/newsfirstlive-kannada/media/media_files/2025/09/01/maratha-quota-stir-2025-09-01-21-16-36.jpg)
ಮಹಾರಾಷ್ಟ್ರದಲ್ಲಿ ‘ಮರಾಠಾ ಮೀಸಲಾತಿ’ ಪ್ರತಿಭಟನೆ ತೀವ್ರಗೊಂಡಿದೆ. ಮನೋಜ್ ಜರಂಗೇ (Manoj Jarange) ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಹಾದಿ ಸರಿ ಇಲ್ಲ ಎಂದಿರುವ ಬಾಂಬೆ ಹೈಕೋರ್ಟ್ (Bombay High Court ) ಕಠಿಣ ಪದಗಳಲ್ಲಿ ಟೀಕೆ ಮಾಡಿದೆ. ಪ್ರತಿಭಟನೆಗೆ ನಾವು ಷರತ್ತುಗಳನ್ನು ವಿಧಿಸಿ ಅನುಮತಿ ನೀಡಿದ್ದೇವು. ಆದರೆ ಅವರ ಹೋರಾಟ ಶಾಂತಿಯುತವಾಗಿಲ್ಲ. ಪ್ರತಿಭಟನೆಯಲ್ಲಿ ಭಾಗಿಯಾಗಿರುವ ಜನ ಷರತ್ತುಗಳನ್ನು ಉಲ್ಲಂಘಿಸಿದ್ದಾರೆ ಎಂದು ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಇದನ್ನೂ ಓದಿ:ಮಳೆಗೆ ಮುಳುಗಿದ ಗುರುಗ್ರಾಮ, ದೆಹಲಿ ರಸ್ತೆಗಳು, ಆಫೀಸ್ ನಲ್ಲೇ ರಾತ್ರಿ ಕಳೆಯೋಣ ಎಂದ ಟೆಕ್ಕಿಗಳು
ಪ್ರತಿಭಟನಾಕಾರರು ನಗರವನ್ನು ಸ್ತಬ್ಧಗೊಳಿಸಿದ್ದಾರೆ. ಜೊತೆಗೆ ಕೋರ್ಟ್ಗೆ ನೀಡಿದ್ದ ಅಫಿಡವಿಟ್ ಪಾಲಿಸಿಲ್ಲ. ಈ ಮೀಸಲಾತಿ ಚಳವಳಿಯಿಂದಾಗಿ ಇಡೀ ಮುಂಬೈ ಸ್ಥಗಿತಗೊಂಡಿದೆ. ಹೀಗಾಗಿ ನಾಳೆ (ಮಂಗಳವಾರ) ಮಧ್ಯಾಹ್ನದೊಳಗೆ ನಗರದ ಎಲ್ಲಾ ರಸ್ತೆಗಳನ್ನು ತೆರವುಗೊಳಿಸಬೇಕೆಂದು ನ್ಯಾಯಾಲಯ ಆದೇಶಿಸಿದೆ. ಬಾಂಬೆ ಹೈಕೊರ್ಟ್ನ ವಿಭಾಗೀಯ ಪೀಠ ಆದೇಶ ನೀಡಿದೆ. ಜೊತೆಗೆ ಪ್ರತಿಭಟನಾಕಾರರಿಗೆ ಆಜಾದ್ ಮೈದಾನದಲ್ಲಿ ಮಾತ್ರ ಕುಳಿತುಕೊಳ್ಳಲು ಅವಕಾಶ ನೀಡಿದೆ. ಅಲ್ಲಿ 5 ಸಾವಿರಕ್ಕಿಂತ ಹೆಚ್ಚು ಮಂದಿ ಇರಬಾರದು ಎಂದು ಖಡಕ್ ಆಗಿ ಸೂಚಿಸಿದೆ. ಉಳಿದವರೆಲ್ಲ ನಾಳೆ ಮಧ್ಯಾಹ್ನ 12 ಗಂಟೆಯೊಳಗೆ ಹೊರಡಬೇಕು ಎಂದಿದೆ.
ಸರ್ಕಾರಕ್ಕೆ ಸೂಚನೆ
ಮನೋಜ್ ಜರಂಗೆಯ ಬೆಂಬಲಿಗರು ಪರಿಸ್ಥಿತಿಯನ್ನು ಸುಧಾರಿಸಿ ರಸ್ತೆಯನ್ನು ತೆರವುಗೊಳಿಸುವಂತೆ ಹೈಕೋರ್ಟ್ ಕೇಳಿದೆ. ಚಳವಳಿಯಿಂದಾಗಿ ಸಂಚಾರ ದಟ್ಟಣೆ ಉಂಟಾಗಿದೆ. ನಾಳೆಯೊಳಗೆ ಮುಂಬೈನ ಎಲ್ಲಾ ರಸ್ತೆಗಳು ಖಾಲಿಯಾಗಬೇಕೆಂದು ಹೇಳಿದೆ. ಜೊತೆಗೆ ರಸ್ತೆಗಳು ಖಾಲಿಯಾಗಿರೋದನ್ನು ಖಚಿತಪಡಿಸುವಂತೆ ಕೋರ್ಟ್ ಸರ್ಕಾರಕ್ಕೆ ಸೂಚಿಸಿದೆ.
ಸರ್ಕಾರ ಹೇಳಿದ್ದೇನು..?
ಗಣೇಶೋತ್ಸವ ಹಿನ್ನೆಲೆಯಲ್ಲಿ ಪರಿಸ್ಥಿತಿ ನಿಯಂತ್ರಿಸೋದು ಕಷ್ಟವಾಗಿದೆ ಎಂದು ಸರ್ಕಾರ ಹೇಳಿದೆ. ಪೊಲೀಸ್ ಪಡೆಯನ್ನು ಕಟ್ಟುನಿಟ್ಟಾಗಿ ಬಳಸೋದು ಸುಲಭ. ಆದರೆ ಅದರ ಪರಿಣಾಮಗಳು ಗಂಭೀರವಾಗಿರುತ್ತವೆ. ಹಾಗಾಗಿ ಸಮತೋಲನ ಕಾಯ್ದುಕೊಳ್ಳುವುದು ಅವಶ್ಯಕ. ಪ್ರತಿಯೊಬ್ಬ ನಾಗರಿಕನಿಗೂ ಪ್ರತಿಭಟಿಸುವ ಹಕ್ಕಿದೆ. ಆದರೆ ಅದು ಶಾಂತಿಯುತವಾಗಿರಬೇಕು. ನಿಗದಿತ ನಿಯಮಗಳ ಅಡಿಯಲ್ಲಿರಬೇಕು ಎಂದು ಹೈಕೋರ್ಟ್ ಸ್ಪಷ್ಟವಾಗಿ ಹೇಳಿದೆ.
ಮುಂಬೈ ನಗರ ಸ್ಥಗಿತಗೊಂಡಿದೆ. ನ್ಯಾಯಾಧೀಶರು ಮತ್ತು ವಕೀಲರ ವಾಹನಗಳನ್ನ ನಿಲ್ಲಿಸಲಾಗುತ್ತಿದೆ. ಗೇಟ್ಗಳನ್ನು ಕ್ಲೋಸ್ ಮಾಡಲಾಗಿದೆ. ಜನ ರಸ್ತೆಯಲ್ಲಿ ಸ್ನಾನ ಮಾಡ್ತಿದ್ದಾರೆ. ರಸ್ತೆಯಲ್ಲೇ ಆಹಾರ ತಯಾರಿಸ್ತಿದ್ದಾರೆ. ಇಡೀ ನಗರವನ್ನು ಗಲೀಜು ಮಾಡ್ತಿದ್ದಾರೆ ಎಂದು ಕೋರ್ಟ್ ಬೇಸರ ವ್ಯಕ್ತಪಡಿಸಿದೆ. ಸರ್ಕಾರ ಕಾನೂನಿನ ಅಡಿಯಲ್ಲಿ ಕ್ರಮಕೈಗೊಳ್ಳಬೇಕು. ಹೊಸ ಪ್ರತಿಭಟನಾಕಾರರು ನಗರಕ್ಕೆ ಬರೋದನ್ನು ತಡೆಯಬೇಕು ಎಂದಿದೆ.
ಮನೋಜ್ ಜರಂಗೇ ಬೇಡಿಕೆ ಏನು?
ಮನೋಜ್ ಜರಂಗೇ ಪಾಟೀಲ್ ಶೇಕಡಾ 10 ರಷ್ಟು ಮೀಸಲಾತಿಗಾಗಿ ಉಪವಾಸ ಸತ್ಯಾಗ್ರಹ ಮಾಡ್ತಿದ್ದಾರೆ. ಮರಾಠರನ್ನು ಕುನ್ಬಿ (kunbi caste) ಜಾತಿ ಎಂದು ಗುರುತಿಸಬೇಕೆಂದು ಒತ್ತಾಯಿಸ್ತಿದ್ದಾರೆ. ಈ ಕುನ್ಬಿಗಳು ಒಬಿಸಿ ವರ್ಗದ ಅಡಿಯಲ್ಲಿ ಬರುತ್ತಾರೆ. ಇದರಿಂದ ಸರ್ಕಾರಿ ಉದ್ಯೋಗಗಳು ಮತ್ತು ಶಿಕ್ಷಣದಲ್ಲಿ ಮರಾಠಾ ಸಮುದಾಯಕ್ಕೆ ಮೀಸಲಾತಿ ನೀಡುತ್ತದೆ. ಮರಾಠವಾಡ ಪ್ರದೇಶದ ಮರಾಠರನ್ನು ಕುನ್ಬಿ ಎಂದು ಘೋಷಿಸಬೇಕು, ಮೀಸಲಾತಿ ನೀಡಬೇಕು. ಹೈದರಾಬಾದ್ ಮತ್ತು ಸತಾರಾದ ಗೆಜೆಟ್ ಅಧಿಸೂಚನೆಯನ್ನು ಕಾನೂನನ್ನಾಗಿ ಮಾಡಬೇಕು ಅನ್ನೋದು ಆಗ್ರಹವಾಗಿದೆ. ಇದಕ್ಕೆ ಒಬಿಸಿ ನಾಯಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ:ಡಿಕೆಶಿದ್ದು ಏನೂ ಇಲ್ಲ, ಎಲ್ಲಾ ಕಿತಾಪತಿ ಸಾಧು ಕೋಕಿಲಾದ್ದು -ಕಿಚ್ಚ ಸುದೀಪ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ