/newsfirstlive-kannada/media/media_files/2026/03/09/shoaib-akhtar-1-2026-03-09-16-41-04.jpg)
2026ರ ಟಿ20 ವಿಶ್ವಕಪ್ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ಟೀಮ್ ಇಂಡಿಯಾವನ್ನು ಇಡೀ ಕ್ರಿಕೆಟ್ ಜಗತ್ತು ಕೊಂಡಾಡುತ್ತಿದೆ. ಇದೀಗ ಪಾಕಿಸ್ತಾನದ ದಿಗ್ಗಜ ವೇಗಿ ರಾವಲ್ಪಿಂಡಿ ಎಕ್ಸ್ಪ್ರೆಸ್ ಖ್ಯಾತಿಯ ಶೋಯೆಬ್ ಅಖ್ತರ್ (Shoaib Akhtar) ಕೂಡ ಭಾರತದ ಯುವಪಡೆಯ ಪ್ರದರ್ಶನಕ್ಕೆ ಫಿದಾ ಆಗಿದ್ದಾರೆ. ಇದೇ ವೇಳೆ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಬಗ್ಗೆ ಅಖ್ತರ್ ನೀಡಿರುವ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ.
ಪಾಕಿಸ್ತಾನದ ಕ್ರೀಡಾ ವಾಹಿನಿಯೊಂದರಲ್ಲಿ ಮಾತನಾಡಿದ ಶೋಯೆಬ್ ಅಖ್ತರ್, ಬಿಸಿಸಿಐ (BCCI) ವ್ಯವಸ್ಥೆ ಹಾಗೂ ಕೋಚ್ ಗೌತಮ್ ಗಂಭೀರ್ ಅವರ 'ಸಿಸ್ಟಮ್' ಅನ್ನು ಹಾಡಿಹೊಗಳಿದ್ದಾರೆ.
ಗಂಭೀರ್ ಸಿಸ್ಟಮ್ಗೆ ಶಿರಬಾಗಿದ ಅಖ್ತರ್
2024ರ ವಿಶ್ವಕಪ್ ಗೆಲುವಿನ ಬಳಿಕ ರಾಹುಲ್ ದ್ರಾವಿಡ್ ಅವರಿಂದ ತೆರವಾದ ಸ್ಥಾನಕ್ಕೆ ಬಂದ ಗೌತಮ್ ಗಂಭೀರ್, ತಂಡದಲ್ಲಿ 'ಟೀಮ್ ಫಸ್ಟ್' (ಮೊದಲು ತಂಡ) ಎಂಬ ಮನಸ್ಥಿತಿಯನ್ನು ಹುಟ್ಟುಹಾಕಿದರು. ಈ ಬಗ್ಗೆ ಮಾತನಾಡಿದ ಅಖ್ತರ್, "ಭಾರತದ ವಿಚಾರದಲ್ಲಿ ನಾನು ಎರಡು ಮಾತುಗಳನ್ನು ಹೇಳಲೇಬೇಕು. ಮೊದಲನೆಯದಾಗಿ ಅವರ ಪಾಲಿಸಿ (ನೀತಿ) ಗೆದ್ದಿದೆ. ನಂತರ ಅವರ ಸಿಸ್ಟಮ್ ಗೆದ್ದಿದೆ. ಎಲ್ಲಕ್ಕಿಂತ ಮುಖ್ಯವಾಗಿ ಅವರ ಮ್ಯಾನೇಜ್ಮೆಂಟ್ ಗೆದ್ದಿದೆ. ರಣಜಿ ಟ್ರೋಫಿ ಆಡುವ ಹುಡುಗರಿಗೆ ಸರಿಯಾದ ಸಂಭಾವನೆ ಸಿಗುತ್ತಿರಲಿಲ್ಲ. ಆದರೆ ಬಿಸಿಸಿಐ ಸರಿಯಾದ ಜಾಗದಲ್ಲಿ ಹಣ ಹೂಡಿಕೆ ಮಾಡಿದೆ ಎಂದರು.
ಇದನ್ನೂ ಓದಿ:ಕಾಲೆಳೆದ ಧೋನಿ, ಖಡಕ್ ಉತ್ತರ ಕೊಟ್ಟ ಗಂಭೀರ್​ -ಅಭಿಮಾನಿಗಳ ದಿಲ್ ಖುಷ್..!
ಇಂದು ಗೌತಮ್ ಗಂಭೀರ್ ಎಲ್ಲರ ವಿರುದ್ಧವೂ ಹೋರಾಡಿದ್ದಾರೆ. ಯುವ ಆಟಗಾರರಿಗೆ ಅವಕಾಶ ನೀಡಿ, ಅವರ ಬೆನ್ನಿಗೆ ನಿಂತರು. ಸಂಜು ಸ್ಯಾಮ್ಸನ್ ಎಂಬ ಒಂಟಿ ಸಲಗ ಎದುರಾಳಿ ಇಡೀ ತಂಡವನ್ನೇ ಧೂಳೀಪಟ ಮಾಡಿದ. ಇನ್ನು ಅಭಿಷೇಕ್ ಶರ್ಮಾ ಚಿಕ್ಕ ವಯಸ್ಸಿನವನಾದರೂ ಅತ್ಯಂತ ಪ್ರಬುದ್ಧತೆಯಿಂದ ಆಡಿದ್ದಾನೆ. ಗಂಭೀರ್ ಅವರ ಪಾಲಿಸಿ ಇಂದು ಗೆದ್ದಿದೆ ಎಂದು ಅಖ್ತರ್ ಗುಣಗಾನ ಮಾಡಿದ್ದಾರೆ.
ರೋಹಿತ್-ವಿರಾಟ್ ಬಗ್ಗೆ ವಿವಾದಾತ್ಮಕ ಹೇಳಿಕೆ
2024ರ ವಿಶ್ವಕಪ್ ಗೆದ್ದ ಬೆನ್ನಲ್ಲೇ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ರವೀಂದ್ರ ಜಡೇಜಾ ಟಿ20 ಮಾದರಿಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ್ದರು. ಶೋಯೆಬ್ ಅಖ್ತರ್ ಮಾತ್ರ, ಮುಂದಿನ ವಿಶ್ವಕಪ್ಗಾಗಿ ಯುವಪಡೆಯನ್ನು ಕಟ್ಟುವ ಉದ್ದೇಶದಿಂದ ಈ ದಿಗ್ಗಜರನ್ನು ತಂಡದಿಂದ ಕೈಬಿಡಲಾಗಿತ್ತು (Dropped) ಎಂದು ವಾದಿಸಿದ್ದಾರೆ. ತಂಡದಿಂದ ಹಲವರನ್ನು ಕೈಬಿಡಲಾಯಿತು. ಆಟದ ಲೆಜೆಂಡ್ಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ ಗುಡ್ ಬೈ ಹೇಳಲಾಯಿತು. ಅವರು ವಿಶ್ವಕಪ್ ಗೆದ್ದ ತಂಡದ ಭಾಗವಾಗಿದ್ದರೂ, ಟೀಮ್ ಮ್ಯಾನೇಜ್ಮೆಂಟ್ ಭವಿಷ್ಯದತ್ತ ದೃಷ್ಟಿ ಹಾಯಿಸಿತು. ದೊಡ್ಡ ರಿಸ್ಕ್ ತೆಗೆದುಕೊಂಡು ಆ ದಿಗ್ಗಜರನ್ನು ಹೊರಗಿಟ್ಟ ಭಾರತದ ನಿರ್ಧಾರ ಇಂದು ಸರಿಯಾಗಿದೆ ಎಂಬುದು ಸಾಬೀತಾಗಿದೆ. ಮೆರಿಟ್ ಆಧಾರದ ಮೇಲೆ ಆಟಗಾರರನ್ನು ಆಯ್ಕೆ ಮಾಡಿದರೆ ಗೆಲುವು ಖಂಡಿತ ಒಲಿಯುತ್ತದೆ ಎಂದು ಅಖ್ತರ್ ಹೇಳಿದ್ದಾರೆ.
ಹಿರಿಯರಿಗೆ ನೀಡುವ ಗೌರವ ಅದ್ಭುತ
ಒಂದೆಡೆ ಯುವಪಡೆಗೆ ಮಣೆ ಹಾಕಿದರೂ ತಮ್ಮ ಹಳೆಯ ದಿಗ್ಗಜರನ್ನು ಭಾರತ ನಡೆಸಿಕೊಳ್ಳುವ ರೀತಿಯನ್ನು ಅಖ್ತರ್ ಕೊಂಡಾಡಿದ್ದಾರೆ. ಭಾರತ ತಮ್ಮ ಹಿರಿಯರನ್ನು ಎಷ್ಟು ಸುಂದರವಾಗಿ ಗೌರವಿಸುತ್ತದೆ ನೋಡಿ. ಇದು ನಿಜಕ್ಕೂ ಅದ್ಭುತ. ಇಂದು ಟೀಮ್ ಇಂಡಿಯಾ ವಿಶ್ವಕಪ್ ಗೆದ್ದು ಸಂಭ್ರಮಿಸುತ್ತಿರುವಾಗ, ಮಾಜಿ ನಾಯಕರಾದ ಎಂ.ಎಸ್. ಧೋನಿ ಮತ್ತು ರೋಹಿತ್ ಶರ್ಮಾ ಕೂಡ ಆ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಭಾರತಕ್ಕೆ ಅಭಿನಂದನೆಗಳು, ಈ ಟ್ರೋಫಿ ನಿಮಗೆ ಒಲಿಯಲೇಬೇಕಿತ್ತು ಎಂದು ಶೋಯೆಬ್ ಅಖ್ತರ್ ತಮ್ಮ ಮಾತು ಮುಗಿಸಿದ್ದಾರೆ.
ಇದನ್ನೂ ಓದಿ:ಇರಾನ್ 30 ತೈಲ ಡಿಪೋ ಮೇಲೆ ಇಸ್ರೇಲ್ ದಾಳಿ: ಮೊದಲ ಭಾರಿಗೆ ಇಸ್ರೇಲ್-ಅಮೆರಿಕಾ ಮಧ್ಯೆ ಭಿನ್ನಾಭಿಪ್ರಾಯ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us