರೆ, ಮುಂಬೈನ ಬೀದಿ ನಾಯಿಗಳಿಗೂ ರತನ್ ಟಾಟಾ ಒಂದು ಸೇಫ್ ಜಾಗ ತೋರಿಸಿದ್ದಾರೆ. ಯಾವುದೇ ಬೀದಿ ನಾಯಿ ಇರಬಹುದು ಫೈವ್ಸ್ಟಾರ್ ತಾಜ್ ಹೋಟೆಲ್ನಲ್ಲಿ ಹೋಗಬಹುದು. ಅದನ್ನ ಯಾರೂ ಸಹ ಹೊಡೆಯೋದಿಲ್ಲ. ಓಡಿಸೋದೂ ಇಲ್ಲ. ಅಂಥದ್ದೊಂದು ಆದೇಶವನ್ನೇ ರತನ್ ಟಾಟಾ ತನ್ನ ಹೋಟೆಲ್ ಸಿಬ್ಬಂದಿಗೆ ಹೊರಿಡಿಸಿಬಿಟ್ಟಿದ್ರು.
ಇದನ್ನೂ ಓದಿ: ಗುಡ್ಬೈ, ಮೈ ಡಿಯರ್ ಲೈಟ್ ಹೌಸ್! ರತನ್ ಟಾಟಾಗೆ ಕಣ್ಣೀರಿನ ವಿದಾಯ ಹೇಳಿದ ಶಾಂತನು ನಾಯ್ದು.. ಯಾರೀತ?
ಮುಂಬೈನಲ್ಲಿರೋ ಬಾಂಬೆ ಹೌಸ್ ಅಕ್ಷರಶಃ ಬೀದಿ ನಾಯಿಗಳ ಪಾಲಿಗೆ ಸ್ವರ್ಗವೇ ಆಗಿದೆ. ಇದಿಷ್ಟೇ ಅಲ್ಲ. ಬೀದಿ ನಾಯಿಗಳು ಕತ್ತಲಿನಲ್ಲಿ ಯಾವುದೋ ಕಾರ್, ಲಾರಿಗೆ ಸಿಕ್ಕಿ ಸಾಯೋದನ್ನ ತಪ್ಪಿಸೋದಕ್ಕೆ ಒಂದು ಸ್ಟಾರ್ಟ್ಅಪ್ ಜೊತೆ ಕೈ ಜೋಡಿಸಿದ್ದಾರೆ ರತನ್ ಟಾಟಾ. ಮೊಟೋಪಾವ್ಸ್ ಅನ್ನೋ ಎನ್ಜಿಓ ಮೂಲಕ ಕತ್ತಲಲ್ಲಿ ಹೊಳೆಯುವ ಕಾಲರ್ಗಳನ್ನು ಬೀದಿ ನಾಯಿಗಳಿಗೆ ತೊಡಿಸಲಾಗುತ್ತಿದೆ. ಇದು ರಿಯಲ್ ಪ್ರೇಮಿ ರತನ್ ಪರಪಂಚ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ