/newsfirstlive-kannada/media/media_files/2026/01/30/dog-attack-2026-01-30-14-45-56.jpg)
ಬೆಂಗಳೂರು: ರಾಜಧಾನಿಯ ಎಚ್ಎಸ್ಆರ್ ಲೇಔಟ್ನಲ್ಲಿ ಸಾಕು ನಾಯಿಯೊಂದು ಮಹಿಳೆಯ ಮೇಲೆ ಭೀಕರವಾಗಿ ದಾಳಿ ಮಾಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ನಾಯಿಯ ಕಡಿತದಿಂದಾಗಿ ಮಹಿಳೆಯ ಮುಖ ಹಾಗೂ ಕುತ್ತಿಗೆಗೆ ಗಂಭೀರ ಗಾಯಗಳಾಗಿದ್ದು, ಬರೋಬ್ಬರಿ 20 ಹೊಲಿಗೆಗಳನ್ನು ಹಾಕಲಾಗಿದೆ.
ಘಟನೆ ವಿವರ
ಜನವರಿ 26ರ ಗಣರಾಜ್ಯೋತ್ಸವದಂದು ಬೆಳಗ್ಗೆ ಈ ಘಟನೆ ನಡೆದಿದೆ. ಎಚ್ಎಸ್ಆರ್ ಲೇಔಟ್ನ ಟೀಚರ್ಸ್ ಕಾಲೋನಿಯಲ್ಲಿ ಮಹಿಳೆಯೊಬ್ಬರು ಬೆಳಗ್ಗೆ ಸುಮಾರು 6:54ಕ್ಕೆ ತಮ್ಮ ಮನೆಯ ಮುಂದೆ ವಾಕಿಂಗ್ ಮಾಡುತ್ತಿದ್ದರು. ಈ ವೇಳೆ ಅದೇ ಭಾಗದ ನಿವಾಸಿ ಅಮರೇಶ್ ರೆಡ್ಡಿ ಎಂಬುವವರಿಗೆ ಸೇರಿದ ಸಾಕು ನಾಯಿ ಏಕಾಏಕಿ ಮಹಿಳೆಯ ಮೇಲೆ ಎರಗಿದೆ.
ಇದನ್ನೂ ಓದಿ: 4 ಲಕ್ಷ ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಇನ್ಸ್ಪೆಕ್ಟರ್; ಲಾಕ್ ಆಗ್ತಿದ್ದಂತೆ ಡ್ರಾಮಾ ಬೇರೆ..!
ಕುತ್ತಿಗೆಯನ್ನೇ ಗುರಿಯಾಗಿಸಿದ ನಾಯಿ
ನಾಯಿ ದಾಳಿಯ ದೃಶ್ಯಗಳು ಅತ್ಯಂತ ಭಯಾನಕವಾಗಿದ್ದು, ನಾಯಿಯು ಮಹಿಳೆಯ ಕುತ್ತಿಗೆ, ಮುಖ, ಕೈ ಹಾಗೂ ಕಾಲುಗಳಿಗೆ ಮನಬಂದಂತೆ ಕಚ್ಚಿದೆ. ಮಹಿಳೆಯ ಕಿರುಚಾಟ ಕೇಳಿ ಬಿಡಿಸಲು ಬಂದ ಮತ್ತೊಬ್ಬ ವ್ಯಕ್ತಿಯ ಮೇಲೂ ನಾಯಿ ದಾಳಿ ಮಾಡಲು ಮುಂದಾಗಿದೆ. ನಾಯಿಯ ಅಟ್ಯಾಕ್ನಿಂದಾಗಿ ಮಹಿಳೆ ರಕ್ತದ ಮಡುವಿನಲ್ಲಿ ಬಿದ್ದಿದ್ದು, ತಕ್ಷಣವೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
20 ಹೊಲಿಗೆ, ಆಸ್ಪತ್ರೆಯಲ್ಲಿ ಚಿಕಿತ್ಸೆ
ಸದ್ಯ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಯಿ ಕಚ್ಚಿದ ರಭಸಕ್ಕೆ ಮಹಿಳೆಯ ಮುಖ ಮತ್ತು ಕುತ್ತಿಗೆಯ ಭಾಗದಲ್ಲಿ ಆಳವಾದ ಗಾಯಗಳಾಗಿದ್ದು, ವೈದ್ಯರು ಸುಮಾರು 20 ಹೊಲಿಗೆಗಳನ್ನು ಹಾಕಿದ್ದಾರೆ ಎಂದು ತಿಳಿದುಬಂದಿದೆ. ದಾಳಿಯ ತೀವ್ರತೆಗೆ ಮಹಿಳೆ ತೀವ್ರವಾಗಿ ಬೆಚ್ಚಿಬಿದ್ದಿದ್ದಾರೆ.
ಇದನ್ನೂ ಓದಿ:ಮೂರು ಮದುವೆಯಾಗಿ ಲಕ್ಷ ಲಕ್ಷ ಲೂಟಿ.. ಕಿಲಾಡಿ ಲೇಡಿ ಸುಳ್ಳಿನ ಕತೆಗಳೇ ಅತ್ಯದ್ಭುತ..!
ನಾಯಿ ಮಾಲೀಕನ ವಿರುದ್ಧ ದೂರು ದಾಖಲು
ನಾಯಿ ಮಾಲೀಕ ಅಮರೇಶ್ ರೆಡ್ಡಿ ಅವರ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣ ಎಂದು ಆರೋಪಿಸಿ ಮಹಿಳೆಯ ಪತಿ ಎಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಾಕು ನಾಯಿಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳದೆ, ಸಾರ್ವಜನಿಕ ಪ್ರದೇಶದಲ್ಲಿ ಮುನ್ನೆಚ್ಚರಿಕೆ ವಹಿಸದ ಮಾಲೀಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ನಗರ ಪ್ರದೇಶಗಳಲ್ಲಿ ಸಾಕು ನಾಯಿಗಳ ಹಾವಳಿ ಮತ್ತು ಮಾಲೀಕರ ಬೇಜವಾಬ್ದಾರಿತನದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: ಅತ್ತಿಗೆಗೆ ಗುಂಡಿಡುವ ಮುನ್ನ ಅಣ್ಣನಿಗೆ ಕಾಲ್ ಮಾಡಿ ಕಮಾಂಡೋ ಹೇಳಿದ್ದೇನು ಗೊತ್ತಾ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us