/newsfirstlive-kannada/media/media_files/2025/08/10/rahul-gandhi-election-commission-2025-08-10-20-26-28.jpg)
ಮಹಿಳೆಯೊಬ್ಬರು ಎರಡು ಬಾರಿ ಮತ ಚಲಾಯಿಸಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಹೇಳಿಕೆಗೆ ಸಂಬಂಧಿಸಿ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ನೋಟಿಸ್ ಜಾರಿ ಮಾಡಿದ್ದಾರೆ. ನಿಮ್ಮ ಆರೋಪಗಳಿಗೆ ಸೂಕ್ತ ದಾಖಲೆಗಳನ್ನು ನೀಡಿ ಎಂದು ನೋಟಿಸ್ ನೀಡಲಾಗಿದೆ.
ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಮತಗಳ್ಳತನ ಆಗಿರುವ ಬಗ್ಗೆ ರಾಹುಲ್ ಗಾಂಧಿ ಆರೋಪ ಮಾಡಿದ್ದರು. ತಮ್ಮ ಆರೋಪಕ್ಕೆ ಸಂಬಂಧಿಸಿದಂತೆ ಕೆಲವು ದಾಖಲೆಗಳನ್ನು ಆಗಸ್ಟ್ 7 ರಂದು ಬಿಡುಗಡೆ ಮಾಡಿದ್ದರು. ಇದೀಗ ರಾಹುಲ್ ಗಾಂಧಿಯವರ ಆ ದಾಖಲೆಗಳು ಸಂಪೂರ್ಣ ತನಿಖೆಗೆ ಸಹಾಯ ಆಗಲಿದೆ ಎಂದು ಚುನಾವಣಾ ಆಯೋಗ ಹೇಳಿದೆ.
ಮತಗಟ್ಟೆ ಅಧಿಕಾರಿ ನೀಡಿದ ದಾಖಲೆಗಳ ಪ್ರಕಾರ.. ಶಕುನ್ ರಾಣಿ ಎರಡು ಬಾರಿ ಮತ ಚಲಾಯಿಸಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ವಿಚಾರಣೆಯಲ್ಲಿ, ಶಕುನ್ ರಾಣಿ ಅವರು ಎರಡು ಬಾರಿ ಅಲ್ಲ, ಒಮ್ಮೆ ಮಾತ್ರ ಮತ ಚಲಾಯಿಸಿದ್ದಾರೆ ಎಂದು ಹೇಳಿದ್ದಾರೆ.
ಆಯೋಗದ ಮುಂದೆ ದಾಖಲೆಗಳನ್ನು ಸಲ್ಲಿಸಿ
ಸಿಇಒ ಕಚೇರಿ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ರಾಹುಲ್ ಗಾಂಧಿ ತೋರಿಸಿದ ಟಿಕ್ ಗುರುತು ಮಾಡಿದ ದಾಖಲೆಯನ್ನು ಮತಗಟ್ಟೆ ಅಧಿಕಾರಿ ನೀಡಿಲ್ಲ ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ. ‘ರಾಹುಲ್ ಗಾಂಧಿ ಅವರು ತಮ್ಮಲ್ಲಿರುವ ದಾಖಲೆಗಳನ್ನು ಆಯೋಗದ ಮುಂದೆ ಇಡಲು ವಿನಂತಿಸಲಾಗಿದೆ. ಅದರ ಆಧಾರದ ಮೇಲೆ ಶಕುನ್ ರಾಣಿ ಅಥವಾ ಬೇರೆ ಯಾರಾದರೂ ಎರಡು ಬಾರಿ ಮತ ಚಲಾಯಿಸಿದ್ದಾರೆಯೇ ಎಂಬ ನಿರ್ಧಾರ ತೆಗೆದುಕೊಳ್ಳಬಹುದು. ಮತ್ತು ಆಯೋಗವು ಅದನ್ನು ಕೂಲಂಕಷವಾಗಿ ತನಿಖೆ ಮಾಡುತ್ತದೆ ಎಂದು ನೋಟಿಸ್ನಲ್ಲಿ ಮುಖ್ಯ ಚುನಾವಣಾ ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ:ಸ್ಟೇಜ್ ಮೇಲೆ ಮೋದಿಗೆ ಕೌಂಟರ್ ಕೊಟ್ಟ ಸಿಎಂ ಸಿದ್ದರಾಮಯ್ಯ; ಅದಕ್ಕೆ ಪ್ರಧಾನಿಗಳು ಏನಂದ್ರು..?
ರಾಹುಲ್ ಗಾಂಧಿ ಏನ್ ಹೇಳಿದ್ದರು..?
ದೇಶದಲ್ಲಿ ಮೊದಲು ಎಲೆಕ್ಟ್ರಾನಿಕ್ ಮತಯಂತ್ರಗಳು ಇರಲಿಲ್ಲ. ಆದರೂ ಇಡೀ ದೇಶದಲ್ಲಿ ಒಂದೇ ದಿನದಲ್ಲಿ ಚುನಾವಣೆಗಳು ನಡೆಯುತ್ತಿದ್ದವು. ಈಗ ಅದು ಸಂಭವಿಸುತ್ತಿಲ್ಲ. ಮತದಾನ ತಿಂಗಳುಗಳವರೆಗೆ ನಡೆಯುತ್ತದೆ. ಮತದಾನ ದಿನವನ್ನು ಬೇರೆ ಬೇರೆ ದಿನಗಳಲ್ಲಿ ಏಕೆ ಮಾಡಲಾಗುತ್ತದೆ? ಪ್ರಜಾಪ್ರಭುತ್ವದಲ್ಲಿ ಪ್ರತಿಯೊಂದು ಪಕ್ಷವೂ ವಿರೋಧವನ್ನು ಎದುರಿಸಬೇಕಾಗುತ್ತದೆ. ಆದರೆ ಅದು ಬಿಜೆಪಿಯ ಮೇಲೆ ಏಕೆ ಪರಿಣಾಮ ಬೀರಲ್ಲ? ಅದು ಅಂಥ ಏಕೈಕ ಪಕ್ಷ ಯಾಕೆ ಎಂದು ನನಗೆ ತಿಳಿದಿಲ್ಲ.
ಚುನಾವಣಾ ಆಯೋಗದ ಬಗ್ಗೆಯೂ ಪ್ರಶ್ನೆ..
ಚುನಾವಣೆ ಸಂದರ್ಭದಲ್ಲಿ ಎಕ್ಸಿಟ್ ಪೋಲ್ಗಳು ಬೇರೆಯದ್ದೇ ಕತೆ ಹೇಳುತ್ತಿರುತ್ತವೆ. ಆದರೆ ಫಲಿತಾಂಶವೇ ಬೇರೆಯೇ ಆಗಿರುತ್ತದೆ. ಉದಾಹರಣೆ ಅಂದರೆ ಹರಿಯಾಣ ಮತ್ತು ಮಧ್ಯಪ್ರದೇಶದ ಚುನಾವಣೆಗಳ ಫಲಿತಾಂಶ. ನಮ್ಮ ಸಮೀಕ್ಷೆಯೂ ತುಂಬಾ ಪ್ರಬಲವಾಗಿದೆ. ಅದರ ಫಲಿತಾಂಶ ಮಾತ್ರ ವಿಭಿನ್ನವಾಗಿ ಕಾಣುತ್ತದೆ. ಸಮೀಕ್ಷೆಯಲ್ಲಿ ಏನೇ ಕಂಡರೂ, ಫಲಿತಾಂಶವು ಅದರ ವಿರುದ್ಧ ಬರುತ್ತದೆ.
ಇದನ್ನೂ ಓದಿ: ‘ಜೀವ ಇಲ್ಲದಿದ್ದವರು ವೋಟ್ ಹಾಕಿದ್ರೆ ಜವಾಬ್ದಾರರು ಯಾರು?’- ಸಿಎಂ ಸಿದ್ದರಾಮಯ್ಯ
ಒಂದು ಕೋಟಿ ಮತದಾರರು ಎಲ್ಲಿಂದ ಬಂದರು?
ಮಹಾರಾಷ್ಟ್ರದಲ್ಲಿ 5 ತಿಂಗಳಲ್ಲಿ ಬಹಳಷ್ಟು ಹೊಸ ಮತದಾರರು ಸೇರ್ಪಡೆಯಾಗಿದ್ದಾರೆ. ಇದು 5 ವರ್ಷಗಳಲ್ಲಿನ ಸಂಖ್ಯೆಗಿಂತ ಹೆಚ್ಚು. ಇದರಿಂದ ನಮಗೆ ಅನುಮಾನ ಬಂತು. ನಮ್ಮ ಮೈತ್ರಿಕೂಟವು ವಿಧಾನಸಭಾ ಚುನಾವಣೆಯಲ್ಲಿ ಸೋತಿತು. ನಾವು ಲೋಕಸಭಾ ಚುನಾವಣೆಯಲ್ಲಿ ಗೆದ್ದೆವು. ಮಹಾರಾಷ್ಟ್ರ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬ ಅನುಮಾನ ನಮಗಿದೆ. ಒಂದು ಕೋಟಿ ಹೊಸ ಮತದಾರರು ಇದ್ದಕ್ಕಿದ್ದಂತೆ ಎಲ್ಲಿಂದ ಬಂದರು? ನಾವು ಚುನಾವಣಾ ಆಯೋಗದ ಬಳಿ ಮತದಾರರ ಪಟ್ಟಿಯನ್ನು ಕೇಳಿದೆವು, ಆದರೆ ಅವರು ಮತದಾರರ ಪಟ್ಟಿಯನ್ನು ನೀಡಲಿಲ್ಲ
ಕರ್ನಾಟಕದಲ್ಲೂ ಮತಗಳ್ಳತನ ಆರೋಪ..!
ಕರ್ನಾಟಕದಲ್ಲೂ ಮತಗಳತನ ಆಗಿರುವ ಬಗ್ಗೆ ಉಲ್ಲೇಖ ಮಾಡಿರುವ ರಾಹುಲ್ ಗಾಂಧಿ, ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದ ಬಗ್ಗೆ ಆರೋಪಿಸಿದರು. ಅಲ್ಲಿ 11 ಸಾವಿರ ಮತದಾರರು ಮೂರ್ಮೂರು ಬಾರಿ ವೋಟಿಂಗ್ ಮಾಡಿದ್ದಾರೆ. ಆದರೆ ಚುನಾವಣಾ ಆಯೋಗ ಮತದಾನದ ಪಟ್ಟಿ ನೀಡಲು ನಿರಾಕರಿಸುತ್ತಿದೆ. ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ನಕಲಿ ಮತದಾರರ ಸೇರ್ಪಡೆ ಆಗಿದೆ. 40 ಲಕ್ಷಕ್ಕೂ ಹೆಚ್ಚು ನಕಲಿ ಮತದಾರರು ಸೇರ್ಪಡೆಯಾಗಿದ್ದಾರೆ. ಮತದಾನದ ಸಿಸಿಟಿವಿ ದೃಶ್ಯ ಕೂಡ ಡಿಲೀಟ್ ಆಗಿದೆ.
ಇದನ್ನೂ ಓದಿ:ಬಿಜೆಪಿ ಸಂಸದ ಡಾ.ಕೆ.ಸುಧಾಕರ್ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲು
ಹಲವು ಮತದಾರರಿಗೆ ವಿಳಾಸವೇ ಇಲ್ಲ. ಹಲವು ಮತದಾರರ ಮನೆ ನಂ. 0 ಎಂದು ದಾಖಲು ಆಗಿದೆ. ಮನೆ ನಂ.35ರ ವಿಳಾಸದಲ್ಲಿ 80 ಮತದಾರರಿದ್ದಾರೆ. ಬೂತ್ ನಂ.366 ನಲ್ಲಿ 46 ಮತದಾರರು ಒಂದೇ ವಿಳಾಸ ಹೊಂದಿದ್ದಾರೆ. ಮತಗಳ್ಳತನ ಪತ್ತೆಗೆ ತುಂಬಾ ಸಮಯ ಹಿಡಿಯಿತು. 4 ಸಾವಿರ ಮತದಾರರ ಭಾವಚಿತ್ರ ಚಿಕ್ಕದಾಗಿ ದಾಖಲು ಮಾಡಲಾಗಿದೆ. ಕೆಲವು ಮತದಾರರ ಪಟ್ಟಿಯಲ್ಲಿ ತಂದೆಯ ಹೆಸರೇ ಇಲ್ಲ. ಒಂದೇ ಹೆಸರಿನ ವ್ಯಕ್ತಿ 4 ಸ್ಥಳಗಳಲ್ಲಿ ಮತ ಹಾಕಿದ್ದಾನೆ. ಒಂದು ಕೇಂದ್ರದಲ್ಲಿ 11,965 ನಕಲಿ ವೋಟರ್ಸ್ ಇದ್ದಾರೆ. ಒಂದೇ ಗುರುತಿನಲ್ಲಿ ಹಲವು ವೋಟರ್ ಐಡಿಗಳಿವೆ ಎಂದು ನಕಲಿ ಮತದಾರರ ಬಗ್ಗೆ ದಾಖಲೆ ಬಿಡುಗಡೆ ಮಾಡಿದರು.
ಇದನ್ನೂ ಓದಿ:1 ಕೋಟಿ ಹೊಸ ಮತದಾರರು ಏಕಾಏಕಿ ಎಲ್ಲಿಂದ ಬಂದ್ರು? ಬಿಜೆಪಿ ವಿರುದ್ಧ ರಾಹುಲ್ ಮತಗಳ್ಳತನ ಆರೋಪ; EC ಕೌಂಟರ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ