/newsfirstlive-kannada/media/post_attachments/wp-content/uploads/2024/08/cm-siddu-1.jpg)
ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ ಮೀಸಲಾತಿಯ ಜೇನು ಗೂಡಿಗೆ ಕೈ ಹಾಕಿ, ಜೇನುತುಪ್ಪ ತಿನ್ನುವ ಆಸೆ ಈಡೇರಲಿಲ್ಲ. ಮೀಸಲಾತಿಯ ಜೇನುಗೂಡಿಗೆ ಕೈ ಹಾಕಿ ಜೇನು ಕಚ್ಚಿಸಿಕೊಂಡು ಅಧಿಕಾರದಿಂದ ಬಸವರಾಜ ಬೊಮ್ಮಾಯಿ ಇಳಿಯಬೇಕಾಯಿತು. ರಾಜ್ಯದ ಲಂಬಾಣಿ ಸಮುದಾಯ ಬಿಜೆಪಿಯ ವಿರುದ್ಧ ತಿರುಗಿಬಿದ್ದಿತ್ತು.
ಈಗ ಸಿಎಂ ಸಿದ್ದರಾಮಯ್ಯ ಸರ್ಕಾರ ಮೀಸಲಾತಿ ಪರಿಷ್ಕರಣೆಯ ಪ್ರಯತ್ನವನ್ನು ಮುಂದುವರಿಸಿದೆ. ಈಗಾಗಲೇ ಪರಿಶಿಷ್ಟ ಜಾತಿಯ ಮೀಸಲಾತಿ ಪರಿಷ್ಕರಣೆಯನ್ನು ಮಾಡಿ ಮುಗಿಸಿದೆ. ಪರಿಶಿಷ್ಟ ಜಾತಿಯ ಎಲ್ಲ 101 ಜಾತಿಗಳನ್ನು ಮೂರು ವರ್ಗಗಳಾಗಿ ವಿಂಗಡಿಸಿ, ಒಳ ಮೀಸಲಾತಿ ನೀಡಿದೆ. ಆದರೆ ಇದಕ್ಕೆ ಲಂಬಾಣಿ, ಭೋವಿ, ಕೊರಮ ಮತ್ತು ಕೊರಚ ಸಮುದಾಯಗಳು ಮಾತ್ರ ತೀವ್ರ ವಿರೋಧ ವ್ಯಕ್ತಪಡಿಸುತ್ತಿವೆ. ಜೊತೆಗೆ ಅಲೆಮಾರಿ ಸಮುದಾಯಗಳು ತಮಗೆ ಜಸ್ಟೀಸ್ ನಾಗಮೋಹನ್ ದಾಸ್ ಸಮಿತಿಯ ಶಿಫಾರಸ್ಸಿನಂತೆ ಪ್ರತ್ಯೇಕ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿವೆ. ಈಗ ಮತ್ತೊಂದು ಮೀಸಲಾತಿ ಪರಿಷ್ಕರಣೆಗೆ ಸಿಎಂ ಸಿದ್ದರಾಮಯ್ಯ ಸರ್ಕಾರ ಮುಂದಾಗಿದೆ.
ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡ(ಎಸ್.ಟಿ.) ಪಟ್ಟಿಗೆ ಸೇರಿಸುವ ಬಗ್ಗೆ ಚರ್ಚಿಸಲು ರಾಜ್ಯ ಸರ್ಕಾರದ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿಗಳು ಇವತ್ತು ಬೆಂಗಳೂರಿನ ಬಹುಕಟ್ಟಡದಲ್ಲಿ ಸಭೆ ಕರೆದಿದ್ದಾರೆ. ಸಭೆಯ ಸೂಚನಾ ಪತ್ರವನ್ನು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಕಳುಹಿಸಲಾಗಿದೆ. ಸಭೆಯ ಸೂಚನಾ ಪತ್ರದಲ್ಲಿ ಮುಖ್ಯವಾಗಿ ಸಭೆಯ 2 ಅಜೆಂಡಾಗಳನ್ನು ಉಲ್ಲೇಖಿಸಿದ್ದಾರೆ. ಮೊದಲನೇಯದಾಗಿ ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸುವ ಕುರಿತು ಎಂದು ಉಲ್ಲೇಖವಾಗಿದೆ.
ಎರಡನೇಯದಾಗಿ ಬೀದರ್, ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳ ಕುರುಬ ಸಮುದಾಯವು ಕರ್ನಾಟಕದ ಗೊಂಡ ಸಮುದಾಯದ ಜೊತೆ ಸಾಮ್ಯತೆ ಹೊಂದಿರುವ ಬಗ್ಗೆ ಸೇರ್ಪಡೆಯ ಬಗ್ಗೆ ಚರ್ಚೆ ಎಂದು ಉಲ್ಲೇಖಿಸಲಾಗಿದೆ. ಮೇಲ್ಕಂಡ ಸಭೆಗೆ ಅಗತ್ಯ ಮಾಹಿತಿ ಮತ್ತು ದಾಖಲೆಗಳೊಂದಿಗೆ ಹಾಜರಾಗುವಂತೆ ತಿಳಿಸಲಾಗಿದೆ ಎಂದು ಪತ್ರದಲ್ಲಿ ಹೇಳಲಾಗಿದೆ. ಹೀಗಾಗಿ ಇವತ್ತು ನಡೆಯುವ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಸಭೆಯಲ್ಲಿ ಏನೇನು ಚರ್ಚೆಯಾಗುತ್ತೆ? ಶಾಶ್ವತ ಹಿಂದುಳಿದ ವರ್ಗಗಳ ಆಯೋಗಕ್ಕೆ ಮತ್ತು ಕೇಂದ್ರದ ಪರಿಶಿಷ್ಟ ಪಂಗಡಗಳ ಆಯೋಗಕ್ಕೆ ಏನೇನು ಶಿಫಾರಸ್ಸು ಮಾಡಲಾಗುತ್ತೆ ಎಂಬ ಕುತೂಹಲ ಇದೆ.
ಇದನ್ನೂ ಓದಿ:ಹಾಸನ ಟ್ರಕ್ ಹರಿದು ದುರಂತ: ಸಾವಿನ ಸಂಖ್ಯೆ ಹತ್ತಕ್ಕೆ ಏರಿಕೆ, ಹಿಮ್ಸ್ ಆಸ್ಪತ್ರೆಯಲ್ಲಿ ಚಂದನ್ ಸಾವು
/filters:format(webp)/newsfirstlive-kannada/media/media_files/2025/09/15/kuruba-to-st-category-2025-09-15-13-19-28.jpg)
ಜೊತೆಗೆ ಸದ್ಯ ರಾಜ್ಯದಲ್ಲಿ ಕುರುಬ ಸಮುದಾಯವು 2ಎ ಗ್ರೂಪ್ ನಲ್ಲಿದ್ದು, ಶೇ.15 ರಷ್ಟು ಮೀಸಲಾತಿ ಸೌಲಭ್ಯ ಪಡೆಯುತ್ತಿದೆ. 2ಎ ಗ್ರೂಪ್ ನಲ್ಲಿ ಕುರುಬ ಸಮುದಾಯ ಸೇರಿದಂತೆ, ವಿಶ್ವಕರ್ಮ, ಕುಂಬಾರ, ದೇವಾಂಗ, ನೇಕಾರ, ಮಡಿವಾಳ, ಅಗಸ, ತಿಗಳ, ಪಟ್ಟೇಗಾರ, ಬೌದ್ಧ ಸೇರಿದಂತೆ 100 ಸಮುದಾಯಗಳಿವೆ.
ಪರಿಶಿಷ್ಟ ಪಂಗಡಗಳಿಗೆ ಸದ್ಯ ರಾಜ್ಯದಲ್ಲಿ ಶೇ.7 ರಷ್ಟು ಮೀಸಲಾತಿ ಸೌಲಭ್ಯವನ್ನು ನೀಡಲಾಗಿದೆ. ವಾಲ್ಮೀಕಿ ನಾಯಕ ಸಮುದಾಯ ಸೇರಿದಂತೆ 51 ಸಮುದಾಯಗಳು ಎಸ್.ಟಿ. ಮೀಸಲಾತಿ ಲಾಭ ಹಾಗೂ ಸೌಲಭ್ಯವನ್ನು ಪಡೆಯುತ್ತಿವೆ. ಒಂದು ವೇಳೆ ಕುರುಬ ಸಮುದಾಯವನ್ನು ಎಸ್.ಟಿ. ಪಟ್ಟಿಗೆ ಸೇರ್ಪಡೆ ಮಾಡಿದರೇ, ಈಗ ಶೇ.7 ರ ಮೀಸಲಾತಿಯನ್ನು ವಾಲ್ಮೀಕಿ ನಾಯಕ ಸಮುದಾಯವು ಕುರುಬ ಸಮುದಾಯದ ಜೊತೆಗೆ ಹಂಚಿಕೊಳ್ಳಬೇಕಾಗುತ್ತೆ. ಇದಕ್ಕೆ ವಾಲ್ಮೀಕಿ ನಾಯಕ ಸಮುದಾಯ ಸಿದ್ಧವಿದೆಯೇ ಎಂಬ ಪ್ರಶ್ನೆ ಉದ್ಭವವಾಗುತ್ತೆ. ಈ ಮೊದಲು ರಾಜ್ಯದಲ್ಲಿ ಎಸ್.ಟಿ. ಮೀಸಲಾತಿಯ ಪ್ರಮಾಣ ಶೇ.4 ರಷ್ಟಿತ್ತು. ಅದನ್ನು ಹೋರಾಟ, ಪ್ರತಿಭಟನೆ, ಬೇಡಿಕೆ ಇಟ್ಟ ಬಳಿಕ ಶೇ.7 ಕ್ಕೆ ಹೆಚ್ಚಿಸಲಾಗಿದೆ. ಇದರಿಂದ ಎಸ್.ಟಿ. ವಾಲ್ಮೀಕಿ ನಾಯಕ ಸಮುದಾಯದಲ್ಲಿ ತೃಪ್ತಿ, ಸಮಾಧಾನ ಇದೆ. ಈಗ ತಮಗೆ ನೀಡಿರುವ ಶೇ.7 ರ ಮೀಸಲಾತಿಯ ಪಾಲುನ್ನು ಕುರುಬ ಸಮುದಾಯದ ಜೊತೆಗೆ ಹಂಚಿಕೊಳ್ಳಬೇಕು ಎಂದು ಹೇಳಿದರೆ ಎಸ್ಟಿ. ಕೆಟಗರಿಯಲ್ಲಿರುವ ಸಮುದಾಯಗಳು ಒಪ್ಪಿಕೊಳ್ಳುತ್ತಾವೆಯೇ ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವವಾಗುತ್ತೆ.
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಕುರುಬ ಸಮುದಾಯದವರು. ತಮ್ಮ ಸಮುದಾಯವನ್ನು ಎಸ್ಟಿ. ಪಟ್ಟಿಗೆ ಸೇರಿಸುವಂತೆ ಸಿಎಂ ಸಿದ್ದರಾಮಯ್ಯ ಅವರೆ ಸೂಚನೆ ಕೊಟ್ಟಿದ್ದಾರಾ, ಸಿಎಂ ಸೂಚನೆ ಇಲ್ಲದೇ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಇವತ್ತು ಸಭೆ ಕರೆದಿದ್ದಾರಾ ಎಂಬ ಪ್ರಶ್ನೆ ಉದ್ಭವವಾಗಿದೆ.
ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಬಗ್ಗೆ ಮೈಸೂರಿನ ಬುಡಕಟ್ಟು ಸಂಶೋಧನಾ ಸಂಸ್ಥೆ ಕುಲಶಾಸ್ತ್ರೀಯ ಅಧ್ಯಯನ ನಡೆಸಿದೆ. ಬಳಿಕ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿತ್ತು. ರಾಜ್ಯದ ಕ್ಯಾಬಿನೆಟ್ ಆ ವರದಿಯನ್ನು ಕೇಂದ್ರ ಸರ್ಕಾರಕ್ಕೆ 2 ವರ್ಷದ ಹಿಂದೆಯೇ ಅಂದರೆ 2023ರ ಮಾರ್ಚ್​ನಲ್ಲಿ ವರದಿ ಸಲ್ಲಿಸಿದೆ. ಕುರುಬ ಸಮುದಾಯವನ್ನು ಎಸ್.ಟಿ. ಪಟ್ಟಿಗೆ ಸೇರಿಸುವ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ರಾಜ್ಯದ ಸಮಾಜ ಕಲ್ಯಾಣ ಇಲಾಖೆಯ ಕಾರ್ಯದರ್ಶಿಯಾಗಿದ್ದ ಪಿ.ಮಣಿವಣ್ಣನ್ ಅವರು ಕೇಂದ್ರದ ಬುಡಕಟ್ಟು ಇಲಾಖೆಯ ಕಾರ್ಯದರ್ಶಿಗೆ ಪತ್ರ ಬರೆದು ವರದಿ ಸಲ್ಲಿಸಿದ್ದಾರೆ.
ಇದನ್ನೂ ಓದಿ:ಬೆಂಗಳೂರಿಗರಿಗೆ ಗುಡ್ ನ್ಯೂಸ್: 1200 ಚದರ ಅಡಿಯ ಮನೆಗೆ ಓ.ಸಿ ಹಾಗೂ ಸಿ.ಸಿ. ಅಗತ್ಯ ಇಲ್ಲ ಎಂದ ಸರ್ಕಾರ
ಮತ್ತೆ ಕುರುಬ ಸಮುದಾಯವನ್ನು ಎಸ್.ಟಿ. ಪಟ್ಟಿಗೆ ಸೇರಿಸುವ ಪ್ರಕ್ರಿಯೆಗೆ ವೇಗ ಸಿಗುತ್ತಿದೆ. ಇವತ್ತು ಸಭೆಯ ಬಳಿಕ ವರದಿಯನ್ನು ರಾಜ್ಯದ ಕ್ಯಾಬಿನೆಟ್ಗೆ ಮತ್ತು ಕೇಂದ್ರ ಸರ್ಕಾರಕ್ಕೆ ಕಳಿಸಬಹುದು. ಇದನ್ನು ವಾಲ್ಮೀಕಿ ನಾಯಕ ಸೇರಿದಂತೆ ಪರಿಶಿಷ್ಟ ಪಂಗಡಗಳ ಪಟ್ಟಿಯಲ್ಲಿರುವ 51 ಸಮುದಾಯಗಳು ಒಪ್ಪಿಕೊಳ್ಳುತ್ತಾವಾ, ಎಸ್.ಟಿ. ಮೀಸಲಾತಿಯ ಪ್ರಮಾಣವನ್ನು ಶೇ.7 ರಿಂದ ಮತ್ತಷ್ಟು ಹೆಚ್ಚಿಸಬೇಕೆಂದು ಬೇಡಿಕೆ ಇಡುತ್ತಾವಾ ಎಂಬ ಪ್ರಶ್ನೆ ಕೂಡ ಉದ್ಭವವಾಗಿದೆ.
ಕುರುಬ ಸಮುದಾಯ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಯಾದರೆ ರಾಜ್ಯ ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಪರಿಶಿಷ್ಟ ಪಂಗಡಕ್ಕೆ ಮೀಸಲಾದ ವಿಧಾನಸಭಾ ಕ್ಷೇತ್ರಗಳು ಹಾಗೂ ಲೋಕಸಭಾ ಕ್ಷೇತ್ರಗಳಲ್ಲೂ ಸ್ಪರ್ಧೆ ಮಾಡಲು ಅವಕಾಶ ಸಿಗುತ್ತೆ. ಬಳ್ಳಾರಿ ಲೋಕಸಭಾ ಕ್ಷೇತ್ರ ಹಾಗೂ ರಾಯಚೂರು ಲೋಕಸಭಾ ಕ್ಷೇತ್ರಗಳು ಸದ್ಯ ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಲೋಕಸಭಾ ಕ್ಷೇತ್ರಗಳು. ಈ ಲೋಕಸಭಾ ಕ್ಷೇತ್ರಗಳಲ್ಲಿ ಕುರುಬರು ಕೂಡ ಎಸ್.ಟಿ.ಸೇರ್ಪಡೆಯಾದರೆ ಸ್ಪರ್ಧೆ ಮಾಡಲು ಅವಕಾಶ ಸಿಗುತ್ತೆ. ಹೀಗಾಗಿ ಈ ರಾಜಕೀಯ ಮೀಸಲಾತಿ ಪಡೆಯುವ ಉದ್ದೇಶವೂ ಎಸ್.ಟಿ. ಸೇರ್ಪಡೆಯ ಪ್ರಯತ್ನದ ಹಿಂದೆ ಇರಬಹುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us