/newsfirstlive-kannada/media/media_files/2025/10/05/ramdass-2025-10-05-12-45-48.jpg)
ಸು ಫ್ರಮ್ ಸೋ ಸಿನಿಮಾದ ಯದುವಣ್ಣ.. ರಾಜ್ಯದ ಸಿನಿ ಪ್ರಿಯರನ್ನ ನಕ್ಕು ನಲಿಸಿದ ರಾಜ್ ಬಿ ಶೆಟ್ಟಿ, ಜೆಪಿ ತುಮ್ಮಿನಾಡ್ರ ಸು ಫ್ರಮ್ ಸೋ ಸಿನಿಮಾದಲ್ಲಿನ ಪ್ರಮುಖ ಪಾತ್ರಗಳಲ್ಲಿ ಈ ಕ್ಯಾರೆಕ್ಟರ್ ಕೂಡ ಒಂದು. ಊರಿಗೆ ಹೀರೋ ಆದ ರವಿಯಣ್ಣನ ಮೇಲಿನ ನಿವೃತ್ತ ಬ್ಯಾಂಕ್ ನೌಕರ ಯದುವಣ್ಣನ ಮತ್ಸರ, ಅದ್ರಲ್ಲೇ ಹುಟ್ಟೋ ಕಾಮಿಡಿ.. ಹೊಟ್ಟೆ ಹುಣ್ಣಾಗಿಸಿಬಿಡುತ್ತೆ..
ಇದೇ ಯದುವಣ್ಣ ಮತ್ತೆ ಕಾಂತಾರ ಚಾಪ್ಟರ್ 1ನಲ್ಲೂ ಕಾಣಿಸಿಕೊಂಡಿದ್ದಾರೆ.. ವೀಣಾವಾದಕ, ಸಂಗೀತಗಾರನಾಗಿ ಮತ್ತೊಮ್ಮೆ ನಗಿಸಿದ್ದಾರೆ.. ಇಲ್ಲೂ ಅವ್ರದ್ದು ನೆನಪಲ್ಲಿ ಉಳಿಯೋ ಪಾತ್ರವೇ.. ಆದ್ರೆ ಹೀಗೆ ಪ್ರೇಕ್ಷಕರನ್ನ ನಗಿಸಿದ ಈ ಯದುವಣ್ಣ ಪಾತ್ರಧಾರಿ ಒಬ್ಬ ಅದ್ಭುತ ಗಾಯಕ..!
ಹೊಸ ಕಾಂತಾರದ ಬೆಂಕಿ ಹಾಡು ‘ರೆಬೆಲ್ ಸಾಂಗ್’ ಹಾಡಿದ್ದು ಇವರೇ!!!
ಅಚ್ಚರಿ, ದಿಗ್ಭ್ರಮೆ ಹುಟ್ಟಿಸಿದ್ರೂ ಇದು ಸತ್ಯ.. ಯದುವಣ್ಣನಾಗಿ, ವೀಣಾವಾದಕನಾಗಿ ನಗಿಸಿದ ಈ ಕಲಾವಿದನ ಹೆಸರು ಮೈಮ್ ರಾಮ್ದಾಸ್.. ಮೊದಲ ಕಾಂತಾರದಲ್ಲೂ ನಾರು ಪಾತ್ರದಲ್ಲಿ ಅಭಿನಯಿಸಿದ್ದ ನಟ.. ಕರಾವಳಿಯ ಅದ್ಭುತ ಕಲಾವಿದ.. ಆದ್ರೆ ಅದಕ್ಕಿಂತ ಹೆಚ್ಚಾಗಿ ಅಪ್ರತಿಮ ಗಾಯಕ.. ಕಾಂತಾರ ಸಿನಿಮಾದ ಕಂಚಿನ ಕಂಠದ ಹಾಡು, ಮೈ ರೋಮಾಂಚನಗೊಳಿಸೋ ಹಾಡು ‘ರೆಬೆಲ್ ಸಾಂಗ್’ನ ಹಾಡಿದ್ದು ಇದೇ ಮೈಮ್ ರಾಮ್ದಾಸ್ ಅವ್ರು..
ಯಾವನೋ ಬೆಂಕಿನಾ ಕಟ್ಟಿ ಹಾಕೋನು.. ಬೆಂಕಿಲೇ ಹುಟ್ಟಿದ್ದು ಎಲ್ಲಾ ಸಂಕಲೆ..
ಯಾವನೋ ಕಾಂತಾರ ಮುಟ್ಟ ಬಂದನೋ... ನಿರ್ನಾಮ ಊರೆಲ್ಲಾ.. ಕಾಡು ಕತ್ತಲೆ..
ಓ ಕೋಟೆ ಕೊತ್ತಲ.. ಕಟ್ಟಿ ಮೆರೆಯೋ.. ಊರಾ ದೊರೆ.. ಕಾಡು ಹೇಳಿದೆ ಎಚ್ಚರ..
ಕಾಡ ಬೆಂಕಿಯು ಊರ ನೋಡ ಬಂದಿದೆ.. ತಡೆ ಯಾರದು.. ಕಾಲು ತೊಳೆದು ಸ್ವಾಗತ..
ಅಬ್ಬಬ್ಬಾ.. ಎಂಥಾ ಪವರ್ಫುಲ್ ವಾಯ್ಸ್.. ತೀಕ್ಷ್ಣವಾದ ಸಾಲು.. ಅಷ್ಟೇ ತೀವ್ರವಾದ ಧ್ವನಿ.. ಹಾಡು ಕೇಳ್ತಿದ್ರೇನೇ ಮೈ ರೋಮಾಂಚನ ಆಗ್ಬಿಡುತ್ತೆ.. ಅಷ್ಟು ಅದ್ಭುತವಾಗಿ ಹಾಡಿಗೆ ಧನಿಯಾಗಿದ್ದಾರೆ ಮೈಮ್ ರಾಮ್ದಾಸ್.. ಇನ್ನೊಂದು ವಿಶೇಷ ಅಂದ್ರೆ ಈ ಹಾಡನ್ನ ತಮಿಳು, ತೆಲುಗು, ಮಲಯಾಳಂ, ಹಿಂದಿ ಎಲ್ಲಾ ಭಾಷೆಯಲ್ಲೂ ಬೇರೆ ಬೇರೆ ಕಲಾವಿದರು ಹಾಡಿದ್ದಾರೆ.. ಆದ್ರೆ ಹಾಡಿನ ಆರಂಭದಲ್ಲಿ ಬರೋ ಆ ತುಳು ಸಾಲುಗಳು, ದೈವದ ಪ್ರಾರ್ಥನೆ ಎಲ್ಲಾ ಭಾಷೆಯಲ್ಲೂ ಮೈಮ್ ರಾಮ್ದಾಸ್ರ ಧ್ವನಿಯಲ್ಲೇ ಇರೋದು ವಿಶೇಷ..
ಕಳೆದ 30 ವರ್ಷಗಳಿಂದ ಮಾಡ್ತಿದ್ದಾರೆ ‘ಮೈಮ್’ ಅಭಿನಯ!!!
ಕಾಂತಾರದ ‘ರೆಬೆಲ್ ಸಾಂಗ್’ನ ಈ ಹಾಡುಗಾರ ಕಳೆದ ಮೂವತ್ತು ವರ್ಷಗಳಿಂದ ಮೈಮ್ ಕಲಾವಿದ.. ಮೈಮ್ ನಿಮಗೇ ಗೊತ್ತೇ ಇದೆ.. ಮೂಕಾಭಿನಯ.. ಮುಖಕ್ಕೆ ಬಿಳಿಬಣ್ಣ, ಮೈಯೆಲ್ಲಾ ಕಪ್ಪು ಬಟ್ಟೆ.. ಯಾವುದೇ ಪ್ರಾಪರ್ಟಿ ಇಲ್ಲದೆ ಅಭಿನಯಿಸೋ ಸವಾಲು.. ಇದನ್ನ ಕಳೆದ 3 ದಶಕದಿಂದ ಮಾಡ್ತಾ ಕರಾವಳಿಯಲ್ಲಿ ಮನೆ ಮಾತಾಗಿರೋರು ಮೈಮ್ ರಾಮ್ದಾಸ್..
ಇದನ್ನೂ ಓದಿ: ದಿನಕ್ಕೆ ಒಂದೇ ಹೊತ್ತು ಊಟ.. ಡಿವೋರ್ಸ್ ಕೊಟ್ಟು ಲವ್! ಇದು ಕಾಂತಾರ ವಿಲನ್ ಲೈಫ್​ಸ್ಟೈಲ್
ಕಾಂತಾರದ ‘ವಾ ಪೊರ್ಲುಯಾ’ ಹಾಡಿದ್ದು ಇವರೇ!!!
ಯೆಸ್.. ಈ ಹಿಂದಿನ ಕಾಂತಾರ ಸಿನಿಮಾದಲ್ಲಿ ನಾರು ಅನ್ನೋ ಪಾತ್ರವನ್ನ ಮಾಡಿದ್ರು ಮೈಮ್ ರಾಮ್ದಾಸ್.. ಇವರೇ ಮಾಡಿದ್ದ ‘ವಾ ಪೊರ್ಲುಯಾ’ ಹಾಡನ್ನ ಕಾಂತಾರ ಸಿನಿಮಾದಲ್ಲಿ ಬಳಸಿಕೊಳ್ಳಲಾಗಿದೆ. ಸಿನಿಮಾದಲ್ಲೂ ಹಾಡನ್ನ ಹಾಡಿದ್ದು ಇದೇ ಮೈಮ್ ರಾಮ್ದಾಸ್..! ಇಷ್ಟೇ ಅಲ್ಲ, ಆ ಸಿನಿಮಾದ ಬಿಜಿಎಂನಲ್ಲಿ ಬರೋ ಎಷ್ಟೋ ಜಾನಪದ ಆಲಾಪಗಳನ್ನ ಹಾಡಿದ್ದು, ಮಾಡಿಕೊಟ್ಟಿದ್ದು ಕೂಡ ಇದೇ ಮೈಮ್ ರಾಮ್ದಾಸ್. ಇವ್ರು ಹಾಡುಗಾರನ ಜೊತೆ ಜೊತೆಗೆ ಸಂಗೀತ ಸಂಯೋಜಕ ಕೂಡ.
ಕರಾವಳಿಯ ಅದ್ಭುತ ಜಾನಪದ ಪ್ರತಿಭೆ ‘ಮೈಮ್ ರಾಮ್ದಾಸ್’!!
ಹೌದು.. ಸಣ್ಣ ವಯಸ್ಸಿನಲ್ಲೇ ಜಾನಪದ ಕಲೆ ಬಗ್ಗೆ ಆಸಕ್ತಿ ಹೊಂದಿದ್ದವರು ಮೈಮ್ ರಾಮ್ದಾಸ್. ಭೂತಕೋಲಕ್ಕೆ ಹೋಗೋದು ಅಂದ್ರೆ ಖುಷಿ.. ಜಾತ್ರೆ, ಉತ್ಸವ, ನೇಮ, ಕೋಲ, ಯಕ್ಷಗಾನ ಯಾವುದನ್ನೂ ನೋಡದೆ ಬಿಟ್ಟವರಲ್ಲ. ಬೀದಿ ನಾಟಕ ಮಾಡಿದ್ರು, ಯುವ ಜನ ಮೇಳಗಳಲ್ಲಿ ಭಾಗಿಯಾದ್ರು, ರಾಜ್ಯ, ರಾಷ್ಟ್ರಮಟ್ಟದಲ್ಲಿ ಭಾಗಿಯಾಗೋ ಅವಕಾಶವೂ ಸಿಕ್ಕಿತ್ತು. ಗೀಗಿ ಹಾಡು, ಲಾವಣಿ ಹಾಡಿನ ಕಲಾವಿದರ ಪರಿಚಯ ಆಗಿತ್ತು. ಹಿಂದೊಮ್ಮೆ ಭೇಟಿಯಾದಾಗ ಗಂಗೂಭಾಯಿ ಹಾನಗಲ್ ಅವ್ರ ಆಶೀರ್ವಾದವೂ ಸಿಕ್ಕಿತ್ತು. ಜಾನಪದದ ಮೇಲೆ ಎಂಥಾ ಆಸಕ್ತಿಯಿತ್ತು ಅಂದ್ರೆ ಕಾಲೇಜಿನಲ್ಲಿದ್ದಾಗ್ಲೂ ಸಿನಿಮಾ ಹಾಡುಗಳನ್ನ ಹಾಡಿದವ್ರಲ್ಲ ಮೈಮ್ ರಾಮ್ದಾಸ್.. ಅಷ್ಟರಮಟ್ಟಿಗೆ ಜಾನಪದ ಅವ್ರನ್ನ ಆವರಿಸಿಕೊಂಡಿದೆ. ಅದೇ ನನ್ನಲ್ಲಿರೋ ಶಕ್ತಿ ಅನ್ನೋದು ಮೈಮ್ ರಾಮದಾಸ್ರ ಮಾತು. ಇದ್ರಿಂದಾಗಿನೇ ಯಾವ ಸಾಹಿತ್ಯ ಕೊಟ್ರೂ ನಾನು ಟ್ಯೂನ್ ಮಾಡಿ ಕೊಡಬಲ್ಲೆ ಅಂತಾರೆ.
ಇದನ್ನೂ ಓದಿ: ಕಾಂತಾರ, ರಿಷಭ್ ಶೆಟ್ಟಿ ಬಗ್ಗೆ ರಾಕಿ ಭಾಯ್ ಯಶ್​ ಏನ್ ಹೇಳಿದರು..? ರುಕ್ಮಿಣಿ ವಸಂತ್​..
ಈಗ ಇದೇ ಯದುವಣ್ಣ ಅಲಿಯಾಸ್ ಮೈಮ್ ರಾಮ್ದಾಸ್ ಕಾಂತಾರದ ಕ್ರಾಂತಿ ಗೀತೆಯ ಮೂಲಕ ಸಿನಿಪ್ರಿಯರ ಎದೆಗೆ ಕಿಚ್ಚು ಹಚ್ಚಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದ ಸಿನಿಮಾ ಮಾಡಿದಾಗ ದೊಡ್ಡ ಹೆಸರು ಮಾಡಿರೋ ಗಾಯಕರನ್ನ ಕರೆಸದೆ ಮೈಮ್ ರಾಮ್ದಾಸ್ ಅವ್ರ ಕೈನಲ್ಲೇ ರಿಷಬ್ ಶೆಟ್ರು, ಅಜನೀಶ್ ಲೋಕನಾಥ್ ಈ ಹಾಡನ್ನ ಹಾಡಿಸಿದ್ದಾರೆ ಅಂದ್ರೆ ರಾಮ್ದಾಸರ ಕಲೆಯ ಬಗ್ಗೆ ಅವ್ರಿಗೆ ಎಷ್ಟು ನಂಬಿಕೆ, ಗೌರವ, ವಿಶ್ವಾಸ ಇತ್ತು, ರಾಮ್ದಾಸರು ಎಂಥಾ ಶಕ್ತಿಯುತ ಕಲಾವಿದ ಅನ್ನೋದನ್ನ ಯೋಚನೆ ಮಾಡಿ.
-ವಿದ್ಯಾಶ್ರೀ ಉಜಿರೆ, ನ್ಯೂಸ್ಫಸ್ಟ್
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ