/newsfirstlive-kannada/media/media_files/2025/08/13/smriti-mandana-chinnaswamy-stadium-2025-08-13-15-24-46.jpg)
ಚಿನ್ನಸ್ವಾಮಿ ಕ್ರೀಡಾಂಗಣದಿಂದ (Chinnaswamy stadium) ಮಹಿಳಾ ವಿಶ್ವಕಪ್ (Women world cup) ದೂರವಾಗಿದೆ. ರಾಜ್ಯ ಕ್ರಿಕೆಟ್ ಅಭಿಮಾನಿಗಳ ಕನಸು ಭಗ್ನವಾಗಿದೆ. ರಾಜ್ಯ ಸರ್ಕಾರದ ಕಠಿಣ ನಿರ್ಧಾರದಿಂದ, ಜಂಟಲ್​ಮೆನ್ ಗೇಮ್ ಕ್ರಿಕೆಟ್ ಬಡವಾಗಿದೆ. ಯಾರೋ ಮಾಡಿದ ತಪ್ಪಿಗೆ, ಇನ್ಯಾರಿಗೋ ಶಿಕ್ಷೆಯಾಗಿದೆ. ನೂರಾರೂ ಪಂದ್ಯಗಳಿಗೆ ಆತಿಥ್ಯವಹಿಸಿದ್ದ ಬೆಂಗಳೂರು ಈಗ ಸ್ತಬ್ಧವಾಗಿದೆ.
ಮಹಿಳಾ ಏಕದಿನ ವಿಶ್ವಕಪ್ ಆತಿಥ್ಯ ಕೈತಪ್ಪಿದ ಬೆನ್ನಲೇ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ, ಸಿಡಿಲು ಬಡಿದಂತಾಗಿದೆ. ಯಾರೋ ಮಾಡಿದ ತಪ್ಪಿಗೆ, ನಮ್ಮ ಐಕಾನಿಕ್ ಚಿನ್ನಸ್ವಾಮಿ ಕ್ರೀಡಾಂಗಣದಿಂದ, ಮಹಿಳಾ ಏಕದಿನ ವಿಶ್ವಕಪ್ ಪಂದ್ಯಾವಳಿಗಳು, ಬೇರೆಡೆ ಸ್ಥಳಾಂಗತಗೊಳ್ಳುತ್ತಿದೆ. ಇದರಿಂದ ಉದ್ಯಾನ ನಗರಿ, ಸಿಲಿಕಾನ್ ಸಿಟಿ, ಬ್ರ್ಯಾಂಡ್ ಬೆಂಗಳೂರು ಎಂದೇ ಖ್ಯಾತಿ ಪಡೆದಿರುವ ನಮ್ಮ ಹೆಮ್ಮೆಯ ನಗರಕ್ಕೆ, ಕಪ್ಪುಚುಕ್ಕೆ ಇಟ್ಟಂತಾಗಿದೆ.
/filters:format(webp)/newsfirstlive-kannada/media/media_files/2025/08/13/smriti-mandana-2025-08-13-15-32-34.jpg)
ಚಿನ್ನಸ್ವಾಮಿ ಕ್ರೀಡಾಂಗಣ, ಇದುವರೆಗೂ ಸಾಕಷ್ಟು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಗಳ ಆತಿಥ್ಯವಹಿಸಿಕೊಂಡಿದೆ. ಟೆಸ್ಟ್, ಏಕದಿನ, ಟಿ-20 ಕ್ರಿಕೆಟ್ ಸೇರಿದಂತೆ, 700ಕ್ಕಿಂತ ಹೆಚ್ಚು ಪಂದ್ಯಗಳು, ಈ ಸ್ಟೇಡಿಯಮ್​ನಲ್ಲಿ ನಡೆದಿವೆ. ಆದ್ರೀಗ ಈ ಐತಿಹಾಸಿಕ ಕ್ರೀಡಾಂಗಣದಿಂದ ವಿಶ್ವಕಪ್​​ ಎತ್ತಂಗಡಿ ಆಗ್ತಿರುವುದು, ಕ್ರಿಕೆಟ್ ಅಭಿಮಾನಿಗಳಿಗೆ ತೀವ್ರ ಬೇಸರ ಉಂಟು ಮಾಡಿದೆ. ಯಾರೋ ಮಾಡಿದ ತಪ್ಪಿಗೆ ಕ್ರಿಕೆಟ್ ಬಲಿಯಾಗ್ತಿದೆ ಅಂತ, ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ವಿಶ್ವಕಪ್​ನ ಉದ್ಘಾಟನಾ ಪಂದ್ಯ ಸೇರಿದಂತೆ, ಚಿನ್ನಸ್ವಾಮಿಯಲ್ಲಿ ಒಟ್ಟು 3 ಲೀಗ್ ಪಂದ್ಯಗಳು ನಡೆಯಬೇಕಿತ್ತು. ಸೆಮಿಫೈನಲ್ ಮತ್ತು ಫೈನಲ್​ನಂತಹ ಬಿಗ್​ ಮ್ಯಾಚ್​ಗಳ ಆತಿಥ್ಯ ಕೂಡ ನಮ್ಮ ಹೆಮ್ಮೆಯ ನಗರಿಗೆ ನೀಡಲಾಗಿತ್ತು. ಈ ಎಲ್ಲಾ 5 ಪಂದ್ಯಗಳಿಂದ ಚಿನ್ನಸ್ವಾಮಿ ವಂಚಿತವಾಗ್ತಿದೆ.
ವಿಶ್ವಕಪ್ ಆತಿಥ್ಯಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣವೇ ಬೆಸ್ಟ್
ನಮ್ಮ ಬೆಂಗಳೂರು, ಕ್ರೀಡೆಗಳ ತವರೂರು. ಅದ್ರಲ್ಲೂ ನಮ್ಮ ನಗರದಲ್ಲಿ ಕ್ರಿಕೆಟ್​​ ಅಭಿಮಾನಿಗಳೇ ಜಾಸ್ತಿ. ಹೀಗಿರುವಾಗ ವಿಶ್ವಕಪ್​​ನಂತಹ ಟೂರ್ನಿಯ ಆತಿಥ್ಯ, ಚಿನ್ನಸ್ವಾಮಿಗೆ ನೀಡಿದರೆ ಇದಕ್ಕಿಂತ ಸಂತೋಷ ಮತ್ತೊಂದಿಲ್ಲ. ಈ ಕ್ರೀಡಾಂಗಣದಲ್ಲಿ 700ಕ್ಕಿಂತ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳು ನಡೆದಿವೆ. ಆದ್ರೆ ಪಂದ್ಯಾವಳಿಗಳ ವೇಳೆ, ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಒಂದೇ ಒಂದು ಸಣ್ಣ ಲೋಪ ಕೂಡ ಕಂಡುಬಂದಿಲ್ಲ. ಹಾಗಾಗಿ ವಿಶ್ವಕಪ್ ಆತಿಥ್ಯಕ್ಕೆ, ಚಿನ್ನಸ್ವಾಮಿನೇ ಸೇಫ್.
ಭದ್ರತೆ, ಮುನ್ನೆಚ್ಚರಿಕೆ ಕ್ರಮ ಕೈಗೊಂಡ್ರೆ ಆಯೋಜಿಸಬಹುದು
ಚಿನ್ನಸ್ವಾಮಿಯಲ್ಲಿ ಅಂತಾರಾಷ್ಟ್ರೀಯ, ಐಪಿಎಲ್​​​​ನಂತಹ ಬಿಗ್​ ಮ್ಯಾಚ್​ಗಳನ್ನ ಆಡಿಸುವಾಗ, ಕೆಎಸ್​ಸಿಎ ಮತ್ತು ಪೊಲೀಸ್ ಇಲಾಖೆ, ಕಟ್ಟುನಿಟ್ಟಿನ ಕ್ರಮಗಳನ್ನ ಕೈಗೊಳ್ಳುತ್ತದೆ. ಪಂದ್ಯವನ್ನ ಸ್ಮೂತ್ ಆಗಿ ನಡೆಸಲು ಮತ್ತು ಯಾವುದೇ ರೀತಿಯ ಅಹಿತಕರ ಘಟನೆಗಳ ನಡೆಯದಂತೆ ಪಂದ್ಯಕ್ಕೂ ಮುನ್ನ ಭದ್ರತೆ ಆಯೋಜನೆ ಮತ್ತು ಮುನ್ನೆಚ್ಚರಿಕೆಯ ಕ್ರಮಗಳನ್ನ ಕಟ್ಟುನಿಟ್ಟಾಗಿ ಜಾರಿ ಮಾಡುತ್ತದೆ. ದೇಶದಲ್ಲೇ ಅತ್ಯುತ್ತಮ ಕ್ರೀಡಾಂಗಣ ಎನಿಸಿಕೊಂಡಿರೋ ಚಿನ್ನಸ್ವಾಮಿ, ವಿಶ್ವಕಪ್ ಆತಿಥ್ಯಕ್ಕೆ ದಿ ಬೆಸ್ಟ್ ಅನ್ನೋದಕ್ಕೆ, ಇದಕ್ಕಿಂತ ಉದಾಹರಣೆ ಬೇಕಾ?
32 ಸಾವಿರ ಕೆಪಾಸಿಟಿ ಹೊಂದಿರುವ ಈ ಕ್ರೀಡಾಂಗಣದಲ್ಲಿ, ಕನಿಷ್ಟ ಪಕ್ಷ 15 ಸಾವಿರ ಪ್ರೇಕ್ಷಕರಿಗೆ ಪಂದ್ಯ ನೋಡಲು ಅವಕಾಶ ನೀಡಬಹುದು. ಕ್ರೀಡಾಂಗಣದ ಸುತ್ತ-ಮುತ್ತ, ಮತ್ತು ಎಲ್ಲಾ ಸ್ಟ್ಯಾಂಡ್​​ಗಳ ಬಳಿ ಌಂಬ್ಯುಲೆನ್ಸ್​​ ಸೇವೆ ಒದಗಿಸಿದ್ರೆ ಯಾವುದೇ ಅಹಿತಕರ ಘಟನೆ ನಡೆಯೋದಿಲ್ಲ. ಕ್ರಿಕೆಟ್​ ಅಭಿಮಾನಿಗಳು ಖುಷಿ ಖುಷಿಯಿಂದ ಕ್ರೀಡಾಂಗಣಕ್ಕೆ ಬಂದು, ಪಂದ್ಯ ವೀಕ್ಷಿಸಿ ಹೋಗಬಹುದು.
ವಿಶ್ವಕಪ್ ಕೈ ತಪ್ಪಿದರೆ.. ಬೆಂಗಳೂರಿಗೆ ಆಗೋ ನಷ್ಟ ಏನು?
ವಿಶ್ವಕಪ್ ಅಂದ್ರೆ ಇಡೀ ವಿಶ್ವವೇ ನಮ್ಮ ನಗರವನ್ನ ನೋಡುತ್ತದೆ. 8 ತಂಡಗಳ ಆಟಗಾರರು, ಅಂದ್ರೆ ಸುಮಾರು 200ಕ್ಕಿಂತ ಹೆಚ್ಚು ಆಟಗಾರರು ಮತ್ತು ಸಪೋರ್ಟಿಂಗ್ ಸ್ಟಾಫ್ ಆಗಮಿಸಲಿದ್ದಾರೆ. ಪಂದ್ಯ ವೀಕ್ಷಿಸಲು ಆಯಾ ದೇಶಗಳಿಂದ, ಕ್ರಿಕೆಟ್ ಅಭಿಮಾನಿಗಳು ರಾಜ್ಯಕ್ಕೆ ಬರ್ತಾರೆ. ಇದರಿಂದ ಬ್ಯುಸಿನೆಸ್ ಕೂಡ ಹೆಚ್ಚಾಗುತ್ತದೆ. ಹೋಟೆಲ್, ಟ್ರ್ಯಾನ್ಸ್​​ಪೋರ್ಟ್, ಟೂರಿಸಂ, ಮರ್ಚಂಡೈಸ್​​​​ ಸೇರಿದಂತೆ ಇತರೆ ಬ್ಯುಸಿನೆಸ್​​ಮೆನ್​ಗಳಿಗೆ ಹಣದ ವಹಿವಾಟು ನಡೆಯುತ್ತದೆ. ನಮ್ಮ ರಾಜ್ಯದ ಸಂಸ್ಕೃತಿ, ಕಲೆ, ವೈಭವವೂ ಕೂಡ ಬೇರೆ ಬೇರೆ ದೇಶಗಳಿಗೆ ಪರಿಚಯವಾಗುತ್ತದೆ. ವಿಶ್ವಕಪ್ ಆತಿಥ್ಯದಿಂದ ಇಷ್ಟೆಲ್ಲಾ ಲಾಭ ಇದೆ. ಒಂದು ವೇಳೆ, ಮಹಿಳಾ ಏಕದಿನ ವಿಶ್ವಕಪ್ ಬೆಂಗಳೂರಿನಿಂದ ಶಿಫ್ಟ್ ಆದ್ರೆ, ನಮ್ಮ ನಗರ ಮತ್ತು ರಾಜ್ಯಕ್ಕೆ ದೊಡ್ಡ ಅವಮಾನ.
ಬೆಂಗಳೂರಲ್ಲಿ ವಿಶ್ವಕಪ್ ಎತ್ತಿ ಹಿಡಿಯೋದನ್ನ ಕಣ್ತುಂಬಿಕೊಳ್ಳಬಹುದು
ಹರ್ಮನ್ ಪ್ರೀತ್​ ಕೌರ್​​​​​​​​ ಸಾರಥ್ಯದ ಭಾರತ ಮಹಿಳಾ ತಂಡ ತುಂಬಾ ಬಲಿಷ್ಠವಾಗಿದೆ. ಅದ್ರಲ್ಲೂ ತವರಿನಲ್ಲೇ ವಿಶ್ವಕಪ್​ ಟೂರ್ನಿ ನಡೆಯುತ್ತಿರುವುದರಿಂದ, ಹರ್ಮನ್​ ಪಡೆಗೆ ದೊಡ್ಡ ಪ್ಲಸ್​-ಪಾಯಿಂಟ್ ಆಗಿದೆ. ಇಲ್ಲಿನ ಕಂಡೀಷನ್ಸ್​, ಭಾರತಕ್ಕೆ ಫೇವರ್ ಆಗಲಿದೆ. ಕ್ರಿಕೆಟ್ ಅಭಿಮಾನಿಗಳ ಬೆಂಬಲವೂ ಭಾರತಕ್ಕೆ ಸಿಗಲಿದೆ. ಏಕದಿನ ವಿಶ್ವಕಪ್ ಗೆಲ್ಲೋ ಫೇವರಿಟ್ಸ್ ಎನಿಸಿಕೊಂಡಿರೋ ಭಾರತ ಮಹಿಳಾ ತಂಡ, ನಮ್ಮ ಬೆಂಗಳೂರಿನ ಚಿನ್ನಸ್ವಾಮಿಯಲ್ಲೇ ಕಪ್ ಎತ್ತಿ ಹಿಡಿಯೋದನ್ನ ನಾವೆಲ್ಲಾ ಕಣ್ತುಂಬಿಸಿಕೊಳ್ಳಬಹುದು.
ರಾಜ್ಯ ಸರ್ಕಾರ ಮನಸ್ಸು ಮಾಡಿದ್ರೆ ಅಭಿಮಾನಿಗಳ ಕನಸು ನನಸು
ಯಾರೋ ಮಾಡಿದ ತಪ್ಪಿಗೆ, ಇನ್ಯಾರಿಗೋ ಶಿಕ್ಷೆ ಅಂತಾರಲ್ಲ. ಹಾಗಾಯ್ತು ನೋಡಿ ಈ ಕಥೆ. ಆರ್​ಸಿಬಿ ಮತ್ತು ಡಿಎನ್​ಎ, ತರಾತುರಿಯಲ್ಲಿ, ಐಪಿಎಲ್ ವಿಜಯೋತ್ಸವದ ಸಂಭ್ರಮಾಚರಣೆಯನ್ನ ಆಚರಿಸಿತು. ಈ ವೇಳೆ ಕಾಲ್ತುಳಿತದ ಅಹಿತಕರ ಘಟನೆ ನಡೆದಿದೆ. ತನಿಖೆ ಕೂಡ ನಡೆಯುತ್ತಿದೆ. ಆದ್ರೂ ರಾಜ್ಯ ಸರ್ಕಾರ, ಕೆಎಸ್​ಸಿಎಗೆ ವಿಶ್ವಕಪ್​​ ಪಂದ್ಯಗಳ ಆಯೋಜನೆಗೆ ಸಹಮತಿ ನೀಡದೇ ಇರೋದು, ಕ್ರಿಕೆಟ್ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯನವರೂ ಕ್ರಿಕೆಟ್ ಅಭಿಮಾನಿನೇ.
ಇದನ್ನೂ ಓದಿ: ಹಿಟ್​ಮ್ಯಾನ್ ರೋಹಿತ್, ವಿರಾಟ್ ಕೊಹ್ಲಿ ಇನ್ನು ಕ್ರಿಕೆಟ್​ ಆಡಬೇಕಾ..? ಈ ಷರತ್ತುಗಳು ಅನ್ವಯ!
ಚಿನ್ನಸ್ವಾಮಿಯಲ್ಲಿ ಸಾಕಷ್ಟು ಪಂದ್ಯಗಳನ್ನ ನೋಡಿದ್ದಾರೆ. ಕ್ರಿಕೆಟ್ ಅಭಿಮಾನಿಯಾಗಿ ಸಿದ್ದರಾಮಯ್ಯನವರು ಯಾಕೆ ಯೋಚಿಸಬಾರದು? ವಿಶ್ವಕಪ್ ಕೈತಪ್ಪಿದ್ದರೆ ರಾಜ್ಯಕ್ಕೆ ಆಗುವ ನಷ್ಟದ ಬಗ್ಗೆ ಯಾಕೆ ಚಿಂತಿಸಬಾರದು? ಅಪ್ಪ-ಅಮ್ಮನ ಜಗಳದಲ್ಲಿ ಕೂಸು ಬಡವಾಗಬಾರದು ಅಲ್ವಾ?
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ