/newsfirstlive-kannada/media/media_files/2025/08/17/r-ashwin-1-2025-08-17-14-12-07.jpg)
ಅಶ್ವಿನ್
ಆರ್.ಅಶ್ವಿನ್, ಚೆನ್ನೈ ಸೂಪರ್ ಕಿಂಗ್ಸ್. ಸದ್ಯ ಇಂಡಿಯನ್ ಕ್ರಿಕೆಟ್ ಲೋಕದ ಹಾಟ್ ಟಾಪಿಕ್. ಆರ್.ಅಶ್ವಿನ್ ತವರು ಫ್ರಾಂಚೈಸಿ ಚೆನ್ನೈ ಬಿಡಲು ಮುಂದಾಗಿದ್ದಾರೆ ಎಂಬ ಸುದ್ದಿ ಹೊರ ಬಂದಿದ್ದೇ ಬಂದಿದ್ದು. ಯೆಲ್ಲೋ ಆರ್ಮಿ ಹಾಗೂ ಅಶ್ವಿನ್ ನಡುವೆ ಎಲ್ಲವೂ ಸರಿ ಇಲ್ವಾ ಎಂಬ ಅನುಮಾನ ಹುಟ್ಟುಹಾಕಿತ್ತು. ಆದ್ರೀಗ ಅದಕ್ಕೀಗ ಪುಷ್ಠಿ ನೀಡುವಂತಿದೆ. ಐಪಿಎಲ್ ಅಖಾಡದಲ್ಲಿ ಆರ್.ಅಶ್ವಿನ್ ವರ್ಸಸ್ ಚೆನ್ನೈ ಸೂಪರ್ ಕಿಂಗ್ಸ್ ಎಂಬಂತಾಗಿದೆ. ಇದಕ್ಕೆ ಕಾರಣ ಆರ್.ಅಶ್ವಿನ್ರ ಆ ಒಂದು ಸ್ಟೇಟ್ಮೆಂಟ್.
ಬ್ರೆವಿಸ್ ಬಗ್ಗೆ ನಿಮಗೆ ಸ್ವಲ್ಪ ಹೇಳುತ್ತೇನೆ. ಕಳೆದ ಐಪಿಎಲ್ನಲ್ಲಿ ಸಿಎಸ್ಕೆ ಪರ ಉತ್ತಮವಾಗಿ ಆಡಿದ್ರು. ವಾಸ್ತವವಾಗಿ ತಂಡಕ್ಕೆ ಸೇರಿಸಿಕೊಳ್ಳಲು ಕೆಲ ತಂಡಗಳು ಬ್ರೇವಿಸ್ ಜೊತೆ ಮಾತನಾಡಿದ್ದವು. ಹೆಚ್ಚುವರಿ ಹಣದ ಕಾರಣ ಕೈಬಿಟ್ಟವು. ಏಕೆಂದರೆ ಬದಲಿ ಆಟಗಾರನಾಗಿ ತಂಡಕ್ಕೆ ಸೇರಿಸಿಕೊಳ್ಳಲು ಮೂಲ ಬೆಲೆಗೆ ಖರೀದಿಸಬೇಕಿತ್ತು. ಇದಕ್ಕೆ ಆಟಗಾರರು ಒಪ್ಪುವುದಿಲ್ಲ. ಆಗ ಏಜೆಂಟರ ಮೂಲಕ ಮಾತುಕತೆ ನಡೆಸಬೇಕಾಗುತ್ತೆ. ಆ ಸಮಯದಲ್ಲಿ ಆಟಗಾರ ಹೆಚ್ಚುವರಿ ಹಣ ನೀಡಿದರೆ, ನಿಮ್ಮ ತಂಡಕ್ಕೆ ಆಡುತ್ತೇನೆ ಎಂದು ಹೇಳುತ್ತಾರೆ. ಮುಂದಿನ ಆವೃತ್ತಿಗೂ ಮುನ್ನ ತಂಡದಿಂದ ರಿಲೀಸ್ ಆದರೆ, ನಂತರದ ಹರಾಜಿನಲ್ಲಿ ಹೆಚ್ಚಿನ ಮೊತ್ತ ಸಿಗುತ್ತದೆ ಎಂಬುದು ಆಟಗಾರನಿಗೆ ತಿಳಿದಿರುತ್ತದೆ. ನೀವು ನನಗೆ ಉತ್ತಮ ಹಣ ಕೊಡಿ, ಇಲ್ಲದಿದ್ದರೆ ಮುಂದಿನ ವರ್ಷ ನಾನು ಹೆಚ್ಚಿನ ಹಣಕ್ಕೆ ಆಯ್ಕೆಯಾಗುತ್ತೇನೆ ಎನ್ನುತ್ತಾರೆ. ಅದರಂತೆ ಅಧಿಕ ಹಣ ನೀಡಿ ಸಿಎಸ್ಕೆ ಬ್ರೆವಿಸ್ನ ಸೇರಿಸಿಕೊಂಡಿತ್ತು.
ಅಶ್ವಿನ್, ಸಿಎಸ್ಕೆ
ಅಶ್ವಿನ್ರ ಈ ಒಂದೇ ಒಂದು ಸ್ಫೋಟಕ ಹೇಳಿಕೆ ಭಾರೀ ವಿವಾದಕ್ಕೆ ಸಿಲುಕಿಸಿದೆ. ಡೆವಾಲ್ಡ್ ಬ್ರೇವಿಸ್ಗಾಗಿ ಚೆನ್ನೈ ತೆರೆಮರೆಯಲ್ಲಿ ಕಳ್ಳಾಟವಾಡ್ತಾ ಎಂಬ ಚರ್ಚೆಯನ್ನು ಹುಟ್ಟುಹಾಕಿತ್ತು. ಅಷ್ಟೇ ಅಲ್ಲ. ಕ್ರಿಕೆಟ್ ವಲಯದಲ್ಲಿ ಭಾರೀ ಸಂಚಲನವನ್ನ ಸೃಷ್ಟಿಸಿತ್ತು.
ಇದನ್ನೂ ಓದಿ: ಯಶ್ ದಯಾಳ್ಗೆ ಆಘಾತ.. ಈ ಟಿ-20 ಕ್ರಿಕೆಟ್ ಲೀಗ್ನಿಂದ ಬ್ಯಾನ್..!
ರೂಲ್ಸ್ ಪ್ರಕಾರವೇ ಒಪ್ಪಂದ..
2025ರ ಐಪಿಎಲ್ನಲ್ಲಿ ಗುರ್ಜಪ್ನೀತ್ ಸಿಂಗ್ ಇಂಜುರಿಗೆ ತುತ್ತಾಗಿದ್ದರು. ಈ ವೇಳೆ ರಿಪ್ಲೇಸ್ಮೆಂಟ್ ಆಟಗಾರನಾಗಿ ಸೌತ್ ಆಫ್ರಿಕಾದ ಡೆವಾಲ್ಡ್ ಬ್ರೇವಿಸ್ ತಂದಿತ್ತು. ಮೆಗಾ ಆ್ಯಕ್ಷನ್ನಲ್ಲಿ ಅನ್ಸೋಲ್ಡ್ ಆಗಿದ್ದ ಬ್ರೇವಿಸ್ಗೆ ಬರೋಬ್ಬರಿ 2.2 ಕೋಟಿ ನೀಡಿತ್ತು. ಇದೇ ವಿಚಾರವಾಗಿ ಮಾತನಾಡಿದ್ದ ಅಶ್ವಿನ್, ಬೇಸ್ ಪ್ರೈಸ್ ನೀಡಬೇಕಿದ್ದ ಚೆನ್ನೈ, ಎಜೆಂಟ್ಗಳ ಮೂಲಕ ಹೆಚ್ಚುವರಿ ಹಣ ನೀಡಿತ್ತು ಎಂದು ಆರೋಪಿಸಿದ್ದರು. ಅದಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ಕ್ಲಾರಿಟಿ ನೀಡಿದೆ. ಅಶ್ವಿನ್ ಆರೋಪಕ್ಕೆ ಕೌಂಟರ್ ನೀಡಿದೆ. 2025-27ರ ಐಪಿಎಲ್ ಪ್ಲೇಯರ್ ರೆಗ್ಯೂಲೇಷನ್ಸ್ ಪ್ರಕಾರವೇ ಖರೀದಿ ಮಾಡಲಾಗಿದೆ ಎಂದು ತಿರುಗೇಟು ನೀಡಿದೆ.
IPL ನಿಯಮಗಳಿಗೆ ಬದ್ಧ..
ಡೆವಾಲ್ಡ್ ಬ್ರೆವಿಸ್ ಬದಲಿ ಆಟಗಾರನಾಗಿ ಸಹಿ ಮಾಡುವ ಪ್ರಕ್ರಿಯೆ ಐಪಿಎಲ್ ನಿಯಮಗಳಿಗೆ ಅನುಗುಣವಾಗಿದೆ. 2025ರ ಹರಾಜಿನಲ್ಲಿ 2.2 ಕೋಟಿಗೆ ಗುರ್ಜಪ್ನೀತ್ ಸಿಂಗ್ ಖರೀದಿಸಲಾಗಿತ್ತು. ಗಾಯಗೊಂಡ ಗುರ್ಜಪ್ನೀತ್ ಸಿಂಗ್ ಬದಲಿಗೆ ಡೆವಾಲ್ಡ್ ಬ್ರೆವಿಸ್ರನ್ನ 2.2 ಕೋಟಿ ಮೊತ್ತಕ್ಕೆ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ರಿಪ್ಲೇಸ್ಮೆಂಟ್ ಪ್ಲೇಯರ್ ರೂಲ್, 6.6 ರ ಪ್ರಕಾರ, ಪ್ಯಾರಾಗ್ರಾಫ್ 6.1 ಮತ್ತು 6.2ರ ಪ್ರಕಾರ, ಬದಲಿ ಆಟಗಾರನನ್ನ ಲೀಗ್ ಶುಲ್ಕದಲ್ಲಿ ನೇಮಿಸಿಕೊಳ್ಳಬಹುದು. ಗಾಯಗೊಂಡ ಅಥವಾ ಲಭ್ಯವಿಲ್ಲದ ಆಟಗಾರನಿಗೆ ಈ ಆವೃತ್ತಿಯಲ್ಲಿ ಪಾವತಿಸಿದ್ದಕ್ಕಿಂತ ಹೆಚ್ಚಿನ ಹಣ ಬದಲಿ ಆಟಗಾರನಿಗೆ ಪಾವತಿಸುವಂತಿಲ್ಲ. ಬದಲಿ ಆಟಗಾರನು ಸೀಸನ್ ಮಧ್ಯದಲ್ಲಿ ತಂಡ ಸೇರಿಕೊಂಡರೆ ಆತನ ಹಣ ಸರಿಹೊಂದಿಸಲಾಗುತ್ತದೆ. ಆತ ಅಧಿಕೃತವಾಗಿ ತಂಡಕ್ಕೆ ಸೇರಿದ ನಂತರ ನಡೆಯುವ ಪಂದ್ಯಗಳಿಗೆ ಹಣ ಪಾವತಿಸಲಾಗುತ್ತದೆ.
ಚೆನ್ನೈ ಫ್ರಾಂಚೈಸಿ
ಆರ್.ಅಶ್ವಿನ್ ಆರೋಪಕ್ಕೆ ಚೆನ್ನೈ ಫ್ರಾಂಚೈಸಿ ತಿರುಗೇಟು ನೀಡಿದೆ. ಇದೇ ತಿರುಗೇಟು ಆರ್.ಅಶ್ವಿನ್ ಹಾಗೂ ಚೆನ್ನೈ ನಡುವಿನ ಸಂಬಂಧದ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಅಶ್ವಿನ್-ಸಿಎಸ್ಕೆ ಮಧ್ಯೆ ಭಿನ್ನಾಭಿಪ್ರಾಯ
ಆರ್.ಅಶ್ವಿನ್ ಆರೋಪಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಿರುಗೇಟು ನೀಡಿದೆ. ಎಲ್ಲಕ್ಕೂ ಕ್ಲಾರಿಟಿ ನೀಡಿದೆ. ಇದೇ ಅಶ್ವಿನ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಭಿನ್ನಾಭಿಪ್ರಾಯಕ್ಕೆ ಸಾಕ್ಷಿಯಾಗ್ತಿದೆ. ಅಶ್ವಿನ್ ತವರು ಫ್ರಾಂಚೈಸಿ ಚೆನ್ನೈ ತೊರೆಯಲು ಮುಂದಾಗಿದ್ದಾರೆ ಎಂಬ ಊಹಾಪೋಹದ ಸುದ್ದಿಯನ್ನ ಅಧಿಕೃತವಾಗಿಸ್ತಿದೆ. 2026ರ ಐಪಿಎಲ್ನಲ್ಲಿ ಅಶ್ವಿನ್, ಮತ್ತೊಂದು ತಂಡದ ಪರ ಕಾಣಿಸಿಕೊಳ್ಳುವುದು ಕನ್ಫರ್ಮ್ ಮಾಡ್ತಿದೆ.
ಅಶ್ವಿನ್ ಮುನಿಸು
ಐಪಿಎಲ್ನಲ್ಲಿ ಫ್ರಾಂಚೈಸಿಯ ವಿರುದ್ಧ ಹೇಳಿಕೆ ನೀಡುವುದು ಕಂಡಿದ್ದಿಲ್ಲ. ಅಶ್ವಿನ್, ಬ್ರೇವಿಸ್ ವಿಚಾರವಾಗಿ ನೀಡಿದ ಹೇಳಿಕೆ ಕೇವಲ ಹೇಳಿಕೆಯಾಗಿರಲಿಲ್ಲ. ಭಿನ್ನಾಭಿಪ್ರಾಯದ ಸಂಕೇತವಾಗಿತ್ತು. ಇದಕ್ಕೆ ಕಾರಣವಾಗಿದ್ದು 2025ರ ಐಪಿಎಲ್ನಲ್ಲಿ ಆರ್.ಅಶ್ವಿನ್ರನ್ನು ನಡೆಸಿಕೊಂಡ ರೀತಿಯಾಗಿತ್ತು. ಆರಂಭಿಕ ಪಂದ್ಯಗಳಲ್ಲಿ ಅಶ್ವಿನ್ಗೆ ಸ್ಥಾನ ನೀಡಿದ್ದ ಚೆನ್ನೈ, ನಂತರ ಬೆಂಚ್ಗೆ ಸೀಮಿತವಾಗಿಸಿತ್ತು. ನೂರ್ ಅಹ್ಮದ್ಗೆ ಸ್ಪೆಷಲ್ ಟ್ರೀಟ್ಮೆಂಟ್ ಸಿಕ್ತು. ಇದಕ್ಕೆ ಮುನಿಸಿಕೊಂಡಿದ್ದ ಅಶ್ವಿನ್, ಚೆನ್ನೈ ವಿರುದ್ಧವೇ ಹೇಳಿಕೆ ನೀಡಿದ್ರು. ಇದಕ್ಕೀಗ ಮೌನ ಮುರಿದಿರುವ ಚೆನ್ನೈ ಕೇವಲ ಕ್ಲಾರಿಟಿ ನೀಡಿಲ್ಲ. ಅಶ್ವಿನ್ರನ್ನು ಕೈಬಿಡುವ ಮುನ್ಸೂಚನೆ ನೀಡಿದೆ.
ಇದನ್ನೂ ಓದಿ: ಈ ಬಾರಿಯ ಬಿಗ್ಬಾಸ್ಗೆ ಅನಯಾ ಬಂಗಾರ್ ಎಂಟ್ರಿ..?
ಮಾತು ಆಡಿದರೆ ಹೋಯಿತು.. ಮುತ್ತು ಒಡೆದರೆ ಹೋಯಿತು ಎಂಬ ಗಾದೆ ಮಾತಂತೆ ಈಗ ನಾಲಗೆ ಹರಿಬಿಟ್ಟಿದ್ದ ಅಶ್ವಿನ್ಗೆ ಟಾಂಗ್ ಕೊಟ್ಟಿರುವ ಚೆನ್ನೈ, ಮುಂದೇನು ಮಾಡುತ್ತೆ ಜಸ್ಟ್ ವೇಯ್ಟ್ ಆ್ಯಂಡ್ ಸೀ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ