/newsfirstlive-kannada/media/media_files/2025/08/18/dharmasthala-case-2-2025-08-18-08-59-08.jpg)
ಧರ್ಮಸ್ಥಳ ಕುರಿತಾಗಿ ದಿನಕ್ಕೊಂದು ಕಥೆಗಳು ಸೃಷ್ಟಿ ಆಗ್ತಿವೆ. ಆ ಕಥೆಗೆ ಬರೀ ರೆಕ್ಕೆಪುಕ್ಕಗಳು ಮಾತ್ರ ಸಿಗ್ತಿವೆ. ಅನಾಮಿಕ ಹೇಳ್ದಂತೆ ಯಾವುದೇ ಕುರುಹುಗಳು ಸಿಕ್ಕಿಲ್ಲ. ಇದು ಧರ್ಮಸ್ಥಳದ ಭಕ್ತರ ಆಕ್ರೋಶಕ್ಕೆ ಕಾರಣ ಆಗಿದೆ. ಕೇವಲ ಕ್ಷೇತ್ರದ ವಿರುದ್ಧದ ಹುನ್ನಾರ ಅಂತ ಹೋರಾಟಗಳ ಮ್ಯಾರಾಥಾನ್ ಶುರುವಾಗಿದೆ.
ಪಾಲಿಟಿಕ್ಸ್ ಫೈಟ್ ಜೋರಾಗಿದೆ. ಈ ನಡುವೆ ಕಮಲಪಾಳಯ ಧರ್ಮಸ್ಥಳ ಚಲೋ ಕೈಗೊಂಡಿದೆ. ಖುದ್ದು ಬಿಜೆಪಿ ರಾಜ್ಯಾಧ್ಯಕ್ಷರು ಸೇರಿದಂತೆ ಇಡೀ ಕೇಸರಿ ಟೀಮ್ ಧರ್ಮಸ್ಥಳದಲ್ಲಿ ಲಂಗರು ಹಾಕಿ ಸರ್ಕಾರದ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದ್ದಾರೆ. ಎಸ್ಐಟಿ ರಚನೆ ಮಾಡಿದ್ದೇ ತಪ್ಪು ಅನ್ನುವಷ್ಟು ಕೋಪ ಸಿಡಿದಿದೆ.
ಗೃಹಸಚಿವರ ಮುಂದೆ ವರದಿ ಬಿಚ್ಚಿಡಲಿರೋ SIT ಮುಖ್ಯಸ್ಥರು
ಒಂದ್ಕಡೆ ಪ್ರತಿಭಟನೆಗಳು, ಇನ್ನೊಂದ್ಕಡೆ, ರಾಜಕೀಯ ಕದನ, ಮತ್ತೊಂದೆಡೆ ಭಕ್ತರ ಆಗ್ರಹ.. ರಾಜ್ಯ ಸರ್ಕಾರ ಅಕ್ಷರಶಃ ಇಕಟ್ಟಿನಲ್ಲಿ ಸಿಲುಕಿದೆ.. ಬುರುಡೆಯೂ ಸಿಕ್ಕಿಲ್ಲ, ಏನೂ ಸಿಕ್ಕಿಲ್ಲ ಅಂತಿರೋ ವಿಪಕ್ಷಗಳು ಎಸ್ಐಟಿ ತನಿಖೆ ಎಲ್ಲಿವರೆಗೆ ಬಂದಿದೆ ಅಂತಾ ನೇರ ಪ್ರಶ್ನೆ ಮಾಡ್ತಿವೆ. ಅಧಿವೇಶನದ ನಡುಭಾಗದಲ್ಲಿ ನಿಂತು ‘ಧರ್ಮ’ಯುದ್ಧ ಸಾರಿವೆ. ಇದಕ್ಕೆಲ್ಲಾ ಉತ್ತರ ಕೊಡಲೇಬೇಕಾದ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯ ಸರ್ಕಾರ ಸಿಲುಕಿದೆ. ಈ ಹಿನ್ನೆಲೆ ತನಿಖೆಯ ಮೇಲೆ ಕಣ್ಣಿಟ್ಟು ಇಂಚಿಂಚೂ ಮಾಹಿತಿ ಸಂಗ್ರಹಕ್ಕೆ ಸರ್ಕಾರ ಮುಂದಾಗಿದೆ.
ಇದನ್ನೂ ಓದಿ: ಧರ್ಮಸ್ಥಳ ಅನಾಮಿಕ ಯೂಟರ್ನ್; ಶ*ವ ಹೂತಿದ್ದು ನಾನೊಬ್ಬನೇ ಅಲ್ಲ.. ಸಂಚಲನ ಸೃಷ್ಟಿಸಿದ ಹೇಳಿಕೆ..!
ಧರ್ಮಸ್ಥಳದಲ್ಲಿ ನಡೆದ ತನಿಖೆಗಳು, ಗುಂಡಿಯೊಳಗಿನ ಸತ್ಯ, ವಿಚಾರಣೆಯಲ್ಲಿ ಬಯಲಾದ ಮಾಹಿತಿಗಳು, ಎಲ್ಲವನ್ನ ವರದಿ ರೂಪಕ್ಕೆ ಬದಲಿಸಿರೋ ಎಸ್ಐಟಿ ಮುಖ್ಯಸ್ಥರು, ಇಂದು ಸರ್ಕಾರದ ಮುಂದೆ ರಿಪೋರ್ಟ್ ತೆರೆದಿಡಲಿದ್ದಾರೆ. ಎಸ್ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಗೃಹಸಚಿವ ಪರಮೇಶ್ವರ್ಗೆ ಮಧ್ಯಂತರ ವರದಿ ಸಲ್ಲಿಸಲಿದ್ದಾರೆ.
ಅಧಿವೇಶನದಲ್ಲಿಂದು ಮತ್ತೆ ಕೈ-ಕಮಲದ ‘ಧರ್ಮ’ಯುದ್ಧ
ವಿಧಾನಸಭೆ ಅಧಿವೇಶನ ಆರಂಭವಾದ ದಿನದಿಂದಲೂ ಧರ್ಮಸ್ಥಳದ ಬುರುಡೆ ರಹಸ್ಯ ಸದ್ದು ಮಾಡ್ತಿದೆ. ಧರ್ಮಸ್ಥಳದಲ್ಲಿ ಎಸ್ಐಟಿ ತನಿಖೆ ಎಲ್ಲಿತನಕ ಬಂದಿದೆ ಅನ್ನೋದರ ವರದಿ ಸರ್ಕಾರ ನೀಡುವಂತೆ ಆಗ್ರಹಿಸಿ ಕಮಲಪಾಳಯ ಆಗ್ರಹಿಸುತ್ತಲೇ ಇದೆ. ಸದನದ ಒಳಗೂ, ಹೊರಗೂ ಬಿಜೆಪಿಬಳಗ ಇದೇ ಮಾತನ್ನ ಪುನರುಚ್ಚಿಸ್ತಿದೆ. ಹೀಗಾಗಿ ಇಂದು ಸರ್ಕಾರ ಸದನದಲ್ಲಿ ಈ ಬಗ್ಗೆ ಉತ್ತರಿಸಲಿದೆ. ಪ್ರಮುಖವಾಗಿ ಎಸ್ಐಟಿ ಮುಖ್ಯಸ್ಥರು ಸಲ್ಲಿಸಿರೋ ಮಧ್ಯಂತರ ವರದಿಯಲ್ಲಿನ ಅಂಶಗಳನ್ನ ಅಧಿವೇಶನದ ಮುಂದೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಮಂಡಿಸೋ ಸಾಧ್ಯತೆ ಇದೆ. ಹೀಗಾದಲ್ಲಿ ಕೈ-ಕಮಲ ಕಲಿಗಳ ನಡುವೆ ಇಂದು ಘೋರ ಕಾಳಗಕ್ಕೆ ವಿಧಾನಸೌಧದ ಸದನಭೂಮಿ ಸಾಕ್ಷಿಯಾಗಲಿದೆ.
ಇದನ್ನೂ ಓದಿ: 16ನೇ ವಯಸ್ಸಿನಿಂದಲೇ ಸಂಘಟನೆ, ಹೋರಾಟ.. CP ರಾಧಾಕೃಷ್ಣನ್ ಯಾರು?
ಒಟ್ಟಾರೆ, ಧರ್ಮಸಂಕಟಕ್ಕೆ ಸಿಲುಕಿರೋ ರಾಜ್ಯ ಸರ್ಕಾರ ಎಸ್ಐಟಿ ತನಿಖಾ ವರದಿ ಮಂಡಿಸಿ ಒಂದಷ್ಟು ರಿಲೀಫ್ ಪಡೆಯೋ ಲೆಕ್ಕಾಚಾರದಲ್ಲಿದೆ. ಈ ವರದಿಯ ರಿಪೋರ್ಟ್ ಮತ್ತೊಂದು ಮಹಾಯುದ್ಧಕ್ಕೆ ದಾರಿ ಮಾಡಿಕೊಡೋ ಸಾಧ್ಯತೆಯನ್ನಂತೂ ತಳ್ಳಿಹಾಕುವಂತಿಲ್ಲ.
ಇದನ್ನೂ ಓದಿ:ಧರ್ಮಸ್ಥಳದ ಪರವಾಗಿ ಬಿಜೆಪಿ ನೈತಿಕ ಬೆಂಬಲ; ಮಂಜುನಾಥನ ಸನ್ನಿಧಿಯಲ್ಲಿ ವಿಜಯೇಂದ್ರ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ